ನಂಜನಗೂಡು ಹಾಗೂ ಗುಂಡ್ಲುಪೇಟೆಯಲ್ಲಿ ಗೆಲುವಿಗೆ ಸಂಭ್ರಮಾಚರಣೆ
ಚಿಕ್ಕಬಳ್ಳಾಪುರ: ನಗರದ ಶಿಡ್ಲಘಟ್ಟ ವೃತ್ತದಲ್ಲಿ ನಂಜನಗೂಡು ಹಾಗೂ ಗುಂಡ್ಲುಪೇಟೆಯ ಎರಡು ವಿಧಾನ ಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ರಾಮಸ್ವಾಮಿ ಮಾತನಾಡಿ, ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಜನತೆ ಅತ್ಯಂತ ಹೆಚ್ಚು ಅಂತರದ ಬಹುಮತದಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ಬಿಜೆಪಿ ಪಕ್ಷ ಹಾಗೂ ಯಡಿಯೂರಪ್ಪ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ದೇಶ ವ್ಯಾಪಿ ಮೋದಿ ಅಲೆ ಇದೆ. ಪಂಚರಾಜ್ಯಗಳಂತೆಯೇ ಕರ್ನಾಟಕ ರಾಜ್ಯದಲ್ಲಿಯೂ ಮುಂದಿನ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ಬೀಗುತ್ತಿದ್ದ ಬಿಜೆಪಿಗೆ ಇದು ಪಾಠವಾಗಬೇಕಿದೆ ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ ಶ್ರೀನಿವಾಸ್ ಮಾತನಾಡಿ, ನಂಜನಗೂಡಿನ ವಿಧಾನಸಭೆ ಕ್ಷೇತ್ರದಲ್ಲಿ 21 ಸಾವಿರ ಹಾಗೂ ಗುಂಡ್ಲುಪೇಟೆ ಕ್ಷೇತ್ರದಲ್ಲಿ 11 ಸಾವಿರದ ಬಾರಿ ಅಂತರದಲ್ಲಿ ಕಾಂಗ್ರೆಸ್ ಜಯಗಳಿಸಿರುವುದು ಪಕ್ಷ ದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಮಾಡಿರುವ ಜನಪರ ಅಭಿವೃದ್ಧಿ ಕಾರ್ಯಗಳಿಗೆ ಸಂದ ಜಯ ಇದಾಗಿದೆ. ಮುಂದಿನ ವಿಧಾನ ಸಭೆ ಚುನಾವಣೆಯ ಕಾಂಗ್ರೆಸ್ ಗೆಲುವಿಗೆ ಈ ಉಪಚುನಾವಣೆಯ ಗೆಲುವು ನಾಂದಿ ಹಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ತಾಲೂಕು ಪಂಚಾಯತಿ ಸದಸ್ಯರಾದ ಸುಬ್ಬರಾಯಪ್ಪ, ತಿರುಮಲಪ್ಪ, ಎಪಿಎಂಸಿ ಉಪಾಧ್ಯಕ್ಷ ಜಾಲಪ್ಪ, ಮಾಜಿ ತಾಲೂಕು ಪಂಚಾಯಿತಿ ಅದ್ಯಕ್ಷ ಕೃಷ್ಣಮೂರ್ತಿ, ನಗರ ಪ್ರಾಧಿಕಾರ ಸದಸ್ಯ ಜಾವಿದ್, ಗಣಿತಹಳ್ಳಿ ವೆಂಕಟೇಶ್, ಮುಖಂಡರಾದ ಶ್ರೀನಿವಾಸ, ವರದರಾಜು, ಗಂಗರಾಜು, ಶ್ರೀರಾಮ್, ಕಣಿಜೇನಹಳ್ಳಿ ಸುರೇಶ್, ನಂದಿ ಮುನಿಸ್ವಾಮಿ ಮತ್ತಿತರರು ಭಾಗವಹಿಸಿದ್ದರು.