ಆ್ಯಪ್ನಗರ

ವಾಟ್ಸ್‌ಆ್ಯಪ್‌ ಮನವಿಗೆ ಸ್ಪಂದಿಸಿದ ಡಿಸಿ: ಶಿಡ್ಲಘಟ್ಟ ನಾಗರಿಕರಿಂದ ಮೆಚ್ಚುಗೆ

ಮ್ಯಾನ್‌ ಹೋಲ್‌ಗಳ ದುರಸ್ತಿಗೆ ಅಧಿಕಾರಿಗಳಿಗೆ ಹೇಳಿ ಹೇಳಿ ಸುಸ್ತಾದ ನಾಗರಿಕರು ಒಳ್ಳೆಯ ಪ್ಲಾನ್‌ ಮಾಡಿದ್ದಾರೆ. ಚಿತ್ರ ಸಮೇತ ತಮ್ಮ ಸಮಸ್ಯೆಯನ್ನು ಡಿಸಿಗೆ ವಾಟ್ಸ್‌ಆ್ಯಪ್‌ ಮಾಡಿದ್ದಾರೆ. ಬಳಿಕ ಡಿಸಿಯೂ ಇದಕ್ಕೆ ಸ್ಪಂದಿಸಿದ್ದು, ಶಿಡ್ಲಘಟ್ಟ ನಗರದ 16ನೇ ವಾರ್ಡ್‌ನಲ್ಲಿ ಬ್ಲಾಕ್‌ ಆಗಿದ್ದ ಮ್ಯಾನ್‌ ಹೋಲ್‌ಗಳನ್ನು ಗುರ್ತಿಸಿ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸಿದ್ದಾರೆ.

Vijaya Karnataka 14 Sep 2019, 2:18 pm
ಶಿಡ್ಲಘಟ್ಟ: ಮ್ಯಾನ್‌ ಹೋಲ್‌ಗಳು ಬಂದ್‌ ಆಗಿದ್ದು ದುರಸ್ತಿ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಹೇಳಿ ಹೇಳಿ ಸುಸ್ತಾದ ನಾಗರಿಕರು ಕೊನೆಗೆ ಡಿಸಿಗೆ ಮ್ಯಾನ್‌ ಹೋಲ್‌ನ ಚಿತ್ರ ಸಮೇತ ಸಮಸ್ಯೆಯನ್ನು ವಾಟ್ಸ್‌ಆ್ಯಪ್‌ ಮಾಡಿದ್ದು, ಕೂಡಲೇ ಸ್ಪಂದಿಸಿದ ಡಿಸಿ ಕ್ರಮ ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.
Vijaya Karnataka Web whatsapp


ನಗರದ ದಿಬ್ಬೂರಹಳ್ಳಿ ಮಾರ್ಗದ ಆಸುಪಾಸಿನ ವಾರ್ಡ್‌ 16ರಲ್ಲಿನ ಟಿಎಂಸಿ ಲೇಔಟ್‌, ಬಿಸಿಎಂ ಹಾಸ್ಟೆಲ್‌ ಪ್ರದೇಶ, ಬಿಲಾಲ್‌ ಮಸೀದಿ ಇರುವ ಭಾಗದಲ್ಲಿ ಒಳ ಚರಂಡಿಯ ಮ್ಯಾನ್‌ ಹೋಲ್‌ಗಳು ಬ್ಲಾಕ್‌ ಆಗಿದ್ದವು. ಇತ್ತೀಚೆಗೆ ಈ ಭಾಗದಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಮ್ಯಾನ್‌ ಹೋಲ್‌ಗಳ ಮೇಲ್ಭಾಗ ಕಾಣದಂತೆ ಡಾಂಬರಿನಿಂದ ಮುಚ್ಚಿ ಹಾಕಲಾಗಿತ್ತು.

ಮ್ಯಾನ್‌ ಹೋಲ್‌ಗಳಲ್ಲಿ ತ್ಯಾಜ್ಯ ನೀರು ಹರಿಯದೆ ಮನೆ ಮಠಕ್ಕೆ ನುಗ್ಗಿ ಇನ್ನಿಲ್ಲದ ಸಮಸ್ಯೆಗಳು ಎದುರಾಗಿತ್ತು. ಈ ಬಗ್ಗೆ ಆ ಭಾಗದ ನಾಗರಿಕರು ನಗರಸಭೆ ಅಧಿಕಾರಿಗಳಿಗೆ ಮನವಿಗೆ ಸ್ಪಂದಿಸಿರಲ್ಲಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ಜಿಲ್ಲಾಧಿಕಾರಿ ಆರ್‌. ಲತಾಗೆ ಸಮಸ್ಯೆ ಬಿಂಬಿಸುವ ಚಿತ್ರಗಳನ್ನು ವಾಟ್ಸ್‌ಆ್ಯಪ್‌ ಮಾಡಿ, ಸಮಸ್ಯೆ ನಿವಾರಿಸುವಂತೆ ಮನವಿ ಮಾಡಿದ್ದರು.

ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತರಿಗೆ ಕೂಡಲೇ ಸ್ಥಳಕ್ಕೆ ತೆರಳಿ ಮ್ಯಾನ್‌ ಹೋಲ್‌ಗಳನ್ನು ದುರಸ್ತಿಪಡಿಸಿ, ಸಮಸ್ಯೆ ಬಗೆಹರಿದಿರುವ ಬಗ್ಗೆ ಖಾತ್ರಿಪಡಿಸುವಂತೆ ಸೂಚಿಸಿದ್ದಾರೆ. ಪೌರಾಯುಕ್ತ ಜಿ.ಎನ್‌.ಚಲಪತಿ ಅವರು, ಪರಿಸರ ಅಭಿಯಂತರ ಆಂಜಿನಪ್ಪ, ಆರೋಗ್ಯ ನಿರೀಕ್ಷಕ ದಿಲೀಪ್‌ ಕುಮಾರ್‌ ಹಾಗೂ ಒಳ ಚರಂಡಿ ಕಾರ್ಯ ನಿರ್ವಹಣೆಯ ಸಿಬ್ಬಂದಿ ಮ್ಯಾನ್‌ ಹೋಲ್‌ಗಳ ದುರಸ್ತಿ ನಡೆಸಿ ಸಮಸ್ಯೆ ಬಗೆಹರಿಸಿ, ಜಿಲ್ಲಾಧಿಕಾರಿಗಳಿಗೆ ಖಾತ್ರಿಪಡಿಸಿದ್ದಾರೆ.

ನಮ್ಮ ಮನೆ ಹತ್ತಿರ ಮ್ಯಾನ್‌ ಹೋಲ್‌ ಬ್ಲಾಕ್‌ ಆಗಿ ಬಚ್ಚಲು ಟಾಯ್ಲೆಟ್‌ ನೀರು ಹರಿಯದೆ ಟಾಯ್ಲೆಟ್‌ನಲ್ಲಿಯೇ ಉಳಿದಿತ್ತು. ಈ ಬಗ್ಗೆ ನಗರಸಭೆಗೆ ಹೇಳಿದರೂ ಪ್ರಯೋಜನ ಆಗಲಿಲ್ಲ. ಮ್ಯಾನ್‌ ಹೋಲ್‌ ಕಾಣಿಸ್ತಿಲ್ಲಬಂದು ನೋಡ್ತೇವೆ ಅಂದವ್ರು ಈ ಕಡೆ ಬರಲೇ ಇಲ್ಲ. ಆ ಮೇಲೆ ಡಿಸಿಗೆ ಫೋಟೋ ತೆಗೆದು ಹಾಕಿ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡೆವು, ಕೆಲಸ ಆಯ್ತು.
-ಬಾಬಾ ಜಾನ್‌, ಟಿಎಂಸಿ ಲೇಔಟ್‌ ನಿವಾಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ