ಚಾಮರಾಜನಗರ: ಮೃಗೀಯ ವರ್ತನೆಯಿಂದ ಮಾನವೀಯತ್ವದ ಕಡೆಗೆ ಕರೆದೊಯ್ಯುವುದೇ 'ಕವಿತೆ' ಎಂದು ಕವಿ ಜಯಪ್ಪ ಹೊನ್ನಾಳಿ ಅಭಿಪ್ರಾಯಪಟ್ಟರು.
ನಗರದ ರೋಟರಿ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ರೋಟರಿ ಸಹಯೋಗದಲ್ಲಿ ಎರಡು ದಿನಗಳ ರಾಜ್ಯಮಟ್ಟದ 'ಕಾವ್ಯಕಮ್ಮಟ' ಉದ್ಘಾಟಿಸಿ ಮಾತನಾಡಿದರು.
''ಇಂದಿನ ಹೊಸ ತಲೆಮಾರಿನ ಕವಿಗಳಲ್ಲಿ ನಾನು ಕವಿಯಾಗಬೇಕು ಎನ್ನುವವರು ಹೆಚ್ಚಾಗಿದ್ದಾರೆಯೇ ಹೊರತೂ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ಗುಣಹೊಂದಿಲ್ಲ. ಬರಹಗಳಿಗೆ ತಮ್ಮನ್ನು ಮಾತ್ರ ಸೀಮಿತಗೊಳಿಸಿಕೊಂಡಿದ್ದು, ಬದುಕನ್ನು ಕಟ್ಟಿಕೊಡುವ ಮೌಲ್ಯಗಳನ್ನು ಸಾಕ್ಷಾತ್ಕಾರಗೊಳಿಸುವ ಕುರಿತು ಯಾರೂ ಗಮನ ನೀಡುತ್ತಿಲ್ಲ. ಕವಿಗಳಿಗೆ ಶಬ್ದಕೋಶಕ್ಕಿಂತ ಭಾವಕೋಶ ಮುಖ್ಯ. ಕವಿಯಾಗಬೇಕಾದವನು ವ್ಯಕ್ತಿನಿಷ್ಠೆ ಬಿಟ್ಟು, ಕಾರ್ಯನಿಷ್ಠೆ ಪ್ರದರ್ಶಿಸಿದಾಗ ಕಾಲಾತೀತನಾಗುತ್ತಾನೆ,'' ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷ ಬಿ.ಎಸ್.ವಿನಯ್, ''ನಮ್ಮ ಜಿಲ್ಲೆಯಲ್ಲಿನ ಕವಿಗಳು ಮೋಡ, ಆಕಾಶ, ಪಕ್ಷಿ, ಬೆಟ್ಟ, ಗುಡ್ಡ ಇದಕ್ಕೆ ಸೀಮಿತವಾದ ಕವನ ಸಂಕಲನ ರಚನೆಗೆ ಮಾತ್ರ ಸೀಮಿತರಾಗಿದ್ದಾರೆ, ಕವಿಗಳು ಹೊಸ ಬಗೆಯ ಕವಿತೆಗಳನ್ನು ಬರೆಯುವಂತೆ ಪ್ರೇರೇಪಣೆ ಮಾಡುವುದೇ ಕಾವ್ಯಕಮ್ಮಟ ಆಯೋಜನೆ ಉದ್ದೇಶ,'' ಎಂದರು.
ಕಾವ್ಯಕಮ್ಮಟ ಶಿಬಿರದ ನಿರ್ದೇಶಕರೂ, ಕವಿಗಳು ಆದ ಆನಂದ್ಋುಗ್ವೇದಿ, ವಾಸುದೇವ ನಾಡಿಗ್, ಚಿದಾನಂದ ಸಾಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಸಂವಾದ ನಡೆಸಿದರು. ರೋಟರಿ ಅಧ್ಯಕ್ಷ ಆರ್.ಸುಭಾಷ್ ಅಧ್ಯಕ್ಷ ತೆ ವಹಿಸಿಮಾತನಾಡಿದರು.
ಗೌರವ ಕಾರ್ಯದರ್ಶಿಗಳಾದ ಜಿ.ರಾಜಪ್ಪ, ಟಿ.ಬಂಗಾರ ಗಿರಿನಾಯಕ, ಎಸ್.ನಿರಂಜನ್ಕುಮಾರ್, ರಂಗಕರ್ಮಿ ಕೆ.ವೆಂಕಟರಾಜು ಹಾಜರಿದ್ದರು.
ಇಂದು ಸಂಜೆ ಸಮಾರೋಪ
ಮಾ.30ರಂದು ಸಂಜೆ 4.30ಕ್ಕೆ 'ಕಾವ್ಯಕಮ್ಮಟ' ಸಮಾರೋಪ ನಡೆಯಲಿದೆ.
ಚಾಮರಾಜನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಎಚ್.ಎಸ್.ಪ್ರೇಮಲತಾ ಸಮಾರೋಪ ನುಡಿಗಳನ್ನಾಡುವರು. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ವಿನಯ್ ಅಧ್ಯಕ್ಷ ತೆ ವಹಿಸುವರು. ಕಾವ್ಯಕಮ್ಮಟ ಶಿಬಿರದ ನಿರ್ದೇಶಕರೂ, ಕವಿಗಳು ಆದ ಆನಂದ್ಋುಗ್ವೇದಿ, ವಾಸುದೇವನಾಡಿಗ್, ಚಿದಾನಂದ ಸಾಲಿ ಭಾಗವಹಿಸುವರು.
ಕವಿಯಾದವನು ಅನುಕರಣಾ ಪ್ರವೃತ್ತಿಗೆ ಮುಂದಾಗದೇ ಅನುಶೀಲನಾಗಬೇಕು. ಭಾಷೆಯನ್ನು ನೀರಿನಂತೆ ಬಳಸದೇ, ತುಪ್ಪದಂತೆ ಬಳಕೆಮಾಡಬೇಕು. ಶಿಫಾರಸ್ಸಿನ ಮುಲಾಜಿಗೆ ಒಳಗಾಗದ ಕವಿ ಕಾಲಾತೀತನಾಗುವುದರ ಜತೆಗೆ ಶ್ರೇಷ್ಠ ಕವಿಯಾಗುತ್ತಾನೆ.
-ಜಯಪ್ಪ ಹೊನ್ನಾಳಿ, ಕವಿ.