ಆ್ಯಪ್ನಗರ

ಫುಟ್‌ಪಾತ್‌ ತೆರವಿಗೆ ಮುಂದಾದ ನಗರಸಭೆ

ನಗರದ ಮುಖ್ಯರಸ್ತೆಯ ಪಕ್ಕದಲ್ಲಿ ತಳ್ಳುವ ಗಾಡಿಗಳೂ ಸೇರಿದಂತೆ ಇನ್ನಿತರ ಅಂಗಡಿಗಳನ್ನಿಟ್ಟು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಕಿರಿಕಿರಿ ಉಂಟು ಮಾಡುತ್ತಿದ್ದ ಫುಟ್‌ಪಾತ್‌ ಅಂಗಡಿಗಳನ್ನು ಮಂಗಳವಾರ ಬೆಳಗ್ಗೆ ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.

Vijaya Karnataka 24 Jul 2019, 5:00 am
ಚಿಕ್ಕಬಳ್ಳಾಪುರ : ನಗರದ ಮುಖ್ಯರಸ್ತೆಯ ಪಕ್ಕದಲ್ಲಿ ತಳ್ಳುವ ಗಾಡಿಗಳೂ ಸೇರಿದಂತೆ ಇನ್ನಿತರ ಅಂಗಡಿಗಳನ್ನಿಟ್ಟು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಕಿರಿಕಿರಿ ಉಂಟು ಮಾಡುತ್ತಿದ್ದ ಫುಟ್‌ಪಾತ್‌ ಅಂಗಡಿಗಳನ್ನು ಮಂಗಳವಾರ ಬೆಳಗ್ಗೆ ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.
Vijaya Karnataka Web municipality ahead of footpath clearance
ಫುಟ್‌ಪಾತ್‌ ತೆರವಿಗೆ ಮುಂದಾದ ನಗರಸಭೆ


ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾದಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಕಾಂಪೌಂಡ್‌ಗೆ ಹೊಂದಿಕೊಂಡತ್ತಿದ್ದ ಹತ್ತಾರು ಅಂಗಡಿಗಳಿಂದ ಬಸ್‌ ನಿಲ್ದಾಣಕ್ಕೆ ಸಾಗುವ ಪ್ರಯಾಣಿಕರಿಗೆ ಹಾಗೂ ವಾಹನ ಸವಾರರಿಗೆ ನಿತ್ಯ ತೊಂದರೆ ಮಾಡುತ್ತಿದ್ದರು. ಇನ್ನು ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ಪ್ರಸ್ತುತ ನಿರ್ಮಾಣವಾಗುತ್ತಿರುವ ಗಾಂಧಿನಿಲಯಗಳಿಗಿದ್ದ ಪ್ರವೇಶ ದ್ವಾರಗಳಲ್ಲೂ ಅಂಗಡಿಗಳನ್ನಿಟ್ಟು ಗ್ರಂಥಾಲಯಕ್ಕೆ ಹೋಗುವವರಿಗೂ ಅಡಚಣೆ ಮಾಡುತ್ತಿದ್ದರು.

ಸುಗಮ ಸಂಚಾರಕ್ಕೆ ಅಡಚಣೆ:
ಇನ್ನು ಇದೇ ಜಾಗದಲ್ಲಿ ಪೆರೇಸಂದ್ರ, ಗುಡಿಬಂಡೆ, ಬಾಗೇಪಲ್ಲಿ ಸೇರಿದಂತೆ ಇತರೆ ಪ್ರದೇಶಗಳಿಗೆ ತೆರಳುವ ಖಾಸಗಿ ಬಸ್‌ಗಳು ಮತ್ತು ಇತರೆ ವಾಹನಗಳನ್ನು ನಿಲ್ಲಿಸುತ್ತಿದ್ದ ಪರಿಣಾಮ ಬಿ.ಬಿ. ರಸ್ತೆಯಲ್ಲಿ ಸುಗಮವಾಗಿ ಸಂಚರಿಸಲು ಅಸಾಧ್ಯವಾಗಿತ್ತು. ಅತಿಯಾದ ಜನಸಂದಣಿಯಿಂದ ಈಗಾಗಲೇ ಹಲವಾರು ಅಪಘಾತಗಳೂ ನಡೆದಿದ್ದವು. ಹಾಗಾಗಿ ಇಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸುವದಕ್ಕೆ ತಡೆಯೊಡ್ಡುವಂತೆ ಮತ್ತು ಫುಟ್‌ಪಾತ್‌ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಇನ್ನು ಸಂಜೆ ವೇಳೆ ಬಜ್ಜಿ ಬೋಂಡಾ ಅಂಗಡಿಗಳು ಜನರ ಓಡಾಟಕ್ಕೆ ಮಾತ್ರವಲ್ಲದೆ ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದ್ದವು.

ಕಾರ್ಯಾಚರಣೆ: ನಗರಸಭೆ ಆಯುಕ್ತ ಉಮಾಕಾಂತ್‌ ನೇತೃತ್ವದಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು.

ನಗರಸಭೆಯ ಜೆಸಿಬಿ ಯಂತ್ರಗಳು ತಳ್ಳುವ ಗಾಡಿಗಳ ಜತೆಗೆ ತಗಡಿನ ಅಂಗಡಿಗಳನ್ನೂ ತೆರವುಗೊಳಿಸಿದರು. ತೆರವು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ತಳ್ಳು ಗಾಡಿಗಳ ಮಾಲೀಕರು ತಮ್ಮ ವಾಹನಗಳನ್ನು ಕೊಂಡೊಯ್ದರು. ಇನ್ನು ಹಲವರು ಕಾರ್ಯಾಚರಣೆಗೆ ಅಡ್ಡಿಪಡಿಸಲು ಮುಂದಾದರು. ಆದರೆ ಪೊಲೀಸರು ಮಧ್ಯೆ ಪ್ರವೇಶಿಸಿ ಅಂಗಡಿಗಳ ಮಾಲೀಕರ ವಿರೋಧವನ್ನು ಹತ್ತಿಕ್ಕಿದರು. ಕೇವಲ ಒಂದು ಗಂಟೆ ಕಾರ್ಯಾಚರಣೆಯಲ್ಲಿಯೇ ಎಲ್ಲ ಅಂಗಡಿಗಳ ತೆರವು ಪೂರ್ಣಗೊಳಿಸಲಾಯಿತು.

ಎಂಜಿ, ಬಜಾರ್‌ ರಸ್ತೆ ತೆರವು ಯಾವಾಗ?: ಬಿಬಿ ರಸ್ತೆಯಲ್ಲಿ ಅಂಗಡಿಗಳನ್ನು ತೆರವುಗೊಳಿಸಿರುವ ನಗರಸಭೆ ಕ್ರಮವನ್ನು ಸ್ವಾಗತಿಸಿರುವ ಸಾರ್ವಜನಿಕರು, ಅದೇ ರೀತಿಯಲ್ಲಿ ನಗರದ ಗಂಗಮ್ಮನಗುಡಿ ರಸ್ತೆ, ಬಜಾರ್‌ ರಸ್ತೆ ಮತ್ತು ಎಂಜಿ ರಸ್ತೆಗಳಲ್ಲಿ ಒತ್ತುವರಿ ತೆರವುಗೊಳಿಸುವಂತೆ ಮನವಿ ಮಾಡಿದರು.

ಕಾಮಗಾರಿ ಸ್ಥಗಿತ: ಎಂಜಿ ರಸ್ತೆ ಕಾಮಗಾರಿ ಕಳೆದ ಒಂದು ವರ್ಷದಿಂದ ನನೆಗುದಿಗೆ ಬಿದ್ದಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರವೇ ಸಂಕಷ್ಟವಾಗಿ ಪರಿಣಮಿಸಿದೆ. ಅತಿಹೆಚ್ಚು ವಾಹನ ದಟ್ಟಣೆ ಹೊಂದಿರುವ ರಸ್ತೆಯಾಗಿದ್ದರೂ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವ ಕಾರಣ ಸಮಸ್ಯೆ ಎದುರಾಗಿದ್ದು, ಇಂತಹ ರಸ್ತೆಯ ಇಕ್ಕೆಲಗಳಲ್ಲಿ ಹಳೇ ಸೋಪಾ, ಕೋಳಿ ಮರಿ, ಗಿಡಗಳ ಮಾರಾಟ ಸೇರಿದಂತೆ ಇತರೆ ವ್ಯಾಪಾರಿಗಳು ರಸ್ತೆ ಆಕ್ರಮಿಸಿಕೊಂಡಿರುವುದು ಸಂಚಾರಕ್ಕೆ ಅಡ್ಡಿ ಮಾಡಿದೆ.

ಮೊದಲೇ ಕಿರಿದಾಗಿರುವ ಬಜಾರ್‌ ರಸ್ತೆ ಬಹುತೇಕ ಫುಟ್‌ಪಾತ್‌ ವ್ಯಾಪಾರಿಗಳ ಪಾಲಾಗಿದೆ. ಇದರಿಂದಾಗಿ ವಾಹನಗಳಿರಲಿ, ಜನರ ಓಡಾಟಕ್ಕೂ ಸಮಸ್ಯೆ ಆಗಿದ್ದು, ಈ ರಸ್ತೆಯ ಒತ್ತುವರಿ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ನಾಗರಿಕರ ಒತ್ತಾಯ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣದ ಮುಂಭಾಗದಲ್ಲಿದ್ದ ಎಲ್ಲ ಫುಟ್‌ಪಾತ್‌ ಅಂಗಡಿಗಳನ್ನೂ ಮಂಗಳವಾರ ತೆರವುಗೊಳಿಸಲಾಗಿದೆ. ಅದೇ ರೀತಿ ಎಂಜಿ ರಸ್ತೆಯ ಫುಟ್‌ಪಾತ್‌ನ್ನು ಶೀಘ್ರದಲ್ಲೇ ತೆರವುಗೊಳಿಸುವ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನವು ಮಾಡಿಕೊಡಲಾಗುವುದು.
-ಉಮಾಕಾಂತ್‌ | ನಗರಸಭೆ ಪೌರಾಯುಕ್ತ, ಚಿಕ್ಕಬಳ್ಳಾಪುರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ