ಆ್ಯಪ್ನಗರ

ಹೂಗ್ಯಂನಲ್ಲಿ ಅಸ್ಪೃಶ್ಯತೆ: ಕಾನೂನು ಕ್ರಮದ ಎಚ್ಚರಿಕೆ

ಈ ಹಿಂದೆ ಒಂದೆರಡು ಬಾರಿ ಅಸ್ಪೃಶ್ಯತೆ ಆಚರಣೆ ವಿರುದ್ಧ ಎಚ್ಚರಿಕೆ ನೀಡಿದ್ದರೂ ಹೂಗ್ಯಂ ಗ್ರಾಮದಲ್ಲಿ ಅಸ್ಪೃಶ್ಯತೆ ಕೊನೆಗೊಂಡಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 24 Jul 2019, 5:00 am
ಹನೂರು: ಈ ಹಿಂದೆ ಒಂದೆರಡು ಬಾರಿ ಅಸ್ಪೃಶ್ಯತೆ ಆಚರಣೆ ವಿರುದ್ಧ ಎಚ್ಚರಿಕೆ ನೀಡಿದ್ದರೂ ಹೂಗ್ಯಂ ಗ್ರಾಮದಲ್ಲಿ ಅಸ್ಪೃಶ್ಯತೆ ಕೊನೆಗೊಂಡಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web untouchability in hughum
ಹೂಗ್ಯಂನಲ್ಲಿ ಅಸ್ಪೃಶ್ಯತೆ: ಕಾನೂನು ಕ್ರಮದ ಎಚ್ಚರಿಕೆ


ಕಳೆದ ವರ್ಷ ಈ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಬೆಳಕಿಗೆ ಬಂದಿದ್ದ ಪರಿಣಾಮ 2018 ಜೂ. 1 ರಂದು ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗಿತ್ತು.

ಆ ಸಂದರ್ಭದಲ್ಲಿ ಇನ್ನು ಮುಂದೆ ಇಂಥ ಅಸ್ಪೃಶ್ಯತೆ ಆಚರಣೆ ಮಾಡುವುದಿಲ್ಲ ಎಂಬ ಭರವಸೆಯನ್ನು ಗ್ರಾಮಸ್ಥರು ನೀಡಿದ್ದರು. ಆದರೆ, ನಂತರದಲ್ಲೂ ಗ್ರಾಮದ ದಲಿತರನ್ನು ದೇವಾಲಯಕ್ಕೆ ಸೇರಿಸದಿರುವುದು, ಹೋಟೆಲ್‌ ಒಳಗೆ ಬಿಟ್ಟುಕೊಡದಿರುವುದು, ಕ್ಷೌರ ಮಾಡದಿರುವ ಬಗ್ಗೆ ದಲಿತ ಮುಖಂಡರು ದೂರಿದ್ದರು.

ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಹೊನ್ನೇಗೌಡ ಹಾಗೂ ಇತರೆ ಅಧಿಕಾರಿಗಳು ಭೇಟಿ, ಮಾಹಿತಿ ಪಡೆದುಕೊಂಡರು.

ಈ ವೇಳೆ ಮಾತನಾಡಿದ ದಲಿತ ಕಾಲನಿ ಮಹಿಳೆಯರು, ''ಗ್ರಾಮದಲ್ಲಿ ಏಳುದಂಡಿನ ಮಾರಮ್ಮನ ದೇವಸ್ಥಾನದಲ್ಲಿ ನಮಗೆ ಪ್ರವೇಶ ನೀಡುತ್ತಿಲ್ಲ. ಮಕ್ಕಳಿಗೆ ಹಾಗೂ ಸಮುದಾಯದ ಪುರುಷರಿಗೆ ಕ್ಷೌರ ಮಾಡುತ್ತಿಲ್ಲ. ಹೋಟೆಲ್‌ಗಳಲ್ಲಿ ನಮಗೆ ಹೊರಗೆ ಕುಳಿತು ಉಪಾಹಾರ, ಊಟ ಸೇವಿಸಲು ಸೂಚಿಸುತ್ತಾರೆ,'' ಎಂದು ಆರೋಪಿಸಿದರು.

ನಿರ್ದಾಕ್ಷಿಣ್ಯ ಕ್ರಮ ಎಚ್ಚರಿಕೆ: ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಹೊನ್ನೆಗೌಡ ಅವರು, ''ತಂತ್ರಜ್ಞಾನ ಯುಗದಲ್ಲಿ ಇಂಥ ಅನಿಷ್ಟ ಪದ್ಧತಿ ಜಾರಿಯಲ್ಲಿರುವುದು ದುರದೃಷ್ಟಕರ. ಶೀಘ್ರದಲ್ಲೇ ಗ್ರಾಮದ ಎಲ್ಲಾ ಸಮುದಾಯದ ಮುಖಂಡರನ್ನು ಕರೆಯಿಸಿ ಜಿಲ್ಲಾಧಿಕಾರಿ ಅವರ ಸಮ್ಮುಖದಲ್ಲಿ ಸಭೆ ನಡೆಸಲಾಗುವುದು. ಆ ದಿನ ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ಭಾಗವಹಿಸಬೇಕು. ಅಸ್ಪಶೃತೆ ಆಚರಣೆ ಮಾಡುವವರು ಹಾಗೂ ಅದಕ್ಕೆ ಕುಮ್ಮಕ್ಕು ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು,'' ಎಂದರು.

ಕಾನೂನು ಕ್ರಮ: ಇದಕ್ಕೂ ಮುನ್ನ ರಾಮಾಪುರ ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷ ಕ ಮನೋಜ್‌ ಕುಮಾರ್‌ ಅವರು ಹೂಗ್ಯಂ ಗ್ರಾಮದ ಎಲ್ಲಾ ಸಮುದಾಯದ ಅಂಗಡಿ ಮಾಲೀಕರನ್ನು ಠಾಣೆಗೆ ಕರೆಯಿಸಿ ಅಸ್ಪೃಶ್ಯತೆ ಆಚರಿಸಿದರೆ ಕಾನೂನಿನಲ್ಲಿ ಏನೆಲ್ಲಾ ಶಿಕ್ಷೆ ಇದೆ ಎಂಬ ಬಗ್ಗೆ ಎಚ್ಚರಿಸಿದರು. ಹಾಗಾಗಿ ಇಂಥ ಘಟನೆಗಳು ಮರುಕಳಿಸಿದಂತೆ ಎಲ್ಲಾ ಸಮುದಾಯದ ಮುಖಂಡರು ಶಾಂತಿ ಸಹಬಾಳ್ವೆಯಿಂದ ಜೀವನ ನಡೆæಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹನೂರು ತಹಸೀಲ್ದಾರ್‌ ನಾಗರಾಜು, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಜಯಕಾಂತ, ರಾಮಾಪುರ ವೃತ್ತನಿರೀಕ್ಷ ಕ ಮನೋಜ್‌ಕುಮಾರ್‌, ಉಪ ತಹಸೀಲ್ದಾರ್‌ ರಾಜಾಕಾಂತ್‌, ಗ್ರಾಮ ಲೆಕ್ಕಾಧಿಕಾರಿ ಶರವಣ ಕುಮಾರ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ