ಆ್ಯಪ್ನಗರ

ಮಳೆಕೊಯ್ಲು ಅಳವಡಿಸಿಕೊಳ್ಳದಿದ್ರೆ ವಿದ್ಯುತ್‌, ನೀರು ಕಟ್‌

ಜಿಲ್ಲೆಯಾದ್ಯಂತ ಮಳೆಕೊಯ್ಲು ಕಡ್ಡಾಯ ಮಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ, ಮಳೆಕೊಯ್ಲು ಅಳವಡಿಸಿಕೊಳ್ಳದ ಮನೆಗಳಿಗೆ ನೀರು, ವಿದ್ಯುತ್‌ ಸಂಪರ್ಕ ಕಟ್‌ ಮಾಡುವುದಾಗಿ ಹೇಳಿದೆ.

Vijaya Karnataka 22 Aug 2019, 3:43 pm
ಮನೆ, ವಾಣಿಜ್ಯ ಮಳಿಗೆಗೆ ಮಳೆ ಕೊಯ್ಲು ಕಡ್ಡಾಯ | ಮಳೆ ನೀರು ಸದ್ಬಳಕೆಗೆ ಜಿಲ್ಲಾಡಳಿತದಿಂದ ಹೊಸ ರೂಲ್ಸ್‌!
Vijaya Karnataka Web
ಮಳೆಕೊಯ್ಲು ಅಳವಡಿಸಿಕೊಳ್ಳದಿದ್ರೆ ವಿದ್ಯುತ್‌, ನೀರು ಕಟ್‌


ಎಂ.ಕೃಷ್ಣಪ್ಪ ಕೆಎನ್‌ಹಳ್ಳಿ ಚಿಕ್ಕಬಳ್ಳಾಪುರ

ಜಿಲ್ಲೆಯಾದ್ಯಂತ ಮಳೆಕೊಯ್ಲು ಕಡ್ಡಾಯ ಮಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ, ಮಳೆಕೊಯ್ಲು ಅಳವಡಿಸಿಕೊಳ್ಳದ ಮನೆಗಳಿಗೆ ನೀರು, ವಿದ್ಯುತ್‌ ಸಂಪರ್ಕ ಕಟ್‌ ಮಾಡುವುದಾಗಿ ಹೇಳಿದೆ.

ಹಳೆಯ ಮನೆಗಳೂ ಸೇರಿದಂತೆ ಹೊಸದಾಗಿ ಕಟ್ಟುವ ಮನೆ, ವಾಣಿಜ್ಯ ಮಳಿಗೆ ಅಥವಾ ಇನ್ನಾವುದೇ ಕಟ್ಟಡ ಕಟ್ಟುವವರಿಗೆ ಇದು ಅನ್ವಯಿಸುತ್ತದೆ. ನೀರಿನ ಜ್ವಲಂತ ಸಮಸ್ಯೆಗೆ ತಾತ್ಕಾಲಿಕವಾದರೂ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜಿಲ್ಲಾಡಳಿತ ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ಶೇಖರಣೆ ಮಾಡಿ, ಅದನ್ನು ಪುನರ್‌ಬಳಕೆ ಮಾಡಲು ಈ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಮನೆ ಕಟ್ಟಿಸಿದ್ದವರು ಮತ್ತು ಹೊಸದಾಗಿ ಮನೆ ಕಟ್ಟುವವರು ಕಡ್ಡಾಯವಾಗಿ ಮಳೆಕೊಯ್ಲು ಅಳವಡಿಸಬೇಕು. ಇಲ್ಲಾಂದ್ರೆ ಜಪ್ಪಯ್ಯ ಅಂದ್ರೂ ಕುಡಿವ ನೀರು, ಹಾಗೂ ವಿದ್ಯುತ್‌ ಸಂಪರ್ಕ ಸಿಗಲ್ಲ.

ಕಲ್ಯಾಣಿ ಪುನಶ್ಚೇತನ ಬಳಿಕ ಮತ್ತೊಂದು ಹೆಜ್ಜೆ

ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕಲ್ಯಾಣಿಗಳ ಪುನಶ್ಚೇತನ, ಬಹುಪಯೋಗಿ ಚೆಕ್‌ಡ್ಯಾಂಮ್‌ಗಳ ನಿರ್ಮಾಣದ ಮೂಲಕ ಯಶಸ್ಸು ದೊರೆತ ಬಳಿಕ ಇದೀಗ ಮಳೆಕೊಯ್ಲಿನತ್ತ ಜಿಲ್ಲಾಡಳಿತ ಮುಖ ಮಾಡಿದೆ. ಜಿಲ್ಲೆಯಲ್ಲಿ ವಾರ್ಷಿಕವಾಗಿ 750 ಮಿ.ಮೀ ಮಳೆ ಆಗುತ್ತಿದೆ. ಆದರೆ ಅಷ್ಟೂ ಮಳೆ ನೀರು ಹರಿದು ವ್ಯರ್ಥವಾಗಿ ಭೂಮಿ ಸೇರುತ್ತಿದೆ. ಹೀಗಾಗಿ ಅದನ್ನು ಸದ್ಬಳಕೆ ಮಾಡಲು ಮಳೆ ಕೊಯ್ಲು ಯೋಜನೆಯನ್ನು ಬರದ ಜಿಲ್ಲೆಯಲ್ಲಿ ಆಂದೋಲವಾಗಿ ರೂಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ರೂಪುರೇಷೆಗಳನ್ನು ಸಿದ್ಧಪಡಿಸಿದೆ.

ಮಳೆ ಕೊಯ್ಲು ಇದ್ದರಷ್ಟೇ ಪರವಾನಗಿ

ಜಿಲ್ಲಾಡಳಿತದ ಆದೇಶದ ಪ್ರಕಾರ 100 ಚದರ ಮೀ.ಅಥವಾ ಅದಕ್ಕೂ ಹೆಚ್ಚು ವಿಸ್ತಾರವಿರುವ ಎಲ್ಲಾ ವಾಸ ಸ್ಥಳ, ವಾಣಿಜ್ಯ ಕಟ್ಟಡಗಳಿಗೆ ಕಡ್ಡಾಯವಾಗಿ ಮಳೆ ನೀರು ಕೊಯ್ಲಿನ ಸೂಕ್ತ ರಚನೆಗಳನ್ನು ನಿರ್ಮಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಅಧ್ಯಕ್ಷ ರಾಗಿರುವ ಜಿಲ್ಲಾ ಅಂತರ್ಜಲ ಪ್ರಾಧಿಕಾರ ಸಮಿತಿ ಸಭೆ ಆದೇಶಿಸಿದೆ. ಒಂದು ವೇಳೆ ಸದರಿ ಕಟ್ಟಡಗಳಿಗೆ ಮಳೆ ಕೊಯ್ಲು ಅಳವಡಿಸದ ಬಗ್ಗೆ ಕಂಡು ಬಂದರೆ ಅಂತಹ ಕಟ್ಟಡಗಳಿಗೆ ನೀರು ಮತ್ತು ವಿದ್ಯುತ್‌ ಸಂಪರ್ಕ ಕಟ್‌ ಮಾಡುವಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿ ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ಸರಕಾರಿ ಕಟ್ಟಡಗಳಿಗೂ ಕಡ್ಡಾಯ

ಮಳೆ ಕೊಯ್ಲು ಕಡ್ಡಾಯ ಕೇವಲ ಖಾಸಗಿ ಕಟ್ಟಡಗಳಿಗೆ ಮಾತ್ರವಲ್ಲದೆ, ಜಿಲ್ಲೆಯ ಎಲ್ಲಾ ಸರಕಾರಿ ಇಲಾಖೆಗಳ ಕಟ್ಟಡಗಳಿಗೂ ಈ ಪದ್ಧತಿ ಅನುಷ್ಠಾನಗೊಳಿಸಲು ಮುಂದಾಗಿದೆ. ನೂರಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಜಿಲ್ಲಾಡಳಿತ, ಜಿಲ್ಲಾಸ್ಪತ್ರೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಗ್ರಂಥಾಲಯ, ರಂಗ ಮಂದಿರ ಸೇರಿದಂತೆ ಹಲವು ಕಟ್ಟಡಗಳಿಗೆ ಮಳೆ ಕೊಯ್ಲು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಜಿಲ್ಲೆಯಲ್ಲಿ ಮಳೆಕೊಯ್ಲು ಪದ್ಧತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ತಿಂಗಳ 30 ರೊಳಗೆ ಜಿಲ್ಲೆಯ ಪ್ರಗತಿ ವಿವರ ಕೊಡುವಂತೆ ಎಲ್ಲಾ ಅಧಿಕಾರಿಗಳಿಗೂ ಸೂಚನೆ ನೀಡಿದ್ದು, ಪ್ರಗತಿ ನೋಡಿ ಮತ್ತಷ್ಟು ಚುರುಕು ಮುಟ್ಟಿಸಲಾಗುವುದು.
-ಎಚ್‌.ವಿ.ಮಂಜುನಾಥ್‌, ಜಿಪಂ ಅಧ್ಯಕ್ಷ

ಜಿಲ್ಲೆಯಾದ್ಯಂತ ಮಳೆಕೊಯ್ಲು ಅಳವಡಿಕೆ ಆರಂಭವಾಗಿದೆ. ಸರಕಾರ ಕಟ್ಟಡಗಳು ಸೇರಿದಂತೆ ಇತರೆ ಕಟ್ಟಡಗಳಲ್ಲಿ ಈಗಾಗಲೇ ಕೊಯ್ಲು ಅಳವಡಿಕೆ ಪ್ರಗತಿ ಉತ್ತಮವಾಗಿ ಸಾಗಿದ್ದು, ಮಳೆಕೊಯ್ಲು ಅಳವಡಿಕೆಗೆ ಪ್ರೋತ್ಸಾಹ ಧನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.
-ಅನಿರುದ್ಧ್‌ ಶ್ರವಣ್‌, ಜಿಲ್ಲಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ