ಆ್ಯಪ್ನಗರ

ಶಾಸಕ ಸುಧಾಕರ್‌ ವಿರುದ್ಧ ಪ್ರಾಣ ಬೆದರಿಕೆ ದೂರು

'ಶಾಸಕರ ಬೆಂಬಲಿಗರಿಂದ ತಮಗೆ ಕೊಲೆ ಬೆದರಿಕೆ ಇದ್ದು, ಸೂಕ್ತ ರಕ್ಷಣೆ ನೀಡಬೇಕು. ಶಾಸಕರನ್ನು ಕರೆಸಿ ವಿಚಾರಣೆ ನಡೆಸಬೇಕು' ಎಂದು ಶಾಸಕ ಡಾ.ಕೆ.ಸುಧಾಕರ್‌ ವಿರುದ್ಧ ಉಪನ್ಯಾಸಕ ಪ್ರದೀಪ್‌ ಈಶ್ವರ್‌ ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

Vijaya Karnataka 12 Apr 2018, 4:14 pm
ಬೆಂಗಳೂರು ದಕ್ಷಿಣ ಡಿಸಿಪಿಗೆ ದೂರು ಕೊಟ್ಟ ಉಪನ್ಯಾಸಕ ಪ್ರದೀಪ್‌
Vijaya Karnataka Web threats to life complaints against mla dr k sudhakar
ಶಾಸಕ ಸುಧಾಕರ್‌ ವಿರುದ್ಧ ಪ್ರಾಣ ಬೆದರಿಕೆ ದೂರು


ಚಿಕ್ಕಬಳ್ಳಾಪುರ: 'ಶಾಸಕರ ಬೆಂಬಲಿಗರಿಂದ ತಮಗೆ ಕೊಲೆ ಬೆದರಿಕೆ ಇದ್ದು, ಸೂಕ್ತ ರಕ್ಷಣೆ ನೀಡಬೇಕು. ಶಾಸಕರನ್ನು ಕರೆಸಿ ವಿಚಾರಣೆ ನಡೆಸಬೇಕು' ಎಂದು ಶಾಸಕ ಡಾ.ಕೆ.ಸುಧಾಕರ್‌ ವಿರುದ್ಧ ಉಪನ್ಯಾಸಕ ಪ್ರದೀಪ್‌ ಈಶ್ವರ್‌ ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

''ಚಿಕ್ಕಬಳ್ಳಾಪುರ ಶಾಸಕ ಸುಧಾಕರ್‌ ಅವರ ಅಕ್ರಮಗಳ ವಿರುದ್ಧ ಹೋರಾಟ ಮಾಡುತ್ತಿದ್ದು, ಸುಧಾಕರ್‌ ಅವರ ಅಕ್ರಮಗಳನ್ನು ಒಂದೊಂದಾಗಿ ಪ್ರಶ್ನಿಸುತ್ತಿದ್ದೇನೆ. ತೆರಿಗೆ ವಂಚಿಸುತ್ತಿರುವ ಇವರ ವಿರುದ್ಧ ಆದಾಯ ತೆರಿಗೆ ಇಲಾಖೆಗೂ ದೂರು ಸಲ್ಲಿಸಿದ್ದೇನೆ. ಶಾಸಕರನ್ನು ಪ್ರಶ್ನಿಸುತ್ತಿರುವುದರಿಂದ ಅವರ ಬೆಂಬಲಿಗರು ನನಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ವಿರುದ್ಧ ವಿಡಿಯೋಗಳನ್ನು ಮಾಡಿದ್ದು, ಅದರ ಮೂಲಕವೂ ಬೆದರಿಕೆ ಒಡ್ಡುತ್ತಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು ನಾನು ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದಾರೆ. ನನಗೆ ಶಾಸಕ ಸುಧಾಕರ್‌ ಸುಪಾರಿ ನೀಡಿದ್ದಾರೆಂಬ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಈ ಕುರಿತು ಎಚ್ಚರದಿಂದ ಇರುವಂತೆ ಜನತೆ ನನಗೆ ಹೇಳುತ್ತಿದ್ದಾರೆ,'' ಎಂದು ಪ್ರದೀಪ್‌ ದೂರಿನಲ್ಲಿ ವಿವರಿಸಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್‌ ಆಯುಕ್ತರಿಗೆ ಏ.5ರಂದು ದೂರು ಸಲ್ಲಿಸಿರುವ ಪ್ರದೀಪ್‌, ''ಶಾಸಕ ಸುಧಾಕರ್‌ ಅವರನ್ನು ಕರೆಸಿ ವಿಚಾರಣೆ ಮಾಡಬೇಕು ಮತ್ತು ನನಗೆ ಸೂಕ್ತ ರಕ್ಷಣೆ ನೀಡಬೇಕು,'' ಎಂದು ಮನವಿ ಮಾಡಿದ್ದಾರೆ.

ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಪ್ರದೀಪ್‌ ಈಶ್ವರ್‌, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್‌ ಅವರನ್ನು ಪ್ರಶ್ನಿಸುವ ಮೂಲಕ ಜಿಲ್ಲೆಯಲ್ಲಿ ಹೆಚ್ಚು ಚಾಲ್ತಿಗೆ ಬಂದಿದ್ದಾರೆ. ಸೋಷಿಯಲ್‌ ಮಿಡಿಯಾಗಳ ಮೂಲಕ ಶಾಸಕರಿಗೆ ದಿನಕ್ಕೊಂದು ಪ್ರಶ್ನೆ ಕೇಳುತ್ತಿದ್ದಾರೆ. ಇದರಿಂದ ಕೆರಳಿದ ಕೆಲವರು ಇವರಿಗೆ ಪ್ರಾಣ ಬೆದರಿಕೆ ಹಾಕುವ ವಿಡಿಯೋಗಳನ್ನು ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಹಾಕಿದ್ದಾರೆ. ವಾಟ್ಸ್‌ಆ್ಯಪ್‌ಗಳಲ್ಲಿ ಈ ವಿಡಿಯೋಗಳು ಹರಿದಾಡುತ್ತಿವೆ. ಈ ವಿಚಾರ ಜಿಲ್ಲೆಯ ಮಟ್ಟದಲ್ಲಿ ಮಾತ್ರವಲ್ಲದೇ ಕಾಂಗ್ರೆಸ್‌ ಹೈಕಮಾಂಡ್‌ನಲ್ಲಿಯೂ ಸಾಕಷ್ಟು ಚರ್ಚೆಗೊಳಗಾಗಿದೆ ಎನ್ನಲಾಗಿದೆ.

-----

ಶಾಸಕ ಡಾ.ಕೆ.ಸುಧಾಕರ್‌ ಮಾಡಿರುವ ಅಪರಾಧಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನಿಸುತ್ತಿದ್ದೆ. ಇದಕ್ಕೆ ಅನೇಕ ಪ್ರತಿರೋಧಗಳು, ಧಮ್ಕಿ ಕರೆಗಳು ಬರುತ್ತಿದ್ದವು. ಇತ್ತೀಚೆಗೆ ಅನಾಮಿಕರು, ಇರಾನಿ ಗ್ಯಾಂಗ್‌ನಂತಹ ಕೆಲವರು ನನ್ನನ್ನು ಹಿಂಬಾಲಿಸುತ್ತಿದ್ದರು. ಶಾಸಕರ ಸಂಬಂಧಿಕರ ಕಾರುಗಳು ಸಹ ನಮ್ಮ ಮನೆ ಮುಂದೆ ಸಂಚರಿಸುತ್ತಿದ್ದವು. ಮುಂದಿನ ದಿನಗಳಲ್ಲಿ ಈ ಅಕ್ರಮಗಳನ್ನು ಸಾಕ್ಷಿ ಸಮೇತ ಇ.ಡಿಗೆ (ಜಾರಿ ನಿರ್ದೇಶನಾಲಯ) ನೀಡಲಾಗುವುದು. ಹೀಗಾಗಿ ಸೂಕ್ತ ರಕ್ಷಣೆ ನೀಡುವಂತೆ ಕೋರಿ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

-ಪ್ರದೀಪ್‌ ಈಶ್ವರ್‌, ಉಪನ್ಯಾಸಕ

ಅವನಿಗೆ ಹುಚ್ಚು ಹಿಡಿದಿದೆ. ಚುನಾವಣೆ ಮುಗಿದ ಬಳಿಕ ನನ್ನ ಕಾಸಿನಲ್ಲಿಯೇ ಅವನಿಗೆ ಚಿಕಿತ್ಸೆ ನೀಡಿಸುತ್ತೇನೆ. ನಾನು ಪ್ರಾಣ ಬೆದರಿಕೆ ಹಾಕಿದ್ದರೆ, ಸಾಕ್ಷಿ ಸಮೇತ ಖಚಿತಪಡಿಸಲಿ. ಕಾನೂನು ಮೂಲಕ ಹೋರಾಟ ನಡೆಸಲಿ. ಅದನ್ನು ಬಿಟ್ಟು ನನ್ನನ್ನು ಕೇಳಿದರೆ, ಏನು ಹೇಳಲಿ. ಆರೋಪಗಳೆಲ್ಲ ಶುದ್ಧ ಸುಳ್ಳು.

-ಡಾ.ಕೆ.ಸುಧಾಕರ್‌, ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ