ಆ್ಯಪ್ನಗರ

ಶಿವಮೊಗ್ಗ ಘಟನೆ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ: 5 ಜನರು ಸಾವು

ಏಕಾಏಕಿ ಕ್ವಾರಿಯಲ್ಲಿ ಜಿಲೆಟಿನ್‌ ಸ್ಪೋಟಗೊಂಡಿದ್ದು ಸ್ಪೋಟದ ರಭಸಕ್ಕೆ ಮೃತ ದೇಹಗಳು ಛಿದ್ರ ಛಿದ್ರವಾಗಿದೆ. 1000 ಅಡಿ ದೂರಕ್ಕೆ ಸ್ಪೋಟದ ತೀವ್ರತೆಗೆ ಮೃತದೇಹಗಳ ಭಾಗಗಳು ಚೆಲ್ಲಾಪಿಲ್ಲಿಯಾಗಿವೆ. ಇನ್ನು ಇತ್ತೀಚೆಗೆ ಈ ಕ್ವಾರಿ ಮೇಲೆ ಪೊಲೀಸರು, ಜಿಲ್ಲಾಡಳಿತ ದಾಳಿ ನಡೆಸಿ ಅಕ್ರಮ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

Vijaya Karnataka Web 23 Feb 2021, 10:30 am
ಚಿಕ್ಕಬಳ್ಳಾಪುರ: ಶಿವಮೊಗ್ಗದಲ್ಲಿ ನಡೆದ ಜಿಲೆಟಿನ್ ಸ್ಫೋಟ ದುರಂತ ಪ್ರಕರಣದ ನೋವು ಮಾಸುವ ಮುನ್ನವೇ ಮತ್ತೆ ರಾಜ್ಯದಲ್ಲಿ ಮತ್ತೊಂದು ಜಿಲೆಟಿನ್ ಸ್ಫೋಟ ಪ್ರಕರಣ ನಡೆದಿದೆ. ಕ್ವಾರಿಯಲ್ಲಿ ಜಿಲೆಟಿನ್‌ ಸ್ಪೋಟದಿಂದ ಐವರು ದಾರುಣವಾಗಿ ಸಾವನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್‌ ಹೋಬಳಿಯ ಹಿರೇನಾಗವೇಲಿ ಗ್ರಾಮದ ಬಳಿ ನಡೆದಿದೆ.

ಏಕಾಏಕಿ ಜಿಲೆಟಿನ್‌ನಿಂದಾಗಿ ಭಾರೀ ಸ್ಪೋಟ ನಡೆದಿದ್ದು ಸ್ಪೋಟದ ರಭಸಕ್ಕೆ ಮೃತ ದೇಹಗಳು ಛಿದ್ರ ಛಿದ್ರವಾಗಿದೆ. 1000 ಅಡಿ ದೂರಕ್ಕೆ ಸ್ಪೋಟದ ತೀವ್ರತೆಗೆ ಮೃತದೇಹಗಳ ಭಾಗಗಳು ಚೆಲ್ಲಾಪಿಲ್ಲಿಯಾಗಿವೆ. ಇನ್ನು ಇತ್ತೀಚೆಗೆ ಈ ಕ್ವಾರಿ ಮೇಲೆ ಪೊಲೀಸರು, ಜಿಲ್ಲಾಡಳಿತ ದಾಳಿ ನಡೆಸಿ ಅಕ್ರಮ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್‌ಕುಮಾರ್‌, ರಾತ್ರಿ ಸುಮಾರು 12.30ರಿಂದ 12.45ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಆದರೆ ಯಾವ ಬಗೆಯ ಸ್ಫೋಟಕಗಳು ಎಂಬುದು ಪತ್ತೆಯಾಗಿಲ್ಲ. ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಥಳದಲ್ಲೇ ಕ್ವಾರಿ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಸ್ಫೋಟ ನಡೆದಿದೆ.

ಶಿವಮೊಗ್ಗ ಡೈನಾಮೈಟ್‌ ಬ್ಲಾಸ್ಟ್: ಮೂವರು ಅರೆಸ್ಟ್‌, ಸ್ಥಳಕ್ಕೆ ಧಾವಿಸಿದ ಬಾಂಬ್‌ ಸ್ಕ್ವಾಡ್‌!

ಗುಡಿಬಂಡೆ ನಾಗರಾಜ್, ರಾಘವೇಂದ್ರ, ಗಂಗೋಜಿರಾವ್, ಮತ್ತೋರ್ವ ಸೇರಿದಂತೆ ನಾಲ್ವರ ಒಡೆತನದ ಕ್ವಾರಿ ಇದು. ನಾಲ್ವರೂ ಭ್ರಮರ ವರ್ಷಿಣಿ ಹೆಸರಿನ ಕ್ವಾರಿ ಮಾಲೀಕರು. ಫೆಬ್ರವರಿ 7ರಂದು ಕ್ವಾರಿ ಮೇಲೆ ದಾಳಿ ನಡೆಸಿ ಅಕ್ರಮ ಸ್ಫೋಟಕ ಜಪ್ತಿ ಮಾಡಿ ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕೆ ಜಿಲ್ಲಾಧಿಕಾರಿ ಲತಾ.ಆರ್, ಎಸ್ಪಿ ಮಿಥುನ್ ಕುಮಾರ್, ಎಸಿ ರಘುನಂದನ್, DySP ರವಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಸ್ಪೋಟ!

ಕಳೆದ ಕೆಲವು ದಿನಗಳ ಹಿಂದೆ ಶಿವಮೊಗ್ಗ ಹುಣಸೋಡು ಎಂಬಲ್ಲಿ ಇದೇ ರೀತಿಯ ಜಿಲೆಟಿನ್‌ ಸ್ಪೋಟ ಸಂಭವಿಸಿತ್ತು. ದೊಡ್ಡ ದೊಡ್ಡ ಬಂಡೆಗಳನ್ನು ನುಚ್ಚನೂರು ಮಾಡಲು ಜೆಲೆಟಿನ್‌ಗಳನ್ನು ಕಲ್ಲು ಕ್ವಾರಿಗಳಲ್ಲಿ ಬಳಸಲಾಗುತ್ತದೆ. ಅದೇ ರೀತಿ ಹುಣಸೋಡಿನ ಕಲ್ಲು ಕ್ವಾರಿಗೂ ಲಾರಿಯಲ್ಲಿ ಜಿಲೆಟಿನ್ ತಂದು ಇಳಿಸಲಾಗುತ್ತಿತ್ತು. ಈ ವೇಳೆ ಲಾರಿಯಲ್ಲಿದ್ದ ಜಿಲೆಟಿನ್‌ ಕೆಮಿಕಲ್‌ ರಿಯಾಕ್ಷನ್‌ನಿಂದ ಸ್ಪೋಟಗೊಂಡಿತ್ತು. ಈ ವೇಳೆ ಎಂಟು ಮಂದಿ ಸಾವನಪ್ಪಿದ್ದರು. ಆ ದೃಶ್ಯ ನಿಜಕ್ಕೂ ಬೆಚ್ಚಿಬೀಳಿಸುವಂತೆ ಇತ್ತು. ‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ