ಆ್ಯಪ್ನಗರ

ಪೊಲೀಸರ ವಿರುದ್ಧ ಅಂಗರೇಖನಹಳ್ಳಿ ಗ್ರಾಮಸ್ಥರ ಧಿಕ್ಕಾರ, ಪ್ರತಿಭಟನೆ

ನಗರದ ಗ್ರಾಮಾಂತರ ಠಾಣೆ ಪೊಲೀಸರು ಗ್ರಾಮಸ್ಥರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಅನಾವಶ್ಯಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಅಂಗರೇಖನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಗ್ರಾಮಾಂತರ ಠಾಣೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

Vijaya Karnataka 21 May 2019, 4:25 pm
ಪೊಲೀಸರು ಸುಳ್ಳು ದೂರು ದಾಖಲಿಸಿ ಗ್ರಾಮಸ್ಥರನ್ನು ಜೈಲಿಗಟ್ಟುತ್ತಿದ್ದಾರೆಂಬ ಆರೋಪ
Vijaya Karnataka Web villagers protest against police protest
ಪೊಲೀಸರ ವಿರುದ್ಧ ಅಂಗರೇಖನಹಳ್ಳಿ ಗ್ರಾಮಸ್ಥರ ಧಿಕ್ಕಾರ, ಪ್ರತಿಭಟನೆ


ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ

ನಗರದ ಗ್ರಾಮಾಂತರ ಠಾಣೆ ಪೊಲೀಸರು ಗ್ರಾಮಸ್ಥರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಅನಾವಶ್ಯಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಅಂಗರೇಖನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಗ್ರಾಮಾಂತರ ಠಾಣೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳ ನೂರಾರು ಸಾರ್ವಜನಿಕರು ಠಾಣೆ ಮುಂದೆ ಜಮಾಯಿಸಿ, ಪೊಲೀಸರ ದೌರ್ಜನ್ಯದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಗ್ರಾಮದ ಯುವ ಮುಖಂಡ ರವಿಕುಮಾರ್‌, ಗ್ರಾಮಾಂತರ ಠಾಣೆ ಪೊಲೀಸರು ಇತ್ತೀಚಿಗೆ ಊರಿನ ರೈತರು ಹಾಗೂ ಗ್ರಾಮಸ್ಥರನ್ನು ತನಿಖೆ ಹೆಸರಲ್ಲಿ ಕರೆದುಕೊಂಡು ಬಂದು ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ. ಸುಳ್ಳು ದಾಖಲೆಗಳನ್ನು ಹೂಡಿ, ಜೈಲಿಗೆ ಕಳುಹಿಸಿದ್ದಾರೆ. ಪದೇಪದೇ ಈ ರೀತಿ ಪೊಲೀಸರು ಗ್ರಾಮದೊಳಗೆ ಬಂದು ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದು, ನಾಲ್ಕೈದು ದಿನಗಳ ಹಿಂದೆ ಗ್ರಾಮದ ಏಳು ಮಂದಿಯನ್ನು ಬಂಧಿಸಿ ಠಾಣೆಗೆ ಕರೆತಂದು ಅವರ ವಿರುದ್ಧ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ದೂರು ದಾಖಲಿಸಿ ಜೈಲಿಗೆ ಕಳುಹಿಸಿರುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.

ಗ್ರಾಮಸ್ಥೆ ಲಕ್ಷ ್ಮಮ್ಮ ಮಾತನಾಡಿ, ಗ್ರಾಮದಲ್ಲಿ ಯಾವುದೇ ಜೂಜಾಟ ನಡೆದ ಇತಿಹಾಸ ಇಲ್ಲ. ಆದರೆ ಪೊಲೀಸರು ಏಕಾಏಕಿ ಗ್ರಾಮಕ್ಕೆ ಬಂದು ಜೂಜಾಟದಲ್ಲಿ ತೊಡಗಿದ್ದರು ಎಂದು ಹೇಳಿ 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರಲ್ಲಿ 7 ಮಂದಿಯನ್ನು ಬಂಧಿಸಿದ್ದು, ಉಳಿದವರನ್ನು ಬಂಧಿಸುವ ನೆಪದಲ್ಲಿ ಗ್ರಾಮಕ್ಕೆ ಬಂದು ಗ್ರಾಮಸ್ಥರನ್ನು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ತನಿಖೆ ಹೆಸರಲ್ಲಿ ಮಧ್ಯರಾತ್ರಿ 1ರಿಂದ 2 ಗಂಟೆ ಸಮಯದಲ್ಲಿ ಮಹಿಳೆಯರು ಒಂಟಿಯಾಗಿರುವ ಸಮಯದಲ್ಲಿ ಬಾಗಿಲು ತಟ್ಟಿ, ಬ್ಯಾಟರಿ ಹಾಕಿ, ಮಹಿಳೆಯರು ಭಯಬೀತರಾಗುವಂತೆ ಮಾಡುತ್ತಿದ್ದಾರೆ. ಪೊಲೀಸರ ಈ ನಡವಳಿಕೆಯಿಂದ ಗ್ರಾಮದ ಯುವಕರು ಬಂಧನದ ಭೀತಿಯಿಂದ ಊರು ತೊರೆದಿದ್ದು, ಮಾನಸಿಕವಾಗಿ ಹಿಂಸೆ ನೀಡುತ್ತಿರುವ ಪೊಲೀಸರ ಈ ಕ್ರಮ ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾನೂನು ವಿರೋಧಿಯಾಗಿ ನಡೆದುಕೊಂಡವರ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಗ್ರಾಮಸ್ಥರ ಅಡ್ಡಿ ಇಲ್ಲ. ಆದರೆ, ವಿನಾಕಾರಣ ಮಧ್ಯರಾತ್ರಿ ಮನೆಗಳ ಬಳಿ ಹೋಗಿ ಮಹಿಳೆಯರನ್ನು ಭಯಭೀತರನ್ನಾಗಿ ಮಾಡುವುದು ಸರಿಯಲ್ಲ. ಪೊಲೀಸರು ಈ ಕ್ರಮವನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಜಿ.ಪಂ. ಮಾಜಿ ಅಧ್ಯಕ್ಷ ಮುನೇಗೌಡ, ಗ್ರಾಮಸ್ಥರಾದ ಜಯಚಂದ್ರ, ಮುನಿರಾಜು, ಚೆನ್ನಕೇಶವ, ಶ್ರೀರಾಮ, ಅಂಬರೀಶ, ರಾಧಮ್ಮ, ಮಂಜುಳಮ್ಮ, ಗಾಯತ್ರಿ, ಮುನಿರತ್ನಮ್ಮ, ಲಕ್ಷ್ಮೀದೇವಮ್ಮ ದ್ಯಾವಮ್ಮ, ಸರ್ವಮಂಗಳಮ್ಮ, ಮುಂತಾಯಮ್ಮ, ವೆಂಕಟಮ್ಮ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪೊಲೀಸರು ಗ್ರಾಮಸ್ಥರ ನಡುವೆ ವಾಗ್ವಾದ

ಪ್ರತಿಭಟನೆ ಮಾಡಲೆಂದು ಠಾಣೆ ಎದುರು ಬಂದ ಗ್ರಾಮಸ್ಥರನ್ನು ಠಾಣೆ ಮುಂಭಾಗವೇ ಪೊಲೀಸರು ತಡೆದರು. ಈ ವೇಳೆ ಸಿಪಿಐ ಸುದರ್ಶನ್‌, ಪಿಎಸ್‌ಐ ಚೇತನ್‌ ಭೇಟಿ ನೀಡಿ ಚರ್ಚಿಸಿದಾಗ, ಪೊಲೀಸರು ತನಿಖೆ ಹೆಸರಲ್ಲಿ ಗ್ರಾಮಕ್ಕೆ ಬಂದು ಎಲ್ಲರಿಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ನಮಗೆ ವಿನಾಕಾರಣ ಯಾರಿಗೂ ತೊಂದರೆ ಕೊಡುವ ಅಗತ್ಯವಿಲ್ಲ. ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳ ಪತ್ತೆಗಾಗಿ ಗ್ರಾಮಕ್ಕೆ ಬರುತ್ತಿದ್ದು, ಅದು ನಮ್ಮ ಕರ್ತವ್ಯ. ಆರೋಪಿಗಳ ಹೊರತಾಗಿ ಗ್ರಾಮದಲ್ಲಿ ಬೇರೆ ಯಾರ ವಿರುದ್ಧವೂ ದೂರು ದಾಖಲಿಸಿಲ್ಲ. ಮುಂದೆ ಬೇರೆ ಯಾರಿಗೂ ತೊಂದರೆ ಕೊಡುವುದಿಲ್ಲ ಎಂದು ಹೇಳಿದರು. ಬಳಿಕ ಗ್ರಾಮಸ್ಥರು ಪ್ರತಿಭಟನೆ ವಾಪಸ್‌ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ