ಅಜ್ಜಂಪುರ/ಚಿಕ್ಕಮಗಳೂರು: ತರೀಕೆರೆ ತಾಲೂಕು ಬುಕ್ಕಾಂಬುಧಿಯ ಅನುದಾನಿತ ಪದವಿಪೂರ್ವ ಕಾಲೇಜಿನ ಉಪನ್ಯಾಸಕರೊಬ್ಬರು ಕಳೆದ ಆಗಸ್ಟ್ 30ರಿಂದ ನಾಪತ್ತೆಯಾಗಿದ್ದು, ಅಪಹರಣಗೊಂಡಿರುವ ಶಂಕೆ ವ್ಯಕ್ತವಾಗಿದೆ.
ತಿಪ್ಪೇಸ್ವಾಮಿ ಅನುದಾನಿತ ಪದವಿಪೂರ್ವ ಕಾಲೇಜು ಉಪನ್ಯಾಸಕ ಡಿ.ಎಸ್.ಕೋಟೇಶ್ವರಯ್ಯ ನಾಪತ್ತೆಯಾದವರು. ಕಾಲೇಜಿನ ಪ್ರಾಂಶುಪಾಲರಿಗೆ ಇವರು ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ತಮ್ಮನ್ನು ಯಾರೋ ಅಪಹರಿಸಿದ್ದು, ಇದನ್ನೇ ರಜಾ ಅರ್ಜಿ ಎಂದು ಪರಿಗಣಿಸಿ ತಮಗೆ ರಜೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಅಜ್ಜಂಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ವ್ಯಕ್ತಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಪತ್ರ ಎಲ್ಲಿಂದ ಬಂದಿದೆ ಎಂಬುದನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ರಾಯಚೂರು ಜಿಲ್ಲೆ ಮಂತ್ರಾಲಯಕ್ಕೆ ಸಮೀಪದಲ್ಲಿರುವ ಅದೋನಿ ಎಂಬ ಗ್ರಾಮದಿಂದ ಪತ್ರವನ್ನು ಅಂಚೆಗೆ ಹಾಕಲಾಗಿದೆ ಎಂದು ಹೇಳಲಾಗಿದೆ. ಕೋಟೇಶ್ವರಯ್ಯ ಅವರನ್ನು ನಿಜವಾಗಿಯೂ ಅಪಹರಿಸಲಾಗಿದೆಯೋ ಅಥವಾ ಸಾಲಬಾಧೆ ತಾಳದೆ ಅವರೇ ನಾಪತ್ತೆಯಾಗಿದ್ದಾರೋ ಎಂಬುದು ಪ್ರಶ್ನೆಯಾಗಿದೆ.
ಕೋಟೇಶ್ವರಯ್ಯ ಬರೆದಿರುವ ಪತ್ರದಲ್ಲಿ 'ಆಗಸ್ಟ್ 30ರಂದು ನಾನು ತರೀಕೆರೆಗೆ ಹೋಗಿ ಹಣ ಹೊಂದಿಸಿಕೊಂಡು ವಾಪಸ್ ಅಜ್ಜಂಪುರಕ್ಕೆ ಬರಲು ಬಸ್ ನಿಲ್ದಾಣದ ಬಳಿ ಬಸ್ಗೆ ಕಾಯುತ್ತಿದ್ದೆ. ಆದರೆ, ಕೊನೆ ಬಸ್ ಆಗಿದ್ದ ಸಹಕಾರ ಸಾರಿಗೆ ಮಿಸ್ ಆಗಿದ್ದರಿಂದ ಅಲ್ಲಿಯೇ ಕಾಯುತ್ತ ನಿಂತಿದ್ದೆ. ಈ ಸಂದರ್ಭ ಕಾರೊಂದು ಬಂದಿದ್ದು, ಕೈ ಅಡ್ಡಹಾಕಿ ಅಜ್ಜಂಪುರಕ್ಕೆ ಹೋಗುತ್ತೀರ ಎಂದು ಕೇಳಿದೆ. ಹೌದು ಎಂದು ಕಾರಿಗೆ ಹತ್ತಿಸಿಕೊಂಡು 2ಕಿ.ಮೀ. ಬಂದ ನಂತರ ಮುಖಕ್ಕೆ ಕರವಸ್ತ್ರ ಹಿಡಿದರು. ಮುಂದೆ ಏನಾಯಿತು ಎಂಬುದು ನನಗೆ ತಿಳಿಯಲಿಲ್ಲ' ಎಂದಿದ್ದಾರೆ.
'ಕಣ್ಣಿಗೆ ಬಟ್ಟೆ ಕಟ್ಟಿ ಎರಡು ದಿನಕ್ಕೊಮ್ಮೆ ಸ್ಥಳ ಬದಲಿಸುತ್ತಿದ್ದಾರೆ. ಮೊಬೈಲ್, ದುಡ್ಡು, ಎಟಿಎಂ ಕಾರ್ಡ್ ಎಲ್ಲವನ್ನೂ ಕಸಿದುಕೊಂಡಿದ್ದಾರೆ. ನಾನು ಎಲ್ಲಿದ್ದೇನೆ ಎಂಬುದೂ ಗೊತ್ತಿಲ್ಲ. ತಪ್ಪಿಸಿಕೊಂಡು ಬರುವ ಪ್ರಯತ್ನ ಮಾಡುತ್ತಿದ್ದೇನೆ. ತಂಡದಲ್ಲಿರುವ ಒಬ್ಬ ವ್ಯಕ್ತಿ ಮಾನವೀಯತೆ ಹೊಂದಿದ್ದು, ಆತನ ಸಹಕಾರದಿಂದ ಈ ಪತ್ರ ಕಳಿಸಿದ್ದೇನೆ. ಇದನ್ನೇ ರಜೆ ಅರ್ಜಿ ಎಂದು ಪರಿಗಣಿಸಿ. ನನ್ನ ಕುಟುಂಬದವರಿಗೂ ಮಾಹಿತಿ ಕೊಡಿ' ಎಂದು ಬರೆಯಲಾಗಿದೆ.
ಕಾಲೇಜಿನ ಪ್ರಾಂಶುಪಾಲರು ಕುಟುಂಬದವರಿಗೆ ಮಾಹಿತಿ ನೀಡುವ ಜತೆಗೆ ಪತ್ರವನ್ನು ಅಜ್ಜಂಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಕೋಟೇಶ್ವರಯ್ಯ ದೀರ್ಘ ಕಾಲದಿಂದ ಗೈರಾಗಿರುವುದರಿಂದ ಪ್ರಾಂಶುಪಾಲರು ಹಾಜರಾತಿ ಪುಸ್ತಕದಲ್ಲೂ 'ಗೈರು' ಎಂದೇ ನಮೂದಿಸಿದ್ದಾರೆ.