ಆ್ಯಪ್ನಗರ

ರೈತನ ಬೆಳೆಯತ್ತ ನವಿಲುಗಳ ಕಣ್ಣು: ಚಿಕ್ಕಬಳ್ಳಾಪುರದ ಜಿಲ್ಲೆಯಲ್ಲಿ ಹೆಚ್ಚಿದ ನವಿಲು ಸಂತತಿ!

ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಿ ನವಿಲಿನ ಕಾಟಕ್ಕೆ ಮಳೆಯಾಧಾರಿತ ಕೃಷಿಕ ಹೈರಾಣಾಗಿದ್ದು, ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತನನ್ನು ಮಯೂರ ಮತ್ತಷ್ಟು ನಷ್ಟಕ್ಕೆ ದೂಡುತ್ತಿದೆ. ಅರಣ್ಯ ಪ್ರದೇಶಲ್ಲಿ ತೀವ್ರ ಆಹಾರದ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ರೈತ ಬೆಳೆದಿರುವ ರಾಗಿ, ಜೋಳ, ನೆಲಗಡಲೆ, ಹಲಸಂದಿ ಸೇರಿದಂತೆ ನಾನಾ ಬೆಳೆಗಳ ಮೇಲೆ ನವಿಲುಗಳು ಹಿಂಡು ಹಿಂಡಾಗಿ ದಾಳಿ ನಡೆಸಲು ಮುಂದಾಗಿವೆ.

Vijaya Karnataka 29 Nov 2021, 5:23 pm
ಕೆಂಪೇಗೌಡ ಎನ್‌ ವೆಂಕಟೇನಹಳ್ಳಿ
Vijaya Karnataka Web ನವಿಲು
ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನವಿಲುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಇವು ಈಗ ಆಶ್ರಿತ ಸ್ಥಳಗಳ ಸುತ್ತ-ಮುತ್ತ ಹಿಂಡು ಹಿಂಡಾಗಿ ಗೋಚರಿಸುತ್ತಿದ್ದು, ಆಹಾರಕ್ಕಾಗಿ ಮಳೆಯಾಧಾರಿತ ಹಾಗೂ ತೋಟಗಾರಿಕಾ ಪ್ರದೇಶಗಳತ್ತ ದಾಂಗುಡಿ ಇಟ್ಟಿವೆ.

ಈ ಹಿಂದೆ ಜಿಲ್ಲೆಯ ನಂದಿ ಗಿರಿಧಾಮ, ಕಣಿವೆ ನಾರಾಯಣಪುರ, ಗುಡಿಬಂಡೆಯ ಆದಿನಾರಾಯಣ ಬೆಟ್ಟ ಪ್ರದೇಶಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಾತ್ರ ನವಿಲುಗಳು ವಾಸವಾಗಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ನವಿಲುಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದ್ದು, ಎಲ್ಲ ಕಾಡುಗಳನ್ನು ವ್ಯಾಪಿಸಿದೆ.

ನವಿಲು ಸಂತತಿ ಹೆಚ್ಚಳ
ಜಿಲ್ಲೆಯಲ್ಲಿ ಎಷ್ಟು ನವಿಲುಗಳ ಇವೆ ಎನ್ನುವ ಗಣತಿ ಇನ್ನೂ ಆರಂಭಗೊಂಡಿಲ್ಲ. ಆದರೆ ತಮ್ಮ ಸುತ್ತಲಿನ ಪರಿಸರದ ಬೆಳವಣಿಗೆಗಳನ್ನು ಗಮನಿಸುವ ರೈತರು, ಪ್ರಾಣಿ, ಪಕ್ಷಿ ಮತ್ತು ಪರಿಸರ ಪ್ರಿಯರು ನವಿಲುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದನ್ನು ಗುರುತಿಸಿದ್ದಾರೆ.

ರೈತನ ಬೆಳೆ ಮೇಲೆ ದಾಳಿ
ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಿ ನವಿಲಿನ ಕಾಟಕ್ಕೆ ಮಳೆಯಾಧಾರಿತ ಕೃಷಿಕ ಹೈರಾಣಾಗಿದ್ದು, ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತನನ್ನು ಮಯೂರ ಮತ್ತಷ್ಟು ನಷ್ಟಕ್ಕೆ ದೂಡುತ್ತಿದೆ. ಅರಣ್ಯ ಪ್ರದೇಶಲ್ಲಿ ತೀವ್ರ ಆಹಾರದ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ರೈತ ಬೆಳೆದಿರುವ ರಾಗಿ, ಜೋಳ, ನೆಲಗಡಲೆ, ಹಲಸಂದಿ ಸೇರಿದಂತೆ ನಾನಾ ಬೆಳೆಗಳ ಮೇಲೆ ನವಿಲುಗಳು ಹಿಂಡು ಹಿಂಡಾಗಿ ದಾಳಿ ನಡೆಸಲು ಮುಂದಾಗಿವೆ.

ದಿನವಿಡೀ ಕಾವಲು
ಮಳೆ ಹಾನಿಯಿಂದ ಮೊದಲೇ ಸಂಕಷ್ಟಕ್ಕೆ ಸಿಲುಕಿರುವ ರೈತನನ್ನು ಇನ್ನಷ್ಟು ನಷ್ಟಕ್ಕೆ ತಳ್ಳಲು ರಾಷ್ಟ್ರ ಪಕ್ಷಿ ಯಶಸ್ವಿಯಾಗಿದೆ. ರೈತರು ಮಳೆಯಾಧಾರಿತ ಬೆಳೆಗಳನ್ನು ರಕ್ಷಿಸಲು ಇಡೀ ದಿನ ಕಾವಲು ಕಾಯುವಂತಾದ ಪರಿಸ್ಥಿತಿ ರೈತರಿಗೆ ನಿರ್ಮಾಣವಾಗಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆ ರೈತ ಬೆಳೆಗೆ ಕಾವಲು ಹೋಗದಿದ್ದರೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟು ಮಾಡುತ್ತಿವೆ. ಹೀಗಾಗಿ ರೈತರು ತಮ್ಮ ಬೆಳೆ ರಕ್ಷಣೆಗಾಗಿ ದಿನವೀಡಿ ಕಾವಲು ಕಾಯುವಂತಾಗಿದೆ.
ಟೊಮೇಟೊ ಬೆಲೆ ಸೇಬಿಗಿಂತ ದುಬಾರಿ: ಬೆಳೆ ರಕ್ಷಣೆಗೆ ನಿದ್ದೆಗೆಟ್ಟು ಕಾವಲು ಕಾಯುತ್ತಿದ್ದಾರೆ ಚಿಕ್ಕಬಳ್ಳಾಪುರ ರೈತರು!
ಸಹನೆ ಕಳೆದುಕೊಳ್ಳದ ರೈತ
ಜಿಲ್ಲೆಯ ಕುರುಚುಲು ಕಾಡುಗಳಲ್ಲಿ ಯಥೇಚ್ಛವಾಗಿ ಬೆಳವಣಿಗೆ ಕಂಡಿರುವ ನವಿಲು ಕಂಡ ಕಂಡಲ್ಲೇ ಮೊಟ್ಟೆಗಳನ್ನು ಇಟ್ಟು ತನ್ನ ಸಂತತಿ ವೃದ್ಧಿಸಿಕೊಳ್ಳುತ್ತಿದೆ. ಅಪಾರ ಪ್ರಮಾಣದಲ್ಲಿ ರೈತನ ಬೆಳೆ ನಷ್ಟ ಮಾಡುತ್ತಿದ್ದರೂ ರೈತರು ಸಹನೆ ಕಳೆದುಕೊಳ್ಳುತ್ತಿಲ್ಲ. ನವಿಲಿನ ಮೇಲೆ ವಿಶೇಷ ಪ್ರೀತಿ ಹೊಂದಿರುವ ರೈತರು ಬೇಟೆ ಮಾರ್ಗದತ್ತ ಮುಖ ಮಾಡಿಲ್ಲ. ಅವುಗಳ ರಕ್ಷಣೆಯಲ್ಲೂ ಮೊದಲಿದ್ದಾರೆ.

ಅರಣ್ಯ ಇಲಾಖೆಗೆ ಮೊರೆ
ನವಿಲು ಹೆಚ್ಚಿರುವ ಅರಣ್ಯ ಪ್ರದೇಶಗಳಲ್ಲಿ ನವಿಲುಗಳ ಆರೈಕೆಗೆ ಅರಣ್ಯ ಇಲಾಖೆ ಹೆಚ್ಚು ಕಾಳಜಿ ವಹಿಸಬೇಕೆಂದು ರೈತರು ಹಾಗೂ ಪರಿಸರ ಪ್ರೇಮಿಗಳು ಆಗ್ರಹಿಸಿದ್ದು, ಅರಣ್ಯ ಪ್ರದೇಶದಲ್ಲಿ ನವಿಲುಗಳಿಗೆ ಆಹಾರ ಕೊರತೆ ಉಂಟಾಗದಂತೆ ಹೆಚ್ಚು ಹಣ್ಣಿನ ಗಿಡಗಳನ್ನು ನೆಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಹಚ್ಚ ಹಸಿರಿನಲ್ಲಿ ನವಿಲುಗಳ ನರ್ತನ

ದಶಕಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಸೀಮಿತ ಕಾಡುಗಳಲ್ಲಿದ್ದ ನವಿಲುಗಳು ಪ್ರಸ್ತುತ ಎಲ್ಲ ಕಾಡುಗಳನ್ನು ಆಕ್ರಮಿಸಿವೆ. ಮಳೆಯಿಂದಾಗಿ ಈಗಿರುವ ಹಚ್ಚ ಹಸಿರಿನ ಹಿತಕರ ವಾತಾವರಣಕ್ಕೆ ನವಿಲುಗಳು ಮನಸೋತು ಉತ್ತೇಜನಗೊಂಡು ಗರಿಬಿಚ್ಚಿ ನರ್ತಿಸತೊಡಗಿದೆ. ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ತುಂತುರು ಹನಿ, ಮೋಡ ಕವಿದ ಹಿತಕರ ವಾತಾವರಣ ಕೂಡಿರುವುದರಿಂದ ನವಿಲುಗಳು ಮೈಚಳಿ ಬಿಟ್ಟು ನಿರ್ಭಯವಾಗಿ ಸಂಚರಿಸುತ್ತಿವೆ.
ಮಳೆ ನಿಂತು ಹೋದ ಮೇಲೆ ರೈತರ ಬದುಕು ಛಿದ್ರ; ಚಿಕ್ಕಬಳ್ಳಾಪುರದ ತೋಟ, ಹೊಲಗಳಲ್ಲಿ ಕೊಳೆಯುತ್ತಿವೆ ನಾನಾ ಬೆಳೆ!
ಜಿಲ್ಲೆಯಲ್ಲಿ ನವಿಲುಗಳ ಸಂಖ್ಯೆ ಏರಿಕೆಯಾಗಿದ್ದು, ಅರಣ್ಯ ಪ್ರದೇಶದಲ್ಲಿ ಆಹಾರ ಸಿಗದೇ ರೈತರ ಬೆಳೆಗಳತ್ತ ಮುಖ ಮಾಡಿವೆ. ಹಾಗಾಗಿ ಪ್ರಸ್ತುತ ಅರಣ್ಯ ಇಲಾಖೆ ನವಿಲುಗಳು ಆಶ್ರಿತ ಪ್ರದೇಶಗಳ ಸುತ್ತಮುತ್ತ ಜೋಳ, ರಾಗಿ ಇತರೆ ಕಾಳುಗಳನ್ನು ಒದಗಿಸಬೇಕು. ಅರಣ್ಯದಲ್ಲಿ ಹೆಚ್ಚು ಹಣ್ಣಿನ ಗಿಡಗಳನ್ನು ನೆಡಬೇಕು. ಅವುಗಳ ರಕ್ಷಣೆಗೆ ವಿಶೇಷ ಒತ್ತು ನೀಡಬೇಕು.
ಸುಭಾನ್‌, ಪರಿಸರ ಪ್ರೇಮಿ, ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ಇತ್ತಿಚಿನ ವರ್ಷಗಳಲ್ಲಿ ನವಿಲುಗಳ ಸಂತತಿ ಹೆಚ್ಚಳವಾಗಿದೆ. ನವಿಲುಗಳ ಆಹಾರದ ಕೊರತೆ ನೀಗಿಸಲು ಅರಣ್ಯ ಪ್ರದೇಶದಲ್ಲಿ ಅತಿಯಾಗಿ ಹತ್ತಿ, ಆಲ, ಗೋಣಿ ಇತರೆ ಹಣ್ಣು ಬಿಡುವ ಗಿಡಗಳನ್ನು ನೆಡಲಾಗುತ್ತಿದೆ. ಬೆಳೆ ನಷ್ಟ ಹೊಂದಿದ ರೈತರಿಂದ ಮಾಹಿತಿ ಪಡೆದು ಇಲಾಖೆಯಿಂದ ಅನುದಾನ ಒದಗಿಸಲಾಗುವುದು.
ಶ್ರೀಲಕ್ಷ್ಮಿ, ವಲಯ ಅರಣ್ಯಾಧಿಕಾರಿ, ಚಿಕ್ಕಬಳ್ಳಾಪುರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ