ಆ್ಯಪ್ನಗರ

ಹಾಗೆ ಬಂದು ಹೀಗೆ ಮರೆಯಾದ ಮಳೆರಾಯ!

ಕಳೆದ ಏಳೆಂಟು ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾಗುತ್ತಿರುವ ಜಿಲ್ಲೆಯ ರೈತರಿಗೆ ಮಳೆರಾಯ ಈ ವರ್ಷವೂ ಕರುಣೆ ತೋರುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಈ ಸಲವೂ ಬರದ ಕಾರ್ಮೋಡ ಆವರಿಸಿದ್ದು, ರೈತನಲ್ಲಿ ಮತ್ತೊಂದು ಬರದ ಆತಂಕ ಕಾಡುತ್ತಿದೆ.

Vijaya Karnataka 21 Jun 2019, 3:47 pm
ನೀರಿಕ್ಷಿತ ಮಳೆಯಾಗದೇ ಬಿತ್ತನೆಗೆ ಹಿನ್ನಡೆ | ಮತ್ತೊಂದು ಬಾರಿ ಬರದ ಆತಂಕದಲ್ಲಿ ರೈತ
Vijaya Karnataka Web no rain since many days
ಹಾಗೆ ಬಂದು ಹೀಗೆ ಮರೆಯಾದ ಮಳೆರಾಯ!


ಎಂ.ಕೃಷ್ಣ ಕೆಎನ್‌ಹಳ್ಳಿ ಚಿಕ್ಕಬಳ್ಳಾಪುರ


ಕಳೆದ ಏಳೆಂಟು ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾಗುತ್ತಿರುವ ಜಿಲ್ಲೆಯ ರೈತರಿಗೆ ಮಳೆರಾಯ ಈ ವರ್ಷವೂ ಕರುಣೆ ತೋರುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಈ ಸಲವೂ ಬರದ ಕಾರ್ಮೋಡ ಆವರಿಸಿದ್ದು, ರೈತನಲ್ಲಿ ಮತ್ತೊಂದು ಬರದ ಆತಂಕ ಕಾಡುತ್ತಿದೆ.

ರಾಜ್ಯದಲ್ಲಿ ಈಗಾಗಲೇ ಮುಂಗಾರು ಆರಂಭಗೊಳ್ಳಬೇಕಿತ್ತು. ಆದರೆ, ಎರಡು ವಾರ ಕಳೆದು ಮೂರನೇ ವಾರಕ್ಕೆ ಕಾಲಿಡುತ್ತಿದ್ದರೂ, ಮುಂಗಾರು ಮಳೆ ಇನ್ನೂ ಮುಂದಕ್ಕೆ ಸಾಗುತ್ತಿದ್ದು, ಇದರಿಂದ ಬಿತ್ತನೆಗೂ ಸಾಕಷ್ಟು ಹಿನ್ನಡೆಯಾಗಿದೆ.

ಕಣ್ಮರೆಯಾದ ಮಳೆ: ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲಿ ನಾಲ್ಕೈದು ಬಾರಿ ಉತ್ತಮ ಮಳೆಯಾಗಿ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿತ್ತು. ಅದು ಮುಂಗಾರು ಹಂಗಾಮಿನಲ್ಲಿ ಇನ್ನಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು. ಆದರೆ, ಕಳೆದ ಎರಡು ವಾರದಿಂದ ಮಳೆ ಜಿಲ್ಲೆಯಿಂದ ಕಣ್ಮರೆಯಾಗಿದೆ. ಬಿಸಿಲ ತಾಪ ಹೆಚ್ಚಾಗತೊಡಗಿದೆ.

ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದರೂ ಮಳೆಯಾಗುತ್ತಿಲ್ಲ. ರಾಗಿ, ಮುಸುಕಿನ ಜೋಳ, ನೆಲಗಡಲೆ ಬಿತ್ತನೆಗೆ ಸಿದ್ಥತೆ ನಡೆಸಿರುವ ರೈತರು ಯಾವಾಗ ಮಳೆ ಬೀಳುತ್ತೋ ಎಂದು ಆಕಾಶದ ಕಡೆ ಮುಖ ಮಾಡಿದ್ದಾರೆ.

ಬಿತ್ತನೆಗೂ ಹಿನ್ನಡೆ: ಮುಂಗಾರು ಮಳೆಗೆ ಇನ್ನೂ ಕಾಲ ಕೂಡಿಬರದ ಕಾರಣ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳ ಬಿತ್ತನೆಗೂ ಹಿನ್ನಡೆಯಾಗಿದೆ. ಕೃಷಿ ಇಲಾಖೆ ಮಾಹಿತಿಯಂತೆ ಈ ಬಾರಿ ಜಿಲ್ಲಾದ್ಯಂತ ಬರೋಬ್ಬರಿ 1.54 ಲಕ್ಷ ಹೆಕ್ಟೇರ್‌ ಭೂ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಚಿಕ್ಕಬಳ್ಳಾಪುರದಲ್ಲಿ 17,579 ಹೆಕ್ಟೇರ್‌, ಗೌರಿಬಿದನೂರು ತಾಲೂಕಿನಲ್ಲಿ 39,445 ಹೆಕ್ಟೇರ್‌, ಗುಡಿಬಂಡೆ ತಾಲೂಕಿನಲ್ಲಿ 11,886 ಹೆಕ್ಟೇರ್‌, ಬಾಗೇಪಲ್ಲಿ ತಾಲೂಕಿನಲ್ಲಿ 31,899 ಹೆಕ್ಟೇರ್‌, ಚಿಂತಾಮಣಿ ತಾಲೂಕಿನಲ್ಲಿ 35,918 ಹೆಕ್ಟೇರ್‌ ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ 17,273 ಹೆಕ್ಟೇರ್‌ನಷ್ಟು ಬಿತ್ತನೆ ಗುರಿ ಹೊಂದಿದ್ದು, ಇದರಲ್ಲಿ ಈಗಾಗಲೇ ಶೇ.40 ರಿಂದ 50 ರಷ್ಟು ಭಿತ್ತನೆಯಾಗಬೇಕಿತ್ತು. ದುರಾದೃಷ್ಠವಶಾತ್‌ ಮಳೆಯಾಗದೇ ಶೇ.1ರಷ್ಟೂ ಕೂಡ ಬಿತ್ತನೆಯಾಗದಿರುವುದು ಕೃಷಿ ಇಲಾಖೆ ಅಧಿಕಾರಿಗಳನ್ನು ಆತಂಕಕ್ಕೆ ದೂಡಿದೆ.

ದಿಕ್ಕು ತೋಚದಂತಾದ ರೈತನ ಬದುಕು: ಈಗಾಗಲೇ ಏಳೆಂಟು ವರ್ಷಗಳಿಂದ ಬರಗಾಲದ ಜತೆಗೆ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸಿದ್ದ ರೈತ ಈ ವರ್ಷವಾದರೂ ಉತ್ತಮ ಮಳೆ, ಬೆಳೆಯಾಗುವ ಆಸೆ ಹೊಂದಿದ್ದ. ಆದರೆ, ಪ್ರಾರಂಭದಲ್ಲೇ ಮಳೆ ಕೈಕೊಡುವ ಲಕ್ಷ್ಮಣ ಕಾಣುತ್ತಿದ್ದು, ಈಗ ಗಾಯದ ಮೇಲೆ ಬರೆ ಎಂಬಂತೆ ರೈತರ ಬದುಕು ದಿಕ್ಕು ತಪ್ಪುತ್ತಿದೆ.

ಮಳೆಗಾಗಿ ಪೂಜೆ, ಪಾರ್ಥನೆ

ಮತ್ತೊಂದೆಡೆ ಮಳೆಗಾಗಿ ಪ್ರತಿನಿತ್ಯ ಆಕಾಶದ ಕಡೆ ನೋಡುತ್ತಿರುವ ರೈತನ ಸ್ಥಿತಿಯನ್ನು ನೋಡಿ ಮಳೆ ಕರುಣಿಸಬಾರದೇ ಎಂದು ಕೆಲವು ಗ್ರಾಮಗಳಲ್ಲಿ ಕಪ್ಪೆ, ಕತ್ತೆಗಳ ಮದುವೆ ಸೇರಿದಂತೆ ಇತರೆ ಧಾರ್ಮಿಕ ಆಚರಣೆಗಳ ಮೊರೆ ಹೋಗಿದ್ದಾರೆ. ಆದರೆ, ಯಾವ ಆಚರಣೆಗೂ ಮಳೆರಾಯ ಜಗ್ಗುತ್ತಿಲ್ಲ. ಈ ಹಿಂದಿನ ವರ್ಷದಂತೆ ಈ ವರ್ಷವೂ ಕೂಡ ಬರದ ಛಾಯೆ ಜಿಲ್ಲೆಯನ್ನು ಕಾಡುವ ಸಾಧ್ಯತೆ ಇದೆ.

ಜಿಲ್ಲೆಯ ಮಳೆ ವಿವರ

ಜಿಲ್ಲೆಯಲ್ಲಿ ಜೂನ್‌ ತಿಂಗಳಲ್ಲಿ 156.8 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದು, ಈ ಪೈಕಿ 160.9 ಮಿ.ಮೀ. ಮಳೆಯಾಗಿದೆ. ಬಾಗೇಪಲ್ಲಿಯಲ್ಲಿ 120.7 ಮಿ.ಮೀ, ಚಿಕ್ಕಬಳ್ಳಾಪುರದಲ್ಲಿ 178.6 ಮಿ.ಮೀ, ಚಿಂತಾಮಣಿ 174 ಮಿ.ಮೀ, ಗೌರಿಬಿದನೂರು 177.1 ಮಿ.ಮೀ., ಗುಡಿಬಂಡೆ 125.1 ಮಿ.ಮೀ., ಶಿಡ್ಲಘಟ್ಟ 173.3 ಮಿ.ಮೀ. ಮಳೆಯಾಗಿದ್ದು, ಬಾಗೇಪಲ್ಲಿ ಶೇ.16, ಹಾಗೂ ಗುಡಿಬಂಡೆಯಲ್ಲಿ ಶೇ.14 ಮಿ.ಮೀ. ಮಳೆ ಕೊರತೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಮಳೆಯಾಗದ ಕಾರಣ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ನಿರೀಕ್ಷಿತ ಮಟ್ಟದಲ್ಲಿ ಬಿತ್ತನೆ ಕಾರ್ಯವೂ ನಡೆದಿಲ್ಲ. ಈಗಾಗಲೇ ಶೇ.40-50ರಷ್ಟು ಬಿತ್ತನೆಯಾಗಬೇಕಿತ್ತು. ಒಂದೆರಡು ವಾರದಲ್ಲಿ ಮಳೆ ಬಾರದಿದ್ದರೆ ಮತ್ತಷ್ಟು ತೊಂದರೆಯಾಗಲಿದೆ.
-ರೂಪಾ, ಜಂಟಿ ಕೃಷಿ ನಿರ್ದೇಶಕರು, ಚಿಕ್ಕಬಳ್ಳಾಪುರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ