ಸಂತೇಮರಹಳ್ಳಿ: ಗ್ರಾಮೀಣ ಪ್ರದೇಶದ ಜನರು ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿದರೆ ಮಲೇರಿಯಾ ರೋಗ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅನಿಲ್ಕುಮಾರ್ ಅಭಿಪ್ರಾಯಪಟ್ಟರು.
ಕುದೇರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಬುಧವಾರ ರೇಷ್ಮೆ ಇಲಾಖೆ ಸಭಾಂಗಣದಲ್ಲಿ ಆಯೋಜಿಸಿದ್ದ ಮಲೇರಿಯಾ ವಿರೋಧಿ ಮಾಸಾಚರಣೆಯಲ್ಲಿ ಮಾತನಾಡಿದರು.
ತಲೆ ನೋವು, ಅತಿಯಾದ ಜ್ವರ, ರಕ್ತಹೀನತೆ, ಸುಸ್ತು, ಚಳಿ ಮಲೇರಿಯಾ ರೋಗದ ಲಕ್ಷ ಣ. ಇವು ಕಂಡುಬಂದವರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಂಡು, ರಕ್ತ ಪರೀಕ್ಷೆ ಮಾಡಿಸಬೇಕು. ಈಗಾಗಲೇ ತಾಲೂಕು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಹೊಂಗನೂರು ಹಾಗೂ ಕುದೇರು ಪ್ರಾಥಮಿಕ ಆಸ್ಪತ್ರೆಗಳಲ್ಲಿ ಮಲೇರಿಯಾ ರೋಗದ ಪ್ರಕರಣಗಳು ದಾಖಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಈಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯ ವಸ್ತುಗಳ ವಿಲೇವಾರಿಯಾಗದಿರುವುದು ಹಾಗೂ ಸ್ವಚ್ಛತೆಯ ಅರಿವಿನ ಕೊರತೆಯಿಂದ ಮಲೇರಿಯಾ ರೋಗಕ್ಕೆ ಜನರು ತುತ್ತಾಗುತ್ತಿದ್ದಾರೆ. ಮಲೇರಿಯಾ ರೋಗವು ಅನಾಫಿಲಿಸ್ ಎಂಬ ಹೆಣ್ಣುಸೊಳ್ಳೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರು ರಾತ್ರಿ ವೇಳೆ ಸೊಳ್ಳೆ ಪರದೆ ಹಾಗೂ ಸೊಳ್ಳೆಬತ್ತಿ ಬಳಕೆ ಮಾಡಬೇಕು ಎಂದರು.
ತ್ಯಾಜ್ಯವಿಲೇವಾರಿ ಮಾಡಿ: ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಈಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿರುವ ಚರಂಡಿಗಳಲ್ಲಿ ತ್ಯಾಜ್ಯ ವಸ್ತುಗಳು ಸಂಗ್ರಹದಿಂದ ಸೊಳ್ಳೆಗಳ ಕಾಟ ಮಿತಿ ಮೀರಿ ಮಲೇರಿಯಾ ರೋಗ ಹೆಚ್ಚಾಗಿ ಹರಡುತ್ತಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಕಣ್ಗಾವಲು ಘಟಕದ ಅಧಿಕಾರಿ ಡಾ.ನಾಗರಾಜು, ವೈದ್ಯಾಧಿಕಾರಿ ರವಿಶಂಕರ್, ತಾ.ಪಂ.ಸದಸ್ಯೆ ಯಶೋದಾ, ಗ್ರಾ.ಪಂ.ಅಧ್ಯಕ್ಷೆ ಶೀಲಾ, ಜಯಮ್ಮ, ಉಪಾಧ್ಯಕ್ಷ ರವಿ, ಸದಸ್ಯ ಜಯಶಂಕರ್, ಗ್ರಾ.ಪಂ.ಲೆಕ್ಕಸಹಾಯಕಾಧಿಕಾರಿ ನಾಗಯ್ಯ, ಆರೋಗ್ಯ ನಿರೀಕ್ಷ ಕ ಮಂಜುನಾಥ್ ಹಾಜರಿದ್ದರು.