ಆ್ಯಪ್ನಗರ

ಸಿಂಗಟಗೆರೆಯಲ್ಲಿ ರೈತ ಮಹಿಳೆ ಆತ್ಮಹತ್ಯೆ

ರೈತರು ಪಡೆದಿರುವ ಬೆಳೆಸಾಲವನ್ನು ಮನ್ನಾ ಮಾಡುವುದಾಗಿ ಸರಕಾರ ಭರವಸೆ ನೀಡಿದ್ದರೂ ರೈತರ ಆತ್ಮಹತ್ಯೆ ಪ್ರಕರಣಗಳು ನಿಂತಿಲ್ಲ. ಸಾಲಮನ್ನಾ ಘೋಷಣೆ ಮುನ್ನಾ ದಿನ ಕಡೂರು ತಾಲೂಕು ಸಿಂಗಟಗೆರೆಯಲ್ಲಿ ಬೆಳೆನಷ್ಟ, ಸಾಲಬಾಧೆಯಿಂದ ನೊಂದು ರೈತ ಮಹಿಳೆ ಮರುಳಮ್ಮ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Vijaya Karnataka 5 Jul 2018, 5:00 am
ಚಿಕ್ಕಮಗಳೂರು : ರೈತರು ಪಡೆದಿರುವ ಬೆಳೆಸಾಲವನ್ನು ಮನ್ನಾ ಮಾಡುವುದಾಗಿ ಸರಕಾರ ಭರವಸೆ ನೀಡಿದ್ದರೂ ರೈತರ ಆತ್ಮಹತ್ಯೆ ಪ್ರಕರಣಗಳು ನಿಂತಿಲ್ಲ. ಸಾಲಮನ್ನಾ ಘೋಷಣೆ ಮುನ್ನಾ ದಿನ ಕಡೂರು ತಾಲೂಕು ಸಿಂಗಟಗೆರೆಯಲ್ಲಿ ಬೆಳೆನಷ್ಟ, ಸಾಲಬಾಧೆಯಿಂದ ನೊಂದು ರೈತ ಮಹಿಳೆ ಮರುಳಮ್ಮ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web a farmer woman committed suicide in singatagiri
ಸಿಂಗಟಗೆರೆಯಲ್ಲಿ ರೈತ ಮಹಿಳೆ ಆತ್ಮಹತ್ಯೆ

ಕಡೂರು ತಾಲೂಕು ಸಿಂಗಟಗೆರೆ ಕುಂದೂರು ಸರ್ವೆ ನಂ.4, 131, 73, 32 ಮತ್ತು 10ರ ಜಮೀನಿನಲ್ಲಿ ಬೆಳೆ ಬೆಳೆಯಲು ಸಿಂಗಟಗೆರೆ ವಿಎಸ್ಸೆಸ್ಸೆನ್‌ನಲ್ಲಿ ಕೃಷ್ಣಪ್ಪ 2 ಲಕ್ಷ ಸಾಲ ಮಾಡಿದ್ದರು. ತೋಟದಲ್ಲಿ ಕೊಳವೆಬಾವಿ ತೆಗೆಸಲು, ಜಮೀನಿನಲ್ಲಿ ಬೆಳೆ ಬೆಳೆಯಲು ಸಂಬಂಧಿಕರಿಂದ 2 ರಿಂದ 3ಲಕ್ಷ ಕೈಸಾಲ ಮಾಡಿಕೊಂಡಿದ್ದರು. ಕಳೆದ ಎರಡು ವರ್ಷದಿಂದ ಮಳೆ ಇಲ್ಲದೆ ಬೆಳೆ ನಾಶವಾಗಿತ್ತು.
ಇದೇ ವಿಚಾರವನ್ನು ಮರುಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೈಸಾಲ ತೀರಿಸುವುದು ಹೇಗೆ, ಮುಂದಿನ ಜೀವನ ಸಾಗಿಸುವುದು ಹೇಗೆ, ಮಕ್ಕಳ ಗತಿ ಏನು ಎಂದು ಕಳೆದ ಒಂದು ವರ್ಷದಿಂದ ಕೊರಗುತ್ತಿದ್ದ ಮರುಳಮ್ಮ, ಜುಗುಪ್ಸೆಗೊಂಡು ಜು.3ರಂದು ಮನೆಯಲ್ಲಿದ್ದ ಕ್ರಿಮಿನಾಶಕ ಕುಡಿದಿದ್ದರು. ಸಿಂಗಟಗೆರೆ ಮತ್ತು ಕಡೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಿಸದೆ ಮೃತಪಟ್ಟಿದ್ದು, ಸಿಂಗಟಗೆರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ಯಾಂಕ್‌ಗಳಿಂದ ನೋಟಿಸ್‌
ಸರಕಾರ ಸಾಲಮನ್ನಾ ಮಾಡುವ ಭರವಸೆ ನೀಡುತ್ತಿದ್ದರೂ ಜಿಲ್ಲೆಯಲ್ಲಿ ಅನೇಕ ರೈತರಿಗೆ ಬ್ಯಾಂಕ್‌ಗಳು ಸಾಲ ಮರುಪಾವತಿಸುವಂತೆ ನೋಟಿಸ್‌ ಜಾರಿ ಮಾಡುವುದನ್ನು ಬಿಟ್ಟಿಲ್ಲ. ತಕ್ಷಣ ಸಾಲ ಮರುಪಾವತಿಸುವಂತೆ ಬ್ಯಾಂಕ್‌ಗಳು ನೋಟಿಸ್‌ ನೀಡುವ ಮೂಲಕ ರೈತರಿಗೆ ಶಾಕ್‌ ನೀಡುತ್ತಿವೆ.
ಮೂಡಿಗೆರೆ ತಾಲೂಕಿನಲ್ಲಿ ನೂರಾರು ರೈತರಿಗೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ಸಾಲ ಮರುಪಾವತಿ ಬಗ್ಗೆ 10 ದಿನದೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಗಡುವು ನೀಡಿದೆ. ತಪ್ಪಿದರೆ ಜಮೀನು, ತೋಟ ಹರಾಜು ಹಾಕುವ ಎಚ್ಚರಿಕೆಯನ್ನೂ ನೀಡಿದೆ. ಬ್ಯಾಂಕ್‌ ನೀಡಿರುವ ನೋಟಿಸ್‌ನಿಂದ ಕಂಗಾಲಾಗಿರುವ ರೈತರು ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲಮನ್ನಾ ಮಾಡಿ ತಮ್ಮನ್ನು ರಕ್ಷಿಸುತ್ತಾರೆಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ರೈತರ ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಘೋಷಿಸಿರುವ ಬಗ್ಗೆ ಬ್ಯಾಂಕ್‌ ಅಧಿಕಾರಿಗಳ ಗಮನಕ್ಕೆ ತಂದರೆ ಉಡಾಫೆ ಮಾತನಾಡುತ್ತಾರೆ. ಸಾಲಮನ್ನಾಕ್ಕೂ ಬ್ಯಾಂಕ್‌ಗೂ ಸಂಬಂಧ ಇಲ್ಲ. ನೀವು ಪಡೆದ ಹಣ ವಾಪಸ್‌ ಕಟ್ಟಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ