ಆ್ಯಪ್ನಗರ

ಮೋದಿ ಹತಾಶರಾಗಿ ಎಚ್‌ಡಿಕೆ ವಿರುದ್ಧ ಯದ್ವಾತದ್ವಾ ಆರೋಪ

ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ದೇಶದಲ್ಲಿ ಈ ಬಾರಿ ಬಿಜೆಪಿ ಸೋಲುತ್ತೆ ಎಂದು ಹತಾಶರಾಗಿರುವ ಅವರು ಯದ್ವಾತದ್ವಾ ಮಾತನಾಡುತ್ತಿದ್ದಾರೆ ಎಂದು ಸಂಸದ ವೀರಪ್ಪಮೊಯ್ಲಿ ಲೇವಡಿ ಮಾಡಿದರು.

Vijaya Karnataka 14 Apr 2019, 3:19 pm
ಚಿಕ್ಕಬಳ್ಳಾಪುರ: ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ದೇಶದಲ್ಲಿ ಈ ಬಾರಿ ಬಿಜೆಪಿ ಸೋಲುತ್ತೆ ಎಂದು ಹತಾಶರಾಗಿರುವ ಅವರು ಯದ್ವಾತದ್ವಾ ಮಾತನಾಡುತ್ತಿದ್ದಾರೆ ಎಂದು ಸಂಸದ ವೀರಪ್ಪಮೊಯ್ಲಿ ಲೇವಡಿ ಮಾಡಿದರು.
Vijaya Karnataka Web modi is desperate accused cm
ಮೋದಿ ಹತಾಶರಾಗಿ ಎಚ್‌ಡಿಕೆ ವಿರುದ್ಧ ಯದ್ವಾತದ್ವಾ ಆರೋಪ


ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ ರಫೇಲ್‌ನ ಸಂಪೂರ್ಣ ದಾಖಲೆ ನೀಡುವಂತೆ ಕೇಂದ್ರ ಸರಕಾರಕ್ಕೆ ಈಗಾಗಲೇ ಸೂಚನೆ ನೀಡಿದೆ. ಇದು ಪ್ರಧಾನಿ ನರೇಂದ್ರ ಮೋದಿಗೆ ದೊಡ್ಡ ಆಘಾತ ಹಾಗೂ ಕಪಾಳಮೋಕ್ಷ ಮಾಡಿದಂತಾಗಿದೆ. ಇದರ ಜತೆಗೆ ಐಟಿ ದಾಳಿಯನ್ನು ರಾಜಕೀಯ ದಾಳವನ್ನಾಗಿ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆಯೂ ಕೇಂದ್ರ ಚುನಾವಣಾ ಆಯೋಗವು ಹಣಕಾಸು ಕಾರ್ಯದರ್ಶಿಯನ್ನು ಕರೆದು ಸಮನ್ಸ್‌ ನೀಡಿ, ವರದಿ ನೀಡುವಂತೆ ಸೂಚನೆ ನೀಡಿದ್ದು, ಇವೆಲ್ಲವೂ ಅವರಿಗೆ ಮೇಲಿಂದ ಮೇಲೆ ಕಪಾಳ ಮೋಕ್ಷ ಮಾಡಿಸಿಕೊಳ್ಳುವಂತಾಗಿದೆ ಎಂದು ವ್ಯಂಗ್ಯವಾಡಿದರು.

ದುರಾಡಳಿತದಿಂದ ಬ್ಯಾಂಕ್‌ಗಳು ದಿವಾಳಿ: ದೇಶದ ನಾನಾ ಬ್ಯಾಂಕ್‌ಗಳಿಂದ ಲಕ್ಷಾಂತರ ಕೋಟಿ ರೂ. ಸಾಲ ತೆಗೆದುಕೊಂಡ ಬಂಡವಾಳಗಾರರು ವಿದೇಶದಲ್ಲಿ ಹೋಗಿ ಆರಾಮಾಗಿದ್ದಾರೆ. ಅವರನ್ನು ತಡೆಯುವ, ಸಾಲದ ಹಣವನ್ನು ವಾಪಸ್‌ ತರುವ ಯಾವುದೇ ಪ್ರಯತ್ನ ಕೇಂದ್ರ ಸರಕಾರ ಮಾಡಿಲ್ಲ. ಅದಕ್ಕಿಂತ ಮುಖ್ಯವಾಗಿ ನಾಲ್ಕೂವರೆ ಲಕ್ಷ ಕೋಟಿ ರೂ. ಬ್ಯಾಂಕ್‌ಗಳಲ್ಲಿನ ಉದ್ಯಮಿಗಳ ಸಾಲ ಮನ್ನಾ ಮಾಡಿರುವ ಮೋದಿಗೆ ರೈತರ ಸಾಲಮನ್ನಾ ಮಾಡಲು ಹಣವಿಲ್ಲ ಎಂದು ಆರೋಪಿಸಿದರು.

ದೇಶದ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಶೇ.2ರಷ್ಟಿದ್ದ ಎನ್‌ಪಿಎ ಅನ್ನು ಶೇ.15ಕ್ಕೆ ಏರಿಕೆ ಮಾಡಿದ ಪರಿಣಾಮ ಬ್ಯಾಂಕ್‌ಗಳಿಗೆ ಸುಮಾರು 15 ಲಕ್ಷ ಕೋಟಿ ರೂ. ಹೊರೆಯಾಗಿದೆ. ಇದರಿಂದ ಅನೇಕ ಸಣ್ಣ ಸಣ್ಣ ಬ್ಯಾಂಕ್‌ಗಳು ಬೇರೆ ಬೇರೆ ಬ್ಯಾಂಕ್‌ಗಳ ಜತೆಗೆ ವಿಲೀನವಾಗುತ್ತಿವೆ. ಕೆಲವು ಬ್ಯಾಂಕ್‌ಗಳು ದಿವಾಳಿಯಾಗುವ ಹಂತಕ್ಕೆ ತಲುಪಿವೆ. ಇದಲ್ಲದೆ ಇತರೆ 11 ರಾಷ್ಟ್ರೀಕೃತ ಬ್ಯಾಂಕ್‌ಗಳ ಮೇಲೆ ಕೇಂದ್ರ ಸರಕಾರ ಕೆಲವು ಕಠಿಣ ನಿರ್ಬಂಧಗಳನ್ನು ಹೇರಿರುವುದರಿಂದ ಅವರು ಯಾವುದೇ ಸಾಲ ಕೊಡುವ ಸ್ಥಿತಿಯಲ್ಲಿಲ್ಲ. ಮುಂದಿನ 5 ವರ್ಷ ಬಿಜೆಪಿ ಆಡಳಿತ ಇದೇ ರೀತಿ ಮುಂದುವರಿದರೆ ದೇಶದ ಬ್ಯಾಂಕ್‌ಗಳನ್ನು ವಿದೇಶದ ಬ್ಯಾಂಕ್‌ಗಳಿಗೆ ಮಾರಾಟ ಮಾಡ್ತಾರೆ ಇಲ್ಲವೆ, ಮುಚ್ಚಿ ಹೋಗುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮೋದಿ ಮೋಡಿ ನಡೆಯಲ್ಲ: ಈ ಬಾರಿ ಮೋದಿಯ ಮೋಡಿ ರಾಜ್ಯದಲ್ಲೂ, ದೇಶದಲ್ಲೂ ನಡೆಯುವುದಿಲ್ಲ. ನಾಲ್ಕೈದು ತಿಂಗಳ ಹಿಂದೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಘಡನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯವರು ಸೋತು ಸುಣ್ಣಾಗಿದ್ದಾರೆ. ಅದೇ ಟ್ರೆಂಡ್‌ ಇನ್ನೂ ಮುಂದುವರಿಯುತ್ತದೆ. ಚಿಕ್ಕಬಳ್ಳಾಪುರದಲ್ಲೂ ಬಿಜೆಪಿ ಸೋಲು ಅನುಭವಿಸುತ್ತಾರೆ ಎಂದರು.

ಚಿಕ್ಕಬಳ್ಳಾಪುರ ಹೊರತುಪಡಿಸಿ ಬೇರೆ ಯಾವ ಕ್ಷೇತ್ರದಲ್ಲೂ ಜೆಡಿಎಸ್‌-ಕಾಂಗ್ರೆಸ್‌ ನಡುವೆ ಯಾವುದೇ ವಿರೋಧ, ಭಿನ್ನಾಭಿಪ್ರಾಯ ಇಲ್ಲ. ಎಲ್ಲವನ್ನೂ ಶಮನಗೊಳಿಸಲಾಗಿದೆ. ಮೊದಲಿಂದಲೂ ಸಾಕಷ್ಟು ವಿರೋಧವಾಗಿದ್ದ ಈ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಒಮ್ಮೆಲೆ ಹೊಂದಾಣಿಕೆಯಾಗುವುದು ಸ್ಪಲ್ಪ ಸಮಯ ಹಿಡಿಯಲಿದೆ. ಹಾಗಾಗಿ ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವ ಕೆಲಸ ಮಾಡುತ್ತಿದ್ದೇವೆ. ಕುಮಾರಸ್ವಾಮಿ ಅವರ ಅಧಿಧಿಕಾರ ಭದ್ರತೆಯ ಹಿತದೃಷ್ಟಿಯಿಂದ ಇಲ್ಲಿನ ಸ್ಥಳೀಯ ಜೆಡಿಎಸ್‌ನವರೂ ನಮ್ಮ ಜತೆಗೆ ಸೇರಿ ಕೆಲಸ ಮಾಡಬೇಕಾಗಿದೆ ಎಂದು ಪರೋಕ್ಷವಾಗಿ ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ