ಆ್ಯಪ್ನಗರ

ಮೇ 25, 26ಕ್ಕೆ ನಂದಿಬೆಟ್ಟದಲ್ಲಿ ಮೊದಲ ಬಾರಿಗೆ ಮಾವು ಮೇಳ

ಇದೇ ಮೊದಲ ಬಾರಿಗೆ ರಾಜ್ಯ ತೋಟಗಾರಿಕೆ ಇಲಾಖೆಯು ಮೇ 25 ಮತ್ತು 26ರಂದು ನಂದಿ ಬೆಟ್ಟದ ಮೇಲೆ ಮಾವು ಮಾರಾಟ ಮೇಳ ಆಯೋಜಿಸಿದೆ. ಯೋಗನಂದೀಶ್ವರ ದೇವಾಲಯ ಮುಂಭಾಗ ಮತ್ತು ನಂದಿ ಬೆಟ್ಟದ ಮೇಲೆ ಬೆಳಗ್ಗೆ 7ರಿಂದ ರಾತ್ರಿ 8ರವರೆಗೆ ಮೇಳ ನಡೆಯಲಿದೆ.

Vijaya Karnataka 20 May 2019, 3:30 pm
*ಎಚ್‌.ಪಿ.ಪುಣ್ಯವತಿ
Vijaya Karnataka Web this weekend mango fair at nandi hills
ಮೇ 25, 26ಕ್ಕೆ ನಂದಿಬೆಟ್ಟದಲ್ಲಿ ಮೊದಲ ಬಾರಿಗೆ ಮಾವು ಮೇಳ

ಬೆಂಗಳೂರು:
ಇದೇ ಮೊದಲ ಬಾರಿಗೆ ರಾಜ್ಯ ತೋಟಗಾರಿಕೆ ಇಲಾಖೆಯು ಮೇ 25 ಮತ್ತು 26ರಂದು ನಂದಿ ಬೆಟ್ಟದ ಮೇಲೆ ಮಾವು ಮಾರಾಟ ಮೇಳ ಆಯೋಜಿಸಿದೆ. ಯೋಗನಂದೀಶ್ವರ ದೇವಾಲಯ ಮುಂಭಾಗ ಮತ್ತು ನಂದಿ ಬೆಟ್ಟದ ಮೇಲೆ ಬೆಳಗ್ಗೆ 7ರಿಂದ ರಾತ್ರಿ 8ರವರೆಗೆ ಮೇಳ ನಡೆಯಲಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಸುತ್ತಮುತ್ತಲಿನ ಭಾಗಗಳ ಮಾವು ಬೆಳೆಗಾರರು ತೋಟಗಳಲ್ಲಿ ಬೆಳೆದ ಹಾಗೂ ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ನೇರವಾಗಿ ಮೇಳದಲ್ಲಿ ಮಾರಾಟ ಮಾಡುವರು. ಹೀಗಾಗಿ ಗ್ರಾಹಕರಿಗೆ ಗುಣಮಟ್ಟದ, ತಾಜಾ ಮಾವಿನ ಹಣ್ಣುಗಳು ಸಿಗಲಿವೆ. ಇದೇ ವಾರಾಂತ್ಯದಲ್ಲಿ ನಂದಿ ಬೆಟ್ಟಕ್ಕೆ ತೆರಳುವ ಪ್ಲ್ಯಾನ್‌ ಮಾಡಿಕೊಂಡಲ್ಲಿ ಫ್ರೆಶ್‌ ಮಾವಿನ ಹಣ್ಣುಗಳನ್ನು ಕೊಂಡು ತರಬಹುದು.

''ನಂದಿ ಬೆಟ್ಟಕ್ಕೆ ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ವಾರಾಂತ್ಯದಲ್ಲಿ ಸುಮಾರು 5ರಿಂದ 8 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇವರಿಗೆ ಕಾರ್ಬೈಡ್‌ಮುಕ್ತ ಹಾಗೂ ರುಚಿಕರವಾದ ಹಣ್ಣುಗಳನ್ನು ಒದಗಿಸುವುದು ಹಾಗೂ ಚಿಕ್ಕಬಳ್ಳಾಪುರ ಭಾಗದ ಸ್ಥಳೀಯ ರೈತರಿಗೆ ಮಧ್ಯವರ್ತಿಗಳ ಹಾವಳಿಯಿಲ್ಲದೆ ಒಳ್ಳೆಯ ದರದಲ್ಲಿ ಮಾರಾಟಕ್ಕೆ ಒಂದು ಉತ್ತಮ ವೇದಿಕೆ ಕಲ್ಪಿಸುವುದು ಮೇಳದ ಉದ್ದೇಶವಾಗಿದೆ,'' ಎಂದು ರಾಜ್ಯ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಸ್‌.ಆರ್‌.ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಜ್ಯ ತೋಟಗಾರಿಕೆ ಇಲಾಖೆ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಸಹಯೋಗದೊಂದಿಗೆ ಮೇಳವನ್ನು ಆಯೋಜಿಸಲಾಗಿದೆ.

ಹಾಪ್‌ಕಾಮ್ಸ್‌ ದರದಲ್ಲಿ ಮಾರಾಟ: ಮಾವಿನ ಮಾರಾಟಕ್ಕೆ ಹಾಪ್‌ಕಾಮ್ಸ್‌ ಯಾವ ದರ ನಿಗದಿ ಮಾಡಿದೆಯೋ ಅದೇ ದರದಲ್ಲಿ ನಂದಿಬೆಟ್ಟದ ಮೇಲಿನ ಮಾವು ಮೇಳದಲ್ಲಿ ಮಾರಾಟ ಮಾಡುವಂತೆ ರೈತರಿಗೆ ಸೂಚಿಸಲಾಗುವುದು. ಬಾದಾಮಿ, ಬೇನಿಷ, ಮಲಗೋವ, ರಸಪುರಿ, ಬೈಗನ್‌ಪಲ್ಲಿ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಮಾವಿನ ತಳಿಗಳು ಮಾರಾಟವಾಗಲಿವೆ. 10 ಮಾರಾಟ ಮಳಿಗೆಗಳಿರುತ್ತವೆ.

13,500 ಹೆಕ್ಟೇರ್‌ನಲ್ಲಿ ಬೆಳೆ : ''ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತ 13,500 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದ್ದು, ವಾರ್ಷಿಕ ಸರಾಸರಿ 1.18 ಲಕ್ಷ ಟನ್‌ ಹಣ್ಣು ಉತ್ಪಾದನೆಯಾಗುತ್ತದೆ. ಈ ಬಾರಿ ಸಕಾಲದಲ್ಲಿ ಮಳೆಯಿಲ್ಲದ ಪರಿಣಾಮ ಎಂದಿಗಿಂತ ಶೇ.30ರಷ್ಟು ಉತ್ಪಾದನೆ ಇಳಿಕೆಯಾಗಿದೆ,'' ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಅಂಜನ್‌ಕುಮಾರ್‌ ಮಾಹಿತಿ ನೀಡಿದರು.


ಚದುಲಪುರ ವೃತ್ತದಲ್ಲೂ ಮೇಳ
ನಂದಿಬೆಟ್ಟದ ಜತೆಗೆ ರಾಷ್ಟ್ರೀಯ ಹೆದ್ದಾರಿ 7ರ ಚದುಲಪುರ ವೃತ್ತದಲ್ಲಿಯೂ ಮಾವು ಮೇಳ ಏರ್ಪಡಿಸಲಾಗಿದೆ. ಈ ವೃತ್ತದ ಮಾರ್ಗವಾಗಿ ಹೈದರಾಬಾದ್‌, ಅನಂತಪುರ, ಬಳ್ಳಾರಿ, ರಾಯಚೂರು ಮತ್ತಿತರ ಭಾಗಗಳಿಗೆ ತೆರಳುವ ಗ್ರಾಹಕರ ಖರೀದಿಗೆ ಅನುಕೂಲವಾಗುವಂತೆ ಮೇಳ ನಡೆಸಲಾಗುತ್ತಿದೆ. 5 ಮಳಿಗೆಗಳನ್ನು ತೆರೆದಿದ್ದು, 3 ಮತ್ತು 5 ಕೆ.ಜಿ.ಯ ರಟ್ಟಿನ ಬಾಕ್ಸ್‌ಗಳಲ್ಲಿ ಮಾವು ಮಾರಾಟ ಮಾಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ