ಆ್ಯಪ್ನಗರ

ರೈತರಲ್ಲಿ ಮಂದಹಾಸ ತಂದ ಮಳೆ

ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿತು ಎಂಬ ವೇಳೆಯಲ್ಲೇ ಕಳೆದೆರಡು ದಿನಗಳಿಂದ ಕೃತ್ತಿಕಾ ಮಳೆ ಉತ್ತಮವಾಗಿ ಬೀಳುತ್ತಿದ್ದು, ರೈತರಲ್ಲಿ ಸಮಾಧಾನ ಮೂಡಿಸಿದೆ.

Vijaya Karnataka 15 May 2019, 5:00 am
ಫಾಲಲೋಚನ ಆರಾಧ್ಯ ಚಾಮರಾಜನಗರ
Vijaya Karnataka Web CHN-CHN14P1


ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿತು ಎಂಬ ವೇಳೆಯಲ್ಲೇ ಕಳೆದೆರಡು ದಿನಗಳಿಂದ ಕೃತ್ತಿಕಾ ಮಳೆ ಉತ್ತಮವಾಗಿ ಬೀಳುತ್ತಿದ್ದು, ರೈತರಲ್ಲಿ ಸಮಾಧಾನ ಮೂಡಿಸಿದೆ.

ಮೇ 11ರಿಂದ ಕೃತ್ತಿಕಾ ಮಳೆ ಆರಂಭವಾಗಿದ್ದು, ಜಿಲ್ಲೆಯತ್ತ ವರುಣನ ಕೃಪೆಯೂ ತಿರುಗಿದೆ. ಈವರೆಗಿನ ಅಂಕಿ, ಅಂಶದ ಪ್ರಕಾರ, ಜಿಲ್ಲೆಯ ಈವರೆಗೆ ಮಳೆಯಾಗಿರುವುದು ವಾಡಿಕೆಗಿಂತ ಕಡಿಮೆಯೇ. ಆದರೆ ಕಳೆದೆರಡು ದಿನಗಳಿಂದ ಬೀಳುತ್ತಿರುವ ಮಳೆ ಮೇ ತಿಂಗಳ ವಾಡಿಕೆಯನ್ನು ಸರಿದೂಗಿಸುವ ನಿರೀಕ್ಷೆಯನ್ನು ಮೂಡಿಸಿದೆ.

ಈವರೆಗೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಅಷ್ಟೇನೂ ಬಿರುಸುಗೊಳ್ಳದೇ ಬಿತ್ತನೆ ಕಾರ್ಯ ಕುಂಠಿತಗೊಂಡಿತ್ತು. ಬಿತ್ತನೆ ಗುರಿ ಮುಂದೆ ಸಾಧನೆ ಕೇವಲ ಶೇ.15.39ರಷ್ಟು ಮಾತ್ರ ಇತ್ತು. ಆದರೆ ಈಗ ಬಿದ್ದಿರುವ ಮಳೆ ರೈತರಲ್ಲಿ ಮಂದಹಾಸ ತಂದಿದ್ದು, ಬಿತ್ತನೆ ಕಾರ್ಯ ಚುರುಕುಗೊಳ್ಳುವ ಸಾಧ್ಯತೆ ಇದೆ.

ಗುಂಡ್ಲುಪೇಟೆಯಲ್ಲಿ ಹೆಚ್ಚು: ಕಳೆದೆರಡು ದಿನಗಳಿಂದ ಗುಂಡ್ಲುಪೇಟೆ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಅದರಲ್ಲೂ ಬಂಡೀಪುರ ಉದ್ಯಾನ ಪ್ರದೇಶದ ವ್ಯಾಪ್ತಿಯಲ್ಲಿ ಜೋರು ಮಳೆಯಾಗಿರುವುದು ವನ್ಯಜೀವಿಗಳ ಮಟ್ಟಿಗೆ ಇದ್ದ ಆತಂಕವನ್ನು ತಗ್ಗಿಸಿದೆ.

ಸೋಮವಾರ ಸಂಜೆ ಈ ಪ್ರದೇಶದಲ್ಲಿ (ಮೇಲುಕಾಮನಹಳ್ಳಿ ಗ್ರಾ.ಪಂ.)ಒಂದೇ ದಿನ 64 ಮಿ.ಮೀ. ಮಳೆಯಾಗಿದೆ ಎಂಬುದು ಗಮನಾರ್ಹ ಸಂಗತಿ.

ಹಾಗೆ ನೋಡಿದರೆ ಜಿಲ್ಲೆಯ ಈವರೆಗಿನ ವಾಡಿಕೆ ಮಳೆ 148 ಮಿ.ಮೀ., ಸದ್ಯ ಬಿದ್ದಿರುವ ಮಳೆ 108 ಮಿ.ಮೀ. ಇದ್ದು ಶೇ.27ರಷ್ಟು ಕೊರತೆ ಇದೆ. ಆದರೆ, ಕಳೆದ 24 ಗಂಟೆಗಳಲ್ಲೇ ಜಿಲ್ಲೆಗೆ 6 ಮಿ.ಮೀ. ಮಳೆ ಬಿದ್ದಿದೆ ಎಂಬುದು ಸಂತಸಕ್ಕೆ ಕಾರಣ.

ಕಳೆದ ಏಪ್ರಿಲ್‌ ತಿಂಗಳಲ್ಲಿ 67 ಮಿ.ಮೀ. ವಾಡಿಕೆ ಮಳೆಗೆ 57 ಮಿ.ಮೀ. ಮಳೆಯಾಗಿತ್ತು. ಇದೀಗ ಮೇನಲ್ಲಿ ಈವರೆಗೇ 38 ಮಿ.ಮೀ. ಮಳೆ ಬೀಳುವ ಮೂಲಕ ಇದ್ದ ಆತಂಕವನ್ನು ಸ್ವಲ್ಪ ತಗ್ಗಿಸಿದೆ.

ಚಾ.ನಗರ ತಾಲೂಕಿನಲ್ಲಿ ಈವರೆಗೆ ಒಟ್ಟು 76 ಮಿ.ಮೀ., ಗುಂಡ್ಲುಪೇಟೆಯಲ್ಲಿ ಅತಿಹೆಚ್ಚು 132 ಮಿ.ಮೀ., ಕೊಳ್ಳೇಗಾಲದಲ್ಲಿ 112 ಮಿ.ಮೀ. ಹಾಗೂ ಯಳಂದೂರಿನಲ್ಲಿ 99 ಮಿ.ಮೀ. ಮಳೆ ಬಿದ್ದಿದೆ.

ಅದೇ ಮೇ ತಿಂಗಳಲ್ಲಿ ಈವರೆಗೆ ಚಾ.ನಗರ ತಾಲೂಕಿನಲ್ಲಿ 60 ಮಿ. ಮೀ.ಗೆ 32 ಮಿ.ಮೀ., ಗುಂಡ್ಲುಪೇಟೆ ತಾಲೂಕಿನಲ್ಲಿ 59 ಮಿ.ಮೀ. ವಾಡಿಕೆ ಮಳೆಗೆ 58 ಮಿ.ಮೀ., ಕೊಳ್ಳೇಗಾಲದಲ್ಲಿ 66ಕ್ಕೆ 29 ಹಾಗೂ ಯಳಂದೂರು ತಾಲೂಕಿನಲ್ಲಿ 57ಕ್ಕೆ 36 ಮಿ.ಮೀ. ಮಳೆಯಾಗಿದೆ ಎನ್ನುತ್ತದೆ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆಯ ಅಂಕಿ, ಅಂಶ.

ಬಂಡೀಪುರ ಪ್ರದೇಶದಲ್ಲಿ ಜೋರು ಮಳೆ

ಕಳೆದೆರಡು ತಿಂಗಳ ಹಿಂದಷ್ಟೇ ಒಣಗಿ ನಿಂತು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದ ಬಂಡೀಪುರ ಉದ್ಯಾನದ ಕಾಡಿನ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಜೋರು ಮಳೆ ಬೀಳುತ್ತಿರುವುದು ವನ್ಯಜೀವಿಗಳ ಬಗ್ಗೆ ಇದ್ದ ಆತಂಕವನ್ನು ದೂರವಾಗಿಸಿದೆ. ಮಳೆ ಕೊರತೆಯಾದರೆ ವನ್ಯಜೀವಿಗಳ ನೀರಿಗೆ ತೊಂದರೆಯಾಗಬಹುದು. ಅಲ್ಲದೆ ಕಾಡಿಗೆ ಮತ್ತೆ ಬೆಂಕಿ ಬೀಳುವ ಆತಂಕ ಇದ್ದೇ ಇತ್ತು. ಆದರೀಗ ಅದು ದೂರಾಗಿದೆ ಎಂಬುದು ಸಮಾಧಾನಕ್ಕೆ ಕಾರಣ. ಸೋಮವಾರ ಹಂಗಳ ಗ್ರಾ.ಪಂ. ವ್ಯಾಪ್ತಿಯಲ್ಲಿ 59 ಮಿ.ಮೀ. ಮಳೆಯಾಗಿದ್ದರೆ, ಮೇಲುಕಾಮನಹಳ್ಳಿಯಲ್ಲಿ 64 ಮಿ.ಮೀ. ಮಳೆಯಾಗಿರುವುದು ಗಮನಾರ್ಹ. ಕಳೆದೆರಡು ತಿಂಗಳ ಹಿಂದೆ ಇವೆರಡು ಪ್ರದೇಶದ ಅರಣ್ಯದಲ್ಲೇ ಬೆಂಕಿ ರುದ್ರನರ್ತನ ನಡೆದು, ಸಾಕಷ್ಟು ಪ್ರದೇಶ ಬೆಂಕಿಗೆ ತುತ್ತಾಗಿತ್ತು ಎಂಬುದನ್ನು ಸ್ಮರಿಸಬಹುದು.


ಗುಂಡ್ಲುಪೇಟೆ ಹಾಗೂ ಚಾ.ನಗರ ತಾಲೂಕಿನಲ್ಲಿ ತಡವಾಗಿಯಾದರೂ ಉತ್ತಮ ಮಳೆ ಬೀಳುತ್ತಿದೆ. ಈ ಪ್ರದೇಶದಲ್ಲಿ ಭೂಮಿ ಹದ ಮಾಡಿಕೊಂಡಿರುವ ರೈತರಿಗೆ ಈ ಮಳೆ ಬಿತ್ತನೆಗೆ ಅನುಕೂಲ ವಾತಾವರಣ ಕಲ್ಪಿಸಿದ್ದು, ಸಮಾಧಾನ ಮೂಡಿಸಿದೆ.

-ತಿರುಮಲೇಶ್‌, ಜಂಟಿ ನಿರ್ದೇಶಕರು, ಕೃಷಿ ಇಲಾಖೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ