ಬಾಳೆಹೊನ್ನೂರು:ನಗರ ಸಮೀಪದ ಬಂಡಿಮಠ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಒಂದು ವಾರ ನಡೆದ ಪಂಗುಣಿ ಉತ್ತಿರಂ ಮಹೋತ್ಸವ ಸಡಗರ ಸಂಭ್ರಮದಿಂದ ಭಾನುವಾರ ಮುಕ್ತಾಯಗೊಂಡಿತು.
ಆ ಪ್ರಯುಕ್ತ ಭಕ್ತರು ಕಾವಡಿ ಮಾಲೆ ಧರಿಸಿ ಏಳು ದಿನ ಕಠಿಣ ವೃತಾಚರಣೆ ಮಾಡಿ ವೃತದ ಕೊನೆಯ ದಿನವಾದ ಭಾನುವಾರ ಬೆಳಗ್ಗೆ ವಿವಿಧ ವಾದ್ಯಗೋಷ್ಟಿ ಹಾಗೂ ಕಾವಡಿ ಹೊತ್ತ ಮಹಿಳೆಯರು ಸೇರಿದಂತೆ ನೂರಾರು ಭಕ್ತರು ಹಳದಿ ವಸ್ತ್ರವನ್ನುಟ್ಟು ಹೂಮಾಲೆ ಧರಿಸಿ ನಗರದ ಜೇಸೀ ವೃತ್ತದ ಬಳಿಯಿರುವ ಶ್ರೀ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ನಂತರ ಹಾಲು ಬಿಂದಿಗೆಯೊಂದಿಗೆ ಹರೋಹರ ಎಂಬ ದೇವರ ನಾಮಸ್ಮರಣೆ ಮಾಡುತ್ತಾ ಶ್ರದ್ದಾಭಕ್ತಿಯಿಂದ ಮೆರವಣಿಗೆ ನಡೆಸಿ ನಂತರ ಪವಿತ್ರ ಭದ್ರಾ ನದಿಗೆ ತೆರಳಿ ಗಂಗೆಪೂಜೆ,ಹಾಗೂ ಶ್ರೀ ಬಾಲ ಸುಬ್ರಹ್ಮಣ್ಯಸ್ವಾಮಿಗೆ ಸ್ನಾನಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಪುಷ್ಪಾಲಂಕಾರ, ಸಹಸ್ರ ನಾಮಾರ್ಚನೆ, ಅಷ್ಟೋತ್ತರ ಪೂಜೆ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ನಂತರ ಮಧ್ಯಾಹ್ನ ವಿವಿಧ ವಾದ್ಯ ಗೋಷ್ಟಿ ಹಾಗೂ ಚಿಲಿಪಿಲಿಗೊಂಬೆ ಮತ್ತು ಚಲಿಸುವ ಆರ್ಕೆಸ್ಟ್ರಾದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಬಾಲ ಸುಬ್ರಹ್ಮಣ್ಯಸ್ವಾಮಿಯ ಭವ್ಯ ಮೆರವಣಿಗೆ ನಡೆಯಿತು. ಶಾಸಕ ಡಿ.ಎನ್.ಜೀವರಾಜ್, ದೇವಸ್ಥಾನದ ಅಧ್ಯಕ್ಷ ತಂಗವೇಲು, ತಾಲೂಕು ಬಿಜೆಪಿ ಅಧ್ಯಕ್ಷ ವೆನಿಲ್ಲಾ ಭಾಸ್ಕರ್, ತಾಪಂ ಉಪಾಧ್ಯಕ್ಷ ಹೊಳೆಬಾಗಿಲು ಮಂಜು, ಎಸ್.ಮಂಜು, ಮೈಕ್ ರಾಜು, ಮಣಿಕಂಠನ್, ಸತ್ಯನಾರಾಯಣ, ಅಟೋ ತಂಬಿ, ಕೃಷ್ಣನ್ ಸೇರಿದಂತೆ ಬಂಡಿಮಠ, ದೇವದಾನ, ಭದ್ರಾ, ಕಾರೆಹಡ್ಲು, ಹೊಳೆಬಾಗಿಲು, ಬನ್ನೂರು, ಬಾಳೆಹೊನ್ನೂರು ಸೇರಿದಂತೆ ಸುತ್ತಮುತ್ತಲ ಭಕ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
9ಬಿಹೆಚ್ಆರ್ 5 ಪೋಟೋ :
ಬಾಳೆಹೊನ್ನೂರಿನ ಸಮೀಪದ ಬಂಡಿಮಠದ ಶ್ರೀ ಬಾಲ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಪಂಗುಣಿ ಉತ್ತಿರಂ ಉತ್ಸವದ ಅಂಗವಾಗಿ ಭದ್ರಾ ನದಿಯಲ್ಲಿ ಭಾನುವಾರ ಗಂಗೆ ಪೂಜೆ ನಡೆಯಿತು.