ಆ್ಯಪ್ನಗರ

ಅಲ್ಲಿ ಪ್ರವಾಹ; ಇಲ್ಲಿ ಕೆರೆಗಳು ಭಣಭಣ

ಅತ್ತ ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯಗಳು ಭರ್ತಿಯಾಗಿ ದಾಖಲೆ ಪ್ರಮಾಣದಲ್ಲಿ ನದಿಗೆ ನೀರು ಬಿಡುತ್ತಿದ್ದರೂ ತಾಲೂಕಿನ ಕಬಿನಿ ನಾಲಾ ಅಚ್ಚುಕಟ್ಟು ಪ್ರದೇಶದ ಕೆರೆಗಳು ನೀರಿಲ್ಲದೆ ಭಣಗುಡುತ್ತಿವೆ.

Vijaya Karnataka 12 Aug 2019, 5:00 am
ಕೊಳ್ಳೇಗಾಲ ತಾಲೂಕಿನ ಹಲವು ಕೆರೆಗಳು ನೀರಿಲ್ಲದೇ ಒಣಗುತ್ತಿವೆ
Vijaya Karnataka Web the flood there the lakes here are empty
ಅಲ್ಲಿ ಪ್ರವಾಹ; ಇಲ್ಲಿ ಕೆರೆಗಳು ಭಣಭಣ


ಕೋಟಂಬಳ್ಳಿ ಗುರುಸ್ವಾಮಿ ಕೊಳ್ಳೇಗಾಲ

ಅತ್ತ ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯಗಳು ಭರ್ತಿಯಾಗಿ ದಾಖಲೆ ಪ್ರಮಾಣದಲ್ಲಿ ನದಿಗೆ ನೀರು ಬಿಡುತ್ತಿದ್ದರೂ ತಾಲೂಕಿನ ಕಬಿನಿ ನಾಲಾ ಅಚ್ಚುಕಟ್ಟು ಪ್ರದೇಶದ ಕೆರೆಗಳು ನೀರಿಲ್ಲದೆ ಭಣಗುಡುತ್ತಿವೆ.

ತಾಲೂಕಿನಲ್ಲೇ ಒಂದೆಡೆ ಪ್ರವಾಹ ಭೀತಿ ಎದುರಾಗಿದ್ದೂ, ಬಯಲು ಪ್ರದೇಶ ಕೆರೆಯಂತಾಗಿದ್ದರೆ, ಉಳಿದ ಭಾಗದಲ್ಲಿನ ಕೆರೆಗಳು ನೀರಿಲ್ಲದೇ ಒಣಗುತ್ತಿವೆ.

ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ತಾಲೂಕಿನ ಕುಂತೂರು, ತೇರಂಬಳ್ಳಿ, ದೊಡ್ಡರಂಗನಾಥ, ಚಿಕ್ಕರಂಗನಾಥ, ಮಧುವನಹಳ್ಳಿ, ಪಾಪನ ಕೆರೆ, ಸರಗೂರು ಕೆರೆ, ಧನಗೆರೆ ಕೆರೆ, ಕೊಂಗಳಕೆರೆ, ತಟ್ಟೆಕರೆ, ಮುಳ್ಳೂರು ಕೆರೆ ಸೇರಿದಂತೆ 13ಕ್ಕೂ ಹೆಚ್ಚು ಕೆರೆಗಳಿವೆ. ಈ ಕರೆಗಳು ಭರ್ತಿಯಾದರೆ ಅಂತರ್ಜಲ ವೃದ್ಧಿಯಾಗುವ ಜತೆಗೆ ನಾಲೆಗಳಿಗೆ ನೀರು ಬಿಡದಿದ್ದರೂ ಒಂದು ಬೆಳೆಯನ್ನು ಬೆಳೆಬಹುದಾಗಿದೆ.

ಆದರೆ, ನದಿಗೆ ಧಾರಾಕಾರ ನೀರು ಹರಿಯುತ್ತಿದ್ದರೂ ಅದರ ಅಚ್ಚುಕಟ್ಟಿನಲ್ಲೇ ಇರುವ ಕೆರೆಗಳಿಗೆ ನೀರಿಲ್ಲದಿರುವುದು ವಿಪರ್ಯಾಸ. ಈ ಕೆರೆಗಳಿಗೆ ನೀರು ಬಂದರೆ ಅಂತರ್ಜಲ ಹೆಚ್ಚುವುದಷ್ಟೇ ಅಲ್ಲ, ದನಕರುಗಳಿಗೆ ಕುಡಿಯುವ ನೀರು, ಬಟ್ಟೆ ತೊಳೆಯುವುದು ಸೇರಿದಂತೆ ಇತರೆ ಉಪಯೋಗಕ್ಕೆ ನೀರು ಬಳಕೆಯಾಗುತ್ತದೆ. ನಾಲೆ ನೀರು ಕೆಲವೊಮ್ಮೆ ಕಾವೇರಿ ನದಿ ಸೇರುತ್ತದೆ. ಕಬಿನಿ ನಾಲಾ ವಿಭಾಗದವರು ಪ್ರತಿ ವರ್ಷ ನೀರು ಬಿಟ್ಟ ತಕ್ಷ ಣ ಕೆರೆ ತುಂಬುವ ಕೆಲಸ ಮಾಡುವುದಿಲ್ಲ. ಬದಲಿಗೆ ರೈತರಿಂದ ಒತ್ತಡ ಬಂದ ನಂತರ ನೀರು ತುಂಬಿಸುವ ಕೆಲಸಕ್ಕೆ ಕೈ ಹಾಕುತ್ತಾರೆ.

ಖಾಲಿ ಖಾಲಿ ಕೆರೆಗಳು: ತಾಲೂಕಿನ ಕೆರೆ ಇರುವ ಗ್ರಾಮಗಳು ಹಾಗೂ ಅಚ್ಚುಕಟ್ಟು ಪ್ರದೇಶ ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿವೆ. ಹಂಪಾಪುರ, ಮುಳ್ಳೂರು ಕೆರೆಗಳು ಸೇರಿದಂತೆ ಇತರೆ ಕೆರೆಗಳ ಸುತ್ತ ನೀರಿದ್ದರೂ ಕೆರೆಗಳಿಗೆ ಒಂದು ಹನಿ ನೀರು ಸಹ ಬಂದಿಲ್ಲ !

ಕಳೆದ ವರ್ಷ ಜಲಾಶಯ ಭರ್ತಿಯಾಗಿಲ್ಲ ಎಂದು ಭತ್ತ ಹಾಕಬೇಡಿ ಎಂದು ರೈತರಿಗೆ ನಿರ್ಬಂಧ ಹೇರಲಾಗಿತ್ತು. ನಂತರದ ದಿನಗಳಲ್ಲಿ ಜಲಾಶಯ ಭರ್ತಿಯಾಗಿ ನಾಲೆಗಳಲ್ಲಿ ನೀರು ಹರಿಸಲಾಯಿತು. ಆದರೆ, ಅಷ್ಟರಲ್ಲಿ ಜನ ಭತ್ತದ ಬದಲು ಬೇರೆ ಬೆಳೆಗಳನ್ನು ಹಾಕಿ ಕೈ ಸುಟ್ಟುಕೊಂಡರು. ಇದೀಗ ಜಲಾಶಯ ಭರ್ತಿಯಾಗಿ ನದಿಗೆ ದಾಖಲೆ ಪ್ರಮಾಣದ ನೀರನ್ನು ಹರಿಯ ಬಿಡುತ್ತಿದ್ದರೂ ನಾಲೆಗಳಲ್ಲಿ ನೀರು ಹರಿಸುತ್ತಿಲ್ಲ. ಕೆರೆಗಳನ್ನು ತುಂಬಿಸುವ ಕಾರ್ಯ ಸಹ ಮಾಡುತ್ತಿಲ್ಲ ಎಂಬುದು ರೈತರ ಆರೋಪ.

ಪ್ರವಾಹ ನಿಂತ ಕೂಡಲೇ ಜಲಾಶಯಗಳಿಂದ ನೀರು ಬಿಡಲು ಸತಾಯಿಸಲಾಗುತ್ತದೆ. ಈ ಬಾರಿಯಾದರು ಕೆರೆಗಳನ್ನು ತುಂಬಿಸಿ ರೈತರು ಬೆಳೆ ಬೆಳೆಯಲು ಅನುವು ಮಾಡಿಕೊಡಬೇಕು ಎಂಬುದು ರೈತರ ಆಗ್ರಹ.

ಭತ್ತ ವಿತರಣೆಗೆ ಒತ್ತಾಯ: ಜಲಾಶಯ ಭರ್ತಿಯಾಗಿಲ್ಲ ಎಂಬ ಕಾರಣಕ್ಕೆ ಕೃಷಿ ಇಲಾಖೆ ಈ ಬಾರಿ ಬಿತ್ತನೆ ಭತ್ತ ಖರೀದಿ ಮಾಡಿಲ್ಲ. ಇದೀಗ ಜಲಾಶಯ ಭರ್ತಿಯಾಗಿದ್ದು, ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬಹುದಾಗಿದೆ. ಆದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬಿತ್ತನೆ ಭತ್ತವನ್ನು ಕೂಡಲೇ ವಿತರಿಸಬೇಕು, ತಡ ಮಾಡಿದರೆ ಚಳಿಗೆ ಸಿಕ್ಕಿ ಭತ್ತದ ಬೆಳೆ ನಷ್ಟವಾಗುವ ಸಾಧ್ಯತೆ ಇದೆ. ಇದು ಭತ್ತದ ಸಸಿ ಮಡಿ ಮಾಡಲು ಉತ್ತಮ ಕಾಲವಾಗಿದ್ದು, ತಕ್ಷ ಣ ಬಿತ್ತನೆ ಭತ್ತವನ್ನು ರೈತರಿಗೆ ರಿಯಾಯಿತಿ ದರದಲ್ಲಿ ಎಂದಿನಂತೆ ವಿತರಿಸಬೇಕು. ನಾಲೆಗಳನ್ನು ದುರಸ್ತಿ ಇಲ್ಲವೇ ಸ್ವಚ್ಛಗೊಳಿಸಿ ನಾಲೆಗಳಲ್ಲಿ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

-------------

ನಾಲೆಗಳಿಗೆ 1800 ಕ್ಯೂಸೆಕ್‌ ನೀರು ಬಿಡಲಾಗಿದೆ. ನಾಲೆಗಳಲ್ಲಿ ಹರಿದು ಬರುವ ನೀರಿನಿಂದ ಕೆರೆ ತುಂಬಿಸುವ ಕಾರ್ಯ ಮಾಡಲಾಗುವುದು. ಅಲ್ಲದೇ ಸದ್ಯದಲ್ಲೇ ಎಲ್ಲ ಕೆರೆಗಳನ್ನು ತುಂಬಿಸಲಾಗುವುದು.
-ರಘು. ಇಇ ಕಾವೇರಿ ನೀರಾವರಿ ನಿಗಮ, ಕೊಳ್ಳೇಗಾಲ ವಿಭಾಗ

----------------
ಪ್ರತಿ ಬಾರಿ ಕೆರೆ ತುಂಬಿಸಿ ಎಂದು ಹೋರಾಟ ಮಾಡಬೇಕಾದ ಅನಿವಾರ್ಯತೆಯನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸೃಷ್ಟಿಸುತ್ತಿದ್ದಾರೆ. ನದಿಗೆ 2 ಲಕ್ಷ ಕ್ಯೂಸೆಕ್‌ ನೀರು ಬಿಡುತ್ತಿದ್ದರೂ ನಾಲೆಗಳಿಗೆ ಸರಿಯಾಗಿ ನೀರು ಬಿಡುತ್ತಿಲ್ಲ. ಈ ಧೋರಣೆ ಬಿಟ್ಟು ಕೂಡಲೇ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಬೇಕು.
-ರವೀಂದ್ರನಾಥ್‌, ರೈತ ಹೋರಾಟಗಾರ, ಮಧುವನಹಳ್ಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ