ಗೌರಿಬಿದನೂರು: ಸರಕಾರಿ ಸೌಲಭ್ಯಗಳು ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ದಕ್ಕಬೇಕು ಎಂದು ಸರಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ಅವುಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಷ್ಟರ ಮಟ್ಟಿಗೆ ಲಭ್ಯವಾಗುತ್ತಿದೆ ಎಂಬುದಕ್ಕೆ 90 ವರ್ಷದ ಮುದುಕಿ ತಾಲೂಕು ಕಚೇರಿಯ ಬಳಿ ಆಧಾರ ಕಾರ್ಡ್ಗಾಗಿ ಕಾಯುತ್ತಿರುವುದೇ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಸಂಜೀವಮ್ಮ 90ರ ಹಣ್ಣು ಹಣ್ಣು ಮುದುಕಿ. ತಾಲೂಕಿನ ನಗರಗೆರೆ ಹೋಬಳಿಯ ಮುದಲೋಡು ಗೊಲ್ಲಹಳ್ಳಿ(ಎಂ.ಗೊಲ್ಲಹಳ್ಳಿ) ಗ್ರಾಮದ ನಿವಾಸಿ. ಗಂಡ ಸಂಜೀವಪ್ಪ ಮೃತಪಟ್ಟು 20 ವರ್ಷಗಳೇ ಉರುಳಿದೆ. ಅಂದಿನಿಂದ ವೃದ್ಧಾಪ್ಯ ವೇತನವನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಇದೀಗ ತನ್ನ ವೃದ್ಧಾಪ್ಯ ವೇತನವನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿನಿಂದ ಅಧಾರ್ ಕಾರ್ಡ್ಗಾಗಿ ಅಲೆದಾಟ ನಡೆಸುತ್ತಿದ್ದಾರೆ. ಆದರೂ ಈಕೆಗೆ ಇನ್ನೂ ಆಧಾರ್ ಕಾರ್ಡ್ ಲಭ್ಯವಾಗಿಲ್ಲ.
'ಸ್ವಾಮಿ... ಏನಾದರೂ ಮಾಡಿ, ನನಗೆ ಆಧಾರ್ ಕಾರ್ಡ್ ಕೊಡಿಸಿ. ಎರಡು ತಿಂಗಳುಗಳಿಂದ ವೃದ್ಧಾಪ್ಯ ವೇತನ (ಪಿಂಚಿಣಿ) ಬಂದಿಲ್ಲ. ಈ ಹಿಂದೆ 500 ರೂ. ಜೀಲಾಕುಂಟೆ ಅಂಚೆಕಚೇರಿಯಲ್ಲಿ ಪಡೆಯುತ್ತಿದ್ದೆ. ಪೋಸ್ಟ್ಮ್ಯಾನ್ 25 ರೂ. ಪಡೆದು, 475 ರೂ. ಕೊಡುತ್ತಿದ್ದ. ಆದರೆ ಇದೀಗ ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ಅದೂ ಇಲ್ಲದಂತಾಗಿದೆ. ಪದೇ ಪದೆ ಕಚೇರಿಗೆ ಬಂದು ಹೋಗುವ ಶಕ್ತಿ ನನ್ನಲ್ಲಿಲ್ಲಿ. ಇಲ್ಲಿನ ಸಿಬ್ಬಂದಿ ಸುಮ್ಮನೆ ಅಲೆದಾಡಿಸುತ್ತಾರೆ,' ಎಂದು ವೃದ್ಧೆ ಸಂಜೀವಮ್ಮ 'ವಿಕ'ದೊಂದಿಗೆ ತನ್ನ ಅಳಲನ್ನು ತೊಡಿಕೊಂಡರು.
ಸ್ಥಳಕ್ಕಾಗಮಿಸಿದ ಸಮಾಜವಾದಿ ಪಕ್ಷ ದ ಜಿಲ್ಲಾಧ್ಯಕ್ಷ ಖಾದರ್ ಸುಭಾನ್ಖಾನ್ ವೃದ್ಧೆಯ ಸಮಸ್ಯೆಯನ್ನು ವಿಚಾರಿಸಿ, ಆಕೆಯನ್ನು ಕಚೇರಿಗೆ ಅಲೆದಾಡಿಸುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಚೇರಿಯ ಸರ್ವರ್ ಸಮಸ್ಯೆಯನ್ನು ತಿಳಿಸಿದ ಸಿಬ್ಬಂದಿ, ವೃದ್ಧೆಯ ವಿಳಾಸಕ್ಕೆ ಆಧಾರ್ ಕಾರ್ಡ್ ತಲುಪಿಸುವ ಭರವಸೆ ನೀಡಿದರು.