ಮುಖ್ಯಾಂಶಗಳು
ಪರೀಕ್ಷಾ ಕೇಂದ್ರಕ್ಕೆ ಬೀಗ ಜಡಿದು ನಾಪತ್ತೆ
ವಿವಿಧೆಡೆ ಪರೀಕ್ಷಾ ಕೇಂದ್ರದತ್ತ ಸುಳಿಯದ ಕಲಿಕಾರ್ಥಿಗಳು
ಮಕ್ಕಳಿಂದ ಪರೀಕ್ಷೆ ಬರೆಸಲು ಮುಂದಾಗಿದ್ದ ಸಿಬ್ಬಂದಿ
ಚಿಕ್ಕಬಳ್ಳಾಪುರ: ನವಸಾಕ್ಷರರಿಗೆ ಭಾನುವಾರ ನಡೆದ ಮೌಲ್ಯಮಾಪನ ಪರೀಕ್ಷೆ ಹಲವು ಗೊಂದಲಕ್ಕೆಡೆ ಮಾಡಿಕೊಟ್ಟಿದೆ. ಪರೀಕ್ಷಾ ಕೇಂದ್ರಗಳು ಕೆಲವೆಡೆ ಬಾಗಿಲು ತೆರೆಯದ, ಮಕ್ಕಳಿಂದ ಪರೀಕ್ಷೆ ಬರೆಸಲು ಮುಂದಾಗಿದ್ದ, ಮಧ್ಯಾಹ್ನವಾದರೂ ಕೇಂದ್ರಗಳತ್ತ ಸುಳಿಯದೆ ಇದ್ದದ್ದು ಮತ್ತಿತರ ಅವ್ಯವಸ್ಥೆ, ಅಕ್ರಮಕ್ಕೆ ಸಾಕ್ಷಿಯಾಗಿದೆ.
ಸಾಕ್ಷರ ಭಾರತ್ ಕಾರ್ಯಕ್ರಮದಡಿ ಕಲಿಕಾರ್ಥಿ(ನವಸಾಕ್ಷರರು)ಗಳಿಗೆ ದೇಶದಾದ್ಯಂತ ಮೌಲ್ಯಮಾಪನ ಪರೀಕ್ಷೆ ನಡೆಯಿತು. ರಾಷ್ಟ್ರೀಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಮತ್ತು ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆ(ಎನ್ಐಒಎಸ್) ಸಹಯೋಗದಲ್ಲಿ ನವಸಾಕ್ಷರರು ಅಥವಾ ಕಲಿಕಾರ್ಥಿಗಳಿಗೆ ಈ ಪರೀಕ್ಷೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಲ್ಲಿ 2016ನೇ ಸಾಲಿನ ಆಗಸ್ಟ್ನಲ್ಲಿ ಮೊದಲ ಹಂತದಲ್ಲಿ ನಡೆದ ಪರೀಕ್ಷೆಗೆ ಗೈರಾದ 28,509 ಮಂದಿ ಹಾಗೂ 2ನೇ ಹಂತದಲ್ಲಿ ಕಲಿಕೆಗೆ ಒಳಪಟ್ಟ 67151 ಮಂದಿ ಸೇರಿ ಜಿಲ್ಲೆಯಲ್ಲಿ 95661 ಮಂದಿ ಪರೀಕ್ಷೆ ಎದುರಿಸುವ ಗುರಿ ಹೊಂದಲಾಗಿತ್ತು. 586 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ತಲಾ ಒಬ್ಬರಂತೆ 586 ಮಂದಿ ಮುಖ್ಯ ಅಧೀಕ್ಷಕರು, 298 ಮಂದಿ ವೀಕ್ಷರು, 791 ಮಂದಿ ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿತ್ತು. ಇಷ್ಟೆಲ್ಲಾ ವ್ಯವಸ್ಥೆ ಮಾಡಿಕೊಂಡು ನಡೆಸಲಾದ ಪರೀಕ್ಷೆ ಗೊಂದಲಕ್ಕೆಡೆಮಾಡಿಕೊಟ್ಟಿತ್ತು.
ನಾಪತ್ತೆಯಾಗಿದ್ದ ಸಿಬ್ಬಂದಿ:ತಾಲೂಕಿನ ತಿಪ್ಪೇನಹಳ್ಳಿ ಹಿರಿಯ ಪ್ರಾಥಮಿಕ ಸರಕಾರಿ ಶಾಲೆಯಲ್ಲೂ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮಧ್ಯಾಹ್ನ 12ರ ಸಮಯದಲ್ಲೂ ಪರೀಕ್ಷೆ ನಡೆಸಬೇಕಿದ್ದ ಕೊಠಡಿಗಳಿಗೆ ಬೀಗ ಜಡಿಯಲಾಗಿತ್ತು. ನಿಯೋಜಿಸಿದ್ದ ಸಿಬ್ಬಂದಿಯೂ ಅಲ್ಲಿರಲಿಲ್ಲ.
ಪರೀಕ್ಷೆ ಬರೆಯಲು ಬರಬೇಕೆಂದು ಹೇಳಿದ್ದರು. ಶಾಲೆ ಬಳಿ ಬರುವ ವೇಳೆಗೆ, ಮಕ್ಕಳಿಂದ ಪರೀಕ್ಷೆ ಬರೆಸಲು ಮುಂದಾಗಿ ಕೆಲವರ ಕೈಗೆ ಸಿಕ್ಕಿಬಿದ್ದು, ಭಯಪಟ್ಟು ಪರೀಕ್ಷಾ ಕೇಂದ್ರಕ್ಕೆ ಬೀಗ ಜಡಿದು ನಾಪತ್ತೆಯಾಗಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಕೆಲ ಪಿಯುಸಿ ವಿದ್ಯಾರ್ಥಿಗಳು ಮಾಹಿತಿ ನೀಡಿದರು.
ಪರೀಕ್ಷೆಗೆ ನಿಯೋಜನೆಗೊಂಡ ಸಿಬ್ಬಂದಿ ದ್ವಿಚಕ್ರ ವಾಹನವೂ ಶಾಲೆ ಬಳಿಯೆ ಬಿಟ್ಟು ಹೋಗಿದ್ದಾರೆ. ಎಲ್ಲಿ ಹೋದರೆಂದು ತಿಳಿಯದಾಗಿದೆ ಎಂದು ವಿವರಿಸಿದರು. ಹೆದರಿ ಓಡಿ ಹೋಗುವಂತ ತಪ್ಪು ಏನು ಮಾಡಿದ್ದಾರೆ ಎಂದು ಕಲಿಕಾರ್ಥಿಗಳು ಪರೀಕ್ಷೆ ಬರೆಯಬೇಕಿತ್ತೆಂಬ ವಿಷಯವನ್ನು ಅರಿಯದ ಆ ವಿದ್ಯಾರ್ಥಿಗಳು ತಿಳಿಸಿದರು.
ಕೇಂದ್ರದತ್ತ ಒಬ್ಬರು ಸುಳಿಯಲಿಲ್ಲ:ಪೋಶೆಟ್ಟಿಹಳ್ಳಿ ಗ್ರಾಮದಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 12 ಆದರೂ, ಒಬ್ಬ ಕಲಿಕಾರ್ಥಿಯೂ ಸುಳಿಯಲಿಲ್ಲ.
ಶಾಲೆಯ ಎರಡು ಕೊಠಡಿಯಲ್ಲಿ ಪರೀಕ್ಷೆಗೆ ಸಕಲ ವ್ಯವಸ್ಥೆ ಮಾಡಲಾಗಿತ್ತು. ಇಬ್ಬರು ಕೊಠಡಿ ಮೇಲ್ವಿಚಾರಕರು, 2 ಮುಖ್ಯ ಅಧೀಕ್ಷಕರನ್ನು ನಿಯೋಜನೆ ಮಾಡಲಾಗಿತ್ತು. 300 ಮಂದಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಬೆಳಗ್ಗೆ 10.30ರಿಂದ ಸಂಜೆ 4.30ರವರೆಗೂ ಪರೀಕ್ಷೆ ಬರೆಯಲು ಅವಕಾಶವಿತ್ತು. ಪರೀಕ್ಷೆ ನಡೆಸುವ ಕೊಠಡಿ ಸಮೀಪವಿರುವ ಮತ್ತೊಂದು ಕೊಠಡಿಯಲ್ಲಿ ಶಾಲೆ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಯುತ್ತಿತ್ತು. 11ರವೇಳೆಗೆ, ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಲಾಯಿತು. ಕಲಿಕಾರ್ಥಿಗಳು ಬರುವರೆಂಬ ನಿರೀಕ್ಷೆಯಲ್ಲಿ ಸಿಬ್ಬಂದಿ ಕಾದು ಕುಳಿತರು. ಆದರೆ, ಮಧ್ಯಾಹ್ನವಾದರೂ ಒಬ್ಬರು ಆ ಪರೀಕ್ಷಾ ಕೇಂದ್ರದತ್ತ ಸುಳಿಯಲಿಲ್ಲ.
ಹೀಗೆ ಹಲವು ಗೊಂದಲ, ಕೆಲವೆಡೆ ಅಕ್ರಮಕ್ಕೆ ಮುಂದಾಗಿದ್ದರ ನಡುವೆ ಜಿಲ್ಲೆಯಾದ್ಯಂತೆ ಪರೀಕ್ಷೆ ನಡೆಯಿತು. ಆದರೆ, ಇಂತಹ ದೂರು ಚಿಕ್ಕಬಳ್ಳಾಪುರ ತಾಲೂಕಿಗೆ ಮಾತ್ರ ಸೀಮಿತವಾಗದೆ, ಚಿಂತಾಮಣಿ ಮತ್ತಿತರ ತಾಲೂಕಿನಲ್ಲೂ ಕೇಳಿಬಂತು.
-------
ಕಲಿಕಾರ್ಥಿಗಳು ಸ್ವಯಂ ಪ್ರೇರಣೆಯಿಂದ ಪರೀಕ್ಷೆ ಬರೆಯಲು ಬರುವುದಿಲ್ಲ. ಅವರನ್ನು ಕರೆತರಬೇಕಾಗುತ್ತದೆ. ಇದಕ್ಕಾಗಿ ಕೆಲವರನ್ನು ನಿಯೋಜನೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರ ಬಾಗಿಲು ತೆರೆದಿರಲಿಲ್ಲ, ಸಿಬ್ಬಂದಿ ಅಲ್ಲಿರಲಿಲ್ಲ ಎಂಬುದರ ಕುರಿತು ಬಾಗೇಪಲ್ಲಿ ಮತ್ತಿತರೆಡೆ ಭೇಟಿ ನೀಡಿದ್ದ ಕಾರಣ, ಇನ್ನೂ ಗಮನಕ್ಕೆ ಬಂದಿಲ್ಲ. ಈ ಕುರಿತು ಸಂಬಂಧಪಟ್ಟವರನ್ನು ವಿಚಾರಣೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಶಿವಲಿಂಗಯ್ಯ, ವಯಸ್ಕರ ಜಿಲ್ಲಾ ಶಿಕ್ಷಣಾಧಿಕಾರಿ.