ಆ್ಯಪ್ನಗರ

ಮಾನಸಿಕ ನೆಮ್ಮದಿಗೆ ಆಧ್ಯಾತ್ಮ ಮಾರ್ಗ ಸಹಕಾರಿ

ಮಾನಸಿಕ ಶಾಂತಿ, ನೆಮ್ಮದಿ ಮತ್ತು ಶ್ರೇಯೋಭಿವೃದ್ದಿಗೆ ಆಧ್ಯಾತ್ಮ ಮಾರ್ಗ ಅತ್ಯಂತ ಸಹಕಾರಿ ಎಂದು ಹೃಷಿಕೇಶದ ದಯಾನಂದ ಆಶ್ರಮದ ಶ್ರೀಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

Vijaya Karnataka 28 May 2019, 5:00 am
ಚಿಕ್ಕಮಗಳೂರು: ಮಾನಸಿಕ ಶಾಂತಿ, ನೆಮ್ಮದಿ ಮತ್ತು ಶ್ರೇಯೋಭಿವೃದ್ದಿಗೆ ಆಧ್ಯಾತ್ಮ ಮಾರ್ಗ ಅತ್ಯಂತ ಸಹಕಾರಿ ಎಂದು ಹೃಷಿಕೇಶದ ದಯಾನಂದ ಆಶ್ರಮದ ಶ್ರೀಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
Vijaya Karnataka Web CKM-27RUDRAP2


ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ವಾಸವಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ರಜತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಆಧ್ಯಾತ್ಮದ ಹಾದಿ ನಮಗಲ್ಲ ಅದು ವಯಸ್ಸಾದವರಿಗೆ. ಮಠ, ಆಶ್ರಮಗಳಲ್ಲಿರುವವರಿಗೆ ಎಂಬ ತಪ್ಪು ಭಾವನೆ ಇಂದಿನ ಬಹಳಷ್ಟು ಜನರಲ್ಲಿದೆ. ಹಾಗಾಗಿ ಆ ಮಾರ್ಗದಲ್ಲಿ ಸಾಗದೇ ಮಾನಸಿಕ ಶಾಂತಿ, ನೆಮ್ಮದಿಯಿಂದ ಅವರು ದೂರವಾಗಿದ್ದಾರೆ ಎಂದರು.

ದೇಹ, ಮನಸ್ಸು ಮತ್ತು ಬುದ್ದಿಯ ಹತೋಟಿಗೆ ಆಧ್ಯಾತ್ಮ ಅತ್ಯಂತ ಅಗತ್ಯ. ಆಧ್ಯಾತ್ಮ ಜೀವಿಗಳು ದುಖ:ಕ್ಕೆ ಮುದುಡದೆ ಸುಖಕ್ಕೆ ಹಿಗ್ಗದೇ ಮನೋ ವಿಕಾರಗಳಿಂದ ಹೊರತಾಗಿರುತ್ತಾರೆ. ಆಧ್ಯಾತ್ಮ ಮತ್ತು ಯೋಗ ಭಾರತ ಜಗತ್ತಿಗೆ ನೀಡಿದ ಕೊಡುಗೆ. ಅವುಗಳನ್ನು ಇಡೀ ವಿಶ್ವದ ಜನ ಆಚರಣೆ ಮಾಡುತ್ತಿದ್ದರೆ ನಮ್ಮವರು ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಿರಾಸಕ್ತಿ ತಾಳಿದ್ದಾರೆ ಎಂದು ವಿಷಾದಿಸಿದ ಅವರು ಈಗಲಾದರೂ ನಾವು ಜಾಗೃತರಾಗದಿದ್ದರೆ ಇನ್ನು ಹತ್ತು ವರ್ಷಗಳಲ್ಲಿ ಪ್ರಾಣಾಯಾಮ ಮತ್ತು ಧ್ಯಾನವನ್ನು ಹಣ ತೆತ್ತು ಕಲಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘದ ಅಧ್ಯಕ್ಷ ಎಸ್‌.ಎ.ವಾಸುದೇವ ಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 25 ವರ್ಷದಿಂದ ಸಂಸ್ಥೆ ಪ್ರತಿವರ್ಷ ಒಂದೂಕಾಲು ಕೋಟಿಗಿಂತಲೂ ಅಧಿಕ ಲಾಭ ಗಳಿಸುತ್ತಾ ಬಂದಿದೆ. ಆರ್ಯವೈಶ್ಯ ಸಮುದಾಯದವರಿಗೆ ಆರ್ಥಿಕ ಸಹಕಾರ ನೀಡಿದೆ ಎಂದರು.

ಸಂಘದ ಏಳಿಗೆಗೆ ದುಡಿದವರು ಮತ್ತು ಬೆಳವಣಿಗೆಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಶ್ರೀಗಳಿಂದ ಸತ್ಸಂಗ ನಡೆಯಿತು.

ರಜತ ಮಹೋತ್ಸವದ ಸ್ಮರಣ ಸಂಚಿಕೆ ಸೌಹಾರ್ದ ಸಿಂಚನವನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಶ್ರೀಗಳಿಗೆ ಪೂರ್ಣ ಕುಂಭ ಸ್ವಾಗತ ನೀಡಿ ಮೆರವಣಿಗೆಯಲ್ಲಿ ಕರೆತರಲಾಯಿತು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಂ.ವೆಂಕಟಸುಬ್ಬರಾವ್‌, ವಾಸವಿ ಸೇವಾ ಟ್ರಸ್ಟ್‌ ಅಧ್ಯಕ್ಷ ಪಿ.ಎಸ್‌.ಶ್ರೀಧರ್‌, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಎಸ್‌.ವೆಂಕಟೇಶ್‌, ವಾಸವಿ ಯುವಜನ ಸಂಘದ ಅಧ್ಯಕ್ಷ ಜಿ.ಎ.ದಿನೇಶ್‌ ಗುಪ್ತಾ, ಮಹಿಳಾ ಮಂಡಳಿ ಅಧ್ಯಕ್ಷೆ ಗಾಯತ್ರಿ ದ್ವಾರಕಾನಾಥ್‌, ಸಂಘದ ಉಪಾಧ್ಯಕ್ಷ ಕೆ.ಎಸ್‌.ಸತೀಶ್‌, ನಿರ್ದೇಶಕಿ ಜಯಂತಿ ಶೇಖರ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ