ಆ್ಯಪ್ನಗರ

ಕೆಟ್ಟುನಿಂತ ಆರ್‌ಟಿಒ ವಾಹನ್‌, ವೇಗವಿಲ್ಲದ ಸಾರಥಿ

ನಮ್ಮೆಲ್ಲಾ ಸಾರ್ವಜನಿಕ ಸೇವೆಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ ಮಾಡಿದ್ದೇವೆ. ಇನ್ನೇನಿದ್ದರೂ ಕೆಲಸಗಳು ಫಟಾಫಟ್‌ ಆಗಿಬಿಡುತ್ತವೆ ಎಂದು ಸಾರಿಗೆ ಇಲಾಖೆ ಹೇಳಿಕೊಳ್ಳುತ್ತಿದೆ. ಆದರೆ, ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಕಚೇರಿಯಲ್ಲಿ ವಾಸ್ತವವೇ ಬೇರೆ.

Vijaya Karnataka 21 Aug 2019, 3:50 pm
ಶೇ. 60ರಷ್ಟು ಸಿಬ್ಬಂದಿಗೆ ಕಂಪ್ಯೂಟರ್‌ ಗೊತ್ತಿಲ್ಲ | ಸರ್ವರ್‌ ನಿಧಾನ, ಕೆಲಸಗಳು ವಿಳಂಬ
Vijaya Karnataka Web
ಕೆಟ್ಟುನಿಂತ ಆರ್‌ಟಿಒ ವಾಹನ್‌, ವೇಗವಿಲ್ಲದ ಸಾರಥಿ


ಎಂ.ಕೃಷ್ಣಪ್ಪ ಕೆಎನ್‌ಹಳ್ಳಿ ಚಿಕ್ಕಬಳ್ಳಾಪುರ


ನಮ್ಮೆಲ್ಲಾ ಸಾರ್ವಜನಿಕ ಸೇವೆಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ ಮಾಡಿದ್ದೇವೆ. ಇನ್ನೇನಿದ್ದರೂ ಕೆಲಸಗಳು ಫಟಾಫಟ್‌ ಆಗಿಬಿಡುತ್ತವೆ ಎಂದು ಸಾರಿಗೆ ಇಲಾಖೆ ಹೇಳಿಕೊಳ್ಳುತ್ತಿದೆ. ಆದರೆ, ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಕಚೇರಿಯಲ್ಲಿ ವಾಸ್ತವವೇ ಬೇರೆ.

ವಾಹನ್‌ ಮತ್ತು ಸಾರಧಿ ಸಾಫ್ಟ್‌ವೇರ್‌ಗಳ ಮೂಲಕ ವಾಹನ ಸಂಬಂಧಿ ಪ್ರಕ್ರಿಯೆಗಳು ಡಿಜಿಟಲೀಕರಣಗೊಂಡಿದ್ದು, ಕೆಲಸವನ್ನು ಸರಳ ಮತ್ತು ವೇಗಗೊಳಿಸಿದೆ ಎಂದು ಸಾರಿಗೆ ಇಲಾಖೆ ಹೇಳುತ್ತಿದೆ. ಆದರೆ, ಆರ್‌ಟಿಒ ರಿಯಾಲಿಟಿ ಚೆಕ್‌ ಮಾಡಿದರೆ ಇದೇ ಸಾಫ್ಟ್‌ವೇರ್‌ಗಳು ಕೆಲಸವನ್ನು ಮತ್ತಷ್ಟು ವಿಳಂಬ ಮಾಡಿವೆ ಎನ್ನುವುದು ಬೆಳಕಿಗೆ ಬರುತ್ತದೆ. ಯಾಕೀಗೆ ಎಂದು ಪರಿಶೀಲಿಸಿದರೆ ಕಂಡುಬಂದ ಸಂಗತಿಯೆಂದರೆ, ವರ್ಷಾನುಗಟ್ಟಲೆ ಕೈ ಬರಹದಲ್ಲೇ ತಮ್ಮೆಲ್ಲಾ ಕೆಲಸ ಮಾಡುತ್ತಿದ್ದ ಸಾರಿಗೆ ಸಿಬ್ಬಂದಿ ಇದೀಗ ದಿಢೀರನೆ ಕಂಪ್ಯೂಟರ್‌ ಕೆಲಸಕ್ಕೆ ತೆರೆದುಕೊಂಡಿದ್ದರಿಂದ ಅದರ ನಿರ್ವಹಣೆ ಗೊತ್ತಿಲ್ಲ. ಸಿಬ್ಬಂದಿಗೆ ಸೂಕ್ತ ತರಬೇತಿಯನ್ನೂ ಇಲಾಖೆ ಕೊಟ್ಟಿಲ್ಲ. ಇದರ ಜತೆಗೆ, ಸರ್ವರ್‌ ತೊಂದರೆಗಳನ್ನು ಕೆಲಸವನ್ನು ಮತ್ತಷ್ಟು ವಿಳಂಬವಾಗಿಸಿವೆ.

ಶೇ. 60ರಷ್ಟು ಸಿಬ್ಬಂದಿಗೆ ಕಂಪ್ಯೂಟರ್‌ ಗೊತ್ತಿಲ್ಲ: ಕೈಬರಹದ ಕೆಲಸ ಕಾರ‍್ಯಗಳಿಗೆ ತೀಲಾಂಜಲಿ ಇಟ್ಟಿದ್ದ ಆರ್‌ಟಿಒ ಇಲಾಖೆ, ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವುದು ಹಾಗೂ ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗುವ ಉದ್ದೇಶದಿಂದ ವರ್ಷದ ಹಿಂದೆ ಸಾರಥಿ-4 ಹಾಗೂ ವಾಹನ್‌-4 ಎಂಬ ಎರಡು ಹೊಸ ಸಾಫ್ಟವೇರ್‌ಗಳನ್ನು ಅವಳಡಿಸಿಕೊಂಡಿದೆ. ಆದರೆ, ನಿರೀಕ್ಷಿಸಿದಷ್ಟು ವೇಗದಲ್ಲಿ ಕೆಲಸಗಳು ಇಲಾಖೆಯಲ್ಲಿ ಜರುಗುತ್ತಿಲ್ಲ. ಆರ್‌ಟಿಒ ಇಲಾಖೆಯಲ್ಲಿರುವ ಶೇ.60ರಷ್ಟು ಸಿಬ್ಬಂದಿಗೆ ಕಂಪ್ಯೂಟರ್‌ ಜ್ಞಾನವೇ ಇಲ್ಲ ಎಂಬುದು ಬಹಿರಂಗ ಸತ್ಯ. ಅವರಿಗೆ ಕಂಪ್ಯೂಟರ್‌ ಕಲಿಸುವ ಮೊದಲೇ ಸಾರಿಗೆ ಇಲಾಖೆ ಆರ್‌ಟಿಒಗಳನ್ನು ಸಂಪೂರ್ಣ ಪೇಪರ್‌ ಲೇಸ್‌ ಮಾಡಿದೆ. ಇದು ಸಿದ್ದತೆಯೆ ಇಲ್ಲದೆ ಯುದ್ಧಕ್ಕೆ ಹೋದಂತಾಗಿದೆ.

ಆಪರೇಟರ್‌ಗಳಿಗೆ ಹೆಚ್ಚಿನ ಹೊರೆ: ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ, ಅರ್ಜಿ ಸಲ್ಲಿಸಿದವರಿಗೆ ಇ-ಮೇಲ್‌ ಮೂಲಕ ಸಂದೇಶ ರವಾನಿಸಬೇಕಿರುವುದು ಆರ್‌ಟಿಒ ಇಲಾಖೆ ಸಿಬ್ಬಂದಿಯ ಕೆಲಸ. ಆದರೆ, ಇಷ್ಟೆಲ್ಲ ಕೆಲಸ ಮಾಡಲು ಸಿಬ್ಬಂದಿಗೆ ಕಂಪ್ಯೂಟರ್‌ ಜ್ಞಾನವೇ ಇಲ್ಲವಾಗಿದೆ. ಕಚೇರಿಯಲ್ಲಿರುವ ಕಂಪ್ಯೂಟರ್‌ ಆಪರೇಟರ್‌ಗಳೇ ಇಡೀ ಇಲಾಖೆಯ ಕೆಲಸ ಮಾಡಬೇಕಿದೆ. ಹೀಗಾಗಿ ಕಂಪ್ಯೂಟರ್‌ ಆಪರೇಟರ್‌ಗಳ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ.

ಸಿಬ್ಬಂದಿ ಕೊರತೆ: ಈಗಾಗಲೇ ಆರ್‌ಟಿಒ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. 4 ಇನ್ಸೆಪೆಕ್ಟರ್‌ಗಳ ಹುದ್ದೆ ವರ್ಷಗಳಿಂದ ಖಾಲಿ ಹೊಡೆಯುತ್ತಿವೆ. ಇರುವ ಸಿಬ್ಬಂದಿಗೆ ಸರಿಯಾಗಿ ಕಂಪ್ಯೂಟರ್‌ ಗೊತ್ತಿಲ್ಲ. ಇದರ ಜತೆಗೆ ಆನ್‌ಲೈನ್‌ ವ್ಯವಸ್ಥೆ ಇಲಾಖೆಗೆ ಹೊಸದಾದ್ದರಿಂದ ಅದು ಆಗಿಂದಾಗ್ಗೆ ಸ್ಥಗಿತಗೊಳ್ಳುತ್ತಿದೆ ಎಂದು ಸಿಬ್ಬಂದಿಯೇ ಹೇಳುತ್ತಿದ್ದಾರೆ.

ಇನ್ನು ಅರ್ಜಿ ಸಲ್ಲಿಸುವಾಗ ಸರ್ವರ್‌ ಸ್ಲೋ ಆಗುವುದು, ಪ್ರತಿಕ್ರಿಯೆ ಬರದಂತಾಗುವುದು ಹೀಗೆ ಅನೇಕ ಸಮಸ್ಯೆಗಳಿವೆ. ಅಗತ್ಯ ಸಿಬ್ಬಂದಿ ನೇಮಿಸಿಕೊಳ್ಳದೆ, ಇರುವ ಸಿಬ್ಬಂದಿಗೆ ಸೂಕ್ತ ಕಂಪ್ಯೂಟರ ತರಬೇತಿ ನೀಡದೆ ಜತೆಗೆ ಸಾಫ್ಟ್‌ವೇರ್‌ಗಳಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಸರಿ ಮಾಡದೆ ಆತುರದಲ್ಲಿ ಆರ್‌ಟಿಒ ಸೇವೆಗಳನ್ನು ಇಲಾಖೆ ಆನ್‌ಲೈನ್‌ ಮಾಡಿದೆ ಎನ್ನುವುದು ಸಾರ್ವಜನಿಕರ ಆರೋಪ.

ಸಾರಥಿ, ವಾಹನ್‌ ತಂತ್ರಾಂಶಗಳನ್ನು ಅಳವಡಿಸಿದಾಗಿನಿಂದ ಕೆಲಸ ಕಾರ್ಯಗಳು ಬೇಗನೇ ಆಗುತ್ತಿವೆ. ಸೇವೆಗಳಿಗೆ ತಂತ್ರಾಂಶದಲ್ಲಿಯೇ ಇಂತಿಷ್ಟು ಸಮಯ ಎಂದು ನಿಗದಿಯಾಗಿದೆ. ಹಾಗಾಗಿ ಕೆಲವೊಂದು ಸೇವೆ ತಡವಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ.
-ನಾಗೀರೆಡ್ಡಿ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ, ಚಿಕ್ಕಬಳ್ಳಾಪುರ

ಆರ್‌ಟಿಒ ಕಚೇರಿಯಲ್ಲಿ ಸಂಪೂರ್ಣ ಆನ್‌ಲೈನ್‌ ವ್ಯವಸ್ಥೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಸೇವೆಗಳು ನಿರೀಕ್ಷಿತ ಮಟ್ಟದಲ್ಲಿ ಲಭ್ಯವಾಗುತ್ತಿಲ್ಲ. ಈ ಮೊದಲು ಮಧ್ಯವರ್ತಿಗಳ ಹಾವಳಿ ಇದ್ದರೂ, ಕೆಲಸಗಳು ಫಾಸ್ಟ್‌ ಆಗಿದ್ದವು. ಆದರೆ, ಇದೀಗ ಆನ್‌ಲೈನ್‌ ವ್ಯವಸ್ಥೆ ಮೊದಲಿಗಿಂತಲೂ ಸ್ಲೋ ಆಗಿದೆ.
-ಗಂಗಾಧರ, ಸಾರ್ವಜನಿಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ