ಆ್ಯಪ್ನಗರ

ಹುಚ್ಚುನಾಯಿ ಕಚ್ಚಿ 13 ಮಂದಿ ಆಸ್ಪತ್ರೆಗೆ

ನಗರದ ವಿವಿಧ ಬಡಾವಣೆಯಲ್ಲಿ ಹುಚ್ಚುನಾಯಿ ಕಚ್ಚಿ ವೃದ್ಧರೊಬ್ಬರು, ಮಕ್ಕಳು ಸೇರಿದಂತೆ 13ಕ್ಕೂ ಹೆಚ್ಚು ಮಂದಿ ಗಾಯಗೊಂಡು ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ನಡೆದಿದೆ.

Vijaya Karnataka 19 Dec 2018, 5:00 am
ಚಿಕ್ಕಮಗಳೂರು : ನಗರದ ವಿವಿಧ ಬಡಾವಣೆಯಲ್ಲಿ ಹುಚ್ಚುನಾಯಿ ಕಚ್ಚಿ ವೃದ್ಧರೊಬ್ಬರು, ಮಕ್ಕಳು ಸೇರಿದಂತೆ 13ಕ್ಕೂ ಹೆಚ್ಚು ಮಂದಿ ಗಾಯಗೊಂಡು ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ನಡೆದಿದೆ.
Vijaya Karnataka Web CKM-18rudrap2a


ಲಕ್ಷ್ಮೇಶ ನಗರದ ಲಕ್ಷ್ಮಮ್ಮ, ರೂಪ, ಶಂಕರಪುರದ ನವೀನ್‌, ನಾಗರಾಜ್‌ ಹಾಗೂ ಪೊಲೀಸ್‌ ಪೇದೆ ಮೋಹನ್‌ ಕುಮಾರ್‌ ಸೇರಿದಂತೆ 13 ಮಂದಿಗೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿದೆ. ನಾಯಿಕಡಿದವರಲ್ಲಿ 10 ವರ್ಷದ ಬಾಲಕ, 65 ವರ್ಷದ ವಯೋವೃದ್ದೆ ಸೇರಿದ್ದಾರೆ. ಗಾಯಾಳುಗಳು ಆಸ್ಪತ್ರೆಗೆ ಬಂದಾಗ ನಾಯಿ ಕಚ್ಚಿದ ವಿಷಯ ತಿಳಿದ ವೈದ್ಯರು ಇವರಿಗೆ ಮೊದಲ ಆದ್ಯತೆಯಲ್ಲಿ ಚಿಕಿತ್ಸೆ ನೀಡಿದರು. ಹೆಚ್ಚು ಗಾಯಗೊಂಡಿದ್ದ ರೋಗಿಗಳಾಗಿ ಒಳರೋಗಿಗಳಾಗಿ ದಾಖಲು ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ನಗರದ ತೊಗರಿಹಂಕಲ್‌ ವೃತ್ತದ ಬಳಿ ದಿಢೀರನೆ ಕಾಣಿಸಿಕೊಂಡ ಹುಚ್ಚುನಾಯಿ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಕಚ್ಚಿತು. ಅಲ್ಲಿಂದ ಪರಾರಿಯಾಗಿ ದೀಪ ನರ್ಸಿಂಗ್‌ ಹೋಂ ಬಳಿ ಮತ್ತೊಬ್ಬರಿಗೆ ಕಚ್ಚಿದೆ. ಅಲ್ಲಿಂದ ಮುಂದೆ ಹೋಗಿ ಶಂಕರಪುರದಲ್ಲಿ ಒಬ್ಬರಿಗೆ ಕಚ್ಚಿದೆ. ಹೀಗೆ ದಾರಿಯುದ್ದಕ್ಕೂ ಅಲೆದಾಡಿ ಜನರಲ್ಲಿ ಭೀತಿ ಮೂಡಿಸಿದ ಹುಚ್ಚುನಾಯಿ, ಅಲ್ಲಿಂದ ದೋಣಿಖಣ, ಕೋಟೆ ವೃತ್ತ, ಲಕ್ಷೀಶನಗರ ಮತ್ತಿತರೆ ಬಡಾವಣೆಯಲ್ಲಿ ಸುಮಾರು 13 ಮಂದಿಗೆ ಕಚ್ಚಿದ್ದು ಗಾಯಾಳುಗಳು ಆಸ್ಪತ್ರೆಗೆ ಬಂದಾಗಲೇ ಈ ವಿಷಯ ತಿಳಿಯಿತು.

ನಗರಸಭೆ ವಿರುದ್ಧ ಆಕ್ರೋಶ

ಹತ್ತಾರು ಮಂದಿಗೆ ಹುಚ್ಚು ನಾಯಿ ಕಡಿದ ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ಆಗಮಿಸಿದ ಪೋಷಕರು ಹಾಗೂ ಸಾರ್ವಜನಿಕರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಬೀದಿನಾಯಿಗಳು ಹಿಂಡುಹಿಂಡಾಗಿ ಸುತ್ತುತ್ತವೆ. ಮಕ್ಕಳು, ಮಹಿಳೆಯರ ಮೇಲೆ ಎಲ್ಲೆಂದರಲ್ಲಿ ಎರಗುತ್ತವೆ. ಹತ್ತಾರು ಮಂದಿಗೆ ಬೀದಿ ನಾಯಿಗಳು ಕಚ್ಚಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬೀದಿನಾಯಿಗಳ ಹಿಂಡನ್ನು ನಿಯಂತ್ರಿಸುವ ಬಗ್ಗೆ ವಿವಿಧ ಮಾಧ್ಯಮದಲ್ಲಿ ಎಚ್ಚರಿಸಿದರೂ ಜಿಲ್ಲಾಡಳಿತ, ನಗರಸಭೆ ದಿವ್ಯ ನಿರ್ಲಕ್ಷ್ಯ ತಾಳಿದ ಪರಿಣಾಮ ಇಂದು 13 ಕ್ಕೂ ಹೆಚ್ಚು ಮಂದಿಗೆ ಹುಚ್ಚು ನಾಯಿ ಕಚ್ಚಿ ನೋವಿನಿಂದ ಬಳಲುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ವಿಪರೀತವಾಗಿ ಬೆಳವಣಿಗೆಯಾಗಿರುವ ಬೀದಿ ನಾಯಿಗಳ ಸಂತತಿಯನ್ನು ನಿಯಂತ್ರಿಸಿ ಸಾರ್ವಜನಿಕರಿಗೆ ಆಗುವ ಅನಾಹುತಗಳನ್ನು ತಪ್ಪಿಸದಿದ್ದರೆ ನಗರಸಭೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಲಕ್ಷ್ಮೇಶ ನಗರದ ಚನ್ನಕೇಶವ ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ