ಆ್ಯಪ್ನಗರ

ರೈತರ ಜಮೀನಿಗೆ ನೀರು ಹರಿಯುವ ಭರವಸೆ

ತಾಲೂಕಿನ ಮಳಲೂರು ಏತ ನೀರಾವರಿ ಯೋಜನೆ ಕಾಮಗಾರಿಗೆ ಹಿಡಿದಿದ್ದ ಗ್ರಹಣ ಕೊನೆಗೂ ಬಿಡುವ ದಿನಗಳು ಹತ್ತಿರವಾಗುತ್ತಿವೆ. ಹೆಚ್ಚಿನ ಪರಿಹಾರದ ಬೇಡಿಕೆಯಿಟ್ಟಿರುವ ರೈತರ ಮನವೊಲಿಸಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವ ಸಾಧ್ಯತೆ ಕಂಡುಬರುತ್ತಿದೆ.

Vijaya Karnataka 14 Sep 2017, 5:00 am

ಚಿಕ್ಕಮಗಳೂರು:ತಾಲೂಕಿನ ಮಳಲೂರು ಏತ ನೀರಾವರಿ ಯೋಜನೆ ಕಾಮಗಾರಿಗೆ ಹಿಡಿದಿದ್ದ ಗ್ರಹಣ ಕೊನೆಗೂ ಬಿಡುವ ದಿನಗಳು ಹತ್ತಿರವಾಗುತ್ತಿವೆ. ಹೆಚ್ಚಿನ ಪರಿಹಾರದ ಬೇಡಿಕೆಯಿಟ್ಟಿರುವ ರೈತರ ಮನವೊಲಿಸಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವ ಸಾಧ್ಯತೆ ಕಂಡುಬರುತ್ತಿದೆ.

ಕಾಮಗಾರಿಯ ಎರಡನೇ ಹಂತಕ್ಕೆ 19 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಕಾರ‍್ಯ ಶುರುವಾಗಿದ್ದು, 19 ಎಕರೆ ಪ್ರದೇಶವನ್ನು 119 ರೈತರಿಂದ ವಶಪಡಿಸಿಕೊಳ್ಳಲು ಜಿಲ್ಲಾಡಳಿತ ನೋಟಿಫಿಕೇಶನ್‌ ಹೊರಡಿಸಿತ್ತು. ಅನೇಕ ಬಾರಿ ಸಭೆ ನಡೆಸಿ ರೈತರ ಮನವೊಲಿಸಿದ್ದು, ಜಮೀನು ಬಿಟ್ಟುಕೊಡಲು ಸಿದ್ಧವಿರುವುದಾಗಿ ರೈತರು ಸಹಿ ಮಾಡಿ ಕೊಟ್ಟಿದ್ದರು.

ಆದರೆ, ಕೆಲವು ರೈತರು ಸರಕಾರ ನೀಡುತ್ತಿರುವ ಪರಿಹಾರ ಮೊತ್ತ ಸಾಲದು. ಹೆಚ್ಚು ಪರಿಹಾರ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿತ್ತು. ಇತ್ತ ಜಮೀನು ಬಿಟ್ಟುಕೊಟ್ಟ ರೈತರು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಈ ಭಾಗದ ಕೆರೆಕಟ್ಟೆಗಳಲ್ಲಿ ನೀರು ತುಂಬಿಸಿ ಎಂದು ಪಟ್ಟುಹಿಡಿದಿದ್ದರು.

ಈ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಿದೆ. ಸೆ.18ರಂದು ಜಿಲ್ಲಾಡಳಿತ ಕಾಮಗಾರಿ ನಿರ್ವಹಣಾ ಸಮಿತಿ ಸಭೆ ಕರೆದಿದ್ದು, ರೈತರಿಗೆ ಕೊಡಬಹುದಾದ ಗರಿಷ್ಠ ಪ್ರಮಾಣದ ಪರಿಹಾರದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. ಭೂಸ್ವಾಧೀನ ಕಾಯಿದೆ ಸೆಕ್ಷನ್‌ 26ರ ಪ್ರಕಾರ ನೀಡಬಹುದಾದ ಗರಿಷ್ಠ ಪರಿಹಾರದ ಬಗ್ಗೆ ರೈತರಿಗೆ ಮನವರಿಕೆ ಮಾಡುವ ಬಗ್ಗೆಯೂ ಜಿಲ್ಲಾಡಳಿತ ನಿರ್ಧರಿಸಿದೆ.

ಮಳಲೂರು ಏತ ನೀರಾವರಿ ಯೋಜನೆಗೆ ನೀರೊದಗಿಸುವ ಬಿರಂಜಿ ಹಳ್ಳ ತುಂಬಿ ಹರಿಯುತ್ತಿದ್ದು ನೀರು ನೇರವಾಗಿ ಯಗಚಿ ಜಲಾಶಯ ಸೇರುತ್ತಿದೆ. ಕಾಮಗಾರಿ ಮುಗಿದಿದ್ದರೆ ಆ ನೀರು ಮಳಲೂರು ಸುತ್ತಮುತ್ತಲಿನ 10 ಹಳ್ಳಿಗಳ ಕೆರೆಕಟ್ಟೆ ತುಂಬಿಸುತ್ತಿತ್ತು. 1500 ಎಕರೆ ಜಮೀನಿಗೆ ನೀರೊದಗಿಸುವ ಮೂಲಕ ರೈತರ ಬಾಳಲ್ಲಿ ಬೆಳಕು ಮೂಡುತ್ತಿತ್ತು.

ಜಮೀನು ಖರೀದಿ :ಕೇಂದ್ರ ಸರಕಾರ 2014ರಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ಕಾಯಿದೆ-2013ನ್ನು ಜಾರಿಗೆ ತಂದಿದೆ. ಸಾರ್ವಜನಿಕ ಉದ್ದೇಶಗಳಿಗೆ ಅಗತ್ಯವಿರುವ 100 ಎಕರೆಗಿಂತ ಕಡಿಮೆ ಇರುವ ಜಮೀನನ್ನು ಮಾರುಕಟ್ಟೆ ದರದಲ್ಲಿ ಖರೀದಿಸಲು ಈ ಕಾಯಿದೆ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಾಮಗಾರಿಗೆ ಅಗತ್ಯವಿರುವ 19 ಎಕರೆ ಜಮೀನನ್ನು ರೈತರಿಂದ ಖರೀದಿಸಲು ನಿರ್ಧರಿಸಿದೆ.

ರೈತರಿಂದ ಆಕ್ಷೇಪಣೆ :ಕಾಮಗಾರಿಗೆ ಸಂಬಂಧಿಸಿದಂತೆ ಮೊದಲ ಹಂತದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ 19 ಎಕರೆ ಇದ್ದು, ಹೆಚ್ಚಿನ ಪರಿಹಾರ ಕೋರಿ 70ಕ್ಕೂ ಹೆಚ್ಚು ರೈತರು ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದಾರೆ. ರೈತರು ಜಮೀನು ಕೊಡಲು ಸಿದ್ಧವಿದ್ದು, ಹೆಚ್ಚಿನ ಪರಿಹಾರ ಕೊಡಬೇಕು ಎಂಬ ಏಕೈಕ ಬೇಡಿಕೆ ಮುಂದಿಟ್ಟಿದ್ದಾರೆ.

ಜಮೀನು ಖರೀದಿಸುವಾಗ ಸರಕಾರ ರೂಪಿಸಿದ ನಿಯಮಗಳನ್ನು ಜಿಲ್ಲಾಡಳಿತ ಪಾಲಿಸಬೇಕಿದೆ. ಜಮೀನು ಇರುವ ಸ್ಥಳ, ನಗರ ಅಥವಾ ಪಟ್ಟಣದಿಂದ ಇರುವ ದೂರ, ಜಮೀನಿನಲ್ಲಿ ಇರುವ ಮರಮಟ್ಟುಗಳು, ಮಾಲ್ಕಿ, ಉಪ ನೋಂದಣಾಧಿಕಾರಿ ಕಚೇರಿ ನಿಗದಿಸಿದ ದರ, ಕಳೆದ 2-3 ವರ್ಷದಲ್ಲಿ ಆ ಜಮೀನಿನಿಂದ ಬಂದ ಆದಾಯ ಎಲ್ಲವನ್ನೂ ಪರಿಗಣಿಸಲಾಗುತ್ತದೆ. ಸರಕಾರ ನಿಗದಿಸಿದ ಗರಿಷ್ಠ ದರವನ್ನು ಮೀರದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ನಿರ್ವಹಣಾ ಸಮಿತಿ ರೈತರಿಗೆ ಪರಿಹಾರ ಮೊತ್ತವನ್ನು ನಿಗದಿಸುತ್ತದೆ.

Vijaya Karnataka Web
ರೈತರ ಜಮೀನಿಗೆ ನೀರು ಹರಿಯುವ ಭರವಸೆ

------------

ಸೆ.18ರಂದು ಸಭೆ:'ರೈತರ ಆಕ್ಷೇಪಣೆ ಅರ್ಜಿಗಳ ಪರಿಶೀಲನೆ, ಕಾಮಗಾರಿಗೆ ಸಂಬಂಧಿಸಿದಂತೆ ಸೆ.18ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿರ್ವಹಣಾ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ. ಈ ಸಂದರ್ಭ ರೈತರಿಗೆ ಕೊಡಬಹುದಾದ ಗರಿಷ್ಠ ಪರಿಹಾರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ'

-ಸಂಗಪ್ಪ, ಉಪ ವಿಭಾಗಾಧಿಕಾರಿ, ನಿರ್ವಹಣಾ ಸಮಿತಿ ಸದಸ್ಯ ಕಾರ‍್ಯದರ್ಶಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ