ಆ್ಯಪ್ನಗರ

ಹುಲಿ, ಚಿರತೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿ ಮತ್ತು ಚಿರತೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

Vijaya Karnataka 29 May 2019, 5:00 am
ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿ ಮತ್ತು ಚಿರತೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
Vijaya Karnataka Web tiger leopard dead
ಹುಲಿ, ಚಿರತೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ


ಗುಂಡ್ಲುಪೇಟೆ ತಾಲೂಕಿನ ಸ್ಕಂದಗಿರಿ ಪಾರ್ವತಾಂಭ ಬೆಟ್ಟದ ಸಾಲಿನಲ್ಲಿ ಚಿರತೆ ಮೃತದೇಹ ಹಾಗೂ ಇಲ್ಲಿಂದ 200 ಮೀಟರ್‌ ದೂರದಲ್ಲಿ, ತಾಲೂಕಿನ ಕಂದೇಗಾಲ ಸಮೀಪದ ಒಂಟಿಗುಡ್ಡದ ಬಳಿ ಪೊದೆಯಲ್ಲಿ ಹುಲಿ ಮೃತದೇಹ ಪತ್ತೆಯಾಗಿದೆ.

ವಾರದಿಂದ ಈ ಭಾಗದಲ್ಲಿ ಹುಲಿ ಸಂಚಾರದ ಬಗ್ಗೆ ತಿಳಿಸಿದ್ದ ಹಿನ್ನೆಲೆಯಲ್ಲಿ ಬೋನು ಇರಿಸಿ, ಬಲಿ ಪ್ರಾಣಿ ಕಟ್ಟಲಾಗಿತ್ತು. ಆದರೆ ಹುಲಿ ಅಥವಾ ಚಿರತೆಯಾಗಲಿ ಸೆರೆಯಾಗಿರಲಿಲ್ಲ. ಆದರೆ ಹುಲಿ ಮತ್ತು ಚಿರತೆ ಮೃತದೇಹಗಳು ಪತ್ತೆಯಾಗಿವೆ.

ಹೆಣ್ಣು ಹುಲಿ ಸುಮಾರು 8 ವರ್ಷ ಪ್ರಾಯದಾಗಿದ್ದು, ಗಂಡು ಚಿರತೆ ಸುಮಾರು 5 ವರ್ಷ ಪ್ರಾಯದ್ದು ಎಂದು ಅಂದಾಜಿಸಲಾಗಿದೆ. ವನ್ಯಪ್ರಾಣಿಗಳ ಸಾವಿಗೆ ನಿಖರ ಕಾರಣ ತಿಳಿದಿಲ್ಲ. ಎರಡು ವನ್ಯಪ್ರಾಣಿಗಳು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿರುವ ಬಗ್ಗೆ ಮಾಹಿತಿ ತಿಳಿದು ಪಶುವೈದ್ಯ ಡಾ.ನಾಗರಾಜು ಮರಣೋತ್ತರ ಪರೀಕ್ಷೆ ನಡೆಸಿ ಪ್ರಯೋಗಾಲಯಕ್ಕೆ ಕಳುಹಿಸಲು ಮಾದರಿ ಸಂಗ್ರಹಿಸಿದ ನಂತರ ಮೃತದೇಹಗಳನ್ನು ಅದೇ ಸ್ಥಳದಲ್ಲಿ ಸುಟ್ಟು ಹಾಕಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.

ಈ ಭಾಗದಲ್ಲಿ ಹುಲಿ ಅಥವಾ ಚಿರತೆ ಜಾನುವಾರುಗಳನ್ನು ಕೊಂದು ತಿನ್ನುವುದು ಮಾಮೂಲಿಯಾಗಿತ್ತು. ಆದರೆ ಈಗ ಚಿರತೆ ಮತ್ತು ಹುಲಿ ಮೃತದೇಹ ಪ್ರತ್ಯೇಕ ಸ್ಥಳಗಳಲ್ಲಿ ಒಂದೇ ದಿನ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಹುಲಿ ಮತ್ತು ಚಿರತೆ ಮೃತದೇಹ ಪತ್ತೆಯಾದ ಸ್ಥಳಕ್ಕೆ ಮಂಗಳವಾರ ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್‌ ನಟರಾಜು, ಆರ್‌ಎಫ್‌ಒ ರಾಜೇಶ್‌ ಭೇಟಿ ನೀಡಿದ್ದರು. ಅರಣ್ಯ ಇಲಾಖೆ ಅಧಿಕಾರಿ ಮತ್ತು ನೌಕರರಾದ ಹರೀಶ್‌, ಪುಟ್ಟರಾಜು, ಸಿದ್ದನಾಯಕ, ಶ್ರೀಕಾಂತ್‌ ಹಾಜರಿದ್ದರು.

ಹುಲಿಗೆ ಕರು ಬಲಿ

ತಾಲೂಕಿನ ಸ್ಕಂದಗಿರಿ ಕಂದೇಗಾಲದ ಪಾರ್ವತಾಂಭ ದೇವಾಲಯದ ಬೆಟ್ಟಗಳ ಸಾಲಿನ ಪೂರ್ವದಂಚಿನ ಗ್ರಾಮ ತ್ರಿಯಂಭಕಪುರದಲ್ಲಿ ಹುಲಿ ದಾಳಿಗೆ ಕರುವೊಂದು ಬಲಿಯಾಗಿದೆ.

ತ್ರಿಯಂಭಕಪುರ ಗ್ರಾಮದ ಮಾದಪ್ಪ ಎಂಬುವರ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಕರುವಿನ ಮೇಲೆ ಮಂಗಳವಾರ ಹುಲಿ ದಾಳಿ ಮಾಡಿದ್ದನ್ನು ಮಾಲೀಕರು ಮತ್ತು ಅಕ್ಕಪಕ್ಕದ ಜಮೀನಿನವರು ನೋಡಿದ್ದು, ಕೂಗಿಕೊಂಡಾಗ ಹುಲಿ ಅಲ್ಲಿಂದ ಓಡಿ ಹೋಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ