ಆ್ಯಪ್ನಗರ

ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ, ಪ್ರತಿಭಟನೆ

ವಿಜಯನಗರ ಕೃಷ್ಣ ದೇವರಾಯ ವಿವಿಯಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಭಾರಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

Vijaya Karnataka 8 Jun 2019, 5:00 am
ಚಿಕ್ಕಬಳ್ಳಾಪುರ:
ವಿಜಯನಗರ ಕೃಷ್ಣ ದೇವರಾಯ ವಿವಿಯಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಭಾರಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
Vijaya Karnataka Web CBP-7CBPK4


ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಭ್ರಷ್ಟಾಚಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ಧರಣಿ ಕುಳಿತು ವಿವಿ ಆಡಳಿತ ಮಂಡಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಎಬಿವಿಪಿ ವಿಭಾಗೀಯ ಸಂಚಾಲಕ ಮಂಜುನಾಥ್‌ರೆಡ್ಡಿ, ಕುಲಪತಿ ಪ್ರೋ. ಎಮ್‌.ಎಸ್‌.ಸುಭಾಷ್‌ ಒಂದಲ್ಲ ಒಂದು ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದಾರೆ. ಕುಲಸಚಿವರ ಹಾಗೂ ಕುಲಪತಿಗಳ ಆಂತರಿಕ ಕಚ್ಚಾಟ, ವಿವಿಯಲ್ಲಿ ದಾಖಲಾದ ಜಾತಿ ನಿಂದನೆ ಪ್ರಕರಣಗಳು, ಬೇಕಾಬಿಟ್ಟಿ ಸಿಬ್ಬಂದಿ ವರ್ಗಾವಣೆ ಹಾಗೂ ವಜಾಗೊಳಿಸುವಿಕೆಯಂಥ ಅನೇಕ ಏಕ ಪಕ್ಷಿಯ ನಿರ್ಧಾರಗಳಿಂದ ಕುಲಪತಿಗಳು ವಿವಿಯನ್ನು ತನ್ನ ಸ್ವತ್ತಿನಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ರಾಜ್ಯಪಾಲರ ಆದೇಶದಂತೆ ಕುಲಪತಿಗಳು ನಿವೃತ್ತಿಯಾಗುವ 6 ತಿಂಗಳ ಮುಂಚೆ ಯಾವುದೇ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಬಾರದೆಂದು ನಿಯಮವಿದೆ. ಆದರೂ, ನಿವೃತ್ತಿಗೆ ಕೇವಲ 18 ದಿನಗಳು ಬಾಕಿ ಇರುವಾಗ ನೇಮಕಾತಿ ನಡೆಸಿ ಆದೇಶ ಧಿಕ್ಕರಿಸಿದ್ದಾರೆ. ಸರಕಾರದಿಂದ ಮಂಜೂರಾದ ಮತ್ತು ಅಧಿಸೂಚಿತ ಹುದ್ದೆಗಳನ್ನು ಕುಲಪತಿಗಳು ತಮ್ಮ ವಿವೇಚನೆ ಆಧಾರದಲ್ಲಿ ಬೇರೆ ವಿಭಾಗಕ್ಕೆ ವರ್ಗಾಯಿಸಿದ್ದಾರೆ. ಇದಕ್ಕೆ ಸರಕಾರದ ಅನುಮತಿ ಪಡೆದಿಲ್ಲ. ನೇಮಕಾತಿ ವಿಚಾರದಲ್ಲಿ ಸಿಂಡಿಕೇಟ್‌ ಸಮಿತಿಯನ್ನು ಕತ್ತಲಲ್ಲಿ ಇಡಲಾಗಿದೆ. ಆಸ್ತಿತ್ವದಲ್ಲಿ ಇಲ್ಲದೇ ಇರುವ ವಿಭಾಗಗಳಿಗೆ ನೇಮಕಾತಿ ಮಾಡಲಾಗಿದೆ. ಈ ಅಕ್ರಮದಲ್ಲಿ ಸರಕಾರದ ಕೆಲ ಅಧಿಕಾರಿಗಳು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಕೂಡಲೇ ರಾಜ್ಯ ಸರಕಾರ ಹಾಗೂ ರಾಜ್ಯಪಾಲರು ಮಧ್ಯ ಪ್ರವೇಶಿಸಿ ವಿವಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್‌ ಕೆ.ನರಸಿಂಹಮೂರ್ತಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ್‌, ಜಿಲ್ಲಾ ಸಹ ಸಂಚಾಲಕ ವಿಜಯ್‌ ಕುಮಾರ್‌, ತಾಲೂಕು ಸಂಚಾಲಕ ಅಮಿತ್‌ರೆಡ್ಡಿ, ವಿದ್ಯಾರ್ಥಿ ಮುಖಂಡರಾದ ಪ್ರತಿಭಾ, ನಂದೀಶ್‌, ಕಿಶೋರ್‌, ಭಾಗ್ಯ, ಜಾನಕಿ ಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ