ಆ್ಯಪ್ನಗರ

ಕೈಗಾರಿಕಾ ಪ್ರದೇಶ: ಟೆಕ್ಸ್‌ಟೈಲ್‌ಗೆ 700 ಕೋಟಿ ಹೂಡಿಕೆ

ನಗರದ ಹೊರ ವಲಯದ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಟೆಕ್ಸ್‌ಟೈಲ್‌ವೊಂದನ್ನು ಸ್ಥಾಪಿಸಲು ಸಂಸ್ಥೆವೊಂದರ ಮಾಲೀಕರು 700 ಕೋಟಿ ರೂ. ಹೂಡಲು ಮುಂದೆ ಬಂದಿದ್ದು, ಸುಮಾರು 2 ಸಾವಿರ ಮಂದಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ ಎಂದು ಕೈಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Vijaya Karnataka 18 Mar 2018, 5:00 am

ಚಾಮರಾಜನಗರ: ನಗರದ ಹೊರ ವಲಯದ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಟೆಕ್ಸ್‌ಟೈಲ್‌ವೊಂದನ್ನು ಸ್ಥಾಪಿಸಲು ಸಂಸ್ಥೆವೊಂದರ ಮಾಲೀಕರು 700 ಕೋಟಿ ರೂ. ಹೂಡಲು ಮುಂದೆ ಬಂದಿದ್ದು, ಸುಮಾರು 2 ಸಾವಿರ ಮಂದಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ ಎಂದು ಕೈಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿನ ಜಿ.ಪಂ. ಕೆಡಿಪಿ ಸಭಾಂಗಣದಲ್ಲಿ ಶನಿವಾರ ಸಂಸದ ಆರ್‌. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದರ ಪ್ರಶ್ನೆಗೆ ಅಧಿಕಾರಿಗಳು ಕೈಗಾರಿಕಾ ಪ್ರದೇಶದ ಬಗ್ಗೆ ವಿವರಿಸಿದರು.

ಈಗಾಗಲೇ ಕೆಲ ಕರಿಕಲ್ಲು ಕಾರ್ಖಾನೆ ಮಾಲೀಕರು ಕೈಗಾರಿಕಾ ಪ್ರದೇಶದಲ್ಲಿ ತಮ್ಮ ಕಾರ್ಖಾನೆ ತೆರೆಯಲು ಒಪ್ಪಂದ ಮಾಡಿಕೊಂಡಿದ್ದಾರೆ. ಇದೀಗ ಬೃಹತ್‌ ಪ್ರಮಾಣದ ಟೆಕ್ಸ್‌ಟೈಲ್‌ ಸ್ಥಾಪಿಸಲು ಸಟ್ಲೆಜ್‌ ಟೆಕ್ಸ್‌ಟೈಲ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪನಿ ಮುಂದೆ ಬಂದಿದೆ. ಇವರಿಗೆ ಕೈಗಾರಿಕಾ ಪ್ರದೇಶದಲ್ಲಿ 46 ಎಕರೆ ಪ್ರದೇಶದ ಅಗತ್ಯವಿದ್ದು, 700 ಕೋಟಿ ರೂ. ಹೂಡುವುದಾಗಿ ತಿಳಿಸಿದ್ದಾರೆ. ಹಾಗಾಗಿ ಕೈಗಾರಿಕಾ ಪ್ರದೇಶಕ್ಕೆ ಮೂಲ ಸೌಲಭ್ಯ ಕಲ್ಪಿಸುತ್ತಿದ್ದಂತೆ ಈ ಕಂಪನಿಯವರು ಒಪ್ಪಂದ ಮಾಡಿಕೊಳ್ಳಲಿದ್ದಾರೆ ಎಂದು ಕೈಗಾರಿಕಾ ಅಧಿಕಾರಿ ವಿವರಿಸಿದರು.

ಮೂಲ ಸೌಲಭ್ಯ: ಸದ್ಯ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲದೇ ನೀರಿನ ಸೌಲಭ್ಯಕ್ಕೆ ಪೈಪ್‌ಲೈನ್‌ ಕಾಮಗಾರಿ ಪ್ರಗತಿಯಲ್ಲಿದೆ. ನಂಜನಗೂಡಿನ ಬಳಿ ಜಾಕ್ವೆಲ್‌ ಸ್ಥಾಪಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಇದರೊಂದಿಗೆ ಪ್ರತ್ಯೇಕ ವಿದ್ಯುತ್‌ ವಿತರಣೆ ಕೇಂದ್ರ ಸ್ಥಾಪಿಸಲು ಪ್ರಕ್ರಿಯೆ ಆರಂಭಗೊಂಡಿದ್ದು, ಅದಕ್ಕೆ ಬೇಕಾದ ಪ್ರದೇಶವನ್ನು ಸೆಸ್ಕ್‌ನವರಿಗೆ ನೀಡಲಾಗಿದೆ ಎಂದು ಕೆಎಐಡಿಬಿ ಅಧಿಕಾರಿಗಳು ಸಭೆಗೆ ತಿಳಿಸಿದರು.

ತ್ವರಿತವಾಗಿ ಮುಗಿಸಿ: ಕೈಗಾರಿಕಾ ಪ್ರದೇಶ ಜಿಲ್ಲೆಯಲ್ಲಿ ಇದೊಂದೆ. ಆದ್ದರಿಂದ ಆದಷ್ಟು ಬೇಗ ಮೂಲ ಸೌಲಭ್ಯ ಒದಗಿಸಿಕೊಡಿ. ಇಲ್ಲಿಗೆ ಹೆಚ್ಚಿನ ಕೈಗಾರಿಕೆಗಳು ಬಂದು ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರೆಯುವಂತಾಗಬೇಕು. ಆ ಉದ್ದೇಶದಿಂದಲೇ ರಾಜ್ಯ ಸರಕಾರ 1400 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸಿದೆ. ರಾಜ್ಯ ಸರಕಾರದ ಆ ಕ್ರಮ ಸಾರ್ಥಕವಾಗಬೇಕಾದರೆ ಹೆಚ್ಚಿನ ಕೈಗಾರಿಕೆಗಳು ಬಂದು ಉದ್ಯೋಗ ದೊರೆಯಬೇಕು ಎಂದರು.

ಏಪ್ರಿಲ್‌ ಕೊನೆಗೆ ಪೂರ್ಣ: ಇನ್ನು ಜಿಲ್ಲಾ ಕೇಂದ್ರದೊಳಗೆ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ (209) ಅಭಿವೃದ್ಧಿ ಕಾಮಗಾರಿಯನ್ನು ಏಪ್ರಿಲ್‌ ಕೊನೆವರೆಗೆ ಪೂರ್ಣಗೊಳಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ ಕಾಂತರಾಜು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಬಿ. ಬಿ. ಕಾವೇರಿ ಅವರು, ನೀವು ಹೇಳಿದ ರೀತಿಯಲ್ಲಿ ನಡೆದುಕೊಳ್ಳಬೇಕು. ಏಪ್ರಿಲ್‌ ಕೊನೆಗೆ ಕಾಮಗಾರಿ ಪೂರ್ಣಗೊಳ್ಳಬೇಕು. ನಂತರ ಯಾವುದೇ ಕಾರಣಗಳನ್ನು ಹೇಳುವಂತಿಲ್ಲ. ಯಾವುದೇ ಸಮಸ್ಯೆ ಇದ್ದರೂ ಪರಸ್ಪರ ಇಲಾಖೆ ಹಂತದಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿ.ಪಂ. ಸಿಇಒ ಡಾ. ಕೆ. ಹರೀಶ್‌ಕುಮಾರ್‌, ಜಿ.ಪಂ. ಪ್ರಭಾರ ಅಧ್ಯಕ್ಷ ಜೆ. ಯೋಗೀಶ್‌ ಹಾಜರಿದ್ದರು.

ನರೇಗಾ ಪ್ರಗತಿ ತೃಪ್ತಿಕರವಾಗಿಲ್ಲ: ಸಂಸದ

ಜಿಲ್ಲೆಯಲ್ಲಿ ನರೇಗಾದ ಸದ್ಬಳಕೆ ಸಾಕಷ್ಟು ಅವಕಾಶಗಳಿವೆ. ಆದರೆ, ಕೆಲ ಇಲಾಖೆಗಳು ಅದರ ಪ್ರಗತಿ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಸಂಸದ ಆರ್‌. ಧ್ರುವನಾರಾಯಣ ಬೇಸರ ವ್ಯಕ್ತಪಡಿಸಿದರು.

ಹಿಂದುಳಿದ ಜಿಲ್ಲೆಗೆ ನರೇಗಾ ಒಂದು ರೀತಿಯಲ್ಲಿ ವರ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗುಂಡ್ಲುಪೇಟೆ ತಾಲೂಕು ಮಳೆಯಾಶ್ರಿತವಾಗಿದ್ದು, ಅಲ್ಲಿ ಯೋಜನೆ ಗುರಿ ತೃಪ್ತಿದಾಯಕವಾಗಿಲ್ಲ ಎಂದರು.

ಇದೇ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಸವರಾಜು ಅವರನ್ನು ಪ್ರಶ್ನಿಸಿದ ಸಂಸದರು, ನಿಮ್ಮ ಇಲಾಖೆ ನರೇಗಾ ಕೆಲಸಗಳು ಉತ್ತಮವಾಗಿಲ್ಲ. ನೀವು ಈ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಜಿ.ಪಂ. ಸಿಇಒ ಅವರು ಸಹ ದನಿಗೂಡಿಸಿದರು.

ನೆಟ್‌ ಸಮಸ್ಯೆ ಬಗ್ಗೆ ಡಿಸಿ ಅಸಮಾಧಾನ

ಬಿಎಸ್‌ಎನ್‌ಎಲ್‌ ಇಂಟರ್‌ನೆಟ್‌ ಸಮಸ್ಯೆ ಬಗ್ಗೆ ಸಭೆಯಲ್ಲಿ ಪ್ರಸ್ತಾಗೊಳ್ಳುತ್ತಿದ್ದಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸಹ ಬಿಎಸ್‌ಎನ್‌ಎಲ್‌ ನೆಟ್‌ ಸಮರ್ಪಕವಾಗಿಲ್ಲದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣೆ ಸಂಬಂಧ ಎಲ್ಲ ಜಿಲ್ಲೆಗಳ ವಿಡಿಯೋ ಕಾನ್ಫೆರೆನ್ಸ್‌ ನಡೆಯುತ್ತಿದ್ದು, ಎಲ್ಲ ಜಿಲ್ಲೆಗಳಲ್ಲೂ ನೆಟ್‌ ಚೆನ್ನಾಗಿತ್ತು. ಆದರೆ ನಮ್ಮಲ್ಲಿ ನೆಟ್‌ ಸಮಸ್ಯೆಯಿಂದ ಕಾನ್ಫೆರೆನ್ಸ್‌ ನಡೆಸಲು ಆಡಚಣೆ ಆಯಿತು ಎನ್ನುವ ಮೂಲಕ ಜಿಲ್ಲಾಡಳಿತಕ್ಕೂ ನೆಟ್‌ ಸಮಸ್ಯೆ ಹೊರತಲ್ಲ ಎಂಬುದನ್ನು ಬಿಚ್ಚಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಎಸ್‌ಎನ್‌ಎಲ್‌ ಅಧಿಕಾರಿಗಳು, ನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಎಲ್ಲೆಂದರಲ್ಲಿ ಅಗೆಯುತ್ತಿರುವ ಪರಿಣಾಮ ಕೇಬಲ್‌ ಹಾಳಾಗುತ್ತಿರುವುದು ಈ ಸಮಸ್ಯೆಗೆ ಕಾರಣ ಎಂದು ಹೇಳಿದರು.

Vijaya Karnataka Web industrial area textile investment
ಕೈಗಾರಿಕಾ ಪ್ರದೇಶ: ಟೆಕ್ಸ್‌ಟೈಲ್‌ಗೆ 700 ಕೋಟಿ ಹೂಡಿಕೆ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ