ಆ್ಯಪ್ನಗರ

ಮಲೆನಾಡಲ್ಲಿ ಬಿಡುವು ನೀಡಿದ ಮಳೆ

ಮಲೆನಾಡು ಭಾಗದಲ್ಲಿ ಸೋಮವಾರ ಮಳೆ ಸ್ವಲ್ಪ ಬಿಡುವು ನೀಡಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ಪ್ರವಾಹ ನಿಧಾನವಾಗಿ ಇಳಿಯುತ್ತಿದೆ. ಕಳಸ, ಕುದುರೆಮುಖ, ಶೃಂಗೇರಿ ತಾಲೂಕಿನ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.

Vijaya Karnataka 21 Aug 2018, 5:00 am
ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಸೋಮವಾರ ಮಳೆ ಸ್ವಲ್ಪ ಬಿಡುವು ನೀಡಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ಪ್ರವಾಹ ನಿಧಾನವಾಗಿ ಇಳಿಯುತ್ತಿದೆ. ಕಳಸ, ಕುದುರೆಮುಖ, ಶೃಂಗೇರಿ ತಾಲೂಕಿನ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.
Vijaya Karnataka Web CKM-20aragap6


ಮಳೆ ನಿಂತರೂ ಮಲೆನಾಡು ಭಾಗದಲ್ಲಿ ಭೂಕುಸಿತ, ಮರಗಳು ಉರುಳಿ ಬೀಳುವುದು ನಿಂತಿಲ್ಲ. ಕೊಪ್ಪ ತಾಲೂಕಿನ ಭಂಡಿಗಡಿ ಸಮೀಪದ ಈಚಲಬೈಲಿನಲ್ಲಿ ಟ್ರಾನ್ಸ್‌ಫಾರ್ಮರ್‌ ಹಾಗೂ 4 ವಿದ್ಯುತ್‌ ಕಂಬಗಳು ನೆಲಸಮವಾಗಿವೆ. ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಶೃಂಗೇರಿ ತಾಲೂಕಿನ ಕಿಗ್ಗಾ, ಕೆರೆಕಟ್ಟೆ ಸುತ್ತಮುತ್ತ ಗಾಳಿ, ಮಳೆಗೆ ಹುಲುಗಾರುಬೈಲಿನಲ್ಲಿ 10 ಎಕರೆಗೂ ಹೆಚ್ಚು ಭತ್ತದ ಗದ್ದೆಯಲ್ಲಿ ಮಣ್ಣು ಸಂಗ್ರಹವಾಗಿ ಬೆಳೆಗೆ ಸಂಪೂರ್ಣ ಹಾನಿಯಾಗಿದೆ. ಗುಡ್ಡದ ಮಣ್ಣು ಕುಸಿದು ಜಮೀನಿನಲ್ಲಿ ಸಂಗ್ರಹವಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಮೂಲತಃ ಮಂಗಳೂರಿನವರಾದ ಈ ರೈತರು ಭೂಸುಧಾರಣೆ ಕಾಯಿದೆಯಡಿ ಅಲ್ಪಸ್ವಲ್ಪ ಜಮೀನು ಹೊಂದಿ ಜೀವನ ಸಾಗಿಸುತ್ತಿದ್ದರು. ನಾಟಿ ಮಾಡಿದ ಭತ್ತದ ಗದ್ದೆ ಸಂಪೂರ್ಣ ಹಾನಿಯಾಗಿದ್ದು, ಸರಕಾರ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್‌ ಸರಕಾರಕ್ಕೆ ವರದಿ ನೀಡಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ಉರುಳಿಬಿದ್ದ ಮರ

ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಿರುವಿನಲ್ಲಿ ರಸ್ತೆಗೆ ಭಾರಿ ಗಾತ್ರದ ಮರ ಬಿದ್ದಿದ್ದರಿಂದ ಸಂಚಾರ ಬಂದ್‌ ಆಗಿದೆ. ರಸ್ತೆ ಸಂಪರ್ಕ ಬಂದ್‌ ಆಗಿದ್ದರಿಂದ ಪ್ರವಾಸಿಗರು ಪರದಾಡಬೇಕಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಮರವನ್ನು ತೆರವುಗೊಳಿಸಿದರು.
ಮಲೆನಾಡು ಭಾಗದಲ್ಲಿ ಸಂಜೆ ಹೊತ್ತಿಗೆ ಮತ್ತೆ ಮಳೆ ಆರಂಭವಾಗಿದ್ದು, ಕಳಸ, ಕುದುರೆಮುಖ, ಶೃಂಗೇರಿ ತಾಲೂಕಿನ ಕೆರೆಕಟ್ಟೆ, ಕಿಗ್ಗಾ, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ.
ಕಳೆದ 24 ಗಂಟೆಯಲ್ಲಿ ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ 52, ಕಿಗ್ಗಾ 50, ಶೃಂಗೇರಿ 40, ಕೊಪ್ಪ 28, ಹರಿಹರಪುರ 23, ಜಯಪುರ 26, ಕಮ್ಮರಡಿ 22.2, ಬಸ್ರಿಕಟ್ಟೆ 27.6, ನರಸಿಂಹರಾಜಪುರ ತಾಲೂಕಿನ ಮೇಗರಮಕ್ಕಿ 20, ಬಾಳೆಹೊನ್ನೂರು 13.2, ಚಿಕ್ಕಮಗಳೂರು ತಾಲೂಕಿನ ಅತ್ತಿಗುಂಡಿಯಲ್ಲಿ 20.5 ಮಿ.ಮೀ ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ