ಆ್ಯಪ್ನಗರ

ಜಿಲ್ಲೆಯಲ್ಲಿ ಒಂದೇ ದಿನ 15 ಮಿ.ಮೀ. ಮಳೆ

ಜಿಲ್ಲಾದ್ಯಂತ ಗುರುವಾರವೂ ಜಿಟಿ ಜಿಟಿ ಮಳೆ ಮುಂದುವರಿದಿದ್ದು, ಅಕ್ಷರಶಃ ಜನಜೀವನ ಅಸ್ತವ್ಯಸ್ತಗೊಂಡಿತು.

Vijaya Karnataka 9 Aug 2019, 5:00 am
ಚಾಮರಾಜನಗರ: ಜಿಲ್ಲಾದ್ಯಂತ ಗುರುವಾರವೂ ಜಿಟಿ ಜಿಟಿ ಮಳೆ ಮುಂದುವರಿದಿದ್ದು, ಅಕ್ಷರಶಃ ಜನಜೀವನ ಅಸ್ತವ್ಯಸ್ತಗೊಂಡಿತು.
Vijaya Karnataka Web CHN-CHN08UM2


ಬುಧವಾರ ಮಧ್ಯಾಹ್ನ ಶುರುವಾದ ಮಳೆ ರಾತ್ರಿ ಹಾಗೂ ಗುರುವಾರ ಇಡೀ ದಿನ ಸುರಿಯಿತು. ಇದರಿಂದ ಬೆಳಗ್ಗೆ ಶಾಲೆಗೆ ಹೋಗುವ ಮಕ್ಕಳಾದಿಯಾಗಿ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ರೀತಿಯಲ್ಲಿ ಆಡಚಣೆಯಾಯಿತು.

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದಲೂ ಇದೇ ಸ್ಥಿತಿ ಇದ್ದು, ಗುರುವಾರ ಹೆಚ್ಚಿನ ಪರಿಣಾಮವನ್ನೇ ಬೀರಿತು. ವ್ಯಾಪಾರಸ್ಥರ ವಹಿವಾಟು ಸಾಕಷ್ಟು ಸ್ಥಗಿತಗೊಂಡರೆ, ಬೀದಿ ಬದಿ ವ್ಯಾಪಾರಗಳು ಪರದಾಡಿದರು.

ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೂ ಸಾಕಷ್ಟು ತೊಂದರೆ ಆಯಿತು. ಕೃಷಿ ಚಟುವಟಿಕೆ ಪೂರ್ಣ ಸ್ಥಗಿತಗೊಂಡಿತು. ಒಟ್ಟಾರೆ ಜಿಲ್ಲೆಯಲ್ಲಿ ಜನ ಜೀವನದ ಮೇಲೆ ಆಶ್ಲೇಷಾ ಮಳೆ ಪರಿಣಾಮ ಬೀರಿತು.

ಗೋಡೆ ಕುಸಿತ: ಇನ್ನು ಸತತ ಮಳೆಯಿಂದ ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮದಲ್ಲಿ ಶಿವಕುಮಾರ್‌ ಎಂಬುವರ ಮನೆ ಗೋಡೆ ಕುಸಿದಿದ್ದು, ಅದೃಷ್ಟವಶಾತ್‌ ಪ್ರಾಣಾಪಾಯ ಸಂಭವಿಸಿಲ್ಲ.

ಇನ್ನು ನಗರದ ಜೆಎಸ್‌ಎಸ್‌ಕಾಲೇಜಿನ ಆವರಣದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಉರುಳಿ ಬಿದ್ದು, ಕಾರಿನ ಸ್ವಲ್ಪ ಭಾಗ ಜಖಂಗೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ.

ಜೆಎಸ್‌ಎಸ್‌ ಕಾಲೇಜಿನ ಉಪನ್ಯಾಸಕ ರಾಜೇಶ್‌ ಅವರಿಗೆ ಸೇರಿದ ಕಾರು ಇದಾಗಿದ್ದು, ಗುಲ್‌ಮೊಹರ್‌ ಮರದ ಭಾರಿ ರೆಂಬೆ ಏಕಾಏಕಿ ಉರುಳಿ ಬಿದ್ದಿತು. ಅದೃಷ್ಟವಶಾತ್‌ ಕಾರಿನೊಳಗೆ ಯಾರೂ ಇರಲಿಲ್ಲ.

ಉಳಿದಂತೆ ಮಳೆ ಪರಿಣಾಮ ಸಂಚಾರ ದುಸ್ತರವಾಯಿತು. ಗ್ರಾಮೀಣ ರಸ್ತೆಗಳು, ನಗರದ ಹೊಸ ಬಡಾವಣೆಯ ಮಣ್ಣಿನ ರಸ್ತೆಗಳಲ್ಲಿ ಸಂಚರಿಸಲು ಹರ ಸಾಹಸ ಪಡಬೇಕಾಯಿತು.

ಒಂದೇ ದಿನ 15 ಮಿ.ಮೀ. ಮಳೆ

ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 15 ಮಿ.ಮೀ. ಮಳೆಯಾಗಿದೆ. ಅದರಲ್ಲೂ ಗುಂಡ್ಲುಪೇಟೆ ತಾಲೂಕಿನಲ್ಲಿ ಅತಿಹೆಚ್ಚು 38 ಮಿ.ಮೀ.ಮಳೆ ಬಿದ್ದಿದೆ. ಚಾ.ನಗರ ತಾಲೂಕಿನಲ್ಲಿ 15 ಮಿ.ಮೀ., ಕೊಳ್ಳೇಗಾದಲ್ಲಿ ಕಡಿಮೆ 5 ಮಿ.ಮೀ. ಹಾಗೂ ಯಳಂದೂರು ತಾಲೂಕಿನಲ್ಲಿ 11 ಮಿ.ಮೀ. ಮಳೆಯಾಗಿದೆ.

ಇನ್ನು ಆಗಸ್ಟ್‌ ತಿಂಗಳ ಒಟ್ಟು 8 ದಿನಗಳಲ್ಲಿ ಒಟ್ಟು 34 ಮಿ.ಮೀ. ಮಳೆಯಾಗಿದೆ. ಈ ಎಂಟು ದಿನಗಳಲ್ಲಿ ಗುಂಡ್ಲುಪೇಟೆಯಲ್ಲಿ ಅತಿಹೆಚ್ಚು 74 ಮಿ.ಮೀ. ಮಳೆಯಾಗಿದೆ. ಚಾ.ನಗರ ತಾಲೂಕಿನಲ್ಲಿ 34, ಕೊಳ್ಳೇಗಾಲ 19 ಹಾಗೂ ಯಳಂದೂರಿನಲ್ಲಿ 35 ಮಿ.ಮೀ. ಮಳೆಯಾಗಿದೆ ಎಂದು ರಾಜ್ಯ ಪ್ರಕೃತಿ ವಿಪತ್ತು ನಿರ್ವಹಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ