ಆ್ಯಪ್ನಗರ

ಸಾಲ ವಾಪಸ್‌ ಕೇಳಿದ್ದಕ್ಕೆ ಮಹಿಳೆಯ ಸುಟ್ಟು ಹಾಕಿದ ಪಾಪಿಗಳು ಅರೆಸ್ಟ್

ಜನವರಿ 20ರಂದು ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು.

Vijaya Karnataka 16 Feb 2019, 11:04 am
ಗೌರಿಬಿದನೂರು: ತಾಲ್ಲೂಕಿನ ಹೊಸೂರು ಹೋಬಳಿಯ ಸೋಮಶೆಟ್ಟಿಹಳ್ಳಿಯ ಹೊರವಲಯದ ಅರಣ್ಯ ಪ್ರದೇಶದಲ್ಲಿ ತ್ಯಾಮಗೊಂಡ್ಲು ಹೋಬಳಿಯ ತಾವರೆಕೆರೆ ಗ್ರಾಮದ ನಿವಾಸಿ ಶಾಂತಮ್ಮ ಎಂಬುವವರನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದ ಆರೋಪಿಗಳನ್ನು ಗೌರಿಬಿದನೂರು ಗ್ರಾಮಾಂತರ ಪೋಲೀಸರು ಬಂಧಿಸಿದ್ದಾರೆ.
Vijaya Karnataka Web arrst


ದೊಡ್ಡಬಳ್ಳಾಪುರ ತಾಲೂಕಿನ ಕಾಡತಿಪ್ಪೂರು ಗ್ರಾಮದ ನಿವಾಸಿಗಳಾದ ರಾಮಾಂಜಿನೇಯ(37) ಹಾಗೂ ನರಸಿಂಹಮೂರ್ತಿ ಅಲಿಯಾಸ್‌ ಕುಂಬಿ(35) ಬಂಧಿತ ಆರೋಪಿಗಳು.

ಜನವರಿ 20ರಂದು ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್‌ರೆಡ್ಡಿ, ಡಿವೈಎಸ್ಪಿ ಪ್ರಭುಶಂಕರ್‌, ವೃತ್ತ ನಿರೀಕ್ಷ ಕರಾದ ವೈ ಅಮರನಾರಾಯಣ, ಎಸ್ಸೈ ಅವಿನಾಶ್‌ ಹಾಗೂ ಸಿಬ್ಬಂದಿ ಬಂದು ಪರಿಶೀಲಿಸಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದರು. ಜ. 26ರಂದು ಸುಟ್ಟಿದ್ದ ಅಪರಿಚಿತ ಮಹಿಳೆಯ ದೇಹ ತ್ಯಾಮಗೊಂಡ್ಲು ಹೋಬಳಿಯ ತಾವರೆಕೆರೆ ನಿವಾಸಿ ನಾಗೇಶ್‌ ಎಂಬುವವರ ಪತ್ನಿ ಶಾಂತಮ್ಮ ಎಂಬುದಾಗಿ ಪತ್ತೆಯಾಗಿತ್ತು.

ಮೃತ ಮಹಿಳೆಯ ಮೊಬೈಲ್‌ ಕರೆಗಳನ್ನು ಆಧರಿಸಿ ಹಾಗೂ ಮೃತಳ ಸಂಬಂಧಿಕರಿಂದ ಮಾಹಿತಿ ಪಡೆದ ಗ್ರಾಮಾಂತರ ಪಿಎಸೈ ಅವಿನಾಶ್‌ ಮತ್ತು ತಂಡ ತನಿಖೆ ನಡೆಸುತ್ತಿದ್ದರು. ಈ ಹಂತದಲ್ಲಿ ಮೃತ ಮಹಿಳೆಯ ಮಗ ನೀಡಿದ ಮಾಹಿತಿ ಮೇರೆಗೆ ನಮ್ಮ ತಾಯಿಗೆ ರಾಮಾಂಜಿನೇಯ ಎಂಬುವವರು ಸಾಲ ಕೊಡಬೇಕೆಂದು ಪೋಲೀಸರಿಗೆ ಮಾಹಿತಿ ದೊರೆಯಿತು. ಇದನ್ನು ಆಧರಿಸಿ ಆರೋಪಿ ರಾಮಾಂಜಿನೇಯನ ಚಲನವಲನಗಳನ್ನು ಮೇಲೆ ನಿಗಾ ವಹಿಸಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಮೃತ ಶಾಂತಮ್ಮ ನೆಲಮಂಗಲದ ಖಾಸಗಿ ಗಾರ್ಮೆಂಟ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದರು. ದೊಡ್ಡಬಳ್ಳಾಪುರ ತಾಲೂಕಿನ ಕಾಡತಿಪ್ಪೂರು ಗ್ರಾಮದ ರಾಮಾಂಜಿನೇಯ ಎಂಬುವವರು ಕಾರ್ಖಾನೆಗೆ ಹೋಗುವ ಮಹಿಳೆಯರನ್ನು ತನ್ನ ಮಾಕ್ಸಿಕ್ಯಾಬ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಅದರಂತೆ ತ್ಯಾಮಗೊಂಡ್ಲು ಹೋಬಳಿಯ ತಾವರೆಕೆರೆ ಗ್ರಾಮದಲ್ಲಿ ಶಾಂತಮ್ಮ ಹಾಗೂ ಇತರರು ಮ್ಯಾಕ್ಸಿಕ್ಯಾಬ್‌ನಲ್ಲಿ ಹೋಗುತ್ತಿದ್ದರು. ಹೀಗಾಗಿ ಆರೋಪಿ ರಾಮಾಂಜಿನೇಯ ಶಾಂತಮ್ಮರಿಂದ 65 ಸಾವಿರ ಸಾಲ ಪಡೆದಿದ್ದ. ಪಡೆದು ಎಷ್ಟೋ ದಿನಗಳಾದರೂ ವಾಪಸ್‌ ಕೊಡಲಿಲ್ಲ. ಸಾಲ ಹಿಂತಿರುಗಿಸುವಂತೆ ಶಾಂತಮ್ಮ ಒತ್ತಾಯಿಸುತ್ತಿದ್ದಳು. ಅಲ್ಲದೆ, ಹಣ ಹಿಂತಿರುಗಿಸದೇ ಇದ್ದಲ್ಲಿ, ನಿಮ್ಮ ಮನೆ ಬಳಿ ಬಂದು ಗಲಾಟೆ ಮಾಡುತ್ತೇನೆಂದು ಎಚ್ಚರಿಸಿದ್ದಳು. ಇದರಿಂದ ಕುಪಿತಗೊಂಡ ಆರೋಪಿ ರಾಮಾಂಜಿನೇಯ ತನ್ನ ಸ್ನೇಹಿತ ನರಸಿಂಹಮೂರ್ತಿ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದ. ಜನವರಿ 19ರಂದು ಸಂಜೆ 6 ಗಂಟೆ ಸಮಯದಲ್ಲಿ ಗಾರ್ಮೆಂಟ್ಸ್‌ ನಿಂದ ಬಂದ ಶಾಂತಮ್ಮ ತಾವರೆಕೆರೆ ಬಸ್‌ ನಿಲ್ದಾಣದಲ್ಲಿ ಬಸ್‌ ಇಳಿಯುತ್ತಿದ್ದಂತೆ ಕಾರಿನಲ್ಲಿ ಬಂದ ಆರೋಪಿ ಶಾಂತಮ್ಮನನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದ. ಗೌರಿಬಿದನೂರು ತಾಲೂಕಿನ ಸೋಮಶೆಟ್ಟಿಹಳ್ಳಿ ಬಳಿಯ ನಿರ್ಜನ ಪ್ರದೇಶಕ್ಕೆ ಕೊಂಡ್ಯೊಯ್ದು ಕತ್ತು ಹಿಸುಕಿ ಸಾಯಿಸಿ ಪೇಟ್ರೋಲ್‌ ಸುರಿದು ಬೆಂಕಿ ಹಚ್ಚಿ ಸುಟ್ಟಿದ್ದ. ಇದನ್ನು ಆತನೇ ಪೋಲೀಸರ ವಿಚಾರಣೆ ವೇಳೆ ತಪೊ್ಪಪ್ಪಿಕೊಂಡಿದ್ದಾನೆ.

ಆರೋಪಿಗಳನ್ನು ಗ್ರಾಮಾಂತರ ಪೋಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಚರಣೆಯಲ್ಲಿ ಅಪರಾಧ ಪತ್ತೆ ದಳದ ಮುಖ್ಯ ಪೇದೆ ರಿಜ್ವಾನ್‌, ನಟರಾಜ್‌, ಪೇದೆಗಳಾದ ಅರುಣ್‌ಕುಮಾರ್‌, ನಂದ ಕುಮಾರ್‌, ಮಂಜುನಾಥ್‌, ಶಿವಶೇಖರ್‌, ಕೃಷ್ಣಪ್ಪ, ನವೀನ್‌, ಪುಷ್ಪಲತಾ, ಚಾಲಕರಾದ ಗಂಗುಲಪ್ಪ ಹಾಗೂ ಅಶ್ವತ್ಥ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ