ಆ್ಯಪ್ನಗರ

ಸಂಚಾರಿ ನಿಯಮ ಪಾಲಿಸಿ; ಅಪಘಾತಗಳನ್ನು ತಪ್ಪಿಸಿ: ನ್ಯಾ. ಕೋರಡ್ಡಿ

ನಾಗರಿಕ ಸಮಾಜದಲ್ಲಿ ಅಪಘಾತಗಳಿಂದಾಗಿಯೇ ಹೆಚ್ಚು ಜೀವಹಾನಿಯಾಗುತ್ತಿರುವುದು ಆಘಾತಕಾರಿ ಬೆಳವಣಿಗೆ. ಇದು ತಪ್ಪಬೇಕಾದರೆ ವಾಹನ ಚಾಲಕರು, ವಿಶೇಷವಾಗಿ ಯುವಕರು ಸಂಚಾರಿ ನಿಯಮಗಳನ್ನು ಪಾಲಿಸಿದಾಗ ಮಾತ್ರ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಎಸ್‌.ಎಚ್‌. ಕೋರೆಡ್ಡಿ ಹೇಳಿದರು.

Vijaya Karnataka 5 Feb 2019, 5:00 am
ಚಿಕ್ಕಬಲ್ಳಾಪುರ: ನಾಗರಿಕ ಸಮಾಜದಲ್ಲಿ ಅಪಘಾತಗಳಿಂದಾಗಿಯೇ ಹೆಚ್ಚು ಜೀವಹಾನಿಯಾಗುತ್ತಿರುವುದು ಆಘಾತಕಾರಿ ಬೆಳವಣಿಗೆ. ಇದು ತಪ್ಪಬೇಕಾದರೆ ವಾಹನ ಚಾಲಕರು, ವಿಶೇಷವಾಗಿ ಯುವಕರು ಸಂಚಾರಿ ನಿಯಮಗಳನ್ನು ಪಾಲಿಸಿದಾಗ ಮಾತ್ರ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಎಸ್‌.ಎಚ್‌. ಕೋರೆಡ್ಡಿ ಹೇಳಿದರು.
Vijaya Karnataka Web CBP-4CBPM1RTO


ನಗರ ಹೊರವಲಯ ಚಿತ್ರಾವತಿ ಬಳಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಸಾರಿಗೆ ಇಲಾಖೆ ಏರ್ಪಡಿಸಿದ್ದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಪಘಾತದಲ್ಲಿ ನಂ.1:
ಖಾಸಗಿ ಸಂಸ್ಥೆಯೊಂದರ ಸಮೀಕ್ಷೆ ಪ್ರಕಾರ ರಸ್ತೆ ಅಪಘಾತಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿರುವ ದೇಶಗಳಲ್ಲಿ ಭಾರತಕ್ಕೆ ಮೊದಲನೇ ಸ್ಥಾನ ದಕ್ಕಿದೆ. ದೇಶ, ಭಾಷೆ, ಬಣ್ಣ, ಪ್ರಾಂತ್ಯ ಯಾವುದೇ ಇರಲಿ ಮೊದಲು ನಾವಿರುವ ಪರಿಸರದಲ್ಲಿ ಚಾಲ್ತಿಯಲ್ಲಿರುವ ಕಾನೂನು ಕಟ್ಟಳೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವುದು ಮೊದಲ ಜವಾಬ್ದಾರಿ. ಹೀಗಾಗದೆ ಕಾನೂನು ಉಲ್ಲಂಘನೆಯಾದರೆ ತಕ್ಕ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅರಿವು ಅಗತ್ಯ: ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ನಿಯಮಿತವಾಗಿ ಜಾಗೃತಿ ಸಪ್ತಾಹಗಳನ್ನು ಏರ್ಪಡಿಸಿ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಜಾತ್ರೆ, ಹಬ್ಬ ಹರಿದಿನ, ಜನಸಂದಣಿ ಹೆಚ್ಚಿರುವ ಸಂದರ್ಭಗಳನ್ನು ಬಳಸಿಕೊಂಡು ಅರಿವು ಮೂಡಿಸಬೇಕು. ರಾಜಕಾರಣಿಗಳು, ಉನ್ನತ ಅಧಿಕಾರಿ ವರ್ಗವೂ ಇಂತಹ ಸಂದರ್ಭದಲ್ಲಿ ತಪ್ಪು ಮಾಡಿದ ವ್ಯಕ್ತಿಯ ನೆರವಿಗೆ ನಿಲ್ಲುವುದು, ಶಿಫಾರಸ್ಸು, ಒತ್ತಡ ಹಾಕುವುದನ್ನು ಬಿಡಬೇಕು ಎಂದರು.

ಉಲ್ಲಂಘನೆ ಸಾಧುವಲ್ಲ: ವಿದ್ಯಾರ್ಥಿಗಳು ತಮಗಿರುವ ಪಠ್ಯಗಳ ಜತೆಗೆ ರಸ್ತೆ ಸುರಕ್ಷತಾ ಕ್ರಮ ಹಾಗೂ ಸಂಚಾರಿ ನಿಯಮಗಳ ಬಗ್ಗೆಯೂ ಕಲಿಯುವುದು ಅಗತ್ಯ. ಏಕೆಂದರೆ ವಾಹನ ಚಾಲನಾ ಪರವಾನಗಿ ಪಡೆಯದೆಯೇ ವಾಹನಗಳನ್ನು ಚಲಾವಣೆ ಮಾಡುವುದು ಸರಿಯಲ್ಲ ಎಂದರು.

ಪಾದಚಾರಿ ಗಮನವಿರಲಿ:
ರಸ್ತೆ ಅಪಘಾತಗಳಲ್ಲಿ ಸಾವಿಗೀಡಾದವರ ಅಂಕಿ ಸಂಖ್ಯೆಗಳನ್ನು ನೋಡಿದರೆ ಅದರಲ್ಲಿ ಪಾದಚಾರಿಗಳ ಸಾವೂ ಕೂಡ ಗಮನವನ್ನು ಸೆಳೆಯ್ತುದೆ. ವಾಹನ ಚಾಲನೆ ಮಾಡುವವರು ಪಾದಚಾರಿಗಳ ಬಗೆ ಹೆಚ್ಚಿನ ಮುತುವರ್ಜಿ ವಹಿಸುವುದು ಅಗತ್ಯವಿದೆ ಎಂದರು.

ನಿವೃತ್ತ ಪ್ರಿನ್ಸಿಪಾಲ್‌ ಕೋಡಿರಂಗಪ್ಪ ಮಾತನಾಡಿ, ಎಲ್ಲಿಯವರೆಗೆ ಸಾರಿಗೆ ಸಂಸ್ಕೃತಿ ಬೆಳೆಯುವುದಿಲ್ಲವೋ ಅಲ್ಲಿಯವರೆಗೆ ಅಪಘಾತಗಳ ಪ್ರಮಾಣ ತಗ್ಗಲಾರದು. ದೇಶದಲ್ಲಿ ಕಾನೂನುಗಳಿವೆ, ಆದರೆ ಪಾಲನೆಯಾಗುತ್ತಿಲ್ಲ. ಈ ಕಾನೂನುಗಳು ಯಾರಿಗಾಗಿ ಇವೆ ಎನ್ನುವ ಪರಿಜ್ಞಾನ ಜನರಲ್ಲಿ ಮೂಡಿದಾಗ ರಸ್ತೆ ಸುರಕ್ಷತೆ ಅಗಬಹುದು ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗಿರೆಡ್ಡಿ, ಇಲಾಖೆಯ ಕಮಲ್‌ಬಾಬು, ಜಿಲ್ಲಾ ಆಟೊ ಚಾಲಕರ ಸಂಘದ ಅಧ್ಯಕ್ಷ ಡಾಂಬು ಶ್ರೀನಿವಾಸ್‌, ಮಾನವ ಹಕ್ಕುಗಳ ಮುಖಂಡರಾದ ಕೃಷ್ಣಪ್ಪ, ಪ್ರಭಾವತಿ ಮತ್ತಿತರರು ಹಾಜರಿದ್ದರು.

ಪ್ರಾದೇಶಿಕ ಸಾರಿಗೆ ಕಚೇರಿ ಇರುವ ಹೊನ್ನೇನಹಳ್ಳಿ ಬಳಿ ಪ್ರಸಿದ್ಧ ಚಿತ್ರಾವತಿ ಜಾತ್ರೆ ನಡೆಯುತ್ತದೆ. ಅಲ್ಲೊಂದು ಶಿಕ್ಷಣ ಮಹಾವಿದ್ಯಾಲಯವಿದ್ದು, ನೂರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಬಂದು ಹೋಗುತ್ತಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಇಲ್ಲೇ ಹಾದು ಹೋಗುತ್ತಿದ್ದು, ವರ್ಷಕ್ಕೆ 20ಕ್ಕೂ ಮೀರಿ ಅಪಘಾತಗಳು ಇದೇ ಹೊನ್ನೇನಹಳ್ಳಿ ಬಳಿ ನಡೆಯುತ್ತಿದೆ. ಜಿಲ್ಲಾಡಳಿತ, ಶಾಸಕ, ಸಂಸದರು ಈ ಬಗ್ಗೆ ಗಮನಹರಿಸಿ ಅಲ್ಲೊಂದು ಅಂಡರ್‌ಪಾಸ್‌ ನಿರ್ಮಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ.
- ಕೋಡಿರಂಗಪ್ಪ, ಶಿಕ್ಷಣ ತಜ್ಞ, ಚಿಕ್ಕಬಳ್ಳಾಪುರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ