ಆ್ಯಪ್ನಗರ

ಕಾನೂನು ಕಾಲೇಜು ಪ್ರಕ್ರಿಯೆ ಆರಂಭ

ಜಿಲ್ಲೆಗೆ ಮಂಜೂರಾಗಿರುವ ಕಾನೂನು ಕಾಲೇಜಿಗಾಗಿ ತಾತ್ಕಾಲಿಕವಾಗಿ ಗುರುತಿಸಲಾಗಿರುವ ನಗರದ ರೇಷ್ಮೆ ಇಲಾಖೆ ಕಟ್ಟಡ (ಹಿಂದಿನ ಕೇಂದ್ರಿಯ ವಿದ್ಯಾಲಯ)ಕ್ಕೆ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾನಿಲಯದ ಸ್ಥಳೀಯ ತಪಾಸಣಾ ಸಮಿತಿಯು ಮಂಗಳವಾರ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಿತು.

Vijaya Karnataka 19 Jun 2019, 5:00 am
ಚಾಮರಾಜನಗರ: ಜಿಲ್ಲೆಗೆ ಮಂಜೂರಾಗಿರುವ ಕಾನೂನು ಕಾಲೇಜಿಗಾಗಿ ತಾತ್ಕಾಲಿಕವಾಗಿ ಗುರುತಿಸಲಾಗಿರುವ ನಗರದ ರೇಷ್ಮೆ ಇಲಾಖೆ ಕಟ್ಟಡ (ಹಿಂದಿನ ಕೇಂದ್ರಿಯ ವಿದ್ಯಾಲಯ)ಕ್ಕೆ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾನಿಲಯದ ಸ್ಥಳೀಯ ತಪಾಸಣಾ ಸಮಿತಿಯು ಮಂಗಳವಾರ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಿತು.
Vijaya Karnataka Web CHN-CHN18P3


ಹುಬ್ಬಳ್ಳಿಯಲ್ಲಿನ ಕಾನೂನು ವಿವಿಯ ಮುಖ್ಯಸ್ಥರು ಹಾಗೂ ಸಮಿತಿ ಅಧ್ಯಕ್ಷ ಡಾ.ಸಿ.ಎಸ್‌.ಪಾಟೀಲ ಹಾಗೂ ಸಮಿತಿ ಸದಸ್ಯರಾದ ಡಾ.ಬಿ.ಎಸ್‌.ರೆಡ್ಡಿ, ಸಂಯೋಜಕರಾದ ಸುನೀಲ್‌ ಭಗಾಡೆ ಅವರು ಭೇಟಿ ಕೊಟ್ಟು ಕಾನೂನು ಕಾಲೇಜಿಗೆ ಅಗತ್ಯವಾಗಿ ಬೇಕಿರುವ ಸೌಲಭ್ಯಗಳು, ಕೊಠಡಿಗಳು ಈಗಿನ ತಾತ್ಕಾಲಿಕ ಕಟ್ಟಡದಲ್ಲಿವೆಯೇ ಎಂಬುದನ್ನು ಪರಿಶೀಲಿಸಿತು.

ಈ ಶೈಕ್ಷಣಿಕ ವರ್ಷದಿಂದಲೇ ಕಾನೂನು ಕಾಲೇಜು ಆರಂಭವಾಗಬೇಕಾದರೆ ಆಗಸ್ಟ್‌ ವೇಳೆಗೆ ಕಟ್ಟಡ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿರಬೇಕು. ಹೀಗಾಗಿ ಸದ್ಯ ಕಟ್ಟಡ, ಕೊಠಡಿಗಳು ಸಿದ್ಧವಾಗಿದೆ. ಇನ್ನು ಅಗತ್ಯವಾಗಿ ಪೀಠೋಪಕರಣ, ಪಾಠೋಪಕರಣಗಳು ಬೇಕಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಸ್ಥಳದಲ್ಲೇ ಹಾಜರಿದ್ದು, ಕೂಡಲೇ ಅವೆಲ್ಲವನ್ನೂ ಪೂರೈಸಲು ಸಿದ್ಧ ಎಂದು ಭರವಸೆ ನೀಡಿದರು.

ಸಮಿತಿಯೊಂದಿಗೆ ಸಮಾಲೋಚಿಸಿದ ಸಚಿವರು, ಈ ಶೈಕ್ಷಣಿಕ ವರ್ಷದಿಂದಲೇ ಕಾನೂನು ಕಾಲೇಜು ಆರಂಭಿಸಲು ಶಿಫಾರಸು ಮಾಡಬೇಕು ಎಂದು ಹೇಳಿದರು.

ಕಾಲೇಜಿನ ತರಗತಿಗಳಿಗೆ ಅಗತ್ಯ ಇರುವ ಕೊಠಡಿ, ಗ್ರಂಥಾಲಯ ಕೊಠಡಿ, ಶೌಚಾಲಯ, ನೀರಿನ ವ್ಯವಸ್ಥೆ ಮತ್ತಿತರ ಮೂಲ ಸೌಲಭ್ಯಗಳನ್ನು ಸಮಿತಿಯು ವೀಕ್ಷ ಣೆ ಮಾಡಿತು.

ತಕ್ಷಣ ವರದಿ: ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷ ಪಾಟೀಲ್‌ ಅವರು, ಕಾಲೇಜು ಆರಂಭಕ್ಕೆ ಬೇಕಾಗಿರುವ ಮೂಲ ಸೌಕರ್ಯ ಹಾಗೂ ಪೂರಕ ವ್ಯವಸ್ಥೆಗಳು ಲಭ್ಯವಿದೆಯೇ ಎಂಬ ಬಗ್ಗೆ ನೋಡಿ ಪರಿಶೀಲಿಸಲು ಬಂದಿದ್ದೇವೆ. ಪರಿಶೀಲನೆ ಸಂಬಂಧ ಸದ್ಯದಲ್ಲೇ ನಾವು ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಿದ್ದೇವೆ. ಅಲ್ಲಿಂದ ಸರಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 105 ಕಾನೂನು ಕಾಲೇಜುಗಳಿದ್ದು, ಸರಕಾರಿ ಕಾನೂನು ಕಾಲೇಜುಗಳಿರುವುದು ಇಡೀ ರಾಜ್ಯದಲ್ಲಿ 5. ಚಾ.ನಗರದಲ್ಲಿ ಪ್ರಾರಂಭವಾದರೆ 6ನೇ ಸರಕಾರಿ ಕಾಲೇಜಾಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ಪ್ರಸಕ್ತ ಶೈಕ್ಷ ಣಿಕ ಸಾಲಿನಲ್ಲಿಯೆ ಕಾನೂನು ಕಾಲೇಜು ಆರಂಭಕ್ಕೆ ಅಗತ್ಯ ಇರುವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕಾನೂನು ವಿವಿ ಸ್ಥಳೀಯ ಪರಿಶೀಲನ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇಲ್ಲಿನ ಸೌಲಭ್ಯಗಳ ಬಗ್ಗೆ ಸಮಿತಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.

ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಸಮಿತಿಯು ಸಹ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿದೆ. ಮುಖ್ಯಮಂತ್ರಿ ಅವರು ಕಾನೂನು ಕಾಲೇಜಿಗಾಗಿ ಆಯವ್ಯಯದಲ್ಲಿ 1 ಕೋಟಿ ರೂ ನೀಡಿದ್ದಾರೆ. ಇತರೆ ನೆರವನ್ನು ಬಳಸಿಕೊಂಡು ಕಾಲೇಜಿಗೆ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲಾಗುವುದು. ಆರಂಭದಲ್ಲಿ ಒಟ್ಟು 60 ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಅವಕಾಶ ಸಿಗಲಿದೆ ಎಂದು ತಿಳಿಸಿದರು.

ಕಾನೂನು ಕಾಲೇಜು ಪ್ರಾಂಶುಪಾಲರಾದ ಡಾ.ಎ. ಗೋಪಾಲ್‌ ಇತರರು ಹಾಜರಿದ್ದರು.

ಧ್ರುವ ಒತ್ತಡ ಕಾರಣ

ಚಾ.ನಗರಕ್ಕೆ ಸರಕಾರಿ ಕಾನೂನು ಕಾಲೇಜು ಮಂಜೂರಾಗಬೇಕೆಂಬ ಬೇಡಿಕೆ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗಿನಿಂದಲೂ ಇತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಆದರೆ, ಕಳೆದ ಬಜೆಟ್‌ನಲ್ಲಿ ಪಟ್ಟು ಬಿಡದೇ ಇದಕ್ಕೆ ಅನುದಾನ ಮಂಜೂರು ಮಾಡಿಸಿದವರು ಆಗ ಸಂಸದರಾಗಿದ್ದ ಆರ್‌. ಧ್ರುವನಾರಾಯಣ. ಇದಕ್ಕೆ ಸಾಥ್‌ ನೀಡಿದವರು ಸಚಿವ ಪುಟ್ಟರಂಗಶೆಟ್ಟಿ ಅವರು. ಇದೀಗ ಅದರ ಫಲ ಜಿಲ್ಲೆಯ ವಿದ್ಯಾರ್ಥಿಗಳಿಗೆ ದೊರೆಯಲಿದೆ. ಕಾನೂನು ಕಾಲೇಜಿನ ಸ್ವಂತ ಕಟ್ಟಡ ನಿರ್ಮಾಣಕ್ಕೆ 10ರಿಂದ 15 ಎಕರೆ ಸರಕಾರಿ ಜಾಗವನ್ನು ನೀಡುವಂತೆ ಪ್ರಸ್ತಾವನೆಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ