ಆ್ಯಪ್ನಗರ

ಶಿಡ್ಲಘಟ್ಟ ಮಾರುಕಟ್ಟೆಗೆ ರೇಷ್ಮೆ ಆಯುಕ್ತರ ಭೇಟಿ

ರೇಷ್ಮೆ ಇಲಾಖೆಗೆ ಆಯುಕ್ತರಾಗಿ ನೂತನವಾಗಿ ನೇಮಕಗೊಂಡ ವೃಷಭೇಂದ್ರಮೂರ್ತಿ ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಗೆ ಮೊದಲ ಬಾರಿಗೆ ಭೇಟಿ ನೀಡಿ ರೇಷ್ಮೆ ಬೆಳೆಗಾರರು ಹಾಗೂ ರೇಷ್ಮೆ ನೂಲು ಬಿಚ್ಚಾಣಿಕೆದಾರರೊಂದಿಗೆ ಮಾತುಕತೆ ನಡೆಸಿದರು.

Vijaya Karnataka 26 Jun 2019, 4:12 pm
ರೈತರು ಹಾಗೂ ರೀಲರುಗಳ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು: ವೃಷಭೇಂದ್ರಮೂರ್ತಿ
Vijaya Karnataka Web silk commissioners visit to shidlaghatta market
ಶಿಡ್ಲಘಟ್ಟ ಮಾರುಕಟ್ಟೆಗೆ ರೇಷ್ಮೆ ಆಯುಕ್ತರ ಭೇಟಿ


ವಿಕ ಸುದ್ದಿಲೋಕ ಶಿಡ್ಲಘಟ್ಟ

ರೇಷ್ಮೆ ಇಲಾಖೆಗೆ ಆಯುಕ್ತರಾಗಿ ನೂತನವಾಗಿ ನೇಮಕಗೊಂಡ ವೃಷಭೇಂದ್ರಮೂರ್ತಿ ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಗೆ ಮೊದಲ ಬಾರಿಗೆ ಭೇಟಿ ನೀಡಿ ರೇಷ್ಮೆ ಬೆಳೆಗಾರರು ಹಾಗೂ ರೇಷ್ಮೆ ನೂಲು ಬಿಚ್ಚಾಣಿಕೆದಾರರೊಂದಿಗೆ ಮಾತುಕತೆ ನಡೆಸಿದರು.

ರೇಷ್ಮೆಗೂಡು ಮಾರುಕಟ್ಟೆಯ ಆಡಳಿತ, ಇ-ಹರಾಜು ವ್ಯವಸ್ಥೆ, ರೇಷ್ಮೆಗೂಡಿನ ವಹಿವಾಟು, ರೇಷ್ಮೆಗೂಡಿನ ಬೆಲೆ ಏರಳಿತ, ದ್ವಿತಳಿ ಹಾಗೂ ಸಾಮಾನ್ಯ ತಳಿಯ ರೇಷ್ಮೆಗೂಡಿನ ಆವಕ ಪ್ರಮಾಣ ಇನ್ನಿತರೆ ವಿಚಾರಗಳ ಬಗ್ಗೆ ರೇಷ್ಮೆಗೂಡು ಮಾರುಕಟ್ಟೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಹಳೆ ಪದ್ಧತಿಯನ್ನು ಮುಂದುವರಿಸಿ: ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹಾಗೂ ಇತರೆ ಪದಾಧಿಕಾರಿಗಳು ಆಯುಕ್ತರನ್ನು ಭೇಟಿ ಮಾಡಿ, ಕಳೆದ ಏಳೆಂಟು ತಿಂಗಳಿಂದಲೂ ರೇಷ್ಮೆಗೂಡಿನ ಬೆಲೆ ತೀರಾ ಕುಸಿದಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಐದಾರು ತಿಂಗಳ ಹಿಂದೆ ಹೊಸದಾಗಿ ಜಾರಿ ಮಾಡಿದ ರೇಷ್ಮೆಗೂಡಿಗೆ ಬೆಂಬಲ ಬೆಲೆ ನೀಡುವ ಪದ್ಧತಿಯಿಂದ ಶಿಡ್ಲಘಟ್ಟದ ರೇಷ್ಮೆ ಬೆಳೆಗಾರರಿಗೆ ನಯಾ ಪೈಸೆಯಷ್ಟು ಬೆಂಬಲ ಬೆಲೆಯ ಹಣ ಸಿಗಲಿಲ್ಲ. ಹಾಗಾಗಿ ಮೊದಲಿನಂತೆ ಬೆಂಬಲ ಬೆಲೆ ಪದ್ಧತಿಯನ್ನು ಮುಂದುವರೆಸಬೇಕೆಂದರು.

ಮಾರುಕಟ್ಟಯಲ್ಲಿ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನೇಕ ವರ್ಷಗಳಿಂದಲೂ ಬೀಡುಬಿಟ್ಟಿದ್ದು ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಕೆಲ ರೀಲರುಗಳೊಂದಿಗೆ ಶಾಮೀಲಾಗಿ ರೇಷ್ಮೆಗೂಡಿನ ತೂಕದಲ್ಲಿ ಮೋಸ ಮಾಡುತ್ತಿದ್ದಾರೆ. ಅಂತಹ ಸಿಬ್ಬಂದಿಯನ್ನು ಗುರ್ತಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಲ್ಲದೆ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಬದಲಿಸುತ್ತಿರಬೇಕು. ಇಡೀ ದೇಶದಲ್ಲಿಯೇ ಅತಿ ಹೆಚ್ಚು ರೇಷ್ಮೆಗೂಡು ವಹಿವಾಟು ನಡೆಯುವ ಇಲ್ಲಿ ರೇಷ್ಮೆಗೂಡಿನ ಗುಣಮಟ್ಟವನ್ನು ಪರೀಕ್ಷಿಸುವ ಕೇಂದ್ರವನ್ನು ಕೂಡಲೇ ಆರಂಭಿಸಬೇಕು ಎಂದು ಬೇಡಿಕೆ ಮುಂದಿಟ್ಟರು.

ಇಲ್ಲಿಯೇ ರೇಷ್ಮೆ ಕಾರ್ಖಾನೆ ಆರಂಭಿಸಿ: ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟಸ್ವಾಮಿ ಮಾತನಾಡಿ, ಶಿಡ್ಲಘಟ್ಟದಲ್ಲಿ ಪ್ರತಿ ದಿನವೂ ಸುಮಾರು 50 ಟನ್‌ನಷ್ಟು ರೇಷ್ಮೆಗೂಡು ವಹಿವಾಟು ಆಗುತ್ತದೆ. ಇಲ್ಲಿ ಉತ್ಪಾದನೆಯಾಗುವ ಕಚ್ಚಾ ರೇಷ್ಮೆಯು ಬಾಂಬೆ, ಸೂರತ್‌, ಕೊಚ್ಚಿ, ಸೇಲಂ ಸೇರಿದಂತೆ ದೇಶದ ನಾನಾ ಕಡೆಗೆ ರಪ್ತು ಆಗುತ್ತದೆ. ಅಲ್ಲಿ ರೇಷ್ಮೆ ಬಟ್ಟೆ ತಯಾರಾಗಿ ಇಲ್ಲಿ ಮಾರಾಟ ಆಗುತ್ತದೆ. ಹಾಗಾಗಿ ಇಲ್ಲಿಯೇ ಕಾರ್ಖಾನೆ ಆರಂಭಿಸಿದರೆ ಇಲ್ಲಿನವರಿಗೆ ಉದ್ಯೋಗ ಸಿಗುತ್ತದೆಯಲ್ಲದೆ ಕಚ್ಚಾ ರೇಷ್ಮೆಗೂ ಇನ್ನಷ್ಟು ಬೆಲೆ ಸಿಗಲಿದೆ ಎಂದು ವಿವರಿಸಿದರು.

ರೇಷ್ಮೆ ಇಲಾಖೆಯು ವರ್ಷದ ಕೆಲ ದಿನಗಳಲ್ಲಿ ಇಲ್ಲಿನ ಮಾರುಕಟ್ಟೆಯಿಂದ ಗುಣಮಟ್ಟದ ರೇಷ್ಮೆಗೂಡನ್ನು ಖರೀದಿಸಿ ಮೈಸೂರು ರೇಷ್ಮೆ ಕಾರ್ಖಾನೆಗೆ ರವಾನಿಸುತ್ತದೆ. ಅದರ ಬದಲಿಗೆ ಇಲ್ಲಿಯೆ ಸರಕಾರ ರೇಷ್ಮೆ ಕಾರ್ಖಾನೆ ತೆರೆಯಲಿ ಎಂದರು.

ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಂಘದ ಅಧ್ಯಕ್ಷ ಅನ್ಸರ್‌ ಖಾನ್‌ ಮಾತನಾಡಿ, ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಪ್ರತಿ ಟೇಬಲ್‌ಗೂ ಪ್ರತಿ ತಿಂಗಳು ಗರಿಷ್ಟ 30 ಕೆಜಿಗೆ ಅನ್ವಯ ಆಗುವಂತೆ ನೀಡುವ ಪ್ರೋತ್ಸಾಹ ಧನ ವಿತರಣೆ ವಿಳಂಬ ಆಗುತ್ತಿದ್ದು ಗಮನ ಹರಿಸಲು ಮನವಿ ಮಾಡಿದರು.

ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಹಕಾರ ಸಂಘ ಸ್ಥಗಿತಗೊಂಡಿದ್ದು ಅದನ್ನು ಮತ್ತೆ ಪುನರಾರಂಭಿಸಲು ನೆರವು ನೀಡಿ ಎಂದು ಆಯುಕ್ತರಲ್ಲಿ ಕೋರಿದರು.

ರೈತರು ಹಾಗೂ ರೀಲರುಗಳ ಎಲ್ಲ ಬೇಡಿಕೆಗಳನ್ನು ಆಲಿಸಿದ ಆಯುಕ್ತರು, ನಾನು ಶುಕ್ರವಾರವಷ್ಟೆ ಆಯುಕ್ತನಾಗಿ ನೇಮಕಗೊಂಡಿದ್ದು ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡಿ ಈಗಷ್ಟೆ ಮಾರುಕಟ್ಟೆ ವ್ಯವಸ್ಥೆ, ರೀಲರು ರೈತರ ಕಷ್ಟ ಸುಖಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ನಿಮ್ಮೆಲ್ಲಾ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಹಂತ ಹಂತವಾಗಿ ಆದ್ಯತೆ ಮೇರೆಗೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದರು.

ರೇಷ್ಮೆ ಇಲಾಖೆಯ ಜಂಟಿ ನಿರ್ದೆಶಕ ಕುಮಾರ್‌, ಮಾರುಕಟ್ಟೆಯ ಉಪ ನಿರ್ದೆಶಕ ಸುಭಾಷ್‌ ಸಾತೇನಹಳ್ಳಿ, ರೈತರು, ರೀಲರುಗಳು ಹಾಜರಿದದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ