ಆ್ಯಪ್ನಗರ

ಮಣ್ಣಿನ ಗಣಪ ನಿಗೆ ಹೆಚ್ಚಿದ ಬೇಡಿಕೆ

ಗೌರಿ, ಗಣೇಶ ಹಬ್ಬಕ್ಕೆ ವಾರವಷ್ಟೇ ಬಾಕಿ ಇದ್ದು, ಮಾರುಕಟ್ಟೆಗೆ ಈಗಾಗಲೇ ಗೌರಿ, ಗಣೇಶ ವಿಗ್ರಹಗಳು ದಾಂಗುಡಿ ಇಡುತ್ತಿವೆ.

Vijaya Karnataka 28 Aug 2019, 5:00 am
ಚಾಮರಾಜನಗರ: ಗೌರಿ, ಗಣೇಶ ಹಬ್ಬಕ್ಕೆ ವಾರವಷ್ಟೇ ಬಾಕಿ ಇದ್ದು, ಮಾರುಕಟ್ಟೆಗೆ ಈಗಾಗಲೇ ಗೌರಿ, ಗಣೇಶ ವಿಗ್ರಹಗಳು ದಾಂಗುಡಿ ಇಡುತ್ತಿವೆ.
Vijaya Karnataka Web increased demand for soil ganapa
ಮಣ್ಣಿನ ಗಣಪ ನಿಗೆ ಹೆಚ್ಚಿದ ಬೇಡಿಕೆ


ಈ ಬಾರಿ ಮಾರುಕಟ್ಟೆಗೆ ಮಣ್ಣಿನಿಂದ ಮಾಡಿದ ಗೌರಿ ಗಣೇಶ ವಿಗ್ರಹಗಳೇ ಹೆಚ್ಚಾಗಿ ಬರುತ್ತಿವೆಯಾದರೂ ಆ ಪೈಕಿ ಬಣ್ಣ ಬಣ್ಣದ್ದೇ ಎಂಬುದು ಗಮನಾರ್ಹ. ಮಣ್ಣಿನ ವಿಗ್ರಹಗಳಿಗೆ ಹೆಚ್ಚಿನ ಬೇಡಿಕೆ ಇದ್ದರೂ ಬಣ್ಣ ರಹಿತವಾಗಿರುವ ವಿಗ್ರಹಗಳನ್ನು ಕೇಳುವ ಮಂದಿ ವಿರಳ ಎನ್ನುತ್ತಾರೆ ಮಾರಾಟಗಾರರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಣ್ಣಿನಿಂದ ಮಾಡಿದ ಬಣ್ಣರಹಿತ ಪರಿಸರಸ್ನೇಹಿ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಅಲಂಕಾರಕ್ಕೆ ನೈಸರ್ಗಿಕ ಸಾಮಗ್ರಿಗಳನ್ನು ಬಳಸಬೇಕು ಎಂದು ಹೇಳುತ್ತಲೇ ಇದೆ. ಜಿಲ್ಲಾಡಳಿತದ ಸಹ ಪಿಒಪಿಯಿಂದ ಮಾಡಿದ ರಾಸಾಯನಿಕ ಬಣ್ಣ ಹೊಂದಿರುವ ವಿಗ್ರಹಗಳಿಗೆ ಕಡಿವಾಣ ಹಾಕಲು ಸಾಕಷ್ಟು ನಿಯಮಗಳನ್ನು ಹೇರಿದೆ. ಆದರೂ ಅಲ್ಲಲ್ಲಿಬಣ್ಣ, ಬಣ್ಣದ ಗಣೇಶನದ್ದೇ ದರ್ಬಾರು.

ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ (ಪಿಒಪಿ) ಇಲ್ಲವಾದರೂ ರಾಸಾಯನಿಕ ಬಣ್ಣದ ಗಣಪ ಹೆಚ್ಚಾಗಿ ಹೊಳೆಯುತ್ತಿದ್ದು, ನೈಸರ್ಗಿಕ ಬಣ್ಣವನ್ನು ಹೊಂದಿರುವ ಮೂರ್ತಿಗಳು ವಿರಳ ಎಂಬ ಆರೋಪವೂ ಇದೆ.

ನಗರ ಸೇರಿದಂತೆ ಜಿಲ್ಲೆಯ ಎಲ್ಲತಾಲೂಕು ಕೇಂದ್ರಗಳಲ್ಲೂಈಗಾಗಲೇ ಗೌರಿ, ಗಣೇಶ ಮೂರ್ತಿಯ ಮಾರಾಟ ಆರಂಭವಾಗಿದೆ. ಜಿಲ್ಲಾಕೇಂದ್ರದಲ್ಲಿಅಲ್ಲಲ್ಲಿಮಾರಾಟ ಶುರುವಾಗಿದೆ. ಇನ್ನೆರಡು ದಿನಗಳಲ್ಲಿ ಆ ಸಂಖ್ಯೆ ಹೆಚ್ಚಾಗಲಿದೆ.

100 ರೂ.ನಿಂದ ಹಿಡಿದು 10 ಸಾವಿರ ರೂ.ವರೆಗಿನ ಗಣೇಶನ ಮೂರ್ತಿಯೂ ಮಾರಾಟಕ್ಕೆ ಸಿದ್ಧವಾಗಿವೆ. ಜಿಲ್ಲಾಕೇಂದ್ರವಲ್ಲದೇ ಜಿಲ್ಲೆಯ ತಾಲೂಕು ಕೇಂದ್ರಗಳು ಸೇರಿದಂತೆ ಅಲ್ಲಲ್ಲಿಗಣೇಶ, ಗೌರಿ ಮೂರ್ತಿಗಳ ಮಾರಾಟ ಇದೀಗ ರಂಗು ಪಡೆದುಕೊಳ್ಳುತ್ತಿದೆ.

ಆಕರ್ಷಣೆ ಮುಖ್ಯವಂತೆ: ಗಣೇಶನನ್ನು ಪ್ರತಿಷ್ಠಾಪಿಸುವ ಮಂದಿಗೆ ನಾವು ಕೂರಿಸುವ ಗಣಪ ಆಕರ್ಷಕವಾಗಿರಬೇಕು. ಬೇರೆಯವರಿಗಿಂತ ನಮ್ಮ ಗಣಪ ಗಮನ ಸೆಳೆಯಬೇಕು ಎಂಬ ಹಂಬಲ. ಹೀಗಾಗಿ ಕಲರ್‌ ಕಲರ್‌ಗೆ ಆದ್ಯತೆ ನೀಡುವುದು ಹೆಚ್ಚಿತ್ತು. ಆದರೆ, ಈಚೆಗೆ ಸ್ವಲ್ಪ ಪರಿಸರ ಪ್ರೇಮ ಮೂಡಿದೆ. ಮಣ್ಣಿನ ಗಣಪನ ವಿಗ್ರಹಕ್ಕೆ ಒತ್ತು ನೀಡುತ್ತಿದ್ದಾರೆ ಎಂಬುದು ಹಲವರ ವಾದ.

ಪಿಒಪಿ ಗಣೇಶ : ಮಾರಾಟ ಬೇಡ

ಜಿಲ್ಲಾಡಳಿತವು ರಾಸಾಯನಿಕ ಬಣ್ಣ ಬಳಸಿರುವ, ಪಿಒಪಿಯಿಂದ ತಯಾರಿಸಿರುವ ಗಣೇಶ ವಿಗ್ರಹಗಳ ಮಾರಾಟಕ್ಕೆ ನಿಷೇಧ ಹೇರಿದೆ.

ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯನ್ನಾಗಿ ಆಚರಿಸುವ ದಿಸೆಯಲ್ಲಿಜಿಲ್ಲೆಯಲ್ಲಿಯಾವುದೇ ಭಾಗದಲ್ಲಿಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಹಾಗೂ ಹಾನಿಕಾರಕ ಬಣ್ಣಗಳಿಂದ ಗಣೇಶ ವಿಗ್ರಹ ತಯಾರಿ, ವಿತರಣೆ ಹಾಗೂ ಮಾರಾಟ ತಡೆಯಲು ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಈಗಾಗಲೇ ಸೂಚನೆ ನೀಡಿದ್ದಾರೆ.

ಜಲಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ನಿಂದ ಮಾಡುವ ವಿಗ್ರಹಗಳನ್ನು ಯಾವುದೇ ಜಲಮೂಲಗಳಿಗೆ ವಿಸರ್ಜನೆ ಮಾಡುವುದನ್ನು ನಿರ್ಬಂಧಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಹಿಂದೆಯೇ ಅಧಿಸೂಚನೆ ಹೊರಡಿಸಿದೆ.

ಮಂಡಳಿಯ ಈ ಅಧಿಸೂಚನೆಯನ್ನು ರಾಜ್ಯ ಉಚ್ಚ ನ್ಯಾಯಾಲಯವು ಸಹ ಕ್ರಮಬದ್ಧಗೊಳಿಸಿದೆ. ಹೀಗಾಗಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಹಾಗೂ ಹಾನಿಕಾರಕ ರಾಸಾಯನಿಕ ಬಣ್ಣಗಳಿಂದ ಗಣೇಶ ವಿಗ್ರಹಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಹಾಗೂ ವಿತರಿಸುವುದನ್ನು ನಿಷೇಧಿಸಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ವಿಗ್ರಹ ತಯಾರಿಯಿಂದ ಸಾಂಪ್ರದಾಯಿಕವಾಗಿ ಜೇಡಿ ಮಣ್ಣಿನಿಂದ ವಿಗ್ರಹ ತಯಾರಿಸುತ್ತಿರುವ ತಮ್ಮ ಕಸುಬಿಗೂ ತೊಂದರೆಯಾಗಿದೆ. ಇದರಿಂದ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದೇವೆ. ಹಬ್ಬದ ಹಿಂದಿನ 3 ದಿನಗಳಲ್ಲಿಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ವಿಗ್ರಹವನ್ನು ಬೇರೆ ಜಿಲ್ಲೆಗಳಿಂದ ತಂದು ಮಾರಾಟ ಮಾಡಲಾಗುತ್ತಿದೆ. ಇದನ್ನು ತಪ್ಪಿಸಬೇಕು.

- ಸ್ಥಳೀಯ ತಯಾರಿಕರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ