ಆ್ಯಪ್ನಗರ

ನೈಸರ್ಗಿಕ ಮಾವಿನಹಣ್ಣಿನಿಂದ ಅಡ್ಡ ಪರಿಣಾಮವಿಲ್ಲ

ಮಾವು ಅತಿ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿರುವ ಸ್ವಾದಿಷ್ಟಭರಿತ ಹಣ್ಣಾಗಿರುವುದರಿಂದ ಇದನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ ಎಂದು ಮೈಸೂರಿನ ನ್ಯಾಚ್ಯೂಲರ್‌ ಇಷ್ಟ್ರಿ ಮ್ಯೂಸಿಯಂನ ಅಧಿಕಾರಿ ಶ್ರೀನಿವಾಸ ಹೇಳಿದರು.

Vijaya Karnataka 7 Jun 2019, 5:00 am
ಕೊಳ್ಳೇಗಾಲ: ಮಾವು ಅತಿ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿರುವ ಸ್ವಾದಿಷ್ಟಭರಿತ ಹಣ್ಣಾಗಿರುವುದರಿಂದ ಇದನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ ಎಂದು ಮೈಸೂರಿನ ನ್ಯಾಚ್ಯೂಲರ್‌ ಇಷ್ಟ್ರಿ ಮ್ಯೂಸಿಯಂನ ಅಧಿಕಾರಿ ಶ್ರೀನಿವಾಸ ಹೇಳಿದರು.
Vijaya Karnataka Web CHN-CHN6KGL4


ತಾಲೂಕಿನ ನೈಸರ್ಗಿಕ ಕೃಷಿಕ ಕೈಲಾಸಮೂರ್ತಿ ಅವರ ದೊಡ್ಡಿಂದವಾಡಿ ತೋಟದಲ್ಲಿ ಕುರುಬೂರು ನಿರ್ವಾಣ ಸ್ವಾಮೀಜಿ ಗ್ರಾಮಾಂತರ ಪ್ರೌಢಶಾಲೆ ಮತ್ತು ವಿದ್ಯಾಜ್ಞಾನ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳು ಹಾಗೂ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಕ್ರೀಡಾ ಸಾಧಕರಿಗೆ ಆಯೋಜಿಸಿದ್ದ ಪರಿಸರ ಪ್ರಜ್ಞೆ ಮೂಡಿಸುವ ಕಾರ್ಯಾಗಾರದಲ್ಲಿ ಮಾವಿನ ಬಗ್ಗೆ ಉಪನ್ಯಾಸ ನೀಡಿ ತಿಳಿಸಿದರು.

ಮಾವಿನಲ್ಲಿ 3500ಕ್ಕೂ ಹೆಚ್ಚು ತಳಿಗಳಿಗೆ ಅತಿ ದೊಡ್ಡ ಮೊಟ್ಟೆ ಮಾವಿನಹಣ್ಣು 3ರಿಂದ 3.5ಕೆಜಿ ತೂಕವಿರುತ್ತದೆ. ಅಪ್ಪು ಮಾಡಿ ಎಂಬ ಹಣ್ಣು ಕೇವಲ 12 ಗ್ರಾಂ ತೂಕ ಇರುತ್ತದೆ. ಮಾವಿನ ಮರ ಅನೇಕ ವಿಶೇಷÜತೆಗಳಿಂದ ಕೂಡಿರುವ ಜತೆಗೆ ಬಹು ಉಪಯೋಗಿಯಾಗಿದೆ. ಮಾವಿನ ಮರದ ಹಾಲು ಮತ್ತು ತೊಗಟೆಯನ್ನು ಔಷಧಿಗೆ ಬಳಸುತ್ತಾರೆ. ವಾತಾವರಣದಲ್ಲಿರುವ ಇಂಗಾಲವನ್ನು ಹೆಚ್ಚಾಗಿ ಹೀರಿಕೊಂಡು ಶುದ್ಧ ಗಾಳಿಯನ್ನು ನೀಡುತ್ತದೆ. ಈ ಹಣ್ಣಿನಲ್ಲಿ ಸಾಕಷ್ಟು ವಿಟಮಿನ್‌ಗಳಿದ್ದು, ರುಚಿಯಾಗಿರುವ ಜತೆಗೆ ಸುಲಭವಾಗಿ ಜೀರ್ಣವಾಗುತ್ತದೆ. ಇತ್ತೀಚೆಗೆ ಸಂಕರಣ ತಳಿಗಳನ್ನು ಬೆಳೆಯುವುದು ಹೆಚ್ಚಾಗಿದೆ. ನೈಸರ್ಗಿಕವಾಗಿ ಬೆಳೆದ ಮಾವಿನ ಹಣ್ಣನ್ನು ಎಷ್ಟು ತಿಂದರೂ ಅದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ, ಕಾರ್ಬೈಡ್‌ ಬಳಸಿ ಹಣ್ಣು ಮಾಡಿರುವುದನ್ನು ತಿಂದರೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದರು.

ಸಾವಯವ ಕೃಷಿಕ ರವಿಕುಮಾರ್‌ ಮಾತನಾಡಿ, ಕಾಡು ಮತ್ತು ಕೃಷಿಗೂ ಸಾಮ್ಯತೆ ಇದೆ. ಕಾಡಿನಲ್ಲಿ ನೈಸರ್ಗಿಕವಾಗಿ ಬೆಳೆಯುವ ಮರಗಿಡಗಳಿದ್ದರೆ ರೈತರ ಜಮೀನಿನಲ್ಲಿ ಪ್ರತಿನಿತ್ಯ ಬೇಕಾಗುವ ಆಹಾರ ನೀಡುವ ಗಿಡ ಮರಗಳಿರುತ್ತದೆ. ಆಹಾರ ಉತ್ಪಾದನೆ ಹೆಚ್ಚಿಸಲು ರಾಸಾಯನಿಕ ಕೃಷಿ ಮಾಡಬೇಕು ಎಂಬ ತಪ್ಪು ಕಲ್ಪನೆಯನ್ನು ಬಿತ್ತಲಾಗಿದೆ. ಕೃಷಿಯನ್ನು ನೈಸರ್ಗಿಕವಾಗಿ ಮಾಡಿ ಲಾಭ ಮತ್ತು ಹೆಸರು ಮಾಡಬಹುದು ಎಂಬುದಕ್ಕೆ ಕೈಲಾಸ ಮೂರ್ತಿಯವರೆ ತಾಜಾ ಉದಾಹರಣೆ. ಪ್ರತಿಯೊಂದು ಸಸ್ಯ ಮತ್ತು ಜೀವಿ ನೈಸರ್ಗಿಕ ಕೊಡುಗೆ. ಇವುಗಳು ನೈಸರ್ಗಿಕವಾಗಿ ಬೆಳೆದಾಗ ಮಾತ್ರ ಉತ್ತಮ ಪರಿಸರ ನಿರ್ಮಾಣವಾಗಲು ಸಾಧ್ಯ. ಕೃತಕ ಗೊಬ್ಬರ, ಔಷಧಗಳನ್ನು ಬಳಕೆ ಮಾಡುವುದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತದೆ. ಪರಿಸರ ಸಮತೋಲನ ಹಾಗೂ ಜೀವ ವೈವಿಧÜ್ಯತೆಯನ್ನು ಕಾಪಾಡದಿದ್ದರೆ ಪ್ರಕೃತಿ ವಿಕೋಪಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಿಸರ್ಗ ನಮಗೇನು ಕೊಟ್ಟಿದೆ ಎಂಬುದು ಅರ್ಥವಾದಾಗ ಮಾತ್ರ ನೈಸರ್ಗಿಕ ಸಂಪತ್ತನ್ನು ಉಳಿಸು ಸಾಧ್ಯ ಎಂದರು.

ಕೈಲಾಸಮೂರ್ತಿ, ಕೀರ್ತಿಕುಮಾರ್‌, ದೈವಿಕ್‌, ಮಂಜುನಾಥ, ಮಹಂತೇಶ್‌, ಸಿದ್ದಪ್ಪ ಮುಂತಾದವರಿದ್ದರು.

ಮಾವಿನ ಹಣ್ಣು ಸವಿದರು..

ಇದೇ ವೇಳೆ ವಿದ್ಯಾರ್ಥಿಗಳು ಹಾಗೂ ಕ್ರೀಡಾಸಾಧಕರು ತೋಟದಲ್ಲಿ ನೈಸರ್ಗಿಕವಾಗಿ ಬೆಳೆದಿದ್ದ ಮಾವಿನ ಹಣ್ಣುಗಳನ್ನು ವೃತ್ತಾಕಾರವಾಗಿ ಕುಳಿತು ಹೊಟ್ಟೆ ತುಂಬ ತಿಂದು ತೇಗಿದರು. ಒಬ್ಬಬ್ಬರು ಕನಿಷ್ಠ 5ರಿಂದ 20ರವರೆÜಗೆ ಮಾಗಿದ ಹಣ್ಣುಗಳನ್ನು ತಿಂದರು. ನಂತರ ಸರತಿ ಸಾಲಿನಲ್ಲಿ ನಿಂತು ಪ್ರತಿಯೊಬ್ಬರು ಬಟ್ಟೆ ಬ್ಯಾಗ್‌ನಲ್ಲಿ ಎರಡು ಮೂರು ಕೆಜಿಯಷ್ಟು ಮಾವಿನ ಹಣ್ಣುಗಳನ್ನು ತೆಗೆದುಕೊಂಡು ಮನೆಗೆ ತೆರಳಿದರು.


ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳನ್ನು ಕೈಲಾಸ ಮೂರ್ತಿಯವರು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಸಂತೋಷ ತಂದಿದೆ. ಅವರ ತೋಟವನ್ನು ನೋಡಿದರೆ ಖುಷಿಯಾಗುತ್ತಿದೆ. ನಮಗೆ ಮಾವಿನ ಹಣ್ಣನ್ನು ತಿನ್ನಿಸುವ ಜತೆಗೆ ನೈಸರ್ಗಿಕ ಕೃಷಿ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ. ಇದರಿಂದ ನಮಗೆ ಬಹಳ ಉಪಯೋಗವಾಗಿದೆ.

ಮೇಘನಾ, ಕ್ರೀಡಾಪಟು. ಕುರುಬೂರು.



ನಾನು ಇದೇ ಮೊದಲ ಬಾರಿಗೆ ಇಷ್ಟು ಮಾವಿನ ಹಣ್ಣನ್ನು ಏಕ ಕಾಲದಲ್ಲಿ ತಿಂದಿರುವುದು, ಹಣ್ಣು ತಿನ್ನುತ್ತಿದ್ದರೆ ಸಾಕು ಎನಿಸುವುದೆ ಇಲ್ಲ, ಮಾವಿನ ಹಣ್ಣನ್ನು ತಿನ್ನಲು ಕೊಡುವ ಜತೆಗೆ ನಮಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದಾರೆ. ಸಹಜ ಹಾಗೂ ರಾಸಾಯನಿಕ ಕೃಷಿಯ ನಡುವೆ ಇರುವ ವ್ಯತ್ಯಾಸವನ್ನು ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟಿದ್ದಾರೆ.

ದೊರೆಸ್ವಾಮಿ, ವಿದ್ಯಾಜ್ಞಾನ ಶಾಲೆ ವಿದ್ಯಾರ್ಥಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ