ಆ್ಯಪ್ನಗರ

ಹೆಜ್ಜೆ ಗುರುತಿದ್ದರೂ ಪುಂಡಾನೆ ಸುಳಿವಿಲ್ಲ

ಹೆಜ್ಜೆ ಗುರುತಿನ ಜಾಡು ಹಿಡಿದು ಹೋದರೂ ಸುಳಿವು ಸಿಗದ ಕಾರಣ ಅರಣ್ಯ ಇಲಾಖೆಯವರು ಬುಧವಾರ ನಡೆಸಿದ ಪುಂಡಾನೆ ಸೆರೆ ಕಾರ್ಯಾಚರಣೆ ಯಶಸ್ಸು ಕಾಣಲಿಲ್ಲ.

Vijaya Karnataka 24 Oct 2019, 5:00 am
ಗುಂಡ್ಲುಪೇಟೆ : ಹೆಜ್ಜೆ ಗುರುತಿನ ಜಾಡು ಹಿಡಿದು ಹೋದರೂ ಸುಳಿವು ಸಿಗದ ಕಾರಣ ಅರಣ್ಯ ಇಲಾಖೆಯವರು ಬುಧವಾರ ನಡೆಸಿದ ಪುಂಡಾನೆ ಸೆರೆ ಕಾರ್ಯಾಚರಣೆ ಯಶಸ್ಸು ಕಾಣಲಿಲ್ಲ.
Vijaya Karnataka Web CHN23GPT2_18


ಮಂಗಳವಾರ ತಾಲೂಕಿನ ಶಿವಪುರ ಭಾಗದಲ್ಲಿ ರೈತ ಸಿದ್ದಯ್ಯ ಮತ್ತು ಹಂಗಳದಲ್ಲಿ ಯುವಕ ಸ್ವಾಮಿ ಅವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದಲ್ಲದೇ, ಹಸುಗಳ ಸಾವಿಗೆ ಕಾರಣವಾದ ಪುಂಡಾನೆ ಮೇಲೆ ಅಂದು ಸಂಜೆ ತನಕ ಅರಣ್ಯ ಇಲಾಖೆಯವರು ನಿಗಾ ಇಟ್ಟಿದ್ದರು. ಕತ್ತಲಾದ ನಂತರ ಆನೆ ಕಾಡಿಗೆ ಹೋಗುವ ಭರವಸೆಯಲ್ಲಿ ಅಧಿಕಾರಿ ಮತ್ತು ನೌಕರರು ಅಲ್ಲಿಂದ ತೆರಳಿದ್ದರು. ಆದರೆ, ಆನೆ ಕಾಡಿನತ್ತ ಮುಖ ಮಾಡದೇ ಮತ್ತೆ ಶಿವಪುರ, ಹುಲ್ಲೇಪುರ ಮಾರ್ಗವಾಗಿ ತೆರಕಣಾಂಬಿ ಭಾಗಕ್ಕೆ ಹೋಗಿರುವುದು ಹೆಜ್ಜೆ ಗುರುತಿನಿಂದ ಖಾತರಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಬುಧವಾರ ಪಾರ್ವತಿ ದೇವಾಲಯದಿಂದ ತೆರಕಣಾಂಬಿವರೆಗೆ ಇರುವ ಬೆಟ್ಟಗಳ ಸಾಲಿನ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸೆರೆ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಿದ್ದರು. ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ, ಎಸಿಎಫ್‌ಗಳಾದ ಕೆ.ಪರಮೇಶ್‌, ರವಿಕುಮಾರ್‌, ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್‌, ನವೀನ್‌ಕುಮಾರ್‌, ಮಹದೇವ್‌, ಶೈಲೇಂದ್ರಕುಮಾರ್‌, ಲೋಕೇಶ್‌ ಇತರೆ ಅಧಿಕಾರಿ ಮತ್ತು ನೌಕರರು ಒಳಗೊಂಡ 60 ಕ್ಕೂ ಹೆಚ್ಚು ಮಂದಿ ಈ ಭಾಗದಲ್ಲಿ ಸನ್ನದ್ಧರಾಗಿದ್ದರು.

ಸಾಕಾನೆಗಳ ನೆರವು: ಸಾಕಾನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ, ಕೃಷ್ಣ, ಜಯಪ್ರಕಾಶ್‌, ರೋಹಿತ್‌, ಪುಟ್ಟ ಇತರೆ ಆನೆಗಳನ್ನು ಕರೆಸಲಾಗಿತ್ತು. ತೆರಕಣಾಂಬಿ ಭಾಗದಲ್ಲಿ ಸಾಕಾನೆಗಳ ಮೂಲಕ ಕಾರ್ಯಾಚರಣೆ ಕೈಗೊಳ್ಳುವ ಸಲುವಾಗಿ ಸುತ್ತಾಟ ನಡೆಸಲಾಯಿತು. ಆದರೆ ನೆಲ ಗಟ್ಟಿ ಇರುವ ಕಡೆಗಳಲ್ಲಿ ಪುಂಡಾನೆ ಹೆಜ್ಜೆ ಗುರುತು ಮೂಡದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲು ಸಾಧ್ಯವಾಗಲಿಲ್ಲ.

ಹಂಗಳ ಭಾಗದಿಂದ ತೆರಕಣಾಂಬಿ ಗುಡ್ಡದವರೆಗೆ ಆನೆ ಬಂದಿರುವ ಹೆಜ್ಜೆ ಗುರುತುಗಳಿವೆ. ಆದರೆ, ಆನೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆದ್ದರಿಂದ ಕತ್ತಿಗೆ ರೇಡಿಯೋ ಕಾಲರ್‌(ಬೆಲ್ಟ್‌) ಹಾಕಿರುವ ಆನೆ ಕಂಡು ಬಂದಲ್ಲಿ ಗ್ರಾಮಸ್ಥರು, ಗ್ರಾಮ ಪಂಚಾಯಿತಿಯವರು, ಸಾರ್ವಜನಿರು ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಲಾಗಿದೆ.

- ಬಾಲಚಂದ್ರ, ನಿರ್ದೇಶಕರು, ಬಂಡೀಪುರ ಹುಲಿ ಯೋಜನೆ
.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ