ಆ್ಯಪ್ನಗರ

ಚಿನ್ನ ಮಾರಾಟದ ಸೋಗಿನಲ್ಲಿ ದರೋಡೆ: ಐವರ ಬಂಧನ

ಚಿನ್ನ ಬಿಡಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸೋಗಿನಲ್ಲಿ ಮೈಸೂರಿನ ಎಸ್‌ಜೆಡಿ ಕಂಪನಿ ನೌಕರರಿಂದ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಖದೀಮರನ್ನು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 17 Mar 2019, 5:00 am
ಚಾಮರಾಜನಗರ : ಚಿನ್ನ ಬಿಡಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸೋಗಿನಲ್ಲಿ ಮೈಸೂರಿನ ಎಸ್‌ಜೆಡಿ ಕಂಪನಿ ನೌಕರರಿಂದ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಖದೀಮರನ್ನು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web robbery five arrested
ಚಿನ್ನ ಮಾರಾಟದ ಸೋಗಿನಲ್ಲಿ ದರೋಡೆ: ಐವರ ಬಂಧನ


ಬೆಂಗಳೂರಿನ ನಾಗರಬಾವಿ ನಿವಾಸಿ ಸತೀಶ್‌ ರಾವ್‌(30) ಮೈಸೂರಿನ ಮೇಟಗಳ್ಳಿ ನಿವಾಸಿ ಮಧುಕುಮಾರ್‌(28) ಕುವೆಂಪುನಗರದ ಸುಂದರೇಶ್‌(22) ಅರವಿಂದ ನಗರದ ಮಹಾದೇವ(19), ಹುಣಸೂರು ತಾಲೂಕು ಮುಳ್ಳೂರು ಗ್ರಾಮದ ಮಹದೇವ(23) ಬಂಧಿತರಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರಿಂದ 1.20 ಲಕ್ಷ ರೂ. ನಗದು, ವ್ಯಾನಿಟಿ ಬ್ಯಾಗ್‌, ಒಂದು ಹೋಂಡಾ ಡಿಯೋ ಸ್ಕೂಟರ್‌, ಬಜಾಜ್‌ ಪಲ್ಸರ್‌, ಹೀರೋ ಹೊಂಡಾ ಸ್ಲೆಂಡರ್‌ ಬೈಕ್‌ಗಳು ಹಾಗೂ 2 ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಏನಿದು ಪ್ರಕರಣ: ಮೈಸೂರಿನ ಎಸ್‌ಜೆಡಿ ಗೋಲ್ಡ್‌ ಕಂಪನಿಗೆ ಈ ಐವರಲ್ಲಿ ಒಬ್ಬಾತ ಮಾ.8ರಂದು ದೂರವಾಣಿ ಕರೆ ಮಾಡಿ, ನಾವು ಚಾಮರಾಜನಗರ ಗಿರವಿ ಅಂಗಡಿಯಲ್ಲಿ ನಮ್ಮ ಚಿನ್ನವನ್ನು ಗಿರವಿ ಇಟ್ಟಿದ್ದು, ಚಿನ್ನವನ್ನು ಬಿಡಿಸಿ ನಿಮ್ಮ ಕಂಪನಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ವಂಚಕರ ಮಾತನ್ನು ನಂಬಿದ ಕಂಪನಿ ನೌಕರರಾದ ಪ್ರೇಮ ಮತ್ತು ನಿರಂಜನ್‌ ಎಂಬುವವರು ಹಣದ ಸಮೇತ ಚಾಮರಾಜನಗರಕ್ಕೆ ಬಂದಿದ್ದರು.

ಚಿನ್ನ ಇಟ್ಟಿರುವ ಗಿರವಿ ಅಂಗಡಿಗೆ ಕರೆದೊಯ್ಯುವುದಾಗಿ ತಿಳಿಸಿ ನಗರದ ಸಂತೇಮರಹಳ್ಳಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕು ತೋರಿಸಿ 1.20 ಲಕ್ಷ , ಒಂದು ಮೊಬೈಲ್‌ ಫೋನ್‌ ಸಮೇತ ಬ್ಯಾಗ್‌ ಅನ್ನು ದೋಚಿಕೊಂಡು ಪರಾರಿಯಾಗಿದ್ದರು, ಕಂಪನಿ ನೌಕರರಾದ ಪ್ರೇಮ ನೀಡಿದ ದೂರಿನ ಮೇರೆಗೆ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖಾ ತಂಡ ರಚನೆ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸಿ.ಎಸ್‌.ರಮೇಶ್‌ ನೇತೃತ್ವದಲ್ಲಿ ಉಪನಿರೀಕ್ಷ ಕರಾದ ರವಿಕಿರಣ್‌, ಮಂಜುನಾಥ್‌ ನಾಯಕ್‌ ಸೇರಿದಂತೆ ಸಿಬ್ಬಂದಿಯನ್ನೊಳಗೊಂಡ ತನಿಖಾ ತಂಡವನ್ನು ರಚಿಸಿ, ತನಿಖೆ ಕೈಗೊಂಡ ಪೊಲೀಸರು, ಮಾ.14ರಂದು ರಾತ್ರಿ 9ರಲ್ಲಿ ಮೈಸೂರಿನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ತನಿಖೆ ವೇಳೆ ಚಾಮರಾಜನಗರದಲ್ಲಿ ನಡೆಸಿದ ಕೃತ್ಯ, ಅದೇ ರೀತಿ 2 ತಿಂಗಳ ಹಿಂದೆ ರಾಮನಗರದ ಬಳಿಯೂ ದರೋಡೆ ನಡೆಸಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.

ಕೊಲೆ ಆರೋಪಿ: ಬಂಧಿತ ಆರೋಪಿಗಳ ಪೈಕಿ ಬೆಂಗಳೂರಿನ ನಾಗರಬಾವಿ ನಿವಾಸಿ ಸತೀಶ್‌ರಾವ್‌ ಕಾರು ಚಾಲಕನಾಗಿದ್ದು, ಬೆಂಗಳೂರಿನ ಜ್ಞಾನಭಾರತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.

ಕಾರ್ಯಾಚರಣೆಯಲ್ಲಿ ಚಾಮರಾಜನಗರ ಗ್ರಾಮಾಂತರ ಠಾಣೆಯ ಜಯರಾಂ, ಎಎಸ್‌ಐ ಮಹದೇವಸ್ವಾಮಿ, ಸಿಬ್ಬಂದಿಗಳಾದ ನಿಂಗರಾಜು, ಚಿನ್ನಸ್ವಾಮಿ, ಜಗದೀಶ್‌, ರಮೇಶ್‌, ಬಾಬು,ಕಿಶೋರ, ಪ್ರದೀಪ, ಮಹದೇವಸ್ವಾಮಿ, ವಾಹನ ಚಾಲಕರಾದ ಜಗದೀಶ್‌, ರಾಜು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ