ಆ್ಯಪ್ನಗರ

ಪ್ರಕೃತಿಯೊಡನೆ ಸೌಹಾದಯುತವಾಗಿ ಬದುಕುವ ಕಲೆಯೇ ‘ಯೋಗ’

ಪ್ರಕೃತಿಯೊಡನೆ ಸೌಹಾದಯುತವಾಗಿ ಬದುಕುವ ಕಲೆಯೇ 'ಯೋಗ' ಸುಮಾರು 2000 ವರ್ಷಗಳ ಹಿಂದೆ ಶ್ರೀ ಪತಂಜಲಿ ಮಹರ್ಷಿಯು ಯೋಗ ಸೂತ್ರಗಳನ್ನು ರಚಿಸುವಾಗ ಮುಂದೊಂದು ದಿನ ಇಡೀ ವಿಶ್ವ ...

Vijaya Karnataka Web 21 Jun 2017, 4:00 am

ಸುಮಾರು 2000 ವರ್ಷಗಳ ಹಿಂದೆ ಶ್ರೀ ಪತಂಜಲಿ ಮಹರ್ಷಿಯು ಯೋಗ ಸೂತ್ರಗಳನ್ನು ರಚಿಸುವಾಗ ಮುಂದೊಂದು ದಿನ ಇಡೀ ವಿಶ್ವ ಒಟ್ಟಾಗಿ ಯೋಗ ದಿನವನ್ನು ಆಚರಿಸುತ್ತದೆಂಬ ಕಲ್ಪನೆಯೂ ಅವರಿಗಿರಲಿಲ್ಲ.

'ಯೋಗ' ಭಾರತೀಯ ತತ್ತ್ವಶಾಸ್ತ್ರಗಳಲ್ಲಿ ಪ್ರಮುಖವಾದುದು. ಹಾಗೆಯೇ ಸಾಂಖ್ಯಾ ದರ್ಶನದ ನಿಕಟ ಸಂಬಂಧದೊಂದಿಗೆ, ಸಾಂಖ್ಯಾದ ಮೂಲಭೂತ ಅಂಶಗಳನ್ನೇ ಆಧರಿಸಿ 'ಯೋಗ ದರ್ಶನ'ವು ನಿಲ್ಲುತ್ತದೆ. ಹೀಗಾಗಿ 'ಸಾಂಖ್ಯ-ಯೋಗ' ಎಂದು ಒಟ್ಟಾಗಿ ಕರೆಯುವುದೂ ಚಾಲ್ತಿಯಲ್ಲಿದೆ. ಇದರ ಪ್ರಕಾರ 'ಪ್ರಕೃತಿ' ಪ್ರಧಾನವಾದುದು. ಮನುಷ್ಯ ತನ್ನನ್ನು ತಾನು ಪ್ರಕೃತಿಯ ನಿಯಮಗಳಿಗೆ ಒಗ್ಗಿಸಿಕೊಂಡು, ಅದರಲ್ಲಿಯೇ ಮೇಳೈಸಿಕೊಂಡು, ಪ್ರಕೃತಿಯೊಡನೆ ಸೌಹಾರ್ದಯುತವಾಗಿ ಬದುಕುವ ಕಲೆಯೇ 'ಯೋಗ' ಎಂದು ಸರಳವಾಗಿ ಹೇಳಬಹುದು.

ಯೋಗ ಕೇವಲ ಕೈ ಕಾಲುಗಳನ್ನು ಬಾಗಿಸಿ, ಮೂಗಿಡಿದು ಉಸಿರುಗಟ್ಟುವುದಲ್ಲ. ಅದೊಂದು ಪ್ರಾಪಂಚಿಕ ತತ್ತ್ವ, ಜೀವನ ವಿಧಾನ, ಬದುಕುವ ಕಲೆ, ಸುಂದರವಾದ ವಿಜ್ಞಾನ. ವಿಜ್ಞಾನ ಎನ್ನುವಾಗ ಮತ್ತೊಂದು ಮಾತು, ಸರಿಯಾದ ವೈಜ್ಞಾನಿಕ ತಿಳಿವಳಿಕೆಗಳಿಲ್ಲದೆ ಕೇವಲ ನಂಬಿಕೆ, ಗುರುಭಕ್ತಿ ಆಧಾರದ ಮೇಲೆ ಯೋಗಾಭ್ಯಾಸ ಮಾಡಿದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ!

ಯೋಗದ ಅಷ್ಟಾಂಗಗಳೂ ಪ್ರಮುಖವಾದರೂ ಆಸನ ಮತ್ತು ಪ್ರಾಣಾಯಾಮ ಎಂಬ ಎರಡು ಅಂಗಗಳಿಗೆ ನಾವಿಂದು ಹೆಚ್ಚು ಜೋತು ಬಿದ್ದಿದ್ದೇವೆ. ಅವುಗಳಿಂದ ನಮ್ಮ ಆರೋಗ್ಯಕ್ಕಾಗುವ ಉಪಯೋಗಗಳೂ ಇದಕ್ಕೆ ಕಾರಣ. ಆರೋಗ್ಯ ಕಾಪಾಡಿಕೊಳ್ಳುವ ಸವಾಲುಗಳು ದಿನೇ ದಿನೆ ಹೆಚ್ಚುತ್ತಿವೆ. ವೈಜ್ಞಾನಿಕ ಸಂಶೋಧನೆ, ಪರಿಹಾರವೂ ಒಟ್ಟೊಟ್ಟಿಗೆ ಸಾಗಿವೆ. ಇದೇ ಸಂದರ್ಭದಲ್ಲಿ ವೈಜ್ಞಾನಿಕ ಜಗತ್ತು 'ಯೋಗ'ದ ಮೇಲೆ ಹರಿಸಿದ ಬೆಳಕಿನಿಂದಾಗಿ ಇಂದು 'ಯೋಗ' ಮನೆ ಮಾತಾಗಿದೆ. ಹೀಗಾಗಿಯೇ ಈ ನೆಲದಲ್ಲಿಯೇ ಹುಟ್ಟು ಪಡೆದರೂ, 'ಯೋಗ' ವಿದೇಶಗಳಲ್ಲಿ ಹೆಚ್ಚು ಪಸರಿಸಿದೆ. ಇಡೀ ವಿಶ್ವದಲ್ಲಿಯೇ ಚೀನಾದಲ್ಲಿ ಯೋಗಾಭ್ಯಾಸ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಅಲ್ಲಿನ ಜನ, ಆಡಳಿತ ವರ್ಗವು ಯೋಗ ಅಧ್ಯಯನ ಹಾಗೂ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಪುಟ್ಟ ರಾಷ್ಟ್ರ ವಿಯೆಟ್ನಾಂ ಕೂಡ ಹಿಂದೆ ಬದ್ದಿಲ್ಲ.

ಹೀಗೆ ವೈಜ್ಞಾನಿಕ ಅಧ್ಯಯನ ಮತ್ತು ಹೊಸ ಸಂಶೋಧನೆಗಳು 'ಯೋಗ'ವನ್ನು ಹಿಮಾಲಯದ ಸನ್ಯಾಸಿಗಳಿಂದ, ಕಾಡು-ಬೆಟ್ಟಗುಡ್ಡಗಳ ಋುಷಿ ಮುನಿಗಳಿಂದ ಜನಸಾಮಾನ್ಯರ ಪಾದದೆಡೆಗೆ ಎಳೆದು ತಂದಿದೆ.

ಇಂತಹ ಒಂದು ಅದ್ಭುತ ಕಲೆ, ಅತ್ಯಂತ ಸುಂದರ- ಪ್ರಾಯೋಗಿಕ ವಿಜ್ಞಾನ, ಉತ್ತಮ ಆರೋಗ್ಯದ ಪ್ರಬಲ ಅಸ್ತ್ರ ಸಾವಿರಾರು ವರ್ಷಗಳ ಕಾಲ ಜನಸಾಮಾನ್ಯರಿಗೆ ತಲುಪದೆ ಕೆಲವರಲ್ಲಿ ಮಾತ್ರ ಉಳಿದುಕೊಂಡು ಬಂತು. ಇದು ದುರಂತವೇ ಇರಬಹುದು.

ನಮ್ಮ ನಾಡಿನ ವಿಷಯಕ್ಕೆ ಬಂದಾಗ ಕೃಷ್ಣಾಮಾಚಾರರು, ಪಟ್ಟಾಭಿಜೋಯೀಸರು, ಅಯ್ಯಂಗಾರರೇ ಅಲ್ಲ. ಕರ್ನಾಟಕದ ನಾಥಪಂಥದ ಪರಂಪರೆಯಲ್ಲಿ, ವಚನ ಚಳಿವಳಿಗಾರರಲ್ಲಿ ಯೋಗ ಮೇಳೈಸಿ ಬಂದಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಿದೆ.

ಈಗಂತೂ ಯೋಗ ಮನೆ ಮಾತಾಗಿದೆ. ಹಬ್ಬದ ರೀತಿಯ ಆಚರಣೆಗಳು ಪ್ರಾರಂಭವಾಗಿವೆ. ಇದೇ ಸಂದರ್ಭದಲ್ಲಿ ಸ್ವಲ್ಪ ಎಚ್ಚರದ ತುರ್ತು ಅಗತ್ಯವೂ ಇದೆ. ತಪ್ಪು ರೀತಿಯ ಯೋಗ ಕ್ರಮಗಳನ್ನು ಅನುಸರಿಸಿ ಆರೋಗ್ಯದ ಮೇಲೆ ದೊಡ್ಡ ಪ್ರಮಾಣದ ಹಾನಿ ಮಾಡಿಕೊಳ್ಳುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಯೋಗ ಕಲಿಯುವಾಗ ಅರ್ಹ, ವೈಜ್ಞಾನಿಕ ತಿಳಿವಳಿಕೆಯುಳ್ಳ ಶಿಕ್ಷ ಕರನ್ನೇ ಆಯ್ದುಕೊಳ್ಳಿ. ಯೋಗ ಶಿಕ್ಷ ಕರಿಗೆ ಮಾನವ ದೇಹದ ಸಂರಚನೆ, ಅನಾಟಮಿಯ ಕನಿಷ್ಟ ಜ್ಞಾನವಾದರೂ ಇರಲೇಬೇಕು.

Vijaya Karnataka Web yoga is the art of living with nature
ಪ್ರಕೃತಿಯೊಡನೆ ಸೌಹಾದಯುತವಾಗಿ ಬದುಕುವ ಕಲೆಯೇ ‘ಯೋಗ’


--

ಯೋಗದ ಹೆಸರಿನಲ್ಲಿ ಲಕ್ಷ ಕೋಟಿಗಳ ವ್ಯಾಪಾರ ಜೋರಾಗಿದೆ. ಯೋಗವನ್ನು ಧರ್ಮಕ್ಕೆ ಜೋಡಿಸಿ ಭಿನ್ನ ಬೇಧ ಮಾಡುವುದೂ ನಡೆಯುತ್ತಿದೆ. ಇದು ಯೋಗ ತತ್ತ್ವಕ್ಕೆ ವಿರೋಧವಾದುದು. ಪತಂಜಲಿ ಮಹರ್ಷಿಗಳು ಯೋಗ ಸೂತ್ರಗಳನ್ನು ರಚಿಸಿದ್ದು ಮನುಷ್ಯರಿಗಾಗಿಯೇ ಹೊರತು ಜಾತಿ-ಧರ್ಮಗಳಿಗಾಗಿ ಅಲ್ಲ. ಯೋಗ ಸೂತ್ರಗಳು ಮಂತ್ರಗಳಾಗಲಿ, ಹೋಮ-ಹವನಗಳಾಗಲಿ, ಪೂಜೆ ಪುರಸ್ಕಾರಗಳಾಗಲೀ ಅಲ್ಲ, ಬದಲಿಗೆ ಅದೊಂದು ಪ್ರಾಯೋಗಿಕ ವಿಜ್ಞಾನ!

-ಎಸ್‌. ಪ್ರಸಾದ್‌, ಯೋಗ ಗುರು, ಪರಿವರ್ತನ ಯೋಗ ಸಂಸ್ಥೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ