ವಿಕ ಸುದ್ದಿಲೋಕ ಯಳಂದೂರು.
ತಾಲೂಕಿನ ಮಾಂಬಳ್ಳಿ ಗ್ರಾಮ ಪಂಚಾಯಿತಿಯನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿ ಘೋಷಿಸಲಾಯಿತು.
ಗ್ರಾಪಂ ಆವರಣದಲ್ಲಿ ನಡೆದ ಮಹಿಳಾ ಗ್ರಾಮಸಭೆ, ನರೇಗಾ ಯೋಜನೆ ಕಾಮಗಾರಿಗಳ ಆಯ್ಕೆ ಹಾಗೂ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿ ಘೋಷಣೆ ಕಾರ್ಯಕ್ರಮದಲ್ಲಿ ಪಿಡಿಒ ಶಿವಕುಮಾರ್ ಮಾತನಾಡಿ, 2012 ನೇ ಸಾಲಿನ ಸಮೀಕ್ಷೆಯ ಪ್ರಕಾರ ಗ್ರಾಮದಲ್ಲಿ 988 ಕುಟುಂಬಗಳು ವಾಸಿಸುತ್ತಿದ್ದು , ಇದರಲ್ಲಿರು ಈಗಾಗಲೇ 863 ಕುಟುಂಬಗಳು ವೈಯುಕ್ತಿಕ ಶೌಚಾಲಯ ಹೊಂದಿವೆ ಎಂದರು.
125 ಕುಟುಂಬಗಳಿಗೆ ಶೌಚಾಲಯ ನಿರ್ಮಾಣಕ್ಕೆ ಜಾಗದ ಕೊರತೆ ಇರುವುದರಿಂದ ಶೌಚಾಲಯ ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ಇವರಿಗೆ ಸಾಮೂಹಿಕ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗುವುದು. ಈಗಾಗಲೇ ಗ್ರಾಮದಲ್ಲಿ 2 ಸಾಮೂಹಿಕ ಶೌಚಾಲಯಗಳಿವೆ ಎಂದರು.
ಬಸವ ವಸತಿ ಯೋಜನೆಯಡಿಯಲ್ಲಿ 10 ಮನೆಗಳು, ಅಂಬೇಡ್ಕರ್ ನಿವಾಸ್ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗಕ್ಕೆ 20 ನಿವಾಸಗಳು ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 11 ಮನೆಗಳ ನಿರ್ಮಾಣಕ್ಕೆ ಅವಕಾಶವಿದ್ದು , ಈ ಬಾರಿ ಒಟ್ಟು 43 ಮನೆಗಳಿಗೆ ಅರ್ಜಿ ಆಹ್ವಾನಿಸಿ ಆಯ್ಕೆ ಮಾಡಿರುವುದಾಗಿ ತಿಳಿಸಿದರು.
ನೋಡಲ್ ಅಧಿಕಾರಿ ಬಿಇಒ ಮಲ್ಲಿಕಾರ್ಜುನ ಮಾತನಾಡಿ, ಜ. 22ರ ವರೆವಿಗೆ ಮತದಾರ ಪಟ್ಟಿಗೆ ಹೆಸರು ಸೇರ್ಪಡೆ, ಮಾರ್ಪಾಡು ಹಾಗೂ ಮರಣ ಹೊಂದಿದರವ ಹೆಸರನ್ನು ಅಳಿಸಲು ಅವಕಾಶವಿದೆ. ಆದ್ದರಿಂದ ಸಂಬಂಧಪಟ್ಟ ಗ್ರಾಮ, ವಾರ್ಡ್ನ ವ್ಯಾಪ್ತಿಯ ಬಿಎಲ್ಒಗಳ ಹತ್ತಿರ ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಇದರೊಂದಿಗೆ ಗ್ರಾಮ ಪಂಚಾಯಿತಿ, ತಹಸೀಲ್ದಾರ್ ಕಚೇರಿಯಲ್ಲೂ ಇದನ್ನು ನಮೂದು ಮಾಡಲು ಅವಕಾಶ ಇರುವುದಾಗಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ 2018-19 ನೇ ಸಾಲಿಗೆ ನರೇಗಾ ಯೋಜನೆಯಡಿಯಲ್ಲಿ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆಯಲಾಯಿತು. ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿಯಲ್ಲಿ ನಿರುದ್ಯೋಗಿ ಫಲಾನುಭವಿಗಳಿಗೆ ಆಯ್ಕೆ ಮಾಡಲಾಯಿತು.
ತಾ.ಪಂ ಸದಸ್ಯ ಸಿದ್ದರಾಜು, ಗ್ರಾ.ಪಂ ಅಧ್ಯಕ್ಷೆ ಆಶಾ, ಉಪಾಧ್ಯಕ್ಷೆ ರೇಖಾ ಸದಸ್ಯರು ಜಯಲಕ್ಷ್ಮಿ, ಚಿನ್ನಮ್ಮ, ಲಕ್ಷ್ಮಿರಾಮು, ಜಯಮ್ಮ, ಪ್ರಭಾವತಿ, ಮಲ್ಲೇಶ್, ಮುಜಾಹಿದುಲ್ಲಾ ಲೆಕ್ಕ ಸಹಾಯಕ, ಶಿವಕುಮಾರ್ ಕಂದಾಯ ಇಲಾಖೆಯ ಸಿದ್ದಲಿಂಗ ಮೂರ್ತಿ, ತೋಟಗಾರಿಕಾ ಇಲಾಖೆಯ ಸಿದ್ದರಾಜು, ಶಿವಮ್ಮ, ಭಾಗ್ಯ ಹಾಜರಿದ್ದರು.