ಕೊಳ್ಳೇಗಾಲ: ಎಲ್ಲ ಧರ್ಮಗಳು ಮಾನವನ ಒಳಿತಿಗಾಗೆ ಇದ್ದು ಎಲ್ಲ ಧರ್ಮಗಳನ್ನು ಗೌರವದಿಂದ ಕಾಣುವುದನ್ನು ರೂಢಿಸಿಕೊಂಡಾಗ ಉತ್ತಮ ರೀತಿಯಲ್ಲಿ ಬದುಕಲು ಸಾಧ್ಯ ಎಂದು ಅಖಿಲ ಭಾರತ ಸರ್ವಧರ್ಮ ಭಾವೈಕ್ಯ ಸಮಿತಿ ಅಧ್ಯಕ್ಷ ಬಾಲಚಂದರ್ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ರಂಜಾನ್ ಹಬ್ಬದ ಪ್ರಯುಕ್ತ ದೊಡ್ಡ ಮಸೀದಿ ವೃತ್ತದ ಬಳಿ ಸರ್ವಧರ್ಮ ಭಾವೈಕ್ಯ ಸಮಿತಿಯಿಂದ ಏರ್ಪಡಿಸಿದ್ದ ಭಾವೈಕ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಟ್ಟಣದಲ್ಲಿ ಕಳೆದ 7 ವರ್ಷಗಳಿಂದ ಹಿಂದೂ ಮುಸ್ಲೀಂ ಭಾವೈಕ್ಯ ಮೂಡಿಸುವ ಕಾರ್ಯಕ್ರಮ ನಡೆಸುತ್ತ ಬರಲಾಗುತ್ತಿದೆ. ಹಿಂದೂ, ಮುಸ್ಲಿಮರು ಸಹೋದರರಂತೆ ಶಾಂತಿಯುತ ಪರಿಸರದಲ್ಲಿ ಜೀವನ ನಡೆಸುವಂತಾಗಿದೆ ಎಂದರು.
ಶಾಸಕ ಎಸ್. ಜಯಣ್ಣ ಮಾತನಾಡಿ, ಶಾಂತಿಯುತ ಪರಿಸರ ಬಹಳ ಮುಖ್ಯ, ಸಣ್ಣ ಪುಟ್ಟ ವೈಯುಕ್ತಿಕ ವಿಷಯಗಳನ್ನು ದೊಡ್ಡದು ಮಾಡಿ ಜನಾಂಗೀಯ ಘರ್ಷಣೆಗೆ ಅವಕಾಶ ನೀಡದೆ ನೆಮ್ಮದಿ ಬದುಕನ್ನು ಕಟ್ಟಿಕೊಳ್ಳಲು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು. ಬಹು ಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎನ್. ಮಹೇಶ್ ಶುಭ ಕೋರಿದರು. ಭಾವೈಕ್ಯ ಸಮಿತಿ ಕಾರ್ಯದರ್ಶಿ ಡಿ. ವೆಂಕಟಾಚಲ ಸಮಿತಿ ಖಜಾಂಚಿ ರಮೇಶ್, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ, ಅಂಜುಮಾನ್ ಇಸ್ಲಾಮಿಯಾ ಅಧ್ಯಕ್ಷ ಮಹಮ್ಮದ್ ನಾಸಿರುದ್ದೀನ್, ಕಾರ್ಯದರ್ಶಿ ಸಯದ್ ಕಲೀಮುಲ್ಲಾ, ಸಮೀವುಲ್ಲಾ, ಅಲ್ಲಾವುದ್ದೀನ್, ಸನಾವುಲ್ಲಾ , ನಗರಸಭೆ ಸದಸ್ಯರಾದ ಎಂ.ಶಿವಾನಂದ, ಶಾಂತರಾಜು, ಸುರೇಶ್, ಅಕ್ಮಲ್ಪಾಷಾ, ಮುಖಂಡರಾದ ಚಿಕ್ಕಲಿಂಗಯ್ಯ, ದೇವಾಂಗ ಜನಾಂಗದ ಚಂದ್ರಶೇಖರಯ್ಯ, ನಟರಾಜ್ ಮಾಳಿಗೆ ಹಾಜರಿದ್ದರು.