ಆ್ಯಪ್ನಗರ

ಜನಸಂಪರ್ಕ ಸಭೆಯಲ್ಲಿ ಸಮಸ್ಯೆಗಳ ಸರಮಾಲೆ

ಹಂಗಳ ಜಿಪಂ ಕ್ಷೇತ್ರದ ವ್ಯಾಪ್ತಿಯ ಸಮಸ್ಯೆಗಳ ಸರಮಾಲೆಯೇ ಶಾಸಕರ ಮುಂದೆ ಸಾರ್ವಜನಿರು ತೆರೆದಿಟ್ಟರು.!

Vijaya Karnataka 26 Nov 2019, 9:24 pm
ಗುಂಡ್ಲುಪೇಟೆ : ತಾಲೂಕಿನ ಹಂಗಳ ಗ್ರಾಮದ ನಿರಂಜನ ಕಾನ್ವೆಂಟ್ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಹಂಗಳ ಜಿ.ಪಂ ಕ್ಷೇತ್ರ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರು ತಮ್ಮ ಗ್ರಾಮದ ಸಮಸ್ಯೆಯನ್ನು ತಿಳಿಸುವ ಮೂಲಕ ಮನವರಿಕೆ ಮಾಡಿಕೊಟ್ಟರು. ಇದೇ ವೇಳೆ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ ಶಾಸಕರು ವಿವರಣೆ ಕೇಳಿದರು.
Vijaya Karnataka Web ಗುಂಡ್ಲುಪೇಟೆ ತಾಲೂಕಿನ ಹಂಗಳದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿದರು.


ವ್ಯಾಪಕ ದೂರುಗಳು: ನಾಡ ಕಚೇರಿ ಅಸಮರ್ಪಕ ಸೇವೆ, ಮಾಶಾಸನ ಸ್ಥಗಿತ, ಹಾಲಿನ ಪ್ರೋತ್ಸಾಹಧನ, ಬೆಳೆ ವಿಮೆ ರಸ್ತೆ ಬದಿ ಗಿಡಗಂಟಿ ತೆರವು ಮಾಡಿಸುವುದು, ಪಟ್ಟದರಾಣಿ ದೇವಾಲಯ ರಸ್ತೆ ಒತ್ತುವರಿ, ಕೆರೆಗಳಿಗೆ ಕಲುಷಿತ ಚರಂಡಿ ನೀರು ಸೇರುತ್ತಿರುವುದು, ಅಂಗನವಾಡಿ ಕಟ್ಟಡಕ್ಕೆ ಜಾಗದ ಸಮಸ್ಯೆ, 25 ವರ್ಷದಿಂದ ಆಶ್ರಯ ಬಡಾವಣೆಗೆ ಮೂಲಸೌಲಭ್ಯ ಒದಗಿಸದಿರುವುದು, ಆರ್‌ಟಿಸಿಯ 12 ಕಾಲಂ ನಲ್ಲಿ ಹೆಸರು ಸೇರ್ಪಡೆ, ಆಯುರ್ವೇದ ಆಸ್ಪತ್ರೆಯನ್ನು ಪಿಎಚ್‌ಸಿಯಾಗಿ ಪರಿವರ್ತಿಸುವುದು, ಕಿಡಿಗೇಡಿಗಳು ಹೊತ್ತಿಸಿದ ಬೆಂಕಿಗೆ ಮೇವು ನಾಶವಾದರೂ ನಾಡ ಕಚೇರಿಯಿಂದ ಯಾವುದೇ ಪರಿಹಾರ ನೀಡಿಲ್ಲ. ಇನ್ನೂ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸೇವೆ ಆರಂಭಿಸುವುದು, ಪಡಿತರ ಪದಾರ್ಥಗಳ ವಿತರಣೆ, ಮತದಾನದ ಹಕ್ಕು ಚಲಾಯಿಸಲು ಒಂದೇ ಗ್ರಾಮದಲ್ಲಿ ಅವಕಾಶ ಮಾಡುಬೇಕು ಎಂಬುದು ಸೇರಿದಂತೆ ಹತ್ತು ಹಲವು ದೂರುಗಳು ತಾಲೂಕಿನ ಬೊಮ್ಮಲಾಪುರ, ಕಲೀಗೌಡನಹಳ್ಳಿ, ಹೊನ್ನೇಗೌಡನಹಳ್ಳಿ, ಚಿಕ್ಕಎಲಚೆಟ್ಟಿ, ಹಂಗಳ, ಗೋಪಾಲಪುರ ಇತರೆ ಗ್ರಾಮಗಳ ಸಾರ್ವಜನಿಕರಿಂದ ಹೇಳಿದರು.

ನೀರಿನ ಸಮಸ್ಯೆ:
ಹಂಗಳ ಗ್ರಾಮದ ಪರಿಶಿಷ್ಟ ಜಾತಿ, ಪಂಗಡ ಇತರೆ ಹಿಂದುಳಿದ ವರ್ಗದ ಜನರು ವಾಸಿಸುವ ಬಡಾವಣೆಗಳಿಗೆ 7 ಮತ್ತು 15 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುತ್ತಿರುವುದು, ಚರಂಡಿಯೊಳಗೆ ಪೈಪ್‌ಲೈನ್ ಹಾಕಿರುವ ಕಾರಣ ಆಗುತ್ತಿರುವ ಸಮಸ್ಯೆ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಈ ಸಂದರ್ಭ ಜಿ.ಪಂ ತಾಂತ್ರಿಕ ಉಪವಿಭಾಗದ ಎಂಜಿನಿಯರ್ ಸುನೀಲ್ ನೀಡಿದ ವಿವರಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಈ ಸಂದರ್ಭ ಮಧ್ಯ ಪ್ರವೇಶಿಸಿದ ಶಾಸಕರು ವಾರದಲ್ಲಿ ಮೂರು ದಿನ ದೇವರಹಳ್ಳಿ ಸಂಪ್‌ನಿಂದ ಹಂಗಳಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರು ಪೂರೈಸಬೇಕು. ಅಲ್ಲದೇ ಚರಂಡಿಯಲ್ಲಿರುವ ಪೈಪ್‌ಲೈನ್ ತೆರವು ಮಾಡಿ ಮೇಲ್ಭಾಗದಲ್ಲಿ ಜಿಐ ಪೈಪ್ ಹಾಕಬೇಕು. ಹೆಚ್ಚುವರಿ ಪೈಪ್‌ಲೈನ್ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಶಾಸಕರು. ಇದಕ್ಕೆ ಅನುದಾನವಿದ್ದರೆ ನೀಡುವುದಾಗಿಯೂ ಭರವಸೆ ನೀಡಿದರು.

ಕಿಸಾನ್ ಸಮ್ಮಾನ್ ಯೋಜನೆ: ತಾಲೂಕಿನ ಶೇ.20 ರೈತರಿಗೆ ಮಾತ್ರ ಕಿಸಾನ್ ಸಮ್ಮಾನ್ ಯೋಜನೆಯ ಹಣ ದೊರೆತಿದ್ದು, ಉಳಿದ ರೈತರು ಸೌಲಭ್ಯದಿಂದ ವಂಚಿತರಾಗಿದ್ದೇವೆ. ಹಣ ಲಭ್ಯವಿದ್ದರೂ ರೈತರಿಗೆ ತಲುಪಿಸಲು ಕಷಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ರೈತರು ದೂರಿದರು. ತಾಂತ್ರಿಕ ಸಮಸ್ಯೆ ಕಾರಣ ನೀಡದೇ ಅರ್ಹ ರೈತರಿಗೆ ಸೌಲಭ್ಯ ತಲುಪಿಸಬೇಕು ಎಂದು ಕಷಿ ಅಧಿಕಾರಿ ಸತೀಶ್ ರಿಗೆ ಶಾಸಕರು ಸೂಚನೆ ನೀಡಿದರು.

ಜಿ.ಪಂ ಸದಸ್ಯ ಬಿ.ಕೆ.ಬೊಮ್ಮಯ್ಯ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ತಾ.ಪಂ ಸದಸ್ಯರಾದ ಕೆ.ಎಸ್.ಜಗದೀಶಮೂರ್ತಿ, ಎಚ್.ಎನ್.ನಟೇಶ್, ಎಂ.ಕೆ.ಶಿವನಂಜು, ಮಾಜಿ ಸದಸ್ಯ ನಾಗರಾಜಪ್ಪ, ಇಒ ವಿ.ಪಿ.ಕುಲದೀಪ್, ಉಪ ತಹಸೀಲ್ದಾರ್ ಎಸ್.ಮಹೇಶ್, ಹಂಗಳ, ಮಂಗಲ ಮತ್ತು ಬಾಚಹಳ್ಳಿ ಗ್ರಾ.ಪಂ ಅಧ್ಯಕ್ಷರಾದ ಶೋಭಾ, ಛತ್ರಿಮಹದೇವಪ್ಪ, ಮುದ್ದಪ್ಪ, ಉಪಾಧ್ಯಕ್ಷ ಮೂರ್ತಿ, ಸದಸ್ಯರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಅಕ್ರಮ ಒತ್ತುವರಿ
ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮದ್ದೂರು ಅರಣ್ಯ ವಲಯದಂಚಿನಲ್ಲಿ ಕೇರಳ ರಾಜ್ಯದವರು ಬಾಚನಹಳ್ಳಿ ಗ್ರಾಮದ ಸರ್ವೆ 16 ರಲ್ಲಿ 35 ಎಕರೆಯಷ್ಟು ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಮಹದೇವು ಮತ್ತು ಮಂಜು ದೂರಿದರು. ಈ ಬಗ್ಗೆ ಹಲವು ದೂರುಗಳಿರುವುದು ತಿಳಿದಿದೆ. ಆದ್ದರಿಂದ ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕರು ಮತ್ತು ಸಂಬಂಧಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಒಟ್ಟಾಗಿ ತಂಡ ರಚಿಸುವ ಮೂಲಕ ಅಕ್ರಮವಿದ್ದರೆ ತೆರವಿಗೆ ಕ್ರಮ ಕೈಗೊಳ್ಳಿ ಎಂದು ಶಾಸಕರು ಸೂಚಿಸಿದರು.


ಅಧಿಕಾರಿಗಳ ಬಗ್ಗೆ ಬೇಸರ
ಸಾರ್ವಜನಿಕ ಸಮಸ್ಯೆಗಳ ಸಂಬಂಧ ಅಧಿಕಾರಿಗಳ ಸ್ಪಂದನೆ ಇಲ್ಲದಿರುವುದು, ದೂರುವಾಣಿ ಕರೆ ಸ್ವೀಕರಿಸದಿರುವುದು ಇನ್ನೂ ಹಲವು ವಿಷಯಗಳ ಬಗ್ಗೆ ಅಧಿಕಾರಿಗಳ ನಡೆದುಕೊಳ್ಳುವ ರೀತಿಯ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ