ಚಿಕ್ಕಮಗಳೂರು:ಬಗರ್ಹುಕುಂ ಅರ್ಜಿಗಳನ್ನು ತಿಂಗಳೊಳಗೆ ಇತ್ಯರ್ಥಪಡಿಸಿ ಅಷ್ಟೂ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಿ... ಮೇ ತಿಂಗಳಲ್ಲಿ ನಾನೇ ಬಂದು ನಿಮಗೆ ನಮಸ್ಕಾರ ಮಾಡ್ತೀನಿ...
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಹಸೀಲ್ದಾರ್ಗಳಿಗೆ ಹೇಳಿದ ಮಾತಿದು. ಜಿಲ್ಲಾ ಪಂಚಾಯಿತಿಯ ನಜೀರ್ಸಾಬ್ ಸಭಾಂಗಣದಲ್ಲಿ ಬುಧವಾರ ಸಂಜೆ ಬರ, ನಮೂನೆ 50-53, ಭೂ ಕಂದಾಯ ಕಾಯಿದೆ 94ಸಿ, 94ಸಿಸಿ ಪರಿಶೀಲನಾ ಸಭೆಯಲ್ಲಿ ಯಾವುದೇ ಸಬೂಬು ಹೇಳದೆ ತಿಂಗಳೊಳಗೆ ಹಕ್ಕುಪತ್ರ ವಿತರಿಸಲು ಸೂಚಿಸಿದರು.
25-30 ವರ್ಷ ಕಳೆದರೂ ಬಗರ್ಹುಕುಂ ಅರ್ಜಿ ವಿಲೇವಾರಿ ಮಾಡದಿದ್ದರೆ ನಮಗೆ ಗೌರವ ಬರುವುದಿಲ್ಲ. ನನಗೆ ಮಂತ್ರಿ ಎಂದು ಹೇಳಿಕೊಳ್ಳುವ ಅರ್ಹತೆಯೂ ಇರುವುದಿಲ್ಲ. ಕಂದಾಯ ಇಲಾಖೆ ಮಾತೃ ಇಲಾಖೆ. ಇಲ್ಲಿನ ಆಡಳಿತ, ಕೆಲಸ ಜನರಿಗೆ ಎದ್ದು ಕಾಣುವಂತಿದ್ದರೆ ಇತರೆ ಇಲಾಖೆಗಳೂ ಚುರುಕಾಗುತ್ತವೆ. ತೀರ್ಮಾನ ಆಗಿರುವ ಎಲ್ಲ ಪ್ರಕರಣಗಳಿಗೆ ಏಪ್ರಿಲ್ ಕೊನೆಯೊಳಗೆ ಹಕ್ಕುಪತ್ರ ಕೊಡಲೇಬೇಕು ಎಂದು ತಾಕೀತು ಮಾಡಿದರು.
ಮನುಷ್ಯ ಒಂದು ಸ್ಥಳದಲ್ಲಿ ಹುಟ್ಟಿ ಒಂದಷ್ಟು ವರ್ಷ ಬದುಕಿ ಸಾಯುತ್ತಾನೆ. ಆತ ನೆಲೆಸಿದ ಜಾಗಕ್ಕೆ ಆತನಿಗೊಂದು ಹಕ್ಕುಪತ್ರ ಇಲ್ಲವೆಂದರೆ ಹೇಗೆ? ಇದನ್ನು ನಾವು ಒಂದು ಹೋರಾಟದ ರೀತಿ ತೆಗೆದುಕೊಳ್ಳಬೇಕು. ಪಿಡಿಒ, ಕಂದಾಯ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಿಗರು ಪ್ರತಿ ಗ್ರಾಮದ ನಕಾಶೆ ಹಿಡಿದುಕೊಂಡು ಯಾರಾರಯರು ಎಲ್ಲೆಲ್ಲಿ ಮನೆ ಕಟ್ಟಿಕೊಂಡಿದ್ದಾರೆಂದು ಪರಿಶೀಲಿಸಬೇಕು. ಹಕ್ಕುಪತ್ರ ಇಲ್ಲದಿದ್ದರೆ ಅಲ್ಲೇ ಅರ್ಜಿ ತೆಗೆದುಕೊಂಡು ಕಡತ ತಯಾರಿಸಿ 94ಸಿನಲ್ಲಿ ಹಕ್ಕುಪತ್ರ ನೀಡಬೇಕು ಎಂದರು.
ಈ ಕಾರ್ಯಕ್ಕೆ ವೇಳಾಪಟ್ಟಿ ಮಾಡಿಕೊಂಡು ಕೆಲಸ ಮಾಡಬೇಕು. 3-4 ತಿಂಗಳೊಳಗೆ ಸಾಗುವಳಿ ಚೀಟಿಯನ್ನು ಆಯಾ ಗ್ರಾಮ ಪಂಚಾಯಿತಿಯಲ್ಲೇ ನೀಡಬೇಕು. ಫಲಾನುಭವಿಗಳ ಪಟ್ಟಿಯನ್ನು ಶಾಸಕರಿಗೆ ಕೊಡುವ ಕೆಲಸ ಆಗಬೇಕು. ಜಿಲ್ಲೆಯಲ್ಲಿ 94ಸಿನಲ್ಲಿ 44 ಸಾವಿರ ಅರ್ಜಿ ಬಂದಿವೆ. ಇನ್ನೂ ಅಷ್ಟೇ ಪ್ರಮಾಣದ ಅರ್ಜಿ ಬರಬಹುದು. ಜನರಲ್ಲಿ ಜಾಗೃತಿ ಮೂಡಿಸಿ ಕನಿಷ್ಠಪಕ್ಷ ಶೇ.90 ಜನರಿಗಾದರೂ ಹಕ್ಕುಪತ್ರ ಕೊಡುವ ಕೆಲಸ ಆಗಬೇಕು ಎಂದು ಹೇಳಿದರು.
ಫಾರಂ ನಂ.50-53ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಅರಣ್ಯ ಮತ್ತು ಅಮೃತಮಹಲ್ ಕಾವಲು ಜಾಗದ ಸಮಸ್ಯೆ ಅಡ್ಡಿಯಾಗಿದೆ. ಇದಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಶಾಸಕ ವೈ.ಎಸ್.ವಿ.ದತ್ತ ಮನವಿ ಮಾಡಿದರು. ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಂಡು ಸಮಸ್ಯೆ ಪರಿಹರಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದರು.
ಶೃಂಗೇರಿ ಕ್ಷೇತ್ರದಲ್ಲಿ ಬಗರ್ಹುಕುಂ ಅರ್ಜಿ ವಿಲೇವಾರಿಯಲ್ಲಿ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯ, ಸಲ್ಲದ ಕಾರಣ ನೀಡುತ್ತಿರುವ ಬಗ್ಗೆ ಶಾಸಕ ಡಿ.ಎನ್.ಜೀವರಾಜ್ ದಾಖಲೆಗಳ ಸಮೇತ ಸಚಿವರ ಗಮನಕ್ಕೆ ತಂದರು. ಅರ್ಜಿ ವಿಲೇವಾರಿಗೆ ಬಗರ್ಹುಕುಂ ಸಮಿತಿ ಸಿದ್ಧವಿದ್ದರೂ ತಹಸೀಲ್ದಾರ್ಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಟೈಪಿಸ್ಟ್, ದಾಖಲೀಕರಣ ಮಾಡುವವರು ಇಲ್ಲ. ಅರ್ಜಿ ವಿಲೇ ಮಾಡಲು 15 ದಿನ ಕಾಲಾವಕಾಶ ಬೇಕು ಎಂದು ತಹಸೀಲ್ದಾರ್ ಹೇಳಿದರು. ಇದನ್ನು ಒಪ್ಪದ ಜಿಲ್ಲಾಧಿಕಾರಿ ಜಿ.ಸತ್ಯವತಿ, ಅಧಿಕಾರಿಯಾಗಿ ಆಡಳಿತಾತ್ಮಕ ವಿಷಯಗಳ ನೆಪ ಹೇಳಬಾರದು. ಕೆಲಸ ಮಾಡಲು ಆಗುತ್ತದೆ ಅಥವಾ ಇಲ್ಲ ಎಂಬುದನ್ನು ಹೇಳಿ. 2005ರಿಂದಲೂ ಅರ್ಜಿಗಳು ಬಾಕಿ ಇವೆ. ಇದು ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತದೆ. ಇಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ನಿಮ್ಮ ಆಡಳಿತ ಹದಗೆಟ್ಟಿದೆ ಎಂಬುದು ನನಗೆ ಗೊತ್ತಿದೆ. ಹಳ್ಳಿ ಭಾಷೆಯಲ್ಲಿ ನಿಮಗೆ ಹೇಳುವುದಕ್ಕೂ ನನಗೆ ಗೊತ್ತಿದೆ. ಆದರೆ, ಸಭೆಯಲ್ಲಿ ನಾನದನ್ನು ಹೇಳುವುದಿಲ್ಲ. ಒಂದು ತಿಂಗಳೊಳಗೆ ಹಕ್ಕುಪತ್ರ ನೀಡಬೇಕು. ಈಗ ಬರಿ ಎಚ್ಚರಿಕೆ ಕೊಟ್ಟಿದ್ದೇನೆ. ಯಾರಿಗೆ ಎಲ್ಲಿ ಹಲ್ಲೆ ಕಟ್ಟಬೇಕು ಎಂಬುದೂ ನನಗೆ ಗೊತ್ತಿದೆ. ಜವಾಬ್ದಾರಿಯಿಂದ ಕೆಲಸ ಮಾಡದಿದ್ದರೆ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು.
ಅರಣ್ಯ ಇಲಾಖೆಗೆ ಕಳಿಸಬೇಡಿ
ಬಗರ್ಹುಕುಂ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆಗೆ ಕಳಿಸಬೇಡಿ. ಅವುಗಳನ್ನು ಬಗೆಹರಿಸುವ ಸಂಪೂರ್ಣ ಅಧಿಕಾರವನ್ನು ತಹಸೀಲ್ದಾರ್ಗೆ ನೀಡಲಾಗಿದೆ. ನಿಮ್ಮ ಅಧಿಕಾರ ಚಲಾಯಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಿ.
-ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ