ಆ್ಯಪ್ನಗರ

ಸಿಗದ ಹುಲಿ: ದೂರಾಗದ ಆತಂಕ

ಬೋನ್‌ ಇರಿಸುವುದು, ಸಾಕಾನೆಗಳನ್ನು ಬಳಸಿ ನಡೆಸುವ ಕಾರ್ಯಾಚರಣೆಯಿಂದಲೂ ಹುಲಿ ಸೆರೆ ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಜನಜೀವನ ಮತ್ತು ಕೃಷಿ ಚಟುವಟಿಕೆಗಳನ್ನು ರೈತರು ಆತಂಕದಲ್ಲೇ ನಡೆಸುವಂತಾಗಿದೆ.

Vijaya Karnataka 23 Jul 2019, 5:00 am
ಗುಂಡ್ಲುಪೇಟೆ: ಬೋನ್‌ ಇರಿಸುವುದು, ಸಾಕಾನೆಗಳನ್ನು ಬಳಸಿ ನಡೆಸುವ ಕಾರ್ಯಾಚರಣೆಯಿಂದಲೂ ಹುಲಿ ಸೆರೆ ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಜನಜೀವನ ಮತ್ತು ಕೃಷಿ ಚಟುವಟಿಕೆಗಳನ್ನು ರೈತರು ಆತಂಕದಲ್ಲೇ ನಡೆಸುವಂತಾಗಿದೆ.
Vijaya Karnataka Web unseen tiger anxiety
ಸಿಗದ ಹುಲಿ: ದೂರಾಗದ ಆತಂಕ


ಬಂಡೀಪುರ ರಾಷ್ಟ್ರೀಯ ಉದ್ಯಾನದಂಚಿನ ಹಂಗಳ, ಶಿವಪುರ, ಕಲೀಗೌಡನಹಳ್ಳಿ, ಮಗುವಿನಹಳ್ಳಿ, ಮೇಲುಕಾಮನಹಳ್ಳಿ, ಹುಂಡೀಪುರ, ಚೌಡಹಳ್ಳಿ, ಬೆಳವಾಡಿ ಅಲ್ಲದೆ ಅರಣ್ಯದಿಂದ ದೂರವಿರುವ ಪಡಗೂರು, ತ್ರಿಯಂಭಪುರ, ತೆರಕಣಾಂಬಿ, ಕಂದೇಗಾಲ ಇನ್ನೂ ಹಲವು ಗ್ರಾಮಗಳಲ್ಲಿ ವನ್ಯಪ್ರಾಣಿಗಳ ದಾಳಿಗೆ ಹತ್ತಾರು ಜಾನುವಾರುಗಳು ಬಲಿಯಾಗಿವೆ.

ಜು.15ರಂದು ತೆರಕಣಾಂಬಿ ಬಳಿ ವಾಯುವಿಹಾರಕ್ಕೆ ತೆರಳಿದ್ದವರು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿ ಕಂಡು ಗಾಬರಿಗೊಂಡಿದ್ದಾರೆ. ಜು.16ರಂದು ಹುಂಡೀಪುರದಲ್ಲಿ ರೈತ ಸ್ವಾಮಿ ಎಂಬುವವರು ಎದುರುಗೊಂಡ ಹುಲಿ ನೋಡಿ ಮರವೇರಿ ಜೀವ ಉಳಿಸಿಕೊಂಡಿದ್ದರು. ಜು.20ರಂದು ಬೆಳವಾಡಿಯಲ್ಲಿ ರೈತ ಸಿದ್ದರಾಜು ಅವರ ಎತ್ತು ತೀವ್ರವಾಗಿ ಗಾಯಗೊಂಡು ಸಾವಿನಂಚಿನಲ್ಲಿದೆ.

ಹೆಜ್ಜೆ ಗುರುತುಗಳಿಂದ ಉದ್ಯಾನದಂಚಿನಲ್ಲಿ ಹುಲಿ, ಚಿರತೆಗಳ ಹಾವಳಿ ಹೆಚ್ಚಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ನಡುವೆ ಜು.1ರಂದು ಹುಲಿ ಹಾವಳಿ ವಿಷಯ ತಿಳಿದು ಸ್ಥಳ ಪರಿಶೀಲನೆಗೆ ತೆರಳಿದ್ದ ಸಂದರ್ಭ ಕಳ್ಳೀಪುರ ಗ್ರಾಮದ ಕೆರೆ ಬಳಿ ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅಗಸೆ ಅವರ ಮೇಲೆ ಹುಲಿ ದಾಳಿ ನಡೆಸಿತ್ತು. ಇದರಿಂದ ಇವರಿಗೆ ತೀವ್ರ ಗಾಯಗಳಾಗಿತ್ತು. ನಂತರದಲ್ಲಿ ನಿರಂತರವಾಗಿ ನಡೆಸುತ್ತಿರುವ ಕಾರ್ಯಾಚರಣೆಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ರೈತರ ಆತಂಕ ಮುಂದುವರಿದಿದೆ.

ಕಾಟಾಚಾರದ ಕಾರ್ಯಾಚರಣೆ ಆರೋಪ: ಹುಲಿ ಸೆರೆ ಸಲುವಾಗಿ ನಡೆಸುವ ಕಾರ್ಯಾಚರಣೆಗಳ ಬಗ್ಗೆ ರೈತ ವಲಯದಲ್ಲಿ ಬೇಸರ ವ್ಯಕ್ತವಾಗಿದೆ. ಬೋನ್‌ ಇರಿಸಿದರೂ ಬಲಿ ಪ್ರಾಣಿ ಕಟ್ಟುವುದಿಲ್ಲ. ಹುಲಿ ಜಮೀನುಗಳ ನಡುವೆ ಹಾದು ಹೋಗಿರುವ ಪೊದೆಗಳಲ್ಲಿ ಅಡಗಿರುತ್ತವೆ. ರಾತ್ರಿ ವೇಳೆ ಅಥವಾ ಜನ ಸಂಚಾರ ಕಡಿಮೆಯಾದ ಸಂದರ್ಭದಲ್ಲಿ ಸಂಚರಿಸುತ್ತವೆ. ಜಾನುವಾರುಗಳನ್ನು ಸುಲಭವಾಗಿ ಬೇಟೆಯಾಡುತ್ತಿವೆ. ಸಾಕಾನೆಗಳ ಸಹಾಯದಿಂದ ಬಯಲು ಪ್ರದೇಶದಲ್ಲಿ ನಡೆಸುವ ಕಾರ್ಯಾಚರಣೆಯಿಂದ ಏನು ಪ್ರಯೋಜನವಾಗುವುದಿಲ್ಲ. ಹುಲಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ನೀಡಿದರೆ ಅರಣ್ಯ ಇಲಾಖೆಯವರು ಮಾರನೇ ದಿನ ಬರುತ್ತಾರೆ. ಅಷ್ಟೊತ್ತಿಗಾಗಲೇ ಹುಲಿ ಬೇರೆ ಕಡೆಗೆ ಹೋಗಿರುತ್ತದೆ. ಕೆಲವು ಸಂದರ್ಭ ಕಣ್ಣಾರೆ ಕಂಡರೂ ಸೂಕ್ತ ಸಿದ್ಧತೆಗಳಿಲ್ಲದೆ ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಕಾರ್ಯಾಚರಣೆ ಸಲುವಾಗಿ ಕರೆ ತರುವ ಸಾಕಾನೆಗಳಿಗೆ ಸೂಕ್ತ ಮೇವಿನ ವ್ಯವಸ್ಥೆ ಮಾಡಿಕೊಳ್ಳದೆ ನಮ್ಮಲ್ಲೇ ಮೇವು, ನೀರು ಕೇಳುತ್ತಾರೆ. ಇದರಿಂದ ಹುಲಿ ಅಥವಾ ಚಿರತೆ ಸೆರೆ ಕಾರ್ಯಾಚರಣೆ ಕಾಟಾಚಾರ ಎಂಬುದು ರೈತರ ಆರೋಪ.

ರೈತರಿಗೆ ಸಂಕಷ್ಟ:
ಮಳೆ ಕೊರತೆ ಕಾರಣ ಬೆಳೆಗಳು ಒಣಗಿವೆ. ಇರುವಷ್ಟು ಬೆಳೆ ಕಾಡು ಹಂದಿ ಪಾಲಾಗದಂತೆ ನೋಡಿಕೊಳ್ಳಲು ರಾತ್ರಿ ಕಾವಲಿಗೆ ಹೋಗಲು ಹುಲಿ, ಚಿರತೆ ಮತ್ತು ಕಾಡಾನೆಗಳ ಕಾಟ. ಇನ್ನು ಹುಲಿ ದಾಳಿಗೆ ಹಾಲು ಕೊಡುವ ಹಸು ಮತ್ತು ಎತ್ತು ಬಲಿಯಾಗುವ ಕಾರಣ ಹೈನುಗಾರಿಕೆ ಮತ್ತು ಕೃಷಿ ನಂಬಿ ಜೀವನ ನಡೆಸುವ ರೈತರು ದಿಕ್ಕು ತೋಚದಂತಾಗಿದ್ದಾರೆ. ಅರಣ್ಯ ಇಲಾಖೆಯವರು ಜಾನುವಾರುಗಳನ್ನು ಕಳೆದುಕೊಂಡವರಿಗೆ ಸಕಾಲದಲ್ಲಿ ಪರಿಹಾರ ನೀಡುವುದಿಲ್ಲ. ಹೀಗಾಗಿ ಕಾಡಂಚಿನ ಗ್ರಾಮದ ರೈತರ ಸ್ಥಿತಿ ಚಿಂತಾಜನಕವಾಗಿದೆ. ಮುಂಜಾನೆ ಮತ್ತು ಸಂಜೆ ವೇಳೆ ವೇಗವಾಗಿ ನಡೆಯುವ ಕೃಷಿ ಕಾರ್ಯ ಕೈಗೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ