ಆ್ಯಪ್ನಗರ

ಸರಕಾರಿ ಕಚೇರಿಯಲ್ಲಿ ಗಡದ್ ನಿದ್ದೆ: ಸಿಬ್ಬಂದಿಯ ಅಮಾನತಿಗೆ ಶಿಫಾರಸು

ಸರಕಾರಿ ಕೆಲಸ ನಿದ್ದೆ ಮಾಡೋ ಕೆಲಸ

Vijaya Karnataka 27 Mar 2018, 1:10 pm
ಚಿಕ್ಕಬಳ್ಳಾಪುರ: ಸರಕಾರಿ ಕೆಲಸ ದೇವರ ಕೆಲಸ ಅಲ್ಲ. ನಿದ್ದೆ ಮಾಡೋ ಕೆಲಸ’ ಎಂಬ ಸಾರ್ವಜನಿಕರ ಆರೋಪಕ್ಕೆ ಪೂರಕವಾಗುವ ವಿಚಿತ್ರ ಘಟನೆ ಚಿಕ್ಕಬಳ್ಳಾಪುರದ ತಾಲೂಕು ಕಚೇರಿಯಲ್ಲಿ ನಡೆದಿದೆ.
Vijaya Karnataka Web sleep in govt office
ಸರಕಾರಿ ಕಚೇರಿಯಲ್ಲಿ ಗಡದ್ ನಿದ್ದೆ: ಸಿಬ್ಬಂದಿಯ ಅಮಾನತಿಗೆ ಶಿಫಾರಸು


ಏನಿದು ಘಟನೆ?

ಸಾರ್ವಜನಿಕರ ಸೇವೆ ಮಾಡಬೇಕಾದ ಸರಕಾರಿ ಸಿಬ್ಬಂದಿಯೊರ್ವ ಬೆಳಗ್ಗೆಯೇ ಸರಕಾರಿ ಕಚೇರಿಯಲ್ಲೇ ಗಡತ್ ಆಗಿ ನಿದ್ದೆ ಮಾಡಿದ್ದಾನೆ. ತಾಲೂಕು ಕಚೇರಿಯ ರೆಕಾರ್ಡ್ ರೂಂನಲ್ಲಿ ಎಸ್‌ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಸೊಂಪಾಗಿ ಸುಖ ನಿದ್ರೆ ಮಾಡಿದ್ದಾನೆ.

ಬೆಳಗ್ಗೆ 10 ಗಂಟೆಗೆ ಕಚೇರಿಗೆ ಬಂದ ಈತ ರೆಕಾರ್ಡ್ ರೊಂ ಬೀಗ ಹಾಕಿಕೊಂಡು ನಿದ್ರೆ ಹೋಗಿದ್ದಾನೆ. ಬೆಳಗ್ಗೆ 12 ಗಂಟೆಯಾದ್ರೂ ರೆಕಾರ್ಡ್ ರೂಂ ಬಾಗಿಲು ತೆರೆಯದಿದ್ದನ್ನ ಕಂಡ ಸಾರ್ವಜನಿಕರು ಬಾಗಿಲಿನ ಮೇಲಿನ ಕಿಟಕಿ ಮೂಲಕ ಇಣುಕಿ ನೋಡಿದಾಗ, ರೆಕಾರ್ಡ್ ರೂಂನ ದಾಖಲೆಗಳನ್ನೇ ತಲೆದಿಂಬು ಮಾಡಿಕೊಂಡಿದ್ದ.

ಇದರಿಂದ ಅಲ್ಲಿದ್ದ ಕೆಲ ಸಾರ್ವಜನಿಕರೇ ಮಂಜುನಾಥ್ ಮುಖಕ್ಕೆ ನೀರು ಎರಚಿ ಮಂಜುನಾಥ್‌ನನ್ನು ಎಬ್ಬಿಸಿದ್ದಾರೆ. ಇನ್ನೂ ಯಾಕಪ್ಪಾ ನಿದ್ದೇ ಮಾಡ್ತಿದೀಯಾ ಅಂತ ಪ್ರಶ್ನಿಸಿದರೆ, ಹುಷಾರಿಲ್ಲ ಅಂತ ನೆಪ ಹೇಳಿದ್ದಾನೆ. ಇನ್ನೂ ಹಿರಿಯ ಅಧಿಕಾರಿಗಳು ಕೂಡ ಈತ ನಿದ್ದೆ ಮಾಡ್ತಿರೋದು ತಿಳಿದಿದ್ದರೂ, ಗೊತ್ತಿಲ್ಲದವರಂತೆ ವರ್ತಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

ಇನ್ನೂ ಸರ್ವೆಯರ್ ಜೋಸೆಫ್ ಎಂಬುವವರು ಮಂಜುನಾಥ್ ಬೆಂಬಲಕ್ಕೆ ಬಂದಿದ್ದು, ಈತನ ನಿದ್ರಾವತಾರ ರೆಕಾರ್ಡ್ ಮಾಡುತ್ತಿದ್ದ ಮಾಧ್ಯಮದವರು ಹಾಗೂ ಸಾರ್ವಜನಿಕರನ್ನ ರೆಕಾರ್ಡ್ ರೂಂ ನಿಂದ ಹೊರದಬ್ಬಿದ್ದಾರೆ.

ಮಂಜುನಾಥ್ ಮದ್ಯಪಾನ ಸೇವಿಸಿ ಮಲಗಿದ್ದರು ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಪ್ರತಿ ದಿನವು ಇದೇ ಕಥೆ ಮುಂದುವರಿದಿದ್ದು, ಸಾರ್ವಜನಿಕರಿಗೆ ಯಾವುದೇ ಸೇವೆ ದೊರೆಯುತ್ತಿಲ್ಲ. ಕುಡಿದ ಅಮಲಿನಲ್ಲಿ ನಿದ್ರೆ ಮಾಡಿಕೊಂಡು, ಪ್ರತಿ ತಿಂಗಳು ಸಂಬಳ ಪಡೆಯುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ.

ಈ ಸಂಬಂಧ ತಹಸೀಲ್ದಾರ್ ಕೆ.ನರಸಿಂಹ ಮೂರ್ತಿ ಮಧ್ಯ ಪ್ರವೇಶಿಸಿ, ಸಿಬ್ಬಂದಿ ಮಂಜುನಾಥ್ ಅನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಆದೇಶಿಸಿದ್ದಾರೆ. ಆದರೆ, ಮಂಜುನಾಥ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಮಂಜುನಾಥ್ ಮದ್ಯ ಸೇವಿಸಿರಲಿಲ್ಲ. ಬೆಳಗ್ಗೆ ಹೋಟೆಲ್‌ನಲ್ಲಿ ತಿಂಡಿ ತಿದ್ದು ಕಚೇರಿಗೆ ಬಂದ ತಕ್ಷಣ ಈ ರೀತಿ ಮಲಗಿದ್ದಾರೆ ಎಂದು ಅಧಿಕಾರಿಗಳು ವಾದಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ವಿರೋಧವು ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ