ಆ್ಯಪ್ನಗರ

ಕಾರಿಗೆ ಬೆಂಕಿ ಹಚ್ಚಿ ಶಿಕ್ಷಕ ಸಜೀವ ದಹನ: ಮೂವರ ಬಂಧನ

ಗುಂಡ್ಲುಪೇಟೆ ತಾಲೂಕಿನ ಬೇಗೂರಿನಿಂದ ನಿಟ್ರೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಕಾರಿಗೆ ಬೆಂಕಿ ಹಚ್ಚಿ ಶಿಕ್ಷಕನನ್ನು ಸಜೀವವಾಗಿ ದಹಿಸಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಒಬ್ಬ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

Vijaya Karnataka 14 Aug 2019, 9:01 am
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬೇಗೂರಿನಿಂದ ನಿಟ್ರೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಕಾರಿಗೆ ಬೆಂಕಿ ಹಚ್ಚಿ ಶಿಕ್ಷಕನನ್ನು ಸಜೀವವಾಗಿ ದಹಿಸಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಒಬ್ಬ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
Vijaya Karnataka Web CHN-CHN13HM2


ನಗರದ ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಗುಂಡ್ಲುಪೇಟೆ ಪಟ್ಟಣದ ನಿವಾಸಿ ಬಸವರಾಜೇಶ್ವರಿ, ತಾಲೂಕಿನ ಅಣ್ಣೂರು ಗ್ರಾಮದ ನಿವಾಸಿ ರಘು, ಹಂಗಳ ಗ್ರಾಮದ ಸಿದ್ದು ಬಂಧಿತ ಆರೋಪಿಗಳು.

''ಕೊಲೆಯಾದ ಶಿಕ್ಷಕ ರಂಗಸ್ವಾಮಿ ನಗರದ ಸಿದ್ದಾರ್ಥ ನಗರದ ನಿವಾಸಿಯಾಗಿದ್ದು, ಕೋಳಿಪಾಳ್ಯದ ಶಾಲೆಯಲ್ಲಿ ಸಿಆರ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈತ ಆರೋಪಿ ಬಸವರಾಜೇಶ್ವರಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ. ಅಲ್ಲದೆ ಆಕೆಯ ಅಶ್ಲೀಲ ಫೋಟೊ ತೆಗೆದು, ತನ್ನ ಜತೆ ಸಹಕರಿಸದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ತನಿಖೆ ವೇಳೆ ಆರೋಪಿ ಬಸವರಾಜೇಶ್ವರಿ ಹೇಳಿಕೆ ನೀಡಿದ್ದಾಳೆ,'' ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ್‌ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಲ್ಲಿ ನಡೆದದ್ದು: ''ಚಾಮರಾಜನಗರ ತಾಲೂಕಿನ ಬದನಗುಪ್ಪೆ ಕೈಗಾರಿಕಾ ಪ್ರದೇಶದ ಬಳಿ ಆರೋಪಿಗಳಾದ ಬಸವರಾಜೇಶ್ವರಿ, ರಘು, ಆತನ ಸ್ನೇಹಿತ ಸಿದ್ದು ಶಿಕ್ಷ ಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಆತನನ್ನು ಕಾರಿನಲ್ಲಿ ಕೂರಿಸಿಕೊಂಡು ಹಾಲಹಳ್ಳಿ ಸಮೀಪದ ನಿಟ್ರೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಹಾಗೆ ಕಾರಿಗೆ ಪೆಟ್ರೋಲ್‌ ಹಾಕಿ ಚಾಲಕನ ಗುರುತು ಸಿಗದ ರೀತಿಯಲ್ಲಿ ಸುಟ್ಟು ಹಾಕಲಾಗಿತ್ತು. ಇದು ಕೊಲೆಯಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿತ್ತು,'' ಎಂದರು.

ತಂಡ ರಚನೆ: ''ರಂಗಸ್ವಾಮಿ ಕೊಲೆ ಪ್ರಕರಣ ಬೇಧಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚನೆ ಮಾಡಲಾಯಿತು. ಗುಂಡ್ಲುಪೇಟೆ ಸಿಪಿಐ ಎಚ್‌.ಎನ್‌.ಬಾಲಕೃಷ್ಣ, ಬೇಗೂರು ಸಿಪಿಐ ಲೋಹಿತ್‌ಕುಮಾರ್‌, ತೆರಕಣಾಂಬಿ ಪಿಎಸ್‌ಐ ಚಿಕ್ಕರಾಜಶೆಟ್ಟಿ ಸಿಬ್ಬಂದಿಗಳು, ಚಾಮರಾಜನಗರ ಮೆಡಿಕಲ್‌ ಕಾಲೇಜಿನ ಪೊರೆನ್ಸಿಕ್‌ ತಜ್ಞ ಡಾ.ಪ್ರದೀಪ್‌ ಅವರ ಸಹಕಾರದೊಂದಿಗೆ ಕಾರಿನ ಚಾಲಿಸ್‌ ನಂಬರ್‌ ಮೂಲಕ ಅದರ ಮಾಲೀಕ ರಂಗಸ್ವಾಮಿ ಎಂಬುದಾಗಿ ಪತ್ತೆ ಹಚ್ಚಿದರು. ರಂಗಸ್ವಾಮಿ ಅವರ ಮೊಬೈಲ್‌ ಕರೆ ವಿವರಗಳನ್ನು ಕಲೆ ಹಾಕಿದಾಗ ಒಂದು ನಿರ್ದಿಷ್ಟ ಸಂಖ್ಯೆಗೆ ಪದೇ ಪದೇ ಕರೆ ಮಾಡುತಿದ್ದು ತಿಳಿದು ಬಂತು. ಅವರನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂತು,'' ಎಂದರು.

ನಗದು ವಿತರಣೆ: ''ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಸಿಪಿಐ ಎಚ್‌.ಎನ್‌.ಬಾಲಕೃಷ್ಣ, ಪಿಎಸ್‌ಐ ಲೋಹಿತ್‌, ಪಿಎಸ್‌ಐ ಚಿಕ್ಕರಾಜಶೆಟ್ಟಿ, ಸಿಬ್ಬಂದಿಗಳಾದ ಎಂ.ಗಣೇಶ್‌, ಶಿವರಾಜು, ಸಿದ್ದರಾಮು, ಎಚ್‌.ಸಿ.ವಿಶ್ವ, ರಾಜು, ಮಹಿಳಾ ಪೊಲೀಸ್‌ ಪೇದೆಗಳಾದ ಬಂಗಾರಮ್ಮ, ಲತಾ, ಜೀಪ್‌ ಚಾಲಕರಿಗೆ ನಗದು ನೀಡಿ ಪುರಸ್ಕರಿಸಲಾಗುವುದು,'' ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಡಿವೈಎಸ್ಪಿ ಮೋಹನ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ