ವಿಕ ಸುದ್ದಿಲೋಕ ಕೊಳ್ಳೇಗಾಲ
ಮಹಿಳೆಯರು ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ನಿರ್ಣಯಾಕ ಪಾತ್ರ ವಹಿಸುವ ಮೂಲಕ ಲಿಂಗ ತಾರತಮ್ಯ ನಿರ್ಮೂಲನೆ ಮಾಡಬೇಕು ಎಂದು ಒಡಿಪಿ ನಿರ್ದೇಶಕರಾದ ಸ್ವಾಮಿ ಸ್ಟ್ಯಾನಿ ಡಿ ಅಲ್ಮೆಡ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಕಾಮಗೆರೆ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಹಿಳೋದಯ ಮಹಿಳಾ ಒಕ್ಕೂಟ ಮತ್ತು ರೋಟರಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 108ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
''ಮಹಿಳೆಯರು ಎಲ್ಲಾ ರೀತಿಯ ತಾರತಮ್ಯಗಳಿಂದ ಬಿಡುಗಡೆ ಹೊಂದುವುದ ಬೇಕು. ಇತರರನ್ನು ಸಮಾನವಾಗಿ ಕಾಣುವ ಜತೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗುವಂತಾಗಬೇಕು. ಇದಕ್ಕೆ ಅವರಲ್ಲಿ ಆತ್ಮವಿಶ್ವಾಸ, ಸ್ವ ಸಾಮರ್ಥ್ಯದಿಂದ ಅವರ ಬದುಕಿಗೆ ಅವರೇ ಒಡತಿಯರಾಗಬೇಕಿದೆ. ಮಹಿಳೆಯರ ಬಗ್ಗೆ ಸಮಾಜದ ಮನೋಭಾವದಲ್ಲಿ ಬದಲಾವಣೆಯಾಗಬೇಕಿದೆ. ಪ್ರತಿದಿನ ಬದುಕಿನಲ್ಲಿ ಮಹಿಳೆ ಪಡೆಯುವ ಅನುಭಾವವು ಅರಿವಾಗಿ ಪರಿವರ್ತನೆಗೊಳ್ಳಬೇಕು'' ಎಂದರು.
ಸಿಂಗಾನಲ್ಲೂರು ಸರಕಾರಿ ಪ್ರೌಢಶಾಲೆ ಶಿಕ್ಷ ಕಿ ರಾಜಮ್ಮ ಮಾತನಾಡಿ, ''ಸುಸ್ಥಿರ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳಾ ಸ್ವಾವಲಂಬನೆ ಕುರಿತು ಉಪನ್ಯಾಸ ನೀಡಿ ದೇಶದಲ್ಲಿ ಬಡತನ ನಿವಾರಣೆಯಾಗಬೇಕಾದರೆ ಮಹಿಳೆಯರನ್ನು ಸುಶಿಕ್ಷಿತರನ್ನಾಗಿಸಬೇಕು. ಮಹಿಳೆಯರು ಇಂದು ಹಲವಾರು ಉದ್ಯೋಗಗಳಲ್ಲಿ ಮುಂಚೂಣಿಯಲ್ಲಿದ್ದರೂ ಕೂಡ ಆಕೆಯ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಇನ್ನೂ ನಾವು ಯಶಸ್ವಿಯಾಗಿಲ್ಲ '' ಎಂದರು.
ರೊ. ಡಿ. ವೆಂಕಟಾಚಲ , ಒಡಿಪಿ ಮಹಿಳಾ ಅಭಿವೃದ್ಧಿ ಸಂಯೋಜಕಿ ಸುನೀತಾ ಮಾತನಾಡಿದರು.
ರೋಟರಿ ಸಂಸ್ಥೆ ಮಾಜಿ ಅಸಿಸ್ಟೆಂಟ್ ಗವರ್ನರ್ ಪುಟ್ಟರಸಶೆಟ್ಟಿ , ಚಾಮರಾಜನಗರ ಲೀಡ್ ಬ್ಯಾಂಕ್ ಮೇನೇಜರ್ ಸುನಂದ , ಚಾಮರಾಜನಗರ ನಬಾರ್ಡ್ನ ಶಂಕರ್, ಮಹಿಳೋದಯ ಮಹಿಳಾ ಒಕ್ಕೂಟ ವಲಯ ಸಂಯೋಜಕ ನಾಗಸುಂದರ್ ಕಾಮಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಧುಸೂದನ್, ಸಂಯೋಜಕ ಅಶೋಕ್ ಕುಮಾರ್, ಕಾರ್ಯಕ್ರಮ ಕೋ ಆರ್ಡಿನೇಟರ್ ಮೋಲಿ ಪುಡಾದೋ, ಒಡಿಪಿ ಕಾರ್ಯಕರ್ತೆಯರು ಶಿಶು ಅಭಿವೃದ್ಧಿ ಇಲಾಖೆ ಗೌಸಿಯಾ ಮುಂತಾದವರಿದ್ದರು.