ಆ್ಯಪ್ನಗರ

ಗುಡಿಬಂಡೆ: ಕಳಪೆ ಪಡಿತರ ದಿನಸಿ ನೀಡಿದ್ದನ್ನು ಪ್ರಶ್ನಿಸಿದ ದಲಿತ ಮಹಿಳೆಯ ಜುಟ್ಟು ಹಿಡಿದು ಜಾತಿ ನಿಂದನೆ!

ಈ ಘಟನೆಯ ವೀಡಿಯೊ ವೈರಲ್‌ ಆಗುತ್ತಿದ್ದಂತೆ ನಾರಾಯಣಮ್ಮ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ. ಸುಧಾಕರ್‌ ಭೇಟಿ ನೀಡಿ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪದ್ಮಮ್ಮ ಮೇಲೆ ಅಟ್ರಾಸಿಟಿ ಕೇಸ್‌ ಮಾಡಿ ಎಫ್‌ಐಆರ್‌ ದಾಖಲಿಸಿದ್ದಾರೆ. ನ್ಯಾಯಬೆಲೆ ಅಂಗಡಿಯ ಲೈಸೆನ್ಸ್‌ ರದ್ದು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಮಾಜದಲ್ಲಿ ತಲೆ ತಗ್ಗಿಸುವ ಘಟನೆ ಇದಾಗಿದೆ. ಗ್ರಾಮಗಳಲ್ಲಿ ಜಾತಿ ಹೆಸರಿನಲ್ಲಿ ನಿಂದನೆ ಮಾಡುವುದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.

Vijaya Karnataka 18 Oct 2021, 8:13 am
ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲೂಕಿನ ಕಾಟೇನಹಳ್ಳಿಯ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ದಿನಸಿ ಖರೀದಿಸಲು ಹೋದ ದಲಿತ ಮಹಿಳೆಗೆ ಅಂಗಡಿ ಮಾಲೀಕರು ದೌರ್ಜನ್ಯ ನಡೆಸಿ ಜಾತಿ ನಿಂದನೆ ಮಾಡಿರುವ ವೀಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದ್ದು, ದಲಿತ ಸಂಘಟನೆಗಳು ಈ ಘಟನೆಯನ್ನು ಖಂಡಿಸಿವೆ.
Vijaya Karnataka Web Sudhakar


ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌, ಜಿಲ್ಲಾಧಿಕಾರಿ ಆರ್‌. ಲತಾ, ಎಸ್‌ಪಿ ಮಿಥುನ್‌ ಕುಮಾರ್‌ ನೇತೃತ್ವದ ತಂಡ ಕಾಟೇನಹಳ್ಳಿಗೆ ಭೇಟಿ ನೀಡಿ ನೊಂದ ದಲಿತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಕಾಟೇನಹಳ್ಳಿಯ ನ್ಯಾಯಬೆಲೆ ಅಂಗಡಿ ನಾಗರತ್ನಮ್ಮ ಎಂಬಾಕೆಯ ಹೆಸರಿನಲ್ಲಿದ್ದು, ಈಕೆಯ ಪುತ್ರಿ ಪದ್ಮಮ್ಮ ಎಂಬಾಕೆ ಪಡಿತರ ವಿತರಿಸುತ್ತಿದ್ದಳು. ಪಡಿತರ ಖರೀದಿಸಲು ಹೋದ ದಲಿತ ಮಹಿಳೆ ನಾರಾಯಣಮ್ಮ ಅವರಿಗೆ ಕಳಪೆ ಗುಣ ಮಟ್ಟದ ಆಹಾರ ಪದಾರ್ಥ ವಿತರಿಸುತ್ತಿರುವುದನ್ನು ಖಂಡಿಸಿ ನಾರಾಯಣಮ್ಮ ಅವರು ಪ್ರಶ್ನಿಸಿದ್ದಾರೆ. ಇಷ್ಟಕ್ಕೇ ನಾರಾಯಣಮ್ಮ ಅವರ ಜುಟ್ಟು ಹಿಡಿದು ಜಾತಿ ನಿಂದನೆ ಮಾಡಿ, ಅವರನ್ನು ಅಂಗಡಿಯಿಂದ ಹೊರ ತಳ್ಳಿದ್ದಾಳೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದರು ಎಂದು ನಾರಾಯಣಮ್ಮ ತಿಳಿಸಿದ್ದಾರೆ.
ಚಿಕ್ಕೋಡಿಯಲ್ಲಿ ದಲಿತ ಮಕ್ಕಳ ಜೊತೆ ಶಿಕ್ಷಕಿಯ ಅಸ್ಪೃಶ್ಯತೆ; ಶಿಕ್ಷಣಾಧಿಕಾರಿಯ ಕಾಲಿಗೆ ಬಿದ್ದು ಪೋಷಕರ ಪ್ರತಿಭಟನೆ
ಈ ಘಟನೆಯ ವೀಡಿಯೊ ವೈರಲ್‌ ಆಗುತ್ತಿದ್ದಂತೆ ನಾರಾಯಣಮ್ಮ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ. ಸುಧಾಕರ್‌ ಭೇಟಿ ನೀಡಿ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪದ್ಮಮ್ಮ ಮೇಲೆ ಅಟ್ರಾಸಿಟಿ ಕೇಸ್‌ ಮಾಡಿ ಎಫ್‌ಐಆರ್‌ ದಾಖಲಿಸಿದ್ದಾರೆ. ನ್ಯಾಯಬೆಲೆ ಅಂಗಡಿಯ ಲೈಸೆನ್ಸ್‌ ರದ್ದು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಮಾಜದಲ್ಲಿ ತಲೆ ತಗ್ಗಿಸುವ ಘಟನೆ ಇದಾಗಿದೆ. ಗ್ರಾಮಗಳಲ್ಲಿ ಜಾತಿ ಹೆಸರಿನಲ್ಲಿ ನಿಂದನೆ ಮಾಡುವುದು ಅಕ್ಷಮ್ಯ ಅಪರಾಧ. ದಲಿತ ಮುಖಂಡರು ತಿಳಿಸಿದಂತೆ ತಾಲೂಕಿನಲ್ಲಿ ಜಾತಿ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ನನಗೆ ನೋವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಇನ್ನಷ್ಟು ಜಾಗೃತಿ ಮೂಡಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದರು.
ಇದ್ಯಾವ ಕಾಲದಲ್ಲಿದ್ದೇವೆ ಇನ್ನೂ? ದಲಿತರ ಮಗು ದೇಗುಲ ಪ್ರವೇಶಿಸಿದ್ದಕ್ಕೆ ದಂಡ ವಿಧಿಸಿದ ಗ್ರಾಮಸ್ಥರು!
ದಲಿತ ಮಹಿಳೆಗೆ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ಆರ್‌. ಲತಾ, ಉಪ ವಿಭಾಗಾಧಿಕಾರಿ ರಘುನಂದನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್‌, ಡಿವೈಎಸ್ಪಿ ವಾಸುದೇವ್‌, ಜಿಲ್ಲಾ ಆಹಾರ ನಿರ್ದೇಶಕಿ ಸವಿತ, ತಹಸೀಲ್ದಾರ್‌ ಸಿಗ್ಬತುಲ್ಲ, ಸಮಾಜ ಕಲ್ಯಾಣ ಇಲಾಖೆಯ ಶೇಷಾದ್ರಿ, ಪೆರೇಸಂದ್ರ ಸಬ್‌ಇನ್ಸ್‌ಪೆಕ್ಟರ್‌ ಮಂಜುನಾಥ ಭೇಟಿ ನೀಡಿ ಮಾಹಿತಿ ಪಡೆದರು. ಘಟನೆ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ ಆರೋಪಿ ಪದ್ಮಮ್ಮ ಸದ್ಯ ಪರಾರಿಯಾಗಿದ್ದು ಆಕೆಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಕಾಟೇನಹಳ್ಳಿಗೆ ದಲಿತ ಸಂಘಟನೆಗಳ ಮುಖಂಡರು ಭೇಟಿ ನೀಡಿ, ಕೃತ್ಯವನ್ನು ಖಂಡಿಸಿ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಶಾಲೆಗೆ ತೆರಳುವ ದಲಿತ ಯುವತಿಯರಿಗೆ ಕೋಲಾರದಲ್ಲಿ ನಿತ್ಯ ಕಿರುಕುಳ; ಪ್ರಶ್ನಿಸಿದ್ದಕ್ಕೆ 50 ಜನ ಪುಂಡರಿಂದ ಥಳಿತ!
ಹಿಂದೊಮ್ಮೆ ನಡೆದಿತ್ತು ಗುಡಿಬಂಡೆ ಚಲೋ
ತುಮಕೂರು ಭಾಗದಲ್ಲಿ ಪದೇಪದೇ ದಲಿತ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿದ್ದು, 2017ರಲ್ಲಿ ಇದೇ ಗುಡಿಬಂಡೆಯಲ್ಲಿ ಹೈಸ್ಕೂಲ್ ಓದುವ ದಲಿತ ಹುಡುಗನೊಬ್ಬ ಮೇಲ್ಜಾತಿಯ ತನ್ನ ಸಹಪಾಠಿ ಹುಡುಗಿಯನ್ನು ಮಾತನಾಡಿಸಿದ ಅನ್ನೋ ಕಾರಣಕ್ಕೆ ಆಕೆಯ ಅಣ್ಣ ಮತ್ತು ಕೆಲ ಮೇಲ್ಜಾತಿ ಹುಡುಗರು ಸೇರಿ ಆತನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಈ ಘಟನೆಯಿಂದ ರೊಚ್ಚಿಗೆದ್ದ ದಲಿತ ಸಂಘಟನೆಗಳು, ಜೀವಪರರು ಘಟನೆಯನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ 2017ರ ಮಾರ್ಚ್ 6ರಂದು ‘ಗುಡಿಬಂಡೆ ಚಲೋ‘ ಎನ್ನುವ ಹೆಸರಿನಲ್ಲಿ ಬೃಹತ್ ಹೋರಾಟವನ್ನೇ ನಡೆಸಿದ್ದರು.
ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪಿ ಪಿಎಸ್‌ಐ ಅರ್ಜುನ್‌ ವಿರುದ್ಧ ಎಫ್‌ಐಆರ್ ದಾಖಲು
ಪ್ರಪಂಚ ಮುಂದುವರೆದರೂ ಕೂಡ ಭಾರತದಂತಹ ದೇಶದಲ್ಲಿ ಜನರ ಮನಸ್ಸಿಗೆ ಅಂಟಿಕೊಂಡಿರುವ ಅಸ್ಪೃಶ್ಯತೆಯ ರೋಗ ಇನ್ನೂ ಹಚ್ಚಹಸಿರಾಗಿಯೇ ಇದೆ ಅನ್ನೋದು ವಾಸ್ತವ ಸಂಗತಿ. ಕರ್ನಾಟಕದಲ್ಲೇ ಈಗಲೂ ಪ್ರತಿನಿತ್ಯ ಅನೇಕ ಜಿಲ್ಲೆಗಳಲ್ಲಿ ಜಾತಿಯ ಕಾರಣಕ್ಕೆ ನಡೆಯುವ ದೌರ್ಜನ್ಯಗಳು, ಅಸ್ಪೃಶ್ಯತೆ ಆಚರಣೆ ನಡೆಯುತ್ತಿದ್ದು, ಕೊಪ್ಪಳ, ತುಮಕೂರು, ವಿಜಯಪುರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ದಲಿತ ದೌರ್ಜನ್ಯಗಳು ನಡೆಯುತ್ತಲೇ ಇವೆ. ಮಾತೆತ್ತಿದರೆ ನಾವೆಲ್ಲ ಹಿಂದೂ-ಬಂಧು ಅನ್ನೋ ಸಂಘಟನೆಗಳು, ಮುಖಂಡರು ಮತಾಂತರ, ಗೋರಕ್ಷಣೆ ಮತ್ತೊಂದು ಮಗದೊಂದು ಅಂತಾ ಟೊಳ್ಳು ಭಾಷಣ ಬಿಗಿಯುವ ಬದಲು ತಮ್ಮದೇ ಧರ್ಮದೊಳಗೆ ನಡೆಯುತ್ತಿರುವ ಅನಿಷ್ಟ ಪದ್ಧತಿ ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ದಲಿತರನ್ನೂ ಮನುಷ್ಯರಂತೆ ಕಂಡಿದ್ದರೆ ಮತಾಂತರ ಯಾಕೆ ನಡೆಯುತ್ತೆ ಅಂತಾ ಕಾಮನ್ಸೆನ್ಸ್ ಇರುವ ಯಾರಿಗೂ ಉತ್ತರ ಸಿಗುತ್ತಿತ್ತು ಅಂತಾರೆ ದಲಿತ ಯುವಜನರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ