ಶೃಂಗೇರಿ: ಕುವೆಂಪು ಕಾಡಿಗೆ ಬೇಟೆಯಾಡಲು ಹೋಗುವಾಗ ತನ್ನ ಚೀಲದಲ್ಲಿ ಮದ್ದು, ಗುಂಡುಗಳ ಜತೆಗೆ ಶ್ರೀ ವಿವೇಕನಾಂದರ ಪುಸ್ತಕಗಳು ಮತ್ತು ಶ್ರೀರಾಮಕೃಷ್ಣ ಪರಮಹಂಸರ ಭಾವಚಿತ್ರವಿರುತ್ತಿತ್ತು. ಊರಿನಲ್ಲಿ ಸಿಗದ ಶಾಂತಿಯನ್ನು ಅರಸುತ್ತಾ ಅವರು ಕಾಡಿಗೆ ತೆರಳಿ ನೂರಾರು ಪುಸ್ತಕ ಹಾಗೂ ಕವನಗಳನ್ನು ರಚಿಸಿದರು ಎಂದು ಪರಿಸರ ತಜ್ಞ ಡಾ.ನರೇಂದ್ರ ರೈ ದೇರ್ಲ ಹೇಳಿದರು.
ಅವರು ಶನಿವಾರ ತಾಲೂಕು ಒಕ್ಕಲಿಗರ ಸಂಘ ಆದಿಚುಂಚನಗಿರಿ ಸಮುದಾಯಭವನದಲ್ಲಿ ವಿಶ್ವಮಾನವ ಸಂದೇಶ-ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುವೆಂಪು ಒಬ್ಬ ಪ್ರಕೃತಿಯ ಉಪಾಸಕ. ನಾವಿಂದು ವಾಚಾಳಿಗಳಾಗುತ್ತಿದ್ದೇವೆ. ಕುವೆಂಪು ಪ್ರೀತಿಸಿದ್ದು ಮೌನವನ್ನು ಮಾತ್ರ. ಬೇಡ ವಾಲ್ಮೀಕಿ ರಾಮಾಯಣ ಬರೆದ. ಭಾರತದಲ್ಲಿ ವಿಶ್ವವಿದ್ಯಾಲಯಗಳಲ್ಲಿ ನಡೆದ ಘಟನೆಯ ಕುರಿತು ಮಾಧ್ಯಮಗಳು ಬಿತ್ತರಿಸಿದ ರೀತಿ ನಮಗೆ ಗೊಂದಲ ಉಂಟು ಮಾಡಿದೆ. ಎಡವೂ ಅಲ್ಲದ-ಬಲವೂ ಅಲ್ಲದ ವಿಚಾರಧಾರೆಯನ್ನು ಕುವೆಂಪು ನೀಡಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಅವರ ಪುಸ್ತಕಗಳನ್ನು ಓದಿದರೆ ನಮ್ಮೊಳಗಿನ ಒಳಪ್ರಪಂಚ ಅರ್ಥವಾಗುತ್ತದೆ. ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ನೀಡಿದ ಕುವೆಂಪು ಪ್ರಪಂಚಕ್ಕೆ ಇಟ್ಟ ಹೆಸರು ಅನಿಕೇತನ ಎಂದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ವಿ.ಶಂಕರಪ್ಪ ಅಧ್ಯಕ್ಷ ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಕೆ.ವಿ.ಧರ್ಮಪ್ಪಗೌಡ, ಕಾರ್ಯದರ್ಶಿಎಚ್.ಎಸ್.ಸಿದ್ದಪ್ಪ, ಜಿಲ್ಲಾ ಪ್ರತಿನಿಧಿ ಕೆ.ಎಂ.ಶ್ರೀನಿವಾಸ್, ಸಂಘದ ನಿರ್ದೇಶಕರಾದ ಕಲ್ಕುಳ್ಳಿ ಚಂದ್ರಶೇಖರ್ ಹೆಗ್ಡೆ, ಪ್ರಕಾಶ್, ಕಾರ್ಯಕ್ರಮದ ಸಂಚಾಲಕ ಕೆಲವಳ್ಳಿ ಕಳಸಪ್ಪ ಹಾಜರಿದ್ದರು.
ಸಾಂಸ್ಕ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಾಯಕ ಕೆ.ಯುವರಾಜ್ ಮತ್ತು ತಂಡ ಹಾಗೂ ಶ್ರೀ ಚೌಡೇಶ್ವರಿ ಜಾನಪದ ತಂಡದಿಂದ ನಡೆದ ಗೀತಾಗಾಯನ ನಡೆಯಿತು.
ಈ ಸಂದರ್ಭ ಐಎಎಸ್ನಲ್ಲಿ ತೇರ್ಗಡೆಗೊಂಡ ಕೊಪ್ಪ ತಾಲೂಕಿನ ಹೊಸೂರಿನ ಪ್ರತಿಭಾನ್ವಿತ ವಿದ್ಯಾರ್ಥಿ ಎಚ್.ಎಸ್.ಮಂಜುನಾಥ್ ಅವರನ್ನು ಗೌರವಿಸಲಾಯಿತು.