ಆ್ಯಪ್ನಗರ

ಎಸ್‌ಟಿಜೆ ಕಾಲೇಜಿನಲ್ಲಿ ಜಾನಪದ ಸುಗ್ಗಿ ಸಂಭ್ರಮ

ಆ ಮನೆಯಾವರಣದಲ್ಲಿ ಎಲ್ಲೆಲ್ಲೂ ತಳಿರು ತೋರಣ, ಬಾಳೆಕಂಬ, ಅಡಕೆ ಹೊಂಬಾಳೆ ಯಲ್ಲಿ ಸಿಂಗರಿಸಿದ ಕಳಸ, ಬಾಯಲ್ಲಿ ನೀರೂರಿಸುವ ಬೂಂದಿ, ಪಾಯಸ, ಚಕ್ಕುಲಿ, ಕೋಡುಬಳೆ ಮತ್ತಿತರೆ ತರಹೇವಾರಿ ಅಡುಗೆ, ಮೆಟಕ್ಕಿಕುಕ್ಕೆ, ಬಾಸಿಂಗ, ಹಸೆಚಾಪೆ, ಬಂಗಾರದ ಕುಕ್ಕೆಗಳ ಜೋಡಣೆ. ಈ ಮಧ್ಯೆ ಸೀರೆಯುಟ್ಟ ನೀರೆಯರ ಒನಪು ಒಯ್ಯಾರ.. ಇದು ಪಕ್ಕಾ ಮದುವೆ ಮನೆ ಸಿದ್ಧತೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು.

ವಿಕ ಸುದ್ದಿಲೋಕ 1 Apr 2016, 5:04 am
ಚಿಕ್ಕಮಗಳೂರು: ಆ ಮನೆಯಾವರಣದಲ್ಲಿ ಎಲ್ಲೆಲ್ಲೂ ತಳಿರು ತೋರಣ, ಬಾಳೆಕಂಬ, ಅಡಕೆ ಹೊಂಬಾಳೆ ಯಲ್ಲಿ ಸಿಂಗರಿಸಿದ ಕಳಸ, ಬಾಯಲ್ಲಿ ನೀರೂರಿಸುವ ಬೂಂದಿ, ಪಾಯಸ, ಚಕ್ಕುಲಿ, ಕೋಡುಬಳೆ ಮತ್ತಿತರೆ ತರಹೇವಾರಿ ಅಡುಗೆ, ಮೆಟಕ್ಕಿಕುಕ್ಕೆ, ಬಾಸಿಂಗ, ಹಸೆಚಾಪೆ, ಬಂಗಾರದ ಕುಕ್ಕೆಗಳ ಜೋಡಣೆ. ಈ ಮಧ್ಯೆ ಸೀರೆಯುಟ್ಟ ನೀರೆಯರ ಒನಪು ಒಯ್ಯಾರ.. ಇದು ಪಕ್ಕಾ ಮದುವೆ ಮನೆ ಸಿದ್ಧತೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು.
Vijaya Karnataka Web
ಎಸ್‌ಟಿಜೆ ಕಾಲೇಜಿನಲ್ಲಿ ಜಾನಪದ ಸುಗ್ಗಿ ಸಂಭ್ರಮ


ಇದೆಲ್ಲಾ ನಗರದ ಶ್ರೀ ತರಳಬಾಳು ಜಗದ್ಗುರು ಮಹಿಳಾ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಾನಪದ ಕಲರವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳು. ಗ್ರಾಮೀಣ ಭಾಗದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ, ಗ್ರಾಮೀಣ ಸೊಗಡನ್ನು ಹಚ್ಚಹಸಿರಾಗಿಡುವ ಪ್ರಯತ್ನದ ಫಲವಾಗಿ ಎಸ್‌ಟಿಜೆ ಕಾಲೇಜು ಆವರಣ ಗುರುವಾರ ಅಕ್ಷರಶಃ ಹಳ್ಳಿಯ ವಾತಾವರಣದಲ್ಲಿ ಕಂಗೊಳಿಸುತ್ತಿತ್ತು.

ಅಳಿವಿನಂಚಿನಲ್ಲಿರುವ ಗ್ರಾಮೀಣ ಭಾಗದ ಚೌಕಾಬಾರ, ಚೇಣಿಕಲ್ಲಾಟ, ಹಗ್ಗ ದಾಟ, ಮಕ್ಕಳಾಟ, ಅಳುಗುಣಿ ಆಟಗಳನ್ನು ಆಡುತ್ತಿದ್ದ ತೃತೀಯ ಬಿಎ ವಿದ್ಯಾರ್ಥಿನಿ ಯರು, ತಮಗರಿವಿಲ್ಲದಂತೆ ಬಾಲ್ಯದ ನೆನಪಿಗೆ ಜಾರಿ ಖುಷಿ ಅನುಭವಿಸಿದರು.

ಸಂಕ್ರಾಂತಿ ಹಬ್ಬದ ಆಚರಣೆ ಹೇಗಿರುತ್ತೆ ಎಂಬುದನ್ನು ಸುಗ್ಗಿ ಸಂಕ್ರಾಂತಿ ಮೂಲಕ ತೋರಿಸಲು ಪದವಿ ವಿದ್ಯಾರ್ಥಿನಿಯರು ಭತ್ತ, ರಾಗಿಯ ರಾಶಿಯನ್ನೆ ಹಾಕಿ ಬೆಲವಣ್ಣನಿಟ್ಟು ಪೂಜಿಸಿದ್ದರು. ಕಣಜ ತುಂಬಿಸುವ ಮೊದಲು ಕಣದಲ್ಲಿ ಭತ್ತ, ರಾಗಿ ಜೋಳ ಮತ್ತಿತರೆ ಧಾನ್ಯಗಳನ್ನು ರಾಶಿ ಹಾಕಿ ಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಬಗೆ, ಸಂಕ್ರಾಂತಿಯಂದು ಮಳೆಬೆಳೆ ಹುಲುಸಾಗಿ ಬಂದು ನಾಡು ಸಮೃದ್ಧವಾಗಲಿ ಎಂದು ದೇವರನ್ನು ನೆನೆಯುವ ಪದ್ಧತಿಯ ಬಗ್ಗೆ ಸ್ವತಃ ಗ್ರಾಮೀಣ ಭಾಗದ ವಿದ್ಯಾರ್ಥಿ ನಿಯರೇ ವಿವರಣೆ ನೀಡುತ್ತಿದ್ದದು ಅರ್ಥಪೂರ್ಣವಾಗಿತ್ತು.

ದಸರಾ, ಆಯುಧಪೂಜೆ ಹಬ್ಬಗಳನ್ನು ಆಚರಿಸಿದ ವಿದ್ಯಾರ್ಥಿಗಳು ಚಾಮುಂ ಡೇಶ್ವರಿಯನ್ನು ಪೂಜಿಸಿ, ಬನ್ನಿಮರ ಸೃಷ್ಟಿಸಿದ್ದರು. ದಸರಾಬೊಂಬೆಗಳು, ಹೂವು, ಹಣ್ಣು, ಲಾಡು ಮತ್ತಿತರೆ ಸಿಹಿ ಪದಾರ್ಥಗಳಿಂದ ದೇವತೆಗೆ ನೈವೇದ್ಯ ಮಾಡಿ ದಸರೆಯ ಸಂಭ್ರಮವನ್ನು ಪುನರ್ ಸೃಷ್ಟಿ ಮಾಡಿದ್ದರು.

ಗ್ರಾಮೀಣ ಜನರ ಜೋಡೆತ್ತಿನ ಗಾಡಿ, ನೇಗಿಲು, ನೊಗ, ಊರ ಪ್ರಮುಖರ ಮನೆ, ಪಂಚಾಯಿತಿ ಕಟ್ಟೆ, ದಾವಾಖಾನೆ, ಬಾವಿ, ಗುಡ್ಡದ ಮೇಲಿನ ಭೂತಪ್ಪನ ಗುಡಿ ಹೀಗೆ ಕೆಲವು ದಶಕಗಳ ಹಿಂದಿನ ಕಾಲದಲ್ಲಿದ್ದ ಕೃಷಿಪರಿಕರಗಳು, ಸಂಪ್ರದಾಯ ಪದ್ಧತಿಗಳ ಪರಿಚಯ, ಮದುವೆ ವೇಳೆ ಶಾಸ್ತ್ರಕ್ಕಾಗಿ ಧರಿಸುವ ಮೆಟ್ಟಕ್ಕಿ ಕುಕ್ಕೆ, ಹಸೆ ಚಾಪೆ, ಬಂಗಾರದ ಕುಕ್ಕೆ, ಕಂದನ ತೊಟ್ಟಿಲನ್ನು ಯುವತಿಯರು ಪ್ರದರ್ಶನಕ್ಕಿಟ್ಟು ಅವುಗಳ ಉಪಯುಕ್ತತೆ ಬಗ್ಗೆ ವಿವರಿಸಿದರು. ಗ್ರಾಮೀಣ ಜನಪದ ಜೀವನಶೈಲಿ ಪರಿಚಯಿಸುವ ಶಾಲಿನಿ ನೇತೃತ್ವದ ವಸ್ತುಪ್ರದರ್ಶನ ಗಮನಸೆಳೆಯಿತು.

ವಿದ್ಯಾರ್ಥಿಗಳಲ್ಲಿ ಧರ್ಮಸಹಿಷ್ಣುತೆ, ಸಾಮರಸ್ಯ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಪ್ರತ್ಯೇಕ ಮೂರೂ ಕೊಠಡಿಗಳಲ್ಲಿ ರಂಜಾನ್, ಮಹಾಶಿವರಾತ್ರಿ ಹಾಗೂ ಕ್ರಿಸ್‌ಮಸ್ ಹಬ್ಬ ಆಚರಿಸಿದರು. ಪ್ರಥಮ ಬಿಕಾಂ ವಿದ್ಯಾರ್ಥಿನಿಯರು ರಂಜಾನ್ ಹಬ್ಬದ ಸಿದ್ಧತೆ ಮಾಡಿ, ಅಲ್ಲಿ ಮೆಕ್ಕಾ ಪ್ರಾರ್ಥನಾ ಮಂದಿರ, ದರ್ಗಾ ನಿರ್ಮಿಸಿ ಅಲಂಕೃತಗೊಳಿಸಿದ್ದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿಯರು ಮಹಾಶಿವರಾತ್ರಿ ಹಬ್ಬದ ಸಡಗರದಲ್ಲಿದ್ದರು. ತೃತೀಯ ಬಿಕಾಂ ವಿದ್ಯಾರ್ಥಿಗಳು ಕ್ರಿಸ್ ಮಸ್ ಆಚರಿಸಿ, ಬಾಲಯೇಸು ಬಾಲ್ಯ ಜೀವನ ವೃತ್ತಾಂತ, ನಗಿಸುವ ಸಾಂತಕ್ಲೋಸ್, ಮೊಂಬತ್ತಿ ಹಚ್ಚಿ ಪ್ರಾರ್ಥಿಸಿದರು.

ಪ್ರತಿ ವರ್ಷ ಕಾಲೇಜಿನಲ್ಲಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಕಳೆದ ವರ್ಷ ಚಪ್ಪರ ಹಾಕಿ ಸುಗ್ಗಿ ಸಂಭ್ರಮ ಆಚರಿಸುತ್ತಿದ್ದೇವೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜೆ.ಕೆ.ಭಾರತಿ ಹೇಳುತ್ತಾರೆ. ಈ ಕಾರ್ಯಕ್ರಮ ಆಯೋಜನೆಯಲ್ಲಿ ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿಯ ಪರಿಶ್ರಮ ಸಾಕಷ್ಟಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ